ಭಾನುವಾರ, ಫೆಬ್ರವರಿ 26, 2023

ಶ್ರೀಧರ ಡಿ.ಎಸ್. ಅವರ 'ಮಾತಿನ ಕಲೆ ತಾಳಮದ್ದಲೆ'

ಪುಸ್ತಕ: ಮಾತಿನ ಕಲೆ ತಾಳಮದ್ದಳೆ
ಲೇಖಕರು: ಶ್ರೀಧರ ಡಿ.ಎಸ್.
ಪ್ರಕಾಶಕರು: ಅಯೋಧ್ಯಾ ಪಬ್ಲಿಕೇಶನ್ಸ್, ಬೆಂಗಳೂರು
ಪ್ರಕಟಣೆಯ ವರ್ಷ: 2023
ಪುಟಗಳು: 156
ಬೆಲೆ: ರೂ. 180

ಕೆಲವು ಪುಸ್ತಕಗಳನ್ನು ನೋಡಿದ ಕೂಡಲೇ ಓದಬೇಕು ಅನಿಸುವುದುಂಟು; ಅಂಥವನ್ನು ಓದಿದ ಕೂಡಲೇ ನಾಕು ಮಂದಿಗೆ ಹೇಳಬೇಕು ಅನಿಸುವುದುಂಟು. ಹಿರಿಯರಾದ ಶ್ರೀ ಶ್ರೀಧರ ಡಿ.ಎಸ್. ಅವರ 'ಮಾತಿನ ಕಲೆ ತಾಳಮದ್ದಳೆ' ಪುಸ್ತಕದ ವಿಷಯದಲ್ಲೂ ಹೀಗೆಯೇ ಆಯಿತು.

ಇದು ಇತ್ತೀಚೆಗೆ (ಫೆಬ್ರವರಿ 11-12, 2023) ಉಡುಪಿಯಲ್ಲಿ ನಡೆದ ಯಕ್ಷಗಾನ ಸಮ್ಮೇಳನದಲ್ಲಿ ಬಿಡುಗಡೆ ಆಯಿತು. ನಿನ್ನೆ-ಇವತ್ತು ಕೂತು ಓದಿಯೂ ಆಯಿತು. ಅವರು ಈ ಪುಸ್ತಕದ ಕುರಿತು ಹೇಳತೊಡಗಿದ ದಿನಗಳಿಂದಲೇ ಇದನ್ನು ಓದುವ ಕುತೂಹಲ ಇತ್ತು.

ತಾಳಮದ್ದಳೆಯ ಕುರಿತು ಕೆಲವೇ ಕೆಲವು ಸಂಶೋಧನೆಗಳು, ಕೃತಿಗಳು ಬಂದಿವೆ. ಅವುಗಳ ವ್ಯಾಪ್ತಿ, ಉದ್ದೇಶಗಳಿಗೆ ಹೋಲಿಸಿದರೆ ಈ ಪುಸ್ತಕ ತುಂಬ ಭಿನ್ನವಾದದ್ದು. ತಾಳಮದ್ದಳೆಯನ್ನು ಒಂದು ಐತಿಹಾಸಿಕ ಕ್ರಮದಿಂದ ನೋಡುತ್ತಾ ಹೋಗುತ್ತದಾದರೂ ಇದು ಅಕಡೆಮಿಕ್ ಇತಿಹಾಸಕಾರರು ಬರೆಯುವ ಇತಿಹಾಸ ಪುಸ್ತಕದ ಮಾದರಿಯನ್ನು ಅನುಸರಿಸಿಲ್ಲ.

ಇತಿಹಾಸದ ಬರೆವಣಿಗೆಗಳಲ್ಲಿ ಢಾಳಾಗಿ ಕಾಣುವ ಇಸವಿಗಳು ಇಲ್ಲಿ ಹರಡಿಕೊಂಡಿಲ್ಲ (ತೀರಾ ಅಗತ್ಯವಿರುವಲ್ಲಿ ಮತ್ತು ಸಾಧ್ಯವಿರುವಲ್ಲಿ ಇಸವಿಗಳು ಬಂದಿವೆ). ಹಾಗೆಂದು ಇದು ಕಾಲವನ್ನು ನಿರ್ಲಕ್ಷಿಸಿಯೂ ಇಲ್ಲ. ಸ್ಥೂಲವಾಗಿ ಇಲ್ಲಿ ಕಾಣುವುದು ನಾನು ತುಸು ಹೆಚ್ಚು ಇಷ್ಟಪಡುವ ಸಾಮಾಜಿಕ ಇತಿಹಾಸ. ಕಳೆದ ವರ್ಷ ಪ್ರಕಟವಾದ ಶ್ರೀ ರಾಧಾಕೃಷ್ಣ ಕಲ್ಚಾರ್ ಅವರ 'ಉಲಿಯ ಉಯ್ಯಾಲೆ'ಯಲ್ಲಿ ಇಂತಹದೇ ಒಂದು ವಿಧಾನ ಇದ್ದಿತಾದರೂ, ಅದು ಹೆಚ್ಚು ಆತ್ಮಕಥನದ ಸ್ವರೂಪದಲ್ಲಿತ್ತು.

ತಾಳಮದ್ದಲೆಯೆಂಬ 'ವಿದ್ವತ್ ಕ್ರೀಡೆ' ಹೇಗೆ ಹುಟ್ಟಿಕೊಂಡಿರಬಹುದೆಂಬ ಜಿಜ್ಞಾಸೆಯಿಂದ ತೊಡಗಿ, ಅದು ಬೇರೆಬೇರೆ ತಲೆಮಾರುಗಳಲ್ಲಿ ಹೇಗೆ ಬೆಳೆದು ಬಂತೆಂಬುದನ್ನು ಬಹು ಸರಳವಾಗಿ ಹೇಳುತ್ತಾ ಹೋಗಿದ್ದಾರೆ ಲೇಖಕರು. ನವಿರು ಹಾಸ್ಯ ಅವರ ಬರೆವಣಿಗೆಯ ಸ್ಥಾಯೀಗುಣ. ಹಾಗಾಗಿ ಪುಸ್ತಕದ ಓದು ಎಲ್ಲೂ ನೀರಸ ಅನಿಸುವುದಿಲ್ಲ. ಹಿಂದಿನ ಕಾಲದ ತಾಳಮದ್ದಳೆಗಳ ಸ್ವಾರಸ್ಯಕರ ಘಟನೆಗಳನ್ನು ಅವರು ಅಲ್ಲಲ್ಲಿ ನೆನಪಿಸಿಕೊಂಡಿರುವುದರಿಂದ ಓದಿನ ನಡುವೆ ಆಗಾಗ ನಗೆಬುಗ್ಗೆ ಚಿಮ್ಮುವುದೂ ಇದೆ.

ಪ್ರವೇಶ ಮತ್ತು ಮುಕ್ತಾಯದ ಹೊರತಾಗಿ, ಹಿಂದಣ ಹೆಜ್ಜೆ, ಹೊಸ ಹೆಜ್ಜೆ, ಶೇಣಿ-ಸಾಮಗ ಯುಗ, ತಾಳಮದ್ದಳೆಯ ನವಯುಗ, ಸಂಘಟನೆ, ಹಿಮ್ಮೇಳ, ತಾಳಮದ್ದಳೆಯಲ್ಲಿ ಹಾಸ್ಯ, ಸ್ತ್ರೀಪಾತ್ರಗಳ ನಿರ್ವಹಣೆ - ಇತ್ಯಾದಿ ಅಧ್ಯಾಯಗಳಿವೆ. ಕಾಲಕ್ಕೆ ಸಂದ ಮಹಾನುಭಾವರ ವಿವರ, ಸಮಕಾಲೀನರ ಕುರಿತ ಉಪಯುಕ್ತ ಮಾಹಿತಿಗಳಿವೆ. ವಿಶ್ವರಂಗಭೂಮಿಯಲ್ಲೇ ಅತ್ಯಂತ ವಿಶಿಷ್ಟವೆನಿಸಿರುವ ಈ ಅದ್ಭುತ ಕಲೆ ಅಪ್ರಬುದ್ಧ ನಡೆಗಳಿಂದ ತನ್ನ ಘನತೆಯನ್ನು ಕಳೆದುಕೊಳ್ಳಬಾರದು ಎಂಬ ಕಾಳಜಿಯೂ ಅಲ್ಲಲ್ಲಿ ಮಿಂಚಿದೆ.

ಆದರೆ ಯಕ್ಷಗಾನದ್ದಾಗಲೀ, ತಾಳಮದ್ದಳೆಯದ್ದಾಗಲೀ ಇತಿಹಾಸವನ್ನು ಬರೆಯುವಲ್ಲಿ ದೊಡ್ಡದೊಂದು ತೊಡಕಿದೆ. ಅದೇನೆಂದರೆ, ಈ ಕ್ಷೇತ್ರದಲ್ಲಿ ಸಶಕ್ತ ದಾಖಲೀಕರಣ ಆಗದೆ ಇರುವುದು. ಕ್ಯಾಸೆಟ್ ಕಾಲದಿಂದ ಡಿಜಿಟಲ್ ಯುಗದವರೆಗಿನ ಕಳೆದ ಅರ್ಧಶತಮಾನದ ಅವಧಿಯಲ್ಲಿ ನಡೆದ ದಾಖಲೀಕರಣ ಬಿಟ್ಟರೆ ಅದಕ್ಕಿಂತ ಹಿಂದಿನದನ್ನು ತಿಳಿದುಕೊಳ್ಳುವುದಕ್ಕೆ ನಮಗೆ ಮತ್ತೆ ಹಿರಿಯರ ನೆನಪೇ ಆಧಾರ. ಯಕ್ಷಗಾನ ಯಾ ತಾಳಮದ್ದಳೆ ಕ್ಷೇತ್ರದ ಆಯಾಯ ಕಾಲದ ವೈಶಿಷ್ಟ್ಯಗಳನ್ನು ಕೃತಿರೂಪದಲ್ಲಿ ದಾಖಲಿಸಿಡುವ ಕೆಲಸ ಆದದ್ದು ಕಮ್ಮಿ. ಬಹುಶಃ ಎಲ್ಲ ಮೌಖಿಕ ಕಲಾಸಂಪ್ರದಾಯಗಳ ವಿಚಾರದಲ್ಲೂ ಇರುವ ಸಮಸ್ಯೆ ಇದೇ.

ಹೀಗಾಗಿ, ಸಾಕಷ್ಟು ವಿಚಾರಗಳಿಗೆ ಪ್ರಸ್ತುತ ಕೃತಿಯ ಲೇಖಕರೂ ತಾವು ಕೇಳಿದ, ಓದಿದ ವಿಚಾರಗಳನ್ನೇ ಸ್ಮರಣೆಯಿಂದ ಹೆಕ್ಕಿ ಬರೆದಿದ್ದಾರೆ. ಪ್ರಕಟಿತ ಆಕರಗಳಲ್ಲಿ ಲಭ್ಯವಿರುವ ಮಾಹಿತಿಗಳನ್ನು ಅಗತ್ಯವಿರುವಲ್ಲಿ ಉಲ್ಲೇಖಿಸಿದ್ದಾರೆ. "ಬರೆವಣಿಗೆಗೆ ತೊಡಗಿದಾಗ ನನಗೆ ಎದುರಾದುದೇ ಮಾಹಿತಿಯ ಕೊರತೆ. ಹಳೆಯ ತಲೆಮಾರು ಮತ್ತು ಇಂದಿನ ಹೊಸಬರ ನಡುವಿನ ಒಂದು ತಲೆಮಾರಿನ ಕೊಂಡಿಯೇ ಇಲ್ಲದಂತೆ ಭಾಸವಾಯಿತು" ಎಂದು ಲೇಖಕರೇ ಹೇಳಿಕೊಂಡಿದ್ದಾರೆ. ಆದರೂ ಅವರು ಮಾಡಿರುವುದು ದೊಡ್ಡ ಕೆಲಸವೇ. ಯಕ್ಷಗಾನ/ ತಾಳಮದ್ದಳೆಯ ಇತಿಹಾಸವನ್ನು ಇನ್ನೂ ವಿಸ್ತಾರವಾಗಿ, ಇನ್ನೂ ಸಮಗ್ರವಾಗಿ ರಚಿಸಲು ಇಂತಹ ಕೃತಿಗಳೇ ನೀಲನಕ್ಷೆಗಳು. ತಮ್ಮ ಏಳು ದಶಕಗಳ ಜೀವನದ ಬಹುಭಾಗವನ್ನೂ ಕಲಾವಿದ, ಕವಿ, ಲೇಖಕ, ಸಂಘಟಕರಾಗಿ ಕಳೆದಿರುವ ಶ್ರೀಯುತರಿಂದ ಈ ಕೃತಿ ಬಂದಿರುವುದು ಯಕ್ಷಗಾನಕ್ಕೆ ಆಗಿರುವ ಲಾಭ.

"ವಿಸ್ತಾರವಾದ ಇತಿಹಾಸವಿರುವ ಎಲ್ಲ ಕಲೆಗಳೂ ಈ ಬಗೆಯ ಬದಲಾವಣೆಗೆ ತೆರೆದುಕೊಂಡೇ ಇರಬೇಕಾಗುತ್ತದೆ. ಯಾವುದನ್ನೂ ಒಂದು ನಿರ್ದಿಷ್ಟ ಕಾಲಮಾನದಲ್ಲಿ ಕಟ್ಟಿಹಾಕಲು ಸಾಧ್ಯವಿಲ್ಲ. ಸಣ್ಣ ತೊರೆ ಸಮುದ್ರವಾಗಬಹುದು. ಆದರೆ ಸಮುದ್ರದ ಅಸ್ತಿತ್ವಕ್ಕೆ ತೊರೆಯೂ ಅಗತ್ಯ. ತೊರೆ ಹರಿಯುತ್ತಲೇ ಇರುತ್ತದೆ. ಸಮುದ್ರ ಮೊರೆಯುತ್ತಲೇ ಇರುತ್ತದೆ" (ಪು. 30) ಎಂಬ ಸಾಲುಗಳು ಈ ಕೃತಿಯ ಅತ್ಯಂತ ಮಹತ್ವದ ಮಾತು ಎಂದು ನನಗನಿಸಿತು.

ಇಂತಹದೊಂದು ಕೃತಿಗಾಗಿ ಲೇಖಕರಿಗೆ, ಪ್ರಕಾಶಕರಿಗೆ ನನ್ನ ವಂದನೆಗಳು.

ಶನಿವಾರ, ಜೂನ್ 11, 2022

ನಾ. ಕಾರಂತ ಪೆರಾಜೆಯವರ 'ಅಮರಾವತಿ'

  • ಪುಸ್ತಕ: ಅಮರಾವತಿ
  • ಲೇಖಕರು: ನಾ. ಕಾರಂತ ಪೆರಾಜೆ
  • ಪ್ರಥಮ ಮುದ್ರಣ: 2022
  • ಪ್ರಕಾಶಕರು: ಜ್ಞಾನಗಂಗಾ ಪುಸ್ತಕ ಮಳಿಗೆ, ಪುತ್ತೂರು
  • ಪುಟಗಳು: 168
  • ಬೆಲೆ: ರೂ. 160
  • ಮುಖಪುಟ ವಿನ್ಯಾಸ: ಎಸ್ಸಾರ್ ಪುತ್ತೂರು
  • ಕಾರಂತರ ಸಂಪರ್ಕ: 9448985794 ಮತ್ತು 9448625794 (ವಾಟ್ಸಾಪ್) 

ನಾ. ಕಾರಂತ ಎಂಬ ಹೆಸರು ನೋಡಿದಾಗಲೆಲ್ಲ ನನಗೆ ನಾನೇ ಕೇಳಿಕೊಳ್ಳುವುದುಂಟು: ಇದೊಂದು ಯಾವ ನಮೂನೆಯ ಜನ ಮಾರಾಯ್ರೆ, ಅಂತ. ಹೇಳಿಕೇಳಿ ಪತ್ರಕರ್ತರು ಮತ್ತು ಯಕ್ಷಗಾನ ಕಲಾವಿದರು. ಯಾವಾಗ ನೋಡಿದರೂ ಯಾವುದೋ ಊರಿನ ಸುತ್ತಾಟದಲ್ಲಿರುತ್ತಾರೆ; ಯಾರೋ ಒಬ್ಬ ಪ್ರಯೋಗಶೀಲ ರೈತ ಅಥವಾ ಕಲಾವಿದರೊಡನೆ ಮಾತಾಡಿಕೊಂಡು ಕೂತಿರುತ್ತಾರೆ; ಇಲ್ಲವೇ ಯಾವುದೋ ಒಂದು ಆಟದಲ್ಲೋ ಕೂಟದಲ್ಲೋ ರಂಗದ ಮೇಲಿರುತ್ತಾರೆ. ಪತ್ರಿಕೆಗಳಲ್ಲಿ ತಿಂಗಳಿಗೆ ಐದಾರು ಬೈಲೈನು ಖಾಯಂ. ಇಂತಿಪ್ಪ ಕಾರಂತರ ಎರಡೋ ಮೂರೋ ಪುಸ್ತಕಗಳು ಪ್ರತೀ ವರ್ಷ ಪ್ರಿಂಟಾಗಿ ಅನಾಮತ್ತಾಗಿ ಹುಡುಕಿಕೊಂಡು ಬರುತ್ತವೆ. ಇವರನ್ನು ಇನ್ನು ಏನೂಂತ ಕರೆಯುವುದು?


ಹಾಗೆ, ಮೊನ್ನೆಮೊನ್ನೆ ಪ್ರಕಟವಾದ ಅವರ ಹೊಸ ಪುಸ್ತಕ ‘ಅಮರಾವತಿ’ಯನ್ನು ಓದುತ್ತಾ ಇದ್ದೆ. ಅದರ ಬಗ್ಗೆ ಹೇಳುವ ನೆಪದಲ್ಲಿ ಈ ಕಾರಂತರೆಂಬ ಸೋಜಿಗದ ಬಗ್ಗೆ ಎರಡು ಮಾತು ಬರೆಯಬೇಕೆನಿಸಿತು.

ಅಮರಾವತಿ- ಕೇಳಿದ ಕೂಡಲೇ ಆಹಾ ಅನ್ನಿಸುವ ಹೆಸರು. ಯಕ್ಷಗಾನಪ್ರಿಯರಿಗಂತೂ ರೋಮಾಂಚನ ಹುಟ್ಟಿಸುವ ಪದ. ಆದರೆ ಅಮರಾವತಿ ಎಂದರೆ ಸ್ವರ್ಗ - ಈ ಪುಸ್ತಕದೊಳಗಿರುವುದು  ಕಳೆದೆರಡು ವರ್ಷದ ಕೋವಿಡ್ ಕಾಲದಲ್ಲಿ ನಾವು ಕಳೆದುಕೊಂಡ ಯಕ್ಷಗಾನದ ಒಂದಷ್ಟು ಅಮೂಲ್ಯ ಜೀವಗಳ ನೆನಪು – ಎಂದು ಗೊತ್ತಾದಾಗ ಮನಸ್ಸಿನ ತುಂಬ ವಿಷಾದ. ಎಂತೆಂತಹ ಕಲಾವಿದರನ್ನೆಲ್ಲ ಕಳೆದುಕೊಂಡೆವು... “ಹಿರಿಯರ ಹೆಗಲುಗಳ ಮೇಲೆ ನಾವು ನಿಂತಿದ್ದೇವೆ” ಎನ್ನುವುದುಂಟು ಡಾ. ಜೋಶಿಯವರು. ಅಂತಹ ಹಿರಿಯರನ್ನೆಲ್ಲ ಸಾಲುಸಾಲಾಗಿ ಅಮರಾವತಿ ಸೇರಿದರು… ಆ ದುಃಖದ ನಡುವೆಯೂ ನಾ. ಕಾರಂತರಂಥವರು ಮಾಡಿದ ಕೆಲಸದಿಂದ ಏನೋ ಒಂದು ಸಣ್ಣ ನೆಮ್ಮದಿ. ಆ ಹಿರಿಯ ಕಲಾವಿದರ ನೆನಪುಗಳು, ಕೊಡುಗೆಗಳು ಪುಸ್ತಕ ರೂಪದಲ್ಲಾದರೂ ದಾಖಲಾದವಲ್ಲ- ಎಂದು.

ಯಕ್ಷಗಾನ ರಂಗದ ದೊಡ್ಡ ಸಮಸ್ಯೆ ದಾಖಲಾತಿಯ ಕೊರತೆ. ತಂತ್ರಜ್ಞಾನ ಬೆಳೆದ ಮೇಲೆ ಕ್ಯಾಸೆಟ್, ಸೀಡಿಗಳ ರೂಪದಲ್ಲಿ ಒಂದಷ್ಟು ಪ್ರದರ್ಶನಗಳು, ಸಂದರ್ಶನಗಳು ದಾಖಲಾದವು. ಯೂಟ್ಯೂಬ್, ವಾಟ್ಸಾಪ್, ಫೇಸ್ಬುಕ್ ಕಾಲದಲ್ಲಿ ಈ ದಾಖಲಾತಿಯ ವ್ಯಾಪ್ತಿ ಇನ್ನಷ್ಟು ವಿಸ್ತರಿಸಿತು (ಇಲ್ಲಿ ಜೊಳ್ಳಿನಿಂದ ಕಾಳನ್ನು ಆಯುವುದು ಇನ್ನೊಂದು ತೊಡಕು). ಆದರೆ ಅದಕ್ಕೂ ಹಿಂದಿನ ಯಕ್ಷರಂಗದ ಸಮೃದ್ಧಿಯನ್ನು ಗಮನಿಸಿದರೆ, ಆಗಿರುವ ದಾಖಲಾತಿ ಏನೂ ಅಲ್ಲ. ಹೆಚ್ಚು ಬೇಡ, ಕಳೆದ 70-80 ವರ್ಷಗಳಲ್ಲಿ ನಮ್ಮ ಯಕ್ಷಗಾನ, ತಾಳಮದ್ದಳೆ ಕಲಾವಿದರು ರಂಗದಲ್ಲಿ ಆಡಿದ ಮಾತುಗಳನ್ನೆಲ್ಲ ಲಿಪಿರೂಪಕ್ಕೆ ಇಳಿಸಿದರೆ ಎಷ್ಟು ಕೋಟಿ ಪುಟಗಳಾಗಬಹುದು ಎಂದು ನಾನು ನನ್ನಷ್ಟಕ್ಕೇ ಊಹಿಸಿ ವಿಸ್ಮಿತನಾಗುವುದುಂಟು. ಯಕ್ಷಗಾನ ಮೂಲತಃ ಆಶುಕಲೆ. ಅದು ಹಾಗಿದ್ದರೆ ಚೆನ್ನ. ಆದರೆ ಎಷ್ಟೋ ಕಲಾವಿದರು ಆಡುವ ಅಮೂಲ್ಯ ಮಾತುಗಳು, ಅಲ್ಲಿ ಮಿಂಚುವ ಅದ್ಭುತ ಹೊಳಹುಗಳು ದಾಖಲಾಗಿದ್ದರೆ ಅದು ಇನ್ನೂ ಚೆನ್ನಾಗಿರುತ್ತಿತ್ತು. ಕ್ಯಾಸೆಟ್ ಹಿಂದಿನ ಕಾಲ ಹಾಗಿರಲಿ, ಕ್ಯಾಸೆಟ್ ಬಂದ ಮೇಲಿನ ಕಾಲದ್ದಾದರೂ, ಅಕ್ಷರೂಪಕ್ಕೆ ಬಂದ ಅರ್ಥದ ಪ್ರಮಾಣ ಬಹಳ ಕಮ್ಮಿ. ಎಷ್ಟೋ ಕ್ಯಾಸೆಟ್ ಗಳು ಈಗ ಬಳಕೆಗೆ ದಕ್ಕದೆ ಹಾಗೇ ನಷ್ಟವಾಗಿವೆ.

ಇಂತಹ ಪರಿಸ್ಥಿತಿಯಲ್ಲಿ ‘ಅಮರಾವತಿ’ಯಂತಹ ಪುಸ್ತಕಗಳ ಬೆಲೆ ಗೊತ್ತಾಗುತ್ತದೆ.ಇದರಲ್ಲಿ ಕೋವಿಡ್ ಕಾಲದಲ್ಲಿ ನಿಧನರಾದ ಹದಿನೇಳು ಹಿರಿಯ ಕಲಾವಿದರ ಪರಿಚಯ, ಸಂದರ್ಶನದ ದಾಖಲಾತಿ ಇದೆ. ಪುಸ್ತಕದ ಆರಂಭದಲ್ಲಿ, ಯಕ್ಷಗಾನದ ಬಹುದೊಡ್ಡ ಪೋಷಕರೂ ಸ್ವತಃ ಕಲಾವಿದರೂ ಆಗಿದ್ದ ಎಡನೀರು ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು ಹಾಗೂ ಯಕ್ಷಗಾನದ ದಂತಕತೆ ಡಾ. ಶೇಣಿ ಗೋಪಾಲಕೃಷ್ಣ ಭಟ್ಟರ ಕುರಿತ ಸುದೀರ್ಘ ನುಡಿನಮನ/ ಸಂದರ್ಶನ ಇದೆ. ನಂತರದ ಪುಟಗಳಲ್ಲಿ ಪುತ್ತೂರು ಶ್ರೀಧರ ಭಂಡಾರಿ, ಪದ್ಯಾಣ ಗಣಪತಿ ಭಟ್, ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ, ಡಾ. ಶಿಮಂತೂರು ನಾರಾಯಣ ಶೆಟ್ಟಿ, ವಂಡ್ಸೆ ನಾರಾಯಣ ಗಾಣಿಗ, ಮಲ್ಪೆ ವಾಸುದೇವ ಸಾಮಗ, ಸಂಪಾಜೆ ಶೀನಪ್ಪ ರೈ, ಮಾರ್ಗೋಳಿ ಗೋವಿಂದ ಸೇರೆಗಾರ್, ಕುರ್ನಾಡು ಶಿವಣ್ಣ ಆಚಾರ್, ಮುಳಿಯಾಲ ಭೀಮ ಭಟ್, ತಲೆಂಗಳ ರಾಮಚಂದ್ರ ಭಟ್, ಬಿ. ಎಸ್. ಓಕುಣ್ಣಾಯ, ಸರಸ್ವತಿ ಕೃಷ್ಣ ಭಟ್, ರಾಮಚಂದ್ರ ಅರ್ಬಿತ್ತಾಯ, ವೇಣೂರು ವಾಮನ ಕುಮಾರ್ ಅವರ ಕುರಿತ ನೆನಪುಗಳ ಅಕ್ಷರತೋರಣವಿದೆ.

ಇಲ್ಲಿನ ಅಧ್ಯಾಯಗಳು ಕಲಾವಿದರ ಬಯೋಡಾಟಾ ಬರೆಯುವುದಕ್ಕೆ ಸೀಮಿತವಾಗಿಲ್ಲ. ಅವುಗಳಲ್ಲಿ ಕಲಾವಿದರೊಂದಿಗಿನ ಸಂದರ್ಶನದ ದಾಖಲೀಕರಣವಿದೆ; ಲೇಖಕರ ವೈಯಕ್ತಿಕ ಒಡನಾಟದ ನೆನಪುಗಳಿವೆ. ಪ್ರತೀ ಕಲಾವಿದನ ಬಗೆಗೂ ಅವರ ಸಮಕಾಲೀನರು, ಹಿರಿಕಿರಿಯ ಕಲಾವಿದರು, ವಿದ್ವಾಂಸರು ವ್ಯಕ್ತಪಡಿಸಿದ ಅನಿಸಿಕೆಗಳಿವೆ. ಕೆಲವು ಅಧ್ಯಾಯಗಳನ್ನು ಬರೆಯುವ ಮುನ್ನ ಲೇಖಕರು ವಿವಿಧ ಕೃತಿಗಳ ಪರಾಮರ್ಶನವನ್ನೂ ಮಾಡಿದ್ದಾರೆ. ಹೀಗಾಗಿ ಯಕ್ಷಗಾನ ಅಧ್ಯಯನಾಸಕ್ತರಿಗೆ ‘ಅಮರಾವತಿ’ ಒಂದೊಳ್ಳೆಯ ಆಕರ ಆಗಬಲ್ಲುದು.

‘ಶೇಣಿ ದರ್ಶನ’ದಿಂದ ತೊಡಗಿ ಇತ್ತೀಚಿನ ಮಣಿಸರ, ‘ಮಾಸದ ಮೆಲುಕು’, ‘ಸುಮನಸ’, ‘ಅಡ್ಡಿಗೆ’, ‘ದಗಲೆ’ ಕೃತಿಗಳಲ್ಲೂ ಕಾರಂತರು ಇದೇ ದಾಖಲೀಕರಣದ ಕೆಲಸವನ್ನು ಮಾಡಿದ್ದಾರೆ. ಅನೇಕ ಕೃತಿಗಳನ್ನು, ಅಭಿನಂದನ ಗ್ರಂಥಗಳನ್ನು ಸಂಪಾದಿಸಿದ್ದಾರೆ. ‘ಅಮರಾವತಿ’ಗೆ ಮುನ್ನುಡಿ ಬರೆಯುತ್ತಾ ಶ್ರೀ ಗಣರಾಜ ಕುಂಬ್ಳೆಯವರು ಆಡುವ ಮಾತು ಕಾರಂತರ ಒಟ್ಟಾರೆ ಕೆಲಸದ ಹಿನ್ನೆಲೆಯಲ್ಲಿ ಪ್ರಮುಖವಾಗುತ್ತದೆ: “ಸಂಸ್ಕೃತಿಯ ಕೂಸುಗಳಾದ ನಮಗೆ ನಮ್ಮ ಸಂಸ್ಕೃತಿಯನ್ನು ಅಜರಾಮರವಾಗಿಸಿದ ಸ್ಮರಣೆ ಕರ್ತವ್ಯ. ಇತಿಹಾಸವನ್ನು ಮರೆತ ಜನಾಂಗ ಭವಿಷ್ಯದಲ್ಲಿ ಸರ್ವವನ್ನೂ ಕಳೆದುಕೊಳ್ಳುತ್ತದೆ ಎಂಬ ಎಚ್ಚರವನ್ನು ಮೂಡಿಸಲು ಇಂತಹ ಗ್ರಂಥಗಳು ಬೇಕು.”

ಇದರೊಂದಿಗೆ ಇನ್ನೊಂದು ಮಾತನ್ನೂ ಕುಂಬ್ಳೆಯವರು ಸೇರಿಸುತ್ತಾರೆ: “ಕಲಾವಿದರ ಕುರಿತಾಗಿರುವ ಪ್ರಚಾರಗಳು ವಿಶೇಷ ಮಾಧ್ಯಮಗಳಿಂದ ಗರಿಬಿಚ್ಚಿ ಹಾರಾಡುತ್ತಿರುವ ಕಾಲವಿದು. ಎಲ್ಲವೂ ವಾಸ್ತವವಲ್ಲ. ಒಂದೊಂದು ಪ್ರದರ್ಶನವೂ ಕಲಾವಿದನಿಗೆ ಸವಾಲು. ಒಂದೇ ಪ್ರದರ್ಶನದಲ್ಲಿ ಕಲಾವಿದನ ಆಳವನ್ನು ಅಳೆಯಲಾಗದು. ಸಿದ್ಧಿ ಬೇರೆ, ಪ್ರಸಿದ್ಧಿ ಬೇರೆ ಎಂಬ ನಿಜದ ಅರಿವು ಮೂಡುವುದು ಕಾಲನ ಲೀಲೆಯಲ್ಲಿ.” ಎರಡು ವೇಷ ಮಾಡಿ, ಮೂರು ಅರ್ಥ ಹೇಳಿ ದೊಡ್ಡ ಕಲಾವಿದರಾಗುವ ಇಂದಿನ ಚಮತ್ಕಾರದ ಕಾಲದಲ್ಲಿ ಈ ಮಾತುಗಳು ತುಂಬ ಪ್ರಸ್ತುತ.

ಕಾರಂತರು ಮೂವತ್ತು-ನಲ್ವತ್ತು ವರ್ಷಗಳಿಂದ ಬರವಣಿಗೆಯಲ್ಲಿ, ಕಲಾವ್ಯವಸಾಯದಲ್ಲಿ ತೊಡಗಿಸಿಕೊಂಡವರು. ನಾವೆಲ್ಲ ಶಾಲೆಗೆ ಹೋಗುತ್ತಿದ್ದಾಗಲೇ ಅವರ ಹೆಸರು ಚಿರಪರಿಚಿತ. ಸುಧಾ, ತರಂಗ, ಉದಯವಾಣಿ, ಅಡಿಕೆ ಪತ್ರಿಕೆಗಳ ನಿಯಮಿತ ಓದುಗರಾಗಿದ್ದ ನಮಗೆ ಅವರ ನುಡಿಚಿತ್ರಗಳ ನೆನಪು ಧಾರಾಳ. ಯಕ್ಷಗಾನಕ್ಕಾಗಿ ಮಾಡಿದ ಕೆಲಸದಷ್ಟೇ ಕೃಷಿ ಸಾಹಿತ್ಯದ ಕಡೆಗೂ ಅವರ ಕೊಡುಗೆ ಇದೆ. ‘ಅನ್ನದ ಮರ’, ‘ಕೃಷಿ ಕತೆ-ಕೃಷಿಕರ ಕತೆ’, ‘ಜೀವಧಾನ್ಯ’, ‘ಅಗುಳು’, ‘ನೆಲದ ನಾಡಿ’, ‘ಮಾಂಬಳ’, ‘ಹಸಿರು ಮಾತು’ ಹೀಗೆ 15ಕ್ಕೂ ಹೆಚ್ಚು ಪುಸ್ತಕಗಳು ಕೃಷಿ ಕಡೆಗಿನ ಅವರ ಪ್ರೀತಿಯನ್ನು ತೋರಿಸುತ್ತವೆ. ಅಡಿಕೆ ಪತ್ರಿಕೆ ಹಾಗೂ ಇತರ ದಿನಪತ್ರಿಕೆ, ನಿಯತಕಾಲಿಕಗಳಲ್ಲಿ ಅವರು ಪರಿಚಯಿಸಿದ ಕೃಷಿಕರು, ಪ್ರಯೋಗಶೀಲರು ನೂರಾರು.

ಮನಸ್ಸು ಮಾಡಿದ್ದರೆ ಬೆಂಗಳೂರಿನಂತಹ ಮಹಾನಗರಗಳಲ್ಲಿ ನೆಲೆಸಿ ಪತ್ರಿಕಾವೃತ್ತಿಯನ್ನು ಅವರು ಮುಂದುವರಿಸಬಹುದಿತ್ತು. ಆದರೆ ಅವರಿಗೆ ತೃಪ್ತಿಕೊಡುವ ಯಕ್ಷಗಾನ ಹಾಗೂ ಕೃಷಿ ಬರವಣಿಗೆಯ ಕಾಯಕವನ್ನು ಅವರು ಪುತ್ತೂರಲ್ಲೇ ಕುಳಿತು ಮಾಡಿದ್ದಾರೆ.  ಕರ್ನಾಟಕ ಸರ್ಕಾರದ ಪತ್ರಿಕೋದ್ಯಮ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪುಸ್ತಕ ಪ್ರಶಸ್ತಿ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿಗಳು ಅವರನ್ನೇ ಹುಡುಕಿಕೊಂಡು ಬಂದಿವೆ. ಅಭಿವೃದ್ಧಿ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗಂತೂ ಕಾರಂತರ ಕೆಲಸಗಳೇ ಜೀವಂತ ಪಠ್ಯಪುಸ್ತಕ.

‘ಅಮರಾವತಿ’ಯ ನೆಪದಲ್ಲಿ ಇಷ್ಟೆಲ್ಲ ಹೇಳಬೇಕೆನಿಸಿತು.

- ಸಿಬಂತಿ ಪದ್ಮನಾಭ ಕೆ. ವಿ.

ಶನಿವಾರ, ಏಪ್ರಿಲ್ 30, 2022

ಯಕ್ಷ ಗಾನ ಲೀಲಾವಳಿ: ಯಕ್ಷಗಾನ ರಂಗದ ಪ್ರಥಮ ವೃತ್ತಿಪರ ಮಹಿಳಾ ಭಾಗವತರಾದ ಲೀಲಾವತಿ ಬೈಪಾಡಿತ್ತಾಯರ ಆತ್ಮಕಥೆ

  • ಪುಸ್ತಕ: ಯಕ್ಷ-ಗಾನ ಲೀಲಾವಳಿ (ಯಕ್ಷಗಾನರಂಗದ ಪ್ರಥಮ ಮಹಿಳಾ ಭಾಗವತರಾದ ಲೀಲಾವತಿ ಬೈಪಾಡಿತ್ತಾಯರ ಆತ್ಮಕಥನ)
  • ನಿರೂಪಣೆ: ವಿದ್ಯಾರಶ್ಮಿ ಪೆಲತ್ತಡ್ಕ
  • ಪ್ರಕಟಣೆ: ಅಭಿನವ ಬೆಂಗಳೂರು
  • ಪುಟಗಳು: 164
  • ಬೆಲೆ: ರೂ. 150-00
  • ಸಂಪರ್ಕ: 9986266991

ಬದುಕು ಅರ್ಥವಾಗಬೇಕೆಂದರೆ ಆತ್ಮಕಥೆಗಳನ್ನು ಓದಿ ಎಂದು ಹಿರಿಯರು ಹೇಳುವುದನ್ನು ಕೇಳಿದ್ದೇನೆ. ಈ ಆತ್ಮಕಥೆ ಓದಿ ಬದುಕು ಎಷ್ಟು ಅರ್ಥವಾಯಿತೋ ಗೊತ್ತಿಲ್ಲ, ಲೀಲಮ್ಮನವರ ಕುರಿತು ಇದ್ದ ಗೌರವ-ಅಭಿಮಾನಗಳು ಇಮ್ಮಡಿಗೊಂಡದ್ದಂತೂ ನಿಜ.

‘ನಾವು ಬಾಲ್ಯ-ತಾರುಣ್ಯದಲ್ಲಿ ಪಟ್ಟ ಕಷ್ಟದ ಒಂದು ಪಾಲೂ ನೀವು ನೋಡಿಲ್ಲ’ ಎಂದು ನಮ್ಮ ಮಕ್ಕಳನ್ನು ನೋಡಿ ಕೆಲವೊಮ್ಮೆ ನಾವು ಬಯ್ಯುವುದಿದೆ; ಆದರೆ ಇಂತಹ ಹಿರಿಯರ ಜೀವನಗಾಥೆಗಳನ್ನು ಓದಿದ ಮೇಲೆ ನಮ್ಮ ಹಿರಿಯ ತಲೆಮಾರು ಅನುಭವಿಸಿದ ಕಷ್ಟಗಳ ಸಣ್ಣ ಪಾಲನ್ನೂ ನಾವೂ ಅನುಭವಿಸಿಲ್ಲ ಎಂದು ಅನಿಸುವುದಿದೆ.

ಔಪಚಾರಿಕ ಶಿಕ್ಷಣವನ್ನೇ ಪಡೆಯದ ಹೆಣ್ಣುಮಗಳೊಬ್ಬರು, ಮಹಿಳೆಯರು ಯಕ್ಷಗಾನಕ್ಕೆ ಪ್ರೇಕ್ಷಕರಾಗಿ ಹೋಗುವುದೂ ಮನೆಮಂದಿಗೆ ಇಷ್ಟವಿಲ್ಲದ ಕಾಲದಲ್ಲಿ – ಅರ್ಧಶತಮಾನದ ಹಿಂದೆ – ವೃತ್ತಿಪರ ಮೇಳಗಳಲ್ಲಿ ಸತತ ಎರಡೂವರೆ ದಶಕ ಭಾಗವತರಾಗಿ ತಿರುಗಾಟ ಮಾಡಿದರು ಎಂಬುದನ್ನು ನಂಬುವುದೂ ಕಷ್ಟ. ಆದರೆ ನಂಬಲೇಬೇಕು; ಏಕೆಂದರೆ ನಮ್ಮೆದುರು ಲೀಲಮ್ಮ ಇದ್ದಾರೆ. ಈ ಕಥೆಯನ್ನೇ ಪ್ರತಿಭಾವಂತ ನಿರ್ದೇಶಕನೊಬ್ಬ ದೃಶ್ಯ ರೂಪಕ್ಕಿಳಿಸಿದರೆ ಎಷ್ಟು ಸುಂದರ ಬಯೋಪಿಕ್ ಆಗಬಹುದಲ್ಲ ಎಂದು ನನಗೆ ಓದಿನ ನಡುವೆ ಅನಿಸಿದ್ದೂ ಉಂಟು.

ಅವರ ಬದುಕಿನ ಕಥೆ ತೆರೆದುಕೊಳ್ಳುತ್ತಾ ಹೋದಂತೆ ನಮ್ಮೊಳಗೂ ಹೊಸದೊಂದು ಪ್ರಪಂಚ ಬಿಚ್ಚಿಕೊಳ್ಳುತ್ತದೆ. ಮನಸ್ಸು ಆರ್ದ್ರವಾಗುತ್ತದೆ. ನಾವು ಅಗಾಧವಾಗಿ ಪ್ರೀತಿಸುವ ಕಲೆಯೊಂದು ಇಷ್ಟು ವಿಸ್ತಾರವಾಗಿ ಬೆಳೆದಿರುವುದರ ಹಿಂದೆ ಎಷ್ಟೊಂದು ಮಂದಿಯ ತ್ಯಾಗಗಳಿವೆ ಎಂದು ಪುನಃಪುನಃ ಮನವರಿಕೆ ಆಗುತ್ತದೆ.

ಇಂತಹದೊಂದು ಸಂತೃಪ್ತಿಗೆ ಕಾರಣರಾದ ನಿರೂಪಕಿ ವಿದ್ಯಾರಶ್ಮಿ ಖಂಡಿತ ಅಭಿನಂದನಾರ್ಹರು. ಏಕೆಂದರೆ ಇದು ಕೇವಲ ಮಹಿಳೆಯೊಬ್ಬರ ಸಾಹಸಕಥನ ಮಾತ್ರ ಅಲ್ಲ, ಯಕ್ಷಗಾನ ಇತಿಹಾಸದ ಪ್ರಮುಖ ಅಧ್ಯಾಯವೂ ಹೌದು. ಲೀಲಮ್ಮನವರು ವೃತ್ತಿಪರ ಭಾಗವತರಾಗಿ ಅಭ್ಯುದಯ ಕಂಡ ಕಾಲ ವಿವಿಧ ಕಾರಣಗಳಿಗಾಗಿ ಯಕ್ಷಗಾನ ಚರಿತ್ರೆಯಲ್ಲಿ ಮಹತ್ವದ್ದೆನಿಸುತ್ತದೆ. ಯಕ್ಷಗಾನಕ್ಕೆ ಆಧುನಿಕತೆಯ ಪ್ರವೇಶ, ಟೆಂಟ್ ಮೇಳಗಳ ಉಚ್ಛ್ರಾಯ ಕಾಲ, ಅಪಾರ ಸಂಖ್ಯೆಯಲ್ಲಿ ತುಳು ಪ್ರಸಂಗಗಳು ರಂಗಕ್ಕೆ ಬಂದು “ತುಳು ತಿಟ್ಟು” ಎಂಬ ಹೊಸ ಆಯಾಮವೇ ಹುಟ್ಟಿಕೊಂಡದ್ದು, ಆ ಮೂಲಕ ಯಕ್ಷಗಾನವು ಜನಸಾಮಾನ್ಯರ ಮನಸ್ಸು ಹಾಗೂ ದೈನಂದಿನ ಬದುಕಿಗೆ ಹತ್ತಿರವಾದದ್ದು- ಇಂತಹ ವಿಶಿಷ್ಟ ಕಾಲಘಟ್ಟದ ಚರಿತ್ರೆಗೂ ಒಂದು ಗಟ್ಟಿ ಆಧಾರವಾಗಿ ನಿಲ್ಲುವುದು ಲೀಲಮ್ಮನವರು ಆತ್ಮಕಥೆಯ ವೈಶಿಷ್ಟ್ಯ.

ಆತ್ಮಕಥೆ ಬರೆಯುವವರ ಪ್ರಮುಖ ಸವಾಲೆಂದರೆ ಅದು ಆತ್ಮರತಿ ಆಗದಂತೆ ನೋಡಿಕೊಳ್ಳುವುದು. ಈ ಇಡೀ ಪುಸ್ತಕದಲ್ಲಿ ಅಂತಹದೊಂದು ಸ್ವಪ್ರಶಂಸೆಯ ಒಂದು ಸಣ್ಣ ಎಳೆಯೂ ಕಾಣಿಸಿಕೊಂಡಿಲ್ಲ. ಅದು ಕಥಾನಾಯಕಿಯ ಹಾಗೂ ನಿರೂಪಕಿಯ ಯಶಸ್ಸೂ ಹೌದು. ವಿನಯವೇ ಮೈವೆತ್ತ ವ್ಯಕ್ತಿತ್ವ ಲೀಲಮ್ಮನವರದ್ದು. ಇನ್ನು ಅವರು ಹೇಳಿಕೊಂಡ ಕಥೆಯಲ್ಲಿ ಆತ್ಮಪ್ರಶಂಸೆ ಕಾಣಿಸಿಕೊಳ್ಳುವುದಾದರೂ ಹೇಗೆ? ಬದುಕಿನ ಹಾದಿಯುದ್ದಕ್ಕೂ ತನ್ನ ಪತಿ, ಮಕ್ಕಳು, ಬಂಧುಗಳು ಹಾಗೂ ಹಿತೈಷಿಗಳ ತ್ಯಾಗ ದೊಡ್ಡದು, ತನ್ನದೇನೂ ಇಲ್ಲ ಎಂಬ ಅವರ ವಿನಯವಂತಿಕೆಯೇ ಅವರ ವ್ಯಕ್ತಿತ್ವವನ್ನು ಬಹಳ ಎತ್ತರಕ್ಕೆ ಏರಿಸಿದೆ. ಆ ವ್ಯಕ್ತಿತ್ವವನ್ನು ಅಷ್ಟೇ ಪರಿಣಾಮಕಾರಿಯಾಗಿ ಪ್ರತಿಫಲಿಸಿರುವುದು ಪುಸ್ತಕದ ಮುಖಪುಟದಲ್ಲಿ ಬಳಸಲಾಗಿರುವ ಅವರ ಚಿತ್ರ. ಅವರ ಅಮಾಯಕತೆ, ಸಜ್ಜನಿಕೆ ಹಾಗೂ ಪ್ರತಿಭೆಗಳನ್ನೆಲ್ಲ ಒಟ್ಟಿಗೆ ಎರಕ ಹೊಯ್ದಂತಿದೆ ಈ ಚಿತ್ರ. ಛಾಯಾಗ್ರಾಹಕ ಸುಧಾಕರ್ ಜೈನ್ ಅವರಿಗೆ ಇದಕ್ಕಾಗಿ ವಿಶೇಷ ಅಭಿನಂದನೆ ಹೇಳಬೇಕು.

ಆತ್ಮಕಥೆಯೊಂದು ಇನ್ನೊಬ್ಬರ ನಿರೂಪಣೆ ಎಂದಾಗ ಅಲ್ಲಿ ಇನ್ನೊಂದು ಸವಾಲೂ ಇದೆ. ಅದು ನಿರೂಪಕರ ಆತ್ಮಕಥೆ ಆಗದಂತೆ ನೋಡಿಕೊಳ್ಳುವುದು. ನಿರೂಪಕಿಯಾಗಿ ವಿದ್ಯಾರಶ್ಮಿ ಇದರಲ್ಲೂ ಬಹುತೇಕ ಯಶಸ್ವಿಯಾಗಿದ್ದಾರೆ. ಆದರೂ ಸಹಪಾಠಿಯಾಗಿ ಅವರ ಓದು, ಬರೆವಣಿಗೆ, ಯೋಚನಾಕ್ರಮ ಇತ್ಯಾದಿಗಳನ್ನು ಹತ್ತಿರದಿಂದ ಬಲ್ಲೆನಾದ್ದರಿಂದ ಕೆಲವೊಂದು ವಾಕ್ಯಗಳನ್ನು ಓದುವಾಗ “ಇದು ವಿದ್ಯಾರಶ್ಮಿಯ ಮನಸ್ಸಿನಿಂದ ಬಂದ ಹಾಗುಂಟು” ಎಂದು ಅನಿಸಿದ್ದೂ ಉಂಟು. ಆದರೆ ಅದರಿಂದ ಆತ್ಮಕಥೆಯ ಓದುವಿಕೆಗಾಗಲೀ, ಕಥಾನಾಯಕಿಯ ವ್ಯಕ್ತಿತ್ವ ಚಿತ್ರಣಕ್ಕಾಗಲೀ ತೊಡಕಾಗಿಲ್ಲ. ಅಲ್ಲದೆ, ಅವೆಲ್ಲ ಉದ್ದೇಶಪೂರ್ವಕ ಅಭಿವ್ಯಕ್ತಿ ಆಗಿರಲಾರದು. ನಿರೂಪಕಿ ಕಥಾನಾಯಕಿಯ ಬದುಕನ್ನು ತನ್ನ ಕಣ್ಣಿನಿಂದ ನೋಡುತ್ತ, ಅದರೊಳಗೆ ಬೆರೆತುಹೋಗುತ್ತ, ಅಲ್ಲಲ್ಲಿ ಅಯಾಚಿತವಾಗಿ ತಾನೇ ಪಾತ್ರವಾಗುವ ಪರಿಯೂ ಆಗಿರಬಹುದು.

“ಹೆಣ್ಣುಮಕ್ಕಳ ಬದುಕು ಚೆಂದವಿರಬೇಕೆಂದರಂತೂ ಬೆನ್ನಿಗೆ ಅಪ್ಪನಿರಲೇಬೇಕು” (ಪು. 29), “…ನನ್ನ ಬಗೆಗೆ ಅವರೊಂದು ಕನಸು ಕಟ್ಟಿಕೊಂಡರು” (ಪು. 46) ಎಂಬ ವಾಕ್ಯಗಳನ್ನು ಓದುವಾಗ ಥಟ್ಟನೆ ಅಲ್ಲೊಂದು ಕವಿತೆಯ ಸಾಲು ಕಂಡಂತಾಗಿ ಪುಳಕವಾದದ್ದಿದೆ. ಬದುಕಿನ ಸಂಕಷ್ಟ, ದುಡಿಯುವ ಅನಿವಾರ್ಯ, ಎಲ್ಲ ಎಡರುತೊಡರುಗಳ ನಡುವೆ ಹಿರಿಯರಿಂದ, ಸಮಾಜದಿಂದ ದೊರೆತ ಪ್ರಶಂಸೆ, ಮನ್ನಣೆ- ಇಂತಹವುಗಳನ್ನು ಓದುವಾಗ ಕಣ್ಣು ತೇವಗೊಂಡದ್ದೂ ಇದೆ.

ಯಕ್ಷಗಾನದ ನಿನ್ನೆಗಳ ಬಗ್ಗೆ ಹೇಳುವುದರ ಜೊತೆಗೆ ಇಂದು ಮತ್ತು ನಾಳೆಗಳ ಬಗೆಗೂ ಲೀಲಮ್ಮನವರು ಮಾತಾಡಿರುವುದು ಯಕ್ಷಗಾನಾಸಕ್ತರಿಗೆ ಪ್ರಮುಖವಾಗುತ್ತದೆ. “ಈಗ ಪದ ಹೇಳಿದವರೆಲ್ಲರೂ ಭಾಗವತ ಎನಿಸಿಕೊಳ್ಳುವುದು ನೋಡಿದಾಗ ನನಗೆ ಯಕ್ಷಗಾನದ ಮೂಲಬೇರು ಅಲುಗಾಡುತ್ತಿದೆಯೋ ಎಂಬ ಆತಂಕ ಮೂಡುತ್ತದೆ” (ಪು. 123);”ವೇದಿಕೆಯಲ್ಲಿ ದೀರ್ಘಕಾಲ ಬಾಳಬೇಕೆಂದರೆ ಪ್ರತಿಭೆಯ ಜೊತೆಗೆ ಪರಿಶ್ರಮ, ಬದ್ಧತೆಗಳು ಸೇರಬೇಕು ಎಂಬುದನ್ನು ಎಳೆಯರು ಮರೆಯಬಾರದು” (ಪು. 125) ಮುಂತಾದ ಮಾತುಗಳು ಅವರ ಅಂತರಂಗ ದರ್ಶನ ಮಾಡುವುದಷ್ಟೇ ಅಲ್ಲದೆ, ಹೊಸ ತಲೆಮಾರಿನ ಕಲಾವಿದರಿಗೆ ಕಿವಿಮಾತು ಹೇಳಿದಂತೆಯೂ ಇದೆ.

ಇಂತಹದೊಂದು ಆತ್ಮಕಥೆಯನ್ನು ನಿರೂಪಿಸುವುದರ ಹಿಂದೆ ತಾನು ಪಟ್ಟ ಕಷ್ಟವನ್ನು ವಿದ್ಯಾರಶ್ಮಿ ತಮ್ಮ ಆರಂಭಿಕ ಮಾತುಗಳಲ್ಲಿ ಹೇಳಿಕೊಂಡಿದ್ದಾರೆ. ಹೆಚ್ಚು ಮಾತಿನ ಪ್ರವೃತ್ತಿ ಇಲ್ಲದ ಲೀಲಮ್ಮನವರ ನೆನಪುಗಳನ್ನು ಕೆದಕುವುದು ಅವರಿಗೂ ದೊಡ್ಡ ಸಾಹಸವೇ ಆಗಿತ್ತು. ಅದರಲ್ಲೂ ದಿನಚರಿಯಂತಹ ಯಾವ ಲಿಖಿತ ಆಧಾರವೂ ಇಲ್ಲದೆ, ಕೇವಲ ನೆನಪುಗಳ ಆಧಾರದಲ್ಲಿ, ಕುಟುಂಬದ ಸದಸ್ಯರು, ಹತ್ತಿರದ ಬಂಧುಗಳ ವಿವರಗಳಲ್ಲಿ  ಒಬ್ಬರ ಆತ್ಮಕಥೆಯನ್ನು, ಅವರ ವ್ಯಕ್ತಿತ್ವಕ್ಕೆ ಕುಂದುಂಟಾಗದಂತೆ ಬರೆಯುವುದು ನಿಜಕ್ಕೂ ಕಷ್ಟದ ಕೆಲಸ. ಇದರ ಹಿಂದೆ ಲೀಲಮ್ಮನವರ ಮಗ ಅವಿನಾಶ್, ಪತಿ ಹರಿನಾರಾಯಣ ಬೈಪಾಡಿತ್ತಾಯರು, ಅಣ್ಣ ವಿಷ್ಣು ಹೆಬ್ಬಾರ್ ಅಂಥವರ ಮುತುವರ್ಜಿ, ಬೆಂಬಲಗಳೂ ಬಹಳ. ಪುಸ್ತಕವನ್ನು ಪ್ರಕಟಿಸಿರುವ ಅಭಿನವದ ರವಿಕುಮಾರ್ ಅವರೂ ಸೇರಿದಂತೆ, ಇಂತಹದೊಂದು ಯಕ್ಷಗಾನ ಇತಿಹಾಸದ ಅಧ್ಯಾಯ ಸೃಷ್ಟಿಗೆ ಕಾರಣಕರ್ತರಾಗಿರುವ ಎಲ್ಲರಿಗೂ ಯಕ್ಷಗಾನದ ಅಧ್ಯಯನಾಸಕ್ತರು ಸದಾ ಋಣಿಯಾಗಿರಬೇಕು.

ಸೋಮವಾರ, ಏಪ್ರಿಲ್ 4, 2022

ಉಲಿಯ ಉಯ್ಯಾಲೆ: ತಾಳಮದ್ದಳೆಯೆಂಬ ಮೋಹಕ ಲೋಕ

  • ಪುಸ್ತಕ: ಉಲಿಯ ಉಯ್ಯಾಲೆ
  • ಲೇಖಕರು: ರಾಧಾಕೃಷ್ಣ ಕಲ್ಚಾರ್
  • ಪ್ರಕಾಶಕರು: ಅಕ್ಷರ ಪ್ರಕಾಶನ, ಹೆಗ್ಗೋಡು
  • ಬೆಲೆ: ರೂ. 170
  • ಪ್ರಥಮ ಮುದ್ರಣ: 2022

ಉಲಿಯ ಉಯ್ಯಾಲೆ’ ಎಂಬ ಶೀರ್ಷಿಕೆಯಿಂದಲೇ ಆಕರ್ಷಿಸಲ್ಪಟ್ಟವನು ನಾನು. ಮಾರುಕಟ್ಟೆಯ ದೃಷ್ಟಿಯಿಂದ ನೋಡುವುದಾದರೆ ಪುಸ್ತಕದ ಯಶಸ್ಸಿನಲ್ಲಿ ಶೀರ್ಷಿಕೆಯ ಪಾಲೂ ಇದೆಯಂತೆ. ಆದರೆ ಈ ಪುಸ್ತಕ ಇಷ್ಟವಾಗುವುದಕ್ಕೆ ಹಲವು ಕಾರಣಗಳುಂಟು.

ಕಲ್ಚಾರರು ತಮ್ಮ ಉಲಿಯ ಉಯ್ಯಾಲೆಗೆ ‘ತಾಳಮದ್ದಳೆಯೆಂಬ ಮೋಹಕ ಲೋಕ’ ಎಂಬ ಉಪಶೀರ್ಷಿಕೆ ನೀಡಿದ್ದಾರೆ. ಈ ಪುಸ್ತಕವನ್ನು ಏನೆಂದು ಕರೆಯಬೇಕೆಂದು ಯೋಚಿಸಿದೆ. ಇದು ಆತ್ಮಕಥೆಯೇ?  ಕಾದಂಬರಿಯೇ? ಕಥಾಸಂಕಲನವೇ? ಅಂಕಣಗಳ ಸಂಕಲನವೇ? ತಾಳಮದ್ದಳೆಯ ಇತಿಹಾಸ ಕಥನವೇ? ಈ ಕಲಾಪ್ರಕಾರದ ಭೂತ-ವರ್ತಮಾನಗಳನ್ನು ವಿಶ್ಲೇಷಿಸುವ ವಿಮರ್ಶಾ ಕೃತಿಯೇ?

ಪ್ರತಿಯೊಂದು ಪ್ರಶ್ನೆಗೂ ಒಂದು ಕಡೆಯಿಂದ ಹೌದು ಅಂತಲೂ, ಇನ್ನೊಂದು ಕಡೆಯಿಂದ ಅಲ್ಲ ಅಂತಲೂ ಹೇಳಬೇಕೆಂದು ಅನಿಸುತ್ತದೆ. ಇದು ಇವುಗಳಲ್ಲಿ ಯಾವುದೂ ಅಲ್ಲ, ಮತ್ತು ಎಲ್ಲವೂ ಹೌದು. ಇದು ಇವೆಲ್ಲವುಗಳ ಹೊಸದೊಂದು ಮಿಶ್ರಣ ಅಂತಾದರೂ ಕರೆಯಬಹುದು.

ಆತ್ಮಕಥೆಯೇ? ಇದಕ್ಕೆ ಅಂತಹದೊಂದು ಲಕ್ಷಣ ಇದೆ. ಯಕ್ಷಗಾನದ ಬೀಜ ಬಿತ್ತಲ್ಪಟ್ಟ ಬಾಲ್ಯದ ರೋಚಕ ಪರಿಸರದ ವಿವರಣೆಗಳಿಂದ ತೊಡಗಿ ತಾನು ತಾಳಮದ್ದಳೆಯ ಲೋಕದಲ್ಲಿ ಸಾಗಿಬಂದ ಹಾದಿಯ ಸಿಂಹಾವಲೋಕನವನ್ನು ಲೇಖಕರು ಮಾಡಿದ್ದಾರೆ. ಆದರೆ ಅವರ ಒಟ್ಟಾರೆ ಬದುಕಿನ ಚಿತ್ರಣವಿಲ್ಲ. ಪತ್ರಕರ್ತರಾಗಿ, ಕಥೆಗಾರರಾಗಿ, ಲೇಖಕರಾಗಿ, ಅಧ್ಯಾಪಕರಾಗಿ ಅವರ ಅನುಭವಗಳು ಇಲ್ಲಿ ಬರುವುದಿಲ್ಲ. ಯಕ್ಷಗಾನ ಬದುಕಿನ ವಿವರಗಳೂ ಕಟ್ಟುನಿಟ್ಟಾಗಿ ಕಾಲಾನುಕ್ರಮಣಿಕೆಯ ವ್ಯವಸ್ಥೆಯಲ್ಲಿ ಇಲ್ಲ. ಇದು ತಮ್ಮ ಆತ್ಮಕಥೆಯೇನೂ ಅಲ್ಲವೆಂಬುದನ್ನು ಲೇಖಕರೇ ಸ್ಪಷ್ಟಪಡಿಸಿದ್ದಾರೆ. ಆದರೆ ಇಲ್ಲಿಯ ಶೈಲಿ ಶುದ್ಧ ಆತ್ಮನಿವೇದನೆಯದ್ದು.

ಹಾಗೆಂದು ಇದನ್ನೊಂದು ಸುಲಲಿತ ಕಾದಂಬರಿಯನ್ನಾಗಿಯೂ, ಮೂವತ್ತು ಬಿಡಿ ಲೇಖನ ಅಥವಾ ಸಣ್ಣಸಣ್ಣ ಕಥೆಗಳನ್ನಾಗಿಯೂ ಓದಿಕೊಳ್ಳಬಹುದು. ಪೂರ್ತಿಯಾಗಿ ಓದಿದ ಮೇಲೆ ತಾಳಮದ್ದಳೆಯೆಂಬ ರಂಗಭೂಮಿಯ ಕಳೆದ ಕೆಲವು ದಶಕಗಳ ಒಟ್ಟಾರೆ ಸಾಂಸ್ಕೃತಿಕ ಇತಿಹಾಸದಂತೆಯೂ, ತಾಳಮದ್ದಳೆಯ ಭೂತ-ವರ್ತಮಾನಗಳ ಗಂಭೀರ ತುಲನೆಯಂತೆಯೂ ತೋರಬಹುದು. ನನಗೆ ಹೆಚ್ಚುಕಡಿಮೆ ಇದೇ ಭಾವನೆ ಬಂತು.

ಯಕ್ಷಗಾನ ಕ್ಷೇತ್ರದ ವಿವಿಧ ಆಯಾಮಗಳ ಕುರಿತು ಬಂದ ಪುಸ್ತಕಗಳು ಬಹಳ. ಆದರೆ ಅವುಗಳಲ್ಲಿ ಚಾರಿತ್ರಿಕ ದೃಷ್ಟಿಕೋನದವು ಕಡಿಮೆ. ಬೇರೆಬೇರೆ ಸಂದರ್ಭಗಳಲ್ಲಿ ಈ ಬಗೆಯ ಪ್ರಯತ್ನಗಳು ಆಂಶಿಕವಾಗಿಯಷ್ಟೇ ನಡೆದಿವೆ. ಅದರಲ್ಲೂ ಯಕ್ಷಗಾನದ ಸಮಗ್ರ ಸಾಮಾಜಿಕ ಇತಿಹಾಸದ ರಚನೆ ಇನ್ನಷ್ಟೇ ಆಗಬೇಕಿದೆ. ವಿಶ್ವವಿದ್ಯಾನಿಲಯ/ ಅಕಾಡೆಮಿಗಳಂತಹ ಸಂಸ್ಥೆಗಳ ಹಂತದಲ್ಲಿ, ದೊಡ್ಡಮಟ್ಟದಲ್ಲಿ ಆಗಬೇಕಾದ ಕೆಲಸವದು. ಈ ಕೆಲಸ ದೂರದ ಹಿಮಾಲಯದಂತೆ ಕಂಡರೂ ಎಂದಾದರೊಂದು ದಿನ ಅದರಲ್ಲಿ ತೊಡಗಿಸಿಕೊಳ್ಳಬೇಕು ಎಂಬ ದೊಡ್ಡ ಆಸೆ ನನಗಿದೆ. ಈ ಯೋಚನೆ ಮನಸ್ಸಿನಲ್ಲಿ ಸದಾ ಗುಂಯ್ ಗುಡುವ ಕಾರಣದಿಂದಲೋ ಏನೋ, ‘ಉಲಿಯ ಉಯ್ಯಾಲೆ’ ಒಂದು ಮಹತ್ವದ ಕೃತಿಯಾಗಿ ನನಗೆ ಕಂಡಿತು.

ಮೇಲ್ನೋಟಕ್ಕೆ ಒಬ್ಬ ಯಕ್ಷಗಾನ ಕಲಾವಿದ (ಮುಖ್ಯವಾಗಿ ತಾಳಮದ್ದಳೆ ಕಲಾವಿದ) ಆ ರಂಗಭೂಮಿಯತ್ತ ಆಕರ್ಷಿತನಾಗಿ, ಅದರೊಂದಿಗೆ ಬೆಳೆದ, ಕಂಡ ಏರಿಳಿತಗಳ, ಪಡೆದ ಅನುಭವಗಳ ಇತಿವೃತ್ತವಾಗಿ ಈ ಕೃತಿ ಕಂಡರೂ, ಅದರನ್ನು ಜನರಲೈಸ್ ಮಾಡಿಕೊಳ್ಳಲು ಸಾಧ್ಯವಿದೆ. ಹೀಗಾಗಿ ಇದಕ್ಕೆ ಆತ್ಮಚರಿತ್ರೆಗಿಂತ ಹೆಚ್ಚಿನ ವ್ಯಾಪ್ತಿ ಇದೆ; ಯಕ್ಷಗಾನದ ಸಾಮಾಜಿಕ ಇತಿಹಾಸದ ಭಾಗವಾಗುವ ಶಕ್ತಿ ಇದೆ.

ತಮ್ಮ ಬಾಲ್ಯದ ನೆನಪುಗಳನ್ನು ಹೇಳಿಕೊಂಡ ಮೊದಲ ಐದಾರು ಅಧ್ಯಾಯಗಳಂತೂ ನನಗೆ ವೈಯಕ್ತಿಕವಾಗಿ ಆಪ್ತವೆನಿಸಿದವು. ಕಾರಣ ಅಂತಹದೇ ಬಾಲ್ಯದ ಪರಿಸರ ನನ್ನದೂ ಆಗಿದ್ದದ್ದು. ಬಹುಶಃ ನನ್ನಂತಹವರ ಮತ್ತು ಇದಕ್ಕಿಂತ ಹಿಂದಿನ ತಲೆಮಾರಿನ, ಗ್ರಾಮೀಣ ಪ್ರದೇಶಗಳಿಂದ ಬಂದ ಬಹುತೇಕರ ಬಾಲ್ಯವೂ ಹೀಗೆಯೇ ಇದ್ದಿರಬೇಕು. ವಿಸ್ಮಯದ ಕಲ್ಪನಾಲೋಕವನ್ನು ಕಟ್ಟಿಕೊಟ್ಟ ಅಜ್ಜನ ಕಥೆಗಳು, ಚಂದಮಾಮ, ಆಟ ನೋಡುವ ಹುಚ್ಚು, ಶಾಲಾ ವಾರ್ಷಿಕೋತ್ಸವದ ಯಕ್ಷಗಾನ ಸಂಭ್ರಮ.. ಇದೆಲ್ಲ ನಮ್ಮ ಕಥೆಯೇ ಅಲ್ಲವೇ ಎಂದು ಓದಿದವರಲ್ಲಿ ಹಲವರಿಗೆ ಅನ್ನಿಸಿರಬಹುದು.

ಆತ್ಮಕಥೆ, ಸಾಮಾಜಿಕ ಇತಿಹಾಸದ ಆಚೆಗೂ ಉಲಿಯ ಉಯ್ಯಾಲೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುವುದಕ್ಕೆ ಅದರೊಳಗೆ ಅಂತಃಸ್ರೋತವಾಗಿರುವ ವೈಚಾರಿಕತೆಯೂ ಕಾರಣ. ಈ ವೈಚಾರಿಕತೆಯನ್ನು ಪ್ರತಿಫಲಿಸುವ ಮಾತುಗಳು ಅಲ್ಲಿಂದ ಇಲ್ಲಿಂದ ಉದ್ಧರಿಸಿದವಲ್ಲ. ಬರವಣಿಗೆಯ ಓಘಕ್ಕೆ ಸಹಜವಾಗಿ ಹುಟ್ಟಿಕೊಂಡ ಮನಸ್ಸಿನ ಯೋಚನೆಗಳು. ಬೇಲಿಯ ಮೇಲೆ ತಣ್ಣಗೆ ಪಲ್ಲವಿಸಿದ ಬಳ್ಳಿಗಳ ನಡುವೆ ಅರಳಿಕೊಂಡ ವರ್ಣಮಯ ಪುಷ್ಪಗಳಂತೆ ಅವು ಥಟ್ಟನೆ ಸೆಳೆಯುತ್ತವೆ. ಮನಸ್ಸಿನಲ್ಲಿ ಗಟ್ಟಿಯಾಗಿ ಕೂರುತ್ತವೆ.

ಅಂತಹ ಒಂದೆರಡನ್ನು ಓದುವಾಗ ಗುರುತು ಮಾಡಿಕೊಂಡೆ:

  • ಮೂಲತಃ ಮನುಷ್ಯನಲ್ಲಿ ಇಲ್ಲದಿರುವ ಏನನ್ನೂ ಪರಿಸರ ಬಿತ್ತಲಾರದು (ಪು. 18)
  • ನಾವಿರುವ ಈಗಿನ ತಲೆಮಾರು ಸಾಂಸ್ಕೃತಿಕ ಆಸಕ್ತಿ ಕಳೆದುಕೊಡಿದೆ ಎಂದು ಅಳುತ್ತಿದ್ದೇವೆ. ಅವರಲ್ಲಿ ಆಸಕ್ತಿ ಮೂಡುವುದಕ್ಕೆ ಅಡಿಪಾಯ ಹಾಕುವುದನ್ನೂ ಮರೆತಿದ್ದೇವೆ (ಪು. 23).
  • ಯಾವುದು ನಮ್ಮ ಪ್ರವೃತ್ತಿಗೆ ಒಲಿಯುತ್ತದೋ ಅದನ್ನು ಪರಿಶ್ರಮದಿಂದ ವೃದ್ಧಿಸಿಕೊಳ್ಳಬೇಕಲ್ಲದೆ ನಾನು ಪ್ರತಿಯೊಂದರಲ್ಲೂ ಪರಿಣತಿ ಸಾಧಿಸುತ್ತೇನೆಂಬ ಹಠಕ್ಕೆ ಬಿದ್ದರೆ ಯಾವುದರಲ್ಲೂ ಏಳಿಗೆಯಾಗುವುದಿಲ್ಲ (ಪು. 58-59)
  • ನಮ್ಮ ಹವ್ಯಾಸದ ಕುರಿತು ತೀರಾ ಮೋಹ ಇಟ್ಟುಕೊಳ್ಳುವುದು ಆರೋಗ್ಯಕರವಲ್ಲ (ಪು. 99)
  • ಆದರ್ಶವನ್ನು ಸಾಧಿಸಹೊರಟವನ ಮಾತು ಅರಣ್ಯರೋದನವಾಗುತ್ತದೆ. ಜನರನ್ನು ಮೆಚ್ಚಿಸಹೊರಟವನಿಗೆ ಆತ್ಮಸಾಕ್ಷಿ ಚುಚ್ಚುತ್ತದೆ (ಪು. 142)
  • ಹಳಸಿದ್ದನ್ನು ತಿಂದು ಹೊಟ್ಟೆನೋವು ಬಂದರೆ ತಿಂದವನ ವಿವೇಕ ಪ್ರಶ್ನಾರ್ಹವೇ ಹೊರತು ಹಳಸಿದ ಆಹಾರದ ಅಪರಾಧವಲ್ಲ (ಪು. 147)

ಈ ಬಗೆಯ ಹೊಳಹುಗಳು ತುಂಬ ಇವೆ. ಎಲ್ಲವನ್ನೂ ಇಲ್ಲೇ ಬರೆದರೆ ಮುಂದೆ ಓದುವವರಿಗೆ ಏನೂ ಉಳಿಸದಂತೆ ಆದೀತು. ಪುಸ್ತಕದ ಕೊನೆಯ ಒಂದಷ್ಟು ಲೇಖನಗಳಲ್ಲಿ ತನ್ನ ಅನುಭವವನ್ನು ಹೇಳಿಕೊಳ್ಳುತ್ತಲೇ ಒಟ್ಟಾರೆ ಕ್ಷೇತ್ರದ ವರ್ತಮಾನದ ಪರಿಸ್ಥಿತಿಯ ಅವಲೋಕನವನ್ನೂ ಮಾಡಿದ್ದಾರೆ. ಇತ್ತೀಚೆಗೆ ಬಂದ ಅವರ ‘ಅರ್ಥಾಲೋಕ’ ಈ ವೈಚಾರಿಕತೆಯ ವಿಸ್ತರಣೆಯಂತೆ ಇದೆ.

ಆತ್ಮನಿವೇದನೆ ಅಹಮಿಕೆಯ ಪ್ರದರ್ಶನ ಆಗಬಾರದು ಎಂಬ ಎಚ್ಚರ ತಮಗೆ ಇರುವುದಾಗಿ ಲೇಖಕರು ಪುಸ್ತಕದ ಆರಂಭದಲ್ಲೂ ಕೊನೆಯಲ್ಲೂ ಹೇಳಿಕೊಂಡಿದ್ದಾರೆ. ಅದಕ್ಕೆ ಅವರು ಸಾಕಷ್ಟು ಪ್ರಯತ್ನಪಟ್ಟಿರುವುದು ಗೊತ್ತಾಗುತ್ತದೆ. ನನಗೆ ಇಷ್ಟವಾದ ವಿಷಯವೆಂದರೆ, ಕೆಲವು ಘಟನೆಗಳನ್ನು ನೆನಪಿಸಿಕೊಳ್ಳುತ್ತ ಅವರು ‘ಅಲ್ಲಿ ನಾನು ಪಾಠ ಕಲಿತೆ’, ‘ಇಲ್ಲಿ ನನ್ನ ಅಹಮಿಕೆಗೆ ಪೆಟ್ಟು ಬಿತ್ತು’, ‘ಅಂದು ನಾನು ಹಾಗೆ ಮಾಡಬಾರದಿತ್ತು’ ಇತ್ಯಾದಿಯಾಗಿ ಹೇಳಿರುವುದು. ಪುಸ್ತಕದ ಕೊನೆಯ ಅಧ್ಯಾಯದ ಶೀರ್ಷಿಕೆಯೇ ‘ಮನ್ನಿಸೆನ್ನಪರಾಧವ’ ಎಂದು. ಅನೇಕ ಆತ್ಮಕಥಾರೂಪದ ಕೃತಿಗಳಲ್ಲಿ ಬರೆಹಗಾರ ತನ್ನ ಕುರಿತ ಉದಾತ್ತ ಚಿತ್ರಣವೊಂದನ್ನು ಮಾತ್ರ ಕೊಡಲು ಪ್ರಯತ್ನಿಸುತ್ತಾನೆ. ನೆಗೆಟಿವ್ ಅಂಶಗಳನ್ನು ಯಥಾಸಾಧ್ಯ ಮರೆಮಾಚುತ್ತಾನೆ. ಇದು ಹಾಗಿಲ್ಲದಿರುವುದು ನನ್ನಲ್ಲಿ ಅಚ್ಚರಿಯನ್ನೂ ಮೂಡಿಸಿತು.

ಇಂತಹ ಕೃತಿಗಳು ಕಲ್ಚಾರರಿಂದ ಹಾಗೂ ಇತರ ಕಲಾವಿದರಿಂದ ಇನ್ನಷ್ಟು ಬರಲಿ ಎಂಬುದು ನನ್ನ ಆಶಯ. ತಮ್ಮ ಅನುಭವಗಳನ್ನು ಒಂದು ಚೌಕಟ್ಟಿನಲ್ಲಿಟ್ಟು ಒಂದಷ್ಟು ಕಲಾವಿದರರು ಪ್ರಸ್ತುತಪಡಿಸಲು ಸಾಧ್ಯವಾದರೆ ಅದು ಯಕ್ಷಗಾನ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ಆದೀತು.

ಅಕ್ಷರ ಪ್ರಕಾಶನ ಎಂದಿನಂತೆಯೇ ಈ ಪುಸ್ತಕವನ್ನೂ ಅಚ್ಚುಕಟ್ಟಾಗಿ ಮುದ್ರಿಸಿದೆ. ರಕ್ಷಾಪುಟ ಸೊಗಸಾಗಿದೆ. ಆಸಕ್ತರು ಪುಸ್ತಕಕ್ಕಾಗಿ ಕೃತಿಕಾರ ರಾಧಾಕೃಷ್ಣ ಕಲ್ಚಾರ್ ಅವರನ್ನು (ಮೊ.: 9449086653) ಸಂಪರ್ಕಿಸಿ.

- ಸಿಬಂತಿ ಪದ್ಮನಾಭ ಕೆ. ವಿ.

ಶನಿವಾರ, ಡಿಸೆಂಬರ್ 25, 2021

ಅರ್ಥಾಲೋಕ: ತಾಳಮದ್ದಲೆಯೆಂಬ ಸಂವಹನದ ದೇಸೀ ಮಾದರಿ

  • ಪುಸ್ತಕ: ಅರ್ಥಾಲೋಕ
  • ಲೇಖಕರು: ರಾಧಾಕೃಷ್ಣ ಕಲ್ಚಾರ್ 
  • ಪ್ರಕಾಶಕರು: ಜ್ಞಾನಗಂಗಾ ಪುಸ್ತಕ ಮಳಿಗೆ, ಪುತ್ತೂರು
  • ಬೆಲೆ: ರೂ. 105

ಮಾತಿನಿಂದಲೇ ಮಂಟಪ ಕಟ್ಟುವ ಕಲೆಯೆಂದು ಖ್ಯಾತಿ ಪಡೆದ ಯಕ್ಷಗಾನ ತಾಳಮದ್ದಲೆಯನ್ನು ಒಂದು ರಂಗಭೂಮಿಯಾಗಿ ನೋಡುವ ಪ್ರಯತ್ನವನ್ನು ಹಿರಿಯ ಅರ್ಥಧಾರಿ, ಲೇಖಕ ರಾಧಾಕೃಷ್ಣ ಕಲ್ಚಾರ್ ತಮ್ಮ ‘ಅರ್ಥಾಲೋಕ’ ಕೃತಿಯಲ್ಲಿ ಮಾಡಿದ್ದಾರೆ. ಇದರ ಮೂಲಕ ಯಕ್ಷಗಾನ ಸಾಹಿತ್ಯಕ್ಕೆ ಒಂದು ಹೊಸ ಗಟ್ಟಿಕಾಳು ಸೇರ್ಪಡೆಯಾದಂತಾಗಿದೆ. ಅಪೂರ್ವ ಸಂವಹನಸಾಧ್ಯತೆಯುಳ್ಳ ತಾಳಮದ್ದಲೆಯನ್ನು ವ್ಯವಸ್ಥಿತ ಅಧ್ಯಯನಕ್ಕೊಳಪಡಿಸುವ ಕೃತಿಗಳೇ ವಿರಳವಾಗಿರುವಾಗ, ಅದರ ಅಂತರಂಗ ಬಹಿರಂಗಗಳನ್ನು ಬಲ್ಲ ಕಲಾವಿದರೊಬ್ಬರಿಂದ ಇಂತಹ ಪ್ರಯತ್ನವಾಗಿರುವುದು ಒಂದು ಗಮನಾರ್ಹ ಸಂಗತಿ.

ತಾಳಮದ್ದಲೆ ಅರ್ಥಧಾರಿಗಳಾದವರು ರೂಢಿಸಿಕೊಳ್ಳಬೇಕಾದ ಅರ್ಹತೆ, ಪರಿಶ್ರಮಗಳಿಂದ ತೊಡಗಿ, ತಾಳಮದ್ದಲೆಯ ಕಲಾತ್ಮಕತೆಯನ್ನು ಉಳಿಸಿಕೊಳ್ಳುವಲ್ಲಿ ಕಲಾವಿದ ಹಾಗೂ ಪ್ರೇಕ್ಷಕನಿಗಿರಬೇಕಾದ ಎಚ್ಚರ, ಕಲಾಮೌಲ್ಯವನ್ನು ಉಳಿಸಿಕೊಂಡೇ ಸಿದ್ಧಮಾದರಿಗಳನ್ನು ಮೀರುವಲ್ಲಿ ಅರ್ಥಧಾರಿಗಿರಬೇಕಾದ ಜವಾಬ್ದಾರಿ, ಪುರಾಣದ ಆವರಣದೊಳಗಿದ್ದುಕೊಂಡೇ ತಾಳಮದ್ದಲೆಯೆಂಬ ಸಾಂಪ್ರದಾಯಿಕ ಕಲೆ ವರ್ತಮಾನದೊಂದಿಗೆ ಸಮೀಕರಿಸಿಕೊಳ್ಳಬೇಕಾದ ಅನಿವಾರ್ಯತೆ- ಹೀಗೆ ಹಲವು ಆಯಾಮಗಳವರೆಗೆ ಲೇಖಕರ ಚಿಂತನೆಯ ವ್ಯಾಪ್ತಿ ವಿಸ್ತರಿಸಿಕೊಂಡಿದೆ. ಪುಸ್ತಕದ ಆರಂಭದಲ್ಲಿ ತಾಳಮದ್ದಳೆಯ ಕುರಿತಾದ ಒಂದು ಪರಿಚಯಾತ್ಮಕ ಲೇಖನವೂ ಇರುವುದರಿಂದ ಈ ಕಲೆಗೆ ವಿಶೇಷ ಪ್ರವೇಶ ಇಲ್ಲದವರೂ ಅಧ್ಯಯನದ ದೃಷ್ಟಿಯಿಂದ ಗಮನಿಸುವುದಕ್ಕೆ ಸಾಧ್ಯ.

“ಅರ್ಥಗಾರಿಕೆ ಎಂದರೆ ಪಾತ್ರದ ಕುರಿತು ಮಾಡುವ ವಕಾಲತ್ತು ಅಲ್ಲ. ಪಾತ್ರದ ಮೇಲಿನ ಉಪನ್ಯಾಸವೂ ಅಲ್ಲ. ಪದ್ಯದ ವ್ಯಾಖ್ಯಾನವೂ ಅಲ್ಲ. ಪಾತ್ರವಾಗಿ ತಾನು ನಟಿಸುವುದು ಎಂಬ ಅರಿವಿರಬೇಕು” ಎನ್ನುವ ಮೂಲಕ ಲೇಖಕರು ತಾಳಮದ್ದಲೆಯಲ್ಲಿ ಮಾತಿನಷ್ಟೇ ಅದನ್ನು ಆಡುವವನ ಜವಾಬ್ದಾರಿಯೂ ತುಂಬ ದೊಡ್ಡದು ಎಂಬುದನ್ನು ಪ್ರತಿಪಾದಿಸಿದ್ದಾರೆ. “ಮಾತಿನ ಗುಣವೇ ಅಂತಹುದು. ಅದೊಂದು ಇಬ್ಬಾಯ ಕತ್ತಿಯಂತೆ. ಎಚ್ಚರವಿದ್ದಾಗ ಬಹು ಉಪಯುಕ್ತ. ಅದಿಲ್ಲದ ಗಳಿಗೆಯಲ್ಲಿ ಹಿಡಿದವನ ಕೈಯನ್ನೇ ಕತ್ತರಿಸುವ ಅಪಾಯವೂ ಇದೆ” ಎಂಬ ಅವರ ಮಾತಿನಲ್ಲೂ ಈ ಸೂಚನೆ ಇದೆ.

ಕೃತಿಯಲ್ಲಿನ ಲೇಖನಗಳು ತಾಳಮದ್ದಲೆಯನ್ನು ವಿವಿಧ ಆಯಾಮಗಳಿಂದ ಚರ್ಚಿಸಿದರೂ ಈ ಕಲೆ ತನ್ನ ಕಲಾತ್ಮಕತೆಯನ್ನು ಉಳಿಸಿಕೊಳ್ಳುವಲ್ಲಿ ಮಾಡಬೇಕಾದ್ದೇನು ಎಂಬ ಮೂಲಕಾಳಜಿ ಪ್ರಧಾನ ಧ್ವನಿಯಾಗಿ ಗೋಚರಿಸುತ್ತದೆ. ಒಂದು ಕಲೆಯಾಗಿ ತಾಳಮದ್ದಲೆ ಸೋತಿತು ಎಂದಾದರೆ ಅದಕ್ಕೆ ಕಲಾವಿದ-ಪ್ರೇಕ್ಷಕರಿಬ್ಬರೂ ಕಾರಣ ಎಂಬುದನ್ನು ಲೇಖಕರು ಸ್ಪಷ್ಟವಾಗಿ ಹೇಳಿದ್ದಾರೆ. ಕಲಾವಿದ ಕೇವಲ ಶ್ರೋತೃಗಳ ‘ಜನಪ್ರಿಯ’ ನಿರೀಕ್ಷೆಗಳನ್ನೇ ಪ್ರಧಾನವೆಂದು ಗಣಿಸಿ, ಅವರ ಚಪ್ಪಾಳೆಗಳನ್ನೇ ಯಶಸ್ಸಿನ ಮಾನದಂಡವೆಂದು ಭಾವಿಸಿ, ತನ್ನ ಪಾತ್ರ ಸ್ವಭಾವ ಗೌರವಗಳನ್ನು ಮರೆತು ಅಗ್ಗದ ರಂಜನೆಗೆ ಬಿದ್ದರೆ ಕಲೆ ಸೋಲುತ್ತದೆ ಎಂಬುದನ್ನು ‘ತಾಳಮದ್ದಲೆ ಕಲೆಯಾಗುವ ಬಗೆ’, ‘ಸನ್ನಿವೇಶ ನಿರ್ಮಾಣ ಮತ್ತು ಪಾತ್ರಚಿತ್ರಣ’, ‘ಪಾತ್ರಗೌರವ’ ಮೊದಲಾದ ಲೇಖನಗಳು ಸೋದಾಹರಣವಾಗಿ ವಿಶ್ಲೇಷಿಸುತ್ತವೆ. “ತನ್ನ ನಿರ್ವಹಣೆಯನ್ನು ಪ್ರೇಕ್ಷಕ ಮೆಚ್ಚುವುದಿಲ್ಲ ಎನ್ನುವುದು ಅರಿವಿಗೆ ಬಂದಾಕ್ಷಣ ಕಲಾವಿದ ಜಾಗೃತನಾಗುತ್ತಾನೆ. ತಾನೆಲ್ಲಿ ಬೇಡಿಕೆ ಕಳಕೊಳ್ಳುತ್ತೇನೋ ಎಂಬ ಭೀತಿಯಿಂದ ಕೀಳು ಗಿಮಿಕ್ಕುಗಳಿಗೆ ಸ್ವಯಂ ಕಡಿವಾಣ ತೊಡಿಸುತ್ತಾನೆ. ಪ್ರೇಕ್ಷಕನ ಇಂತಹ ಎಚ್ಚರವೊಂದು ತಾಳಮದ್ದಲೆಯಂತಹ ರಂಗಭೂಮಿಯ ಪತನವನ್ನು ಯಶಸ್ವಿಯಾಗಿ ತಡೆಯಬಲ್ಲುದು. ಇಲ್ಲವಾದಲ್ಲಿ ಮೂಳೆಯನ್ನು ಜಗಿಯುತ್ತ, ತನ್ನ ನೆತ್ತರನ್ನೇ ಸವಿಯುವ ನಾಯಿಯ ಪಾಡು ಪ್ರೇಕ್ಷಕನದ್ದಾಗುತ್ತದೆ” ಎಂಬ ಲೇಖಕರ ಮಾತು ತಾಳಮದ್ದಳೆಯಲ್ಲದೆ ಇಂದಿನ ಆಧುನಿಕ ಮಾಧ್ಯಮಗಳ ಕುರಿತಾದ ಸಾರ್ವಜನಿಕ ಟೀಕೆಗೂ ಉತ್ತರದಂತಿದೆ.

ಹಾಗೆಂದು ಲೇಖಕರು ಅಧುನಿಕತೆಯ ವಿರೋಧಿಗಳಲ್ಲ. ಸಾಂಪ್ರದಾಯಿಕ ಕಲೆಯೊಂದು ವರ್ತಮಾನಕ್ಕೆ ಹತ್ತಿರವಾಗದೇ ಹೋದರೆ ಹೆಚ್ಚುಕಾಲ ಉಳಿಯದು ಎಂಬುದು ಅವರ ಗಟ್ಟಿನಿಲುವು. “ತಾಳಮದ್ದಲೆ ಯಾವತ್ತೂ ಪುರಾಣ ಮತ್ತು ಆಧುನಿಕತೆಗಳ ನಡುವೆ ತುಯ್ದಾಡುತ್ತ ಇರುವ ರಂಗಭೂಮಿ. ಆಧುನಿಕತೆಯು ಪುರಾಣದ ಆವರಣದೊಳಗಿನಿಂದಲೇ ಪ್ರಕಟವಾಗಬೇಕಾದ್ದು ಅಗತ್ಯ” ಎನ್ನುವ ಅವರು “ಪುರಾಣದ ಪಾತ್ರವೊಂದು ಕೇವಲ ಪೌರಾಣಿಕ ವಿವರಗಳಲ್ಲಿ ಮುಳುಗದೆ ಕೇಳುಗನಿಗೆ ಸಮಕಾಲೀನ ಸ್ಪಂದನವನ್ನೂ ಉಂಟುಮಾಡುತ್ತಿರಬೇಕು. ಇದು ಜೀವಂತ ರಂಗಭೂಮಿಯ ಅನಿವಾರ್ಯ... ಭಾಷೆ ಆಧುನಿಕವಾಗದೆ ಅನುಭವವು ಮಾತ್ರ ಸಮಕಾಲೀನ ಸ್ಪಂದನವುಳ್ಳದ್ದಾಗಿ ಬರಬೇಕು” ಎನ್ನುತ್ತಾರೆ. ಅದರ ಜೊತೆಗೆ ಸಿದ್ಧಮಾದರಿಗಳನ್ನು ಮುರಿದು ಕಲಾವಿದ ತನ್ನತನವನ್ನು ಸ್ಥಾಪಿಸಬೇಕಾದರೆ ಆತನಲ್ಲಿ ಗಟ್ಟಿಯಾದ ವೈಚಾರಿಕ ಹಿನ್ನೆಲೆಯೂ ಇರಬೇಕು. ಸಾಂಪ್ರದಾಯಿಕ ಮನಸ್ಸುಗಳನ್ನು ನೂತನ ಪ್ರತಿಪಾದನೆಗೆ ಒಗ್ಗಿಸಿ, ಒಲಿಸಿಕೊಳ್ಳುವ ಚಾತುರ್ಯವಿರಬೇಕು ಎಂಬುದನ್ನೂ ಒತ್ತಿ ಹೇಳುತ್ತಾರೆ.

ಆಶುಕಲೆಯಾಗಿ ಬೆಳೆದುಬಂದ ತಾಳಮದ್ದಲೆಯ ಒಳಗೆ ಲೇಖಕರು ಪ್ರಬಲ ಸಂವಹನ ಮಾದರಿಯೊಂದರ ಹುಡುಕಾಟವನ್ನು ನಡೆಸಿರುವುದು ಇನ್ನೊಂದು ಉಲ್ಲೇಖನೀಯ ಅಂಶ. ‘ತಾಳಮದ್ದಲೆ: ಅರ್ಥಧಾರಿಯ ನೆಲೆಯಿಂದ’ ಹಾಗೂ ‘ಪ್ರದರ್ಶನ ಮತ್ತು ಪ್ರೇಕ್ಷಕ’ ಎಂಬ ಎರಡು ಲೇಖನಗಳು ಅಪ್ರಯತ್ನಪೂರ್ವಕವಾಗಿ ಈ ಕೆಲಸವನ್ನು ಮಾಡಿವೆ. ಸಂವಹನ ಕ್ಷೇತ್ರದ ಬಹುತೇಕ ಆಧುನಿಕ ಅಧ್ಯಯನಗಳು ಆಧಾರವಾಗಿಟ್ಟುಕೊಂಡಿರುವ ‘ಬಳಕೆ ಮತ್ತು ಸಂತೃಪ್ತಿ ಸಿದ್ಧಾಂತ’ದ ಹಿನ್ನೆಲೆಯಲ್ಲಿ ತಾಳಮದ್ದಳೆಯನ್ನು ಪರಿಶೀಲಿಸಬಹುದಾದ ಸಾಧ್ಯತೆಯನ್ನು ಈ ಲೇಖನಗಳು ನಿಚ್ಚಳವಾಗಿಸಿವೆ. ತಾಳಮದ್ದಲೆಯನ್ನು ಪ್ರೇಕ್ಷಕ, ಕಲಾವಿದ, ಸಹಕಲಾವಿದರು, ಸಂಘಟಕರು, ಪ್ರಾಯೋಜಕರು, ಮಾಧ್ಯಮಗಳು, ವಿಮರ್ಶಕರು ಒಟ್ಟುಸೇರಿದ ಒಂದು ಸಾವಯವ ಕಲೆಯಾಗಿ ನೋಡಿರುವುದು, ಪ್ರದರ್ಶನವೊಂದರ ಕುರಿತಾಗಿ ಪ್ರೇಕ್ಷಕರು ಇಟ್ಟುಕೊಂಡಿರುವ ಬೌದ್ಧಿಕ ಹಸಿವು, ಮನೋರಂಜನೆ, ಮೌಲ್ಯಗಳ ಹುಡುಕಾಟ, ಭಾವವಿರೇಚನ ಮೊದಲಾದ ಉದ್ದೇಶಗಳನ್ನು ಲೇಖಕರು ಗುರುತಿಸಿರುವುದು ಸಂವಹನದ ದೇಸೀ ಮಾದರಿಗಳ ಮರುಶೋಧನೆಗೆ ಪೀಠಿಕೆ ಹಾಕಿದಂತೆ ಇದೆ.

ತಾಳಮದ್ದಲೆಯೆಂಬ ಚಲನಶೀಲ ರಂಗಭೂಮಿಯ ನಿರ್ಮಾಣಕ್ಕೆ ಸಿಂಹಪಾಲು ನೀಡಿರುವ ‘ತಾಳಮದ್ದಲೆ ಸಂಘ’ಗಳ ಕುರಿತಾದ ವಿಶ್ಲೇಷಣೆ, ಸಾಮಾಜಿಕ ಪಲ್ಲಟಗಳಿಗೆ ತಾಳಮದ್ದಳೆ ಸ್ಪಂದಿಸಿದ ಕುರಿತ ಸೂಕ್ಷ್ಮ ಒಳನೋಟಗಳು, ತಾಳಮದ್ದಲೆಯ ಸಾಂಸ್ಕøತಿಕ ಇತಿಹಾಸವನ್ನು ನಿರೂಪಿಸುವ ಪ್ರಯತ್ನ ಕೃತಿಯ ಇತರ ಪ್ರಧಾನ ಅಂಶಗಳು. ಯಕ್ಷಗಾನಕ್ಕೆ ಸಾಹಿತ್ಯವಲಯದಿಂದ ನಿರೀಕ್ಷಿತ ಮನ್ನಣೆ ಲಭಿಸದಿರುವ ಕುರಿತೂ ಚರ್ಚಿಸಿರುವ ಲೇಖಕರು ಬಹುತೇಕ ಆಶುಸಾಹಿತ್ಯವಾಗಿಯೇ ಉಳಿದಿರುವ ಯಕ್ಷಗಾನವು ಸಾರ್ವತ್ರಿಕವಾಗಿ ಪಠ್ಯರೂಪದಲ್ಲಿ ದೊರೆಯಬೇಕಾದ, ಅದರ ಕುರಿತು ಅಧ್ಯಯನಪೂರ್ಣ ಕೃತಿಗಳು ಬರಬೇಕಾದ ಅವಶ್ಯಕತೆಯನ್ನು ಪ್ರತಿಪಾದಿಸಿದ್ದಾರೆ. ಅವರ ‘ಅರ್ಥಾಲೋಕ’ವು ಅದೇ ದಿಕ್ಕಿನಲ್ಲಿ ಒಂದು ದೃಢ ಹೆಜ್ಜೆಯಾಗಿರುವುದು ಶ್ಲಾಘನೀಯ.

- ಸಿಬಂತಿ ಪದ್ಮನಾಭ ಕೆ. ವಿ.

ಗುರುವಾರ, ಆಗಸ್ಟ್ 27, 2020

ಪುರಾಣ ಕೋಶ ವಿಹಾರಿ- ಅರ್ಥಧಾರಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ

ರಾಧಾಕೃಷ್ಣ ಕಲ್ಚಾರ್   

ಪ್ರಕಾಶಕರು: ಕನ್ನಡ ಸಂಘ ಕಾಂತಾವರ 

ವರ್ಷ: 2015

ಪುಟಗಳು: 52

ಕ್ರಯ: ರೂ.45


ಕಾಂತಾವರ ಕನ್ನಡ ಸಂಘವು ಮೂವತ್ತಕ್ಕೆ ಕಾಲಿಟ್ಟ ಸಂದರ್ಭ ನಾಡಿಗೆ ನಮಸ್ಕಾರ ಎಂಬ ಮಾಲಿಕೆಯಡಿಯಲ್ಲಿ ನಾವು ನಮಸ್ಕರಿಸಬೇಕಾದ ಅರ್ಥವಂತರ ಕುರಿತಾಗಿ ತಂದ ಪುಸ್ತಕಮಾಲೆಗಳ ಪೈಕಿ ಒಂದು. ಡಾ. ನಾ.ಮೊಗಸಾಲೆಯವರು ಮತ್ತು ಡಾ.ಬಿ ಜನಾರ್ದನ ಭಟ್ ಮತ್ತಿತರ ಸದಸ್ಯರ ಕ್ರಿಯಾಶೀಲತೆಗೂ ಬದ್ಧತೆಗೂ ಈ ಸಮಯದಲ್ಲಿ ಪ್ರಕಟಿಸಲ್ಪಟ್ಟ ನೂರಕ್ಕೂ ಮೀರಿದ ಪುಸ್ತಕಗಳು ಸಾಕ್ಷಿ. 

ಅರ್ಥಗಾರಿಕೆಯಲ್ಲಿ ಭಾಗವಹಿಸುತ್ತಿದ್ದ ಯುವ ಉಪನ್ಯಾಸಕನೊಬ್ಬ (ಲೇಖಕರೇ ಇರಬಹುದೇ ಎಂದು ನನಗನಿಸಿದೆ. ಇದ್ದರೂ ಇರಬಹುದೇನೋ!) ತಾನು ಅರ್ಥ ಹೇಳುವುದಿಲ್ಲ ಎಂಬ ನಿರ್ಧಾರ ತೆಗೆದುಕೊಂಡಾಗ ಮೂಡಂಬೈಲು ಶಾಸ್ತ್ರಿಗಳು ಆ ತರುಣನಿಗೆ ಬುದ್ಧಿಮಾತು ಹೇಳಿದ ಘಟನೆಯೊಂದಿಗೆ ಪುಸ್ತಕದ ಓದು ಮೊದಲುಗೊಳ್ಳುತ್ತದೆ. ಸಮರ್ಥನೊಬ್ಬ ಅರ್ಥ ಹೇಳದೇ ಉಳಿದರೆ ಅದರಿಂದ ನಷ್ಟವಾಗುವುದು ಒಳ್ಳೆಯ ಅರ್ಥವನ್ನು ಬಯಸುವ ಪ್ರಾಮಾಣಿಕ ಶ್ರೋತೃಗಳಿಗೆ ಎಂಬುದನ್ನು ಅರ್ಥೈಸಿಕೊಂಡ ಯುವಕ ಮುಂದೆ ಅರ್ಥಧಾರಿಯಾಗಿ ಗುರುತಿಸಲ್ಪಡುತ್ತಾನೆ. ಶಾಸ್ತ್ರಿಗಳ ವ್ಯಕ್ತಿತ್ವವನ್ನು ಸೂಚಿಸುವ ಎರಡನೆಯ ಉದಾಹರಣೆಯಾಗಿ ಎಳೆಯ ಅರ್ಥಧಾರಿಯೊಬ್ಬ ಅವರೆದುರು ಮಾತನಾಡಲಾಗದೇ ತಪ್ಪಿದಾಗ ಸಂದರ್ಭವನ್ನು ಸರಿದೂಗಿಸಿಕೊಂಡು ಹೋದ ಘಟನೆಯಿದೆ. ತಾಳಮದ್ದಳೆಯಲ್ಲಿ ಭಾಗವಹಿಸಬೇಕಾದ ಕಲಾವಿದರೊಬ್ಬರು ತಡವಾಗಿ ಬಂದುದನ್ನು ಅರ್ಥಗಾರಿಕೆಯಲ್ಲಿಯೇ ಉಲ್ಲೇಖಿಸಿದ ಅನುಭವ ಮೂರನೆಯ ಉದಾಹರಣೆ. ನಾಲ್ಕನೆಯದಾಗಿ ತಾಳಮದ್ದಳೆ ಕಲಾವಿದರಾಗ ಬಯಸುವವರಿಗೆ ಇರಬೇಕಾದ ಪೂರ್ವತಯಾರಿಯನ್ನು ಹೇಳುವ ಪಾಠವಾಗಿದೆ. ಮೂಡಂಬೈಲು ಶಾಸ್ತ್ರಿಗಳ ವ್ಯಕ್ತಿತ್ವ ಕಲ್ಚಾರರ ಕನ್ನಡಿಯಲ್ಲಿ ಪ್ರತಿಬಿಂಬಿಸಿದ ಪರಿ ಹೀಗೆ. 

’ಅವರ ಜೀವನ ವೃತ್ತವೆಂದರೆ ಅದು ತಾಳಮದ್ದಲೆ ರಂಗಭೂಮಿಯ ಇತಿಹಾಸವೂ ಹೌದು’ (ಪು.6) ಎಂಬುದರೊಂದಿಗೆ ತಾಳಮದ್ದಲೆ ಬೆಳೆದು ಬಂದ ಸಂಕ್ಷಿಪ್ತ ಇತಿಹಾಸದ ವಿವರಣೆಯಿದೆ. ಬಾಲ್ಯದಿಂದಲೇ ತಾಳಮದ್ದಲೆಯ ವಾತಾವರಣದಲ್ಲಿ ಬೆಳೆದ ಶಾಸ್ತ್ರಿಗಳಿಗೆ ಎಂಟನೆಯ ತರಗತಿಗೆ ಸೇರಿದಲ್ಲಿಂದ ತಾಳಮದ್ದಲೆಯ ದಿಗ್ಗಜರನ್ನು ನೋಡುವ, ಅವರೊಂದಿಗೆ ಒಡನಾಡುವ ಅವಕಾಶ ದೊರೆಯಿತು. ಅವರು ಶ್ರೇಷ್ಠ ಅರ್ಥಧಾರಿಗಳ ಸಾಲಿನಲ್ಲಿ ಸೇರಲು ಈ ಹಿನ್ನೆಲೆ ಕಾರಣವಾಯಿತೆನ್ನಬಹುದು. 

ಮೊದಲಿಗೆ ಭಾಗವತಿಕೆಯೊಂದಿಗೆ ಆರಂಭಗೊಂಡ ಅವರ ಕಲಾಯಾನ ಸಂಘಟಕನಾಗಿ, ಕಲಾವಿದನನ್ನಾಗಿ ಅವರನ್ನು ರೂಪುಗೊಳಿಸಿತು. ಘಟಾನುಘಟಿ ಅರ್ಥಧಾರಿಗಳ ಎದುರಿಗೆ ಸ್ತ್ರೀ ಪಾತ್ರಗಳನ್ನು ನಿರ್ವಹಿಸುತ್ತಾ, ಸ್ತ್ರೀಪಾತ್ರಗಳ ಕುರಿತು ಸರಿಯಾದ ಮಾಹಿತಿ, ಅರ್ಥಗಾರಿಕೆಯ ವೈವಿಧ್ಯ, ಸ್ವಭಾವ ವ್ಯತ್ಯಾಸಗಳು, ಮಾತಿನ ಲಯ ಇಂತಹ ಸೂಕ್ಷ್ಮಗಳ ಕುರಿತು ಖಚಿತ ತಿಳುವಳಿಕೆ ಹೊಂದುತ್ತಾ ಬೆಳೆದರು. ಶೇಣಿಯವರ ಪುರುಷ ಪಾತ್ರಗಳಿಗೆ ಸರಿಸಮಾನವಾಗಿ ಕಾಣಿಸಿಕೊಳ್ಳಬೇಕಾದರೆ ಶಾಸ್ತ್ರಿಗಳ ದಾರಿ ಸುಲಭವಿರಲಿಲ್ಲ. ಭಾವನೆಯೇ ಪ್ರಧಾನವಾಗುವಂತೆ ರೂಪಿಸಲಾಗುತ್ತಿದ್ದ ಪಾತ್ರಗಳನ್ನು ಬೌದ್ಧಿಕ ನೆಲೆಗೆ ಏರಿಸಿದವರು ಶಾಸ್ತ್ರಿಗಳು. ಸ್ತ್ರೀ ಪಾತ್ರಗಳಿಂದ ಪುರುಷಪಾತ್ರಗಳಿಗೂ ಅನಾಯಾಸವಾಗಿ ಒಗ್ಗಿಕೊಂಡ ಹಿರಿಮೆ ಅವರದು. 

ಅವರ ಜೀವನವೃತ್ತವನ್ನು ವಿವರಿಸುತ್ತ ಲೇಖಕರು ಶಾಸ್ತ್ರಿಗಳು ಮುಂದೆ ಶಿಕ್ಷಕರಾಗಿ, ಅಂಚೆಕಛೇರಿಯನ್ನೂ ನಡೆಸುತ್ತಾ, ಕೃಷಿಕರಾಗಿಯೂ ಸಂಸಾರಿಯಾಗಿಯೂ ಉತ್ತಮ ಬದುಕು ರೂಪಿಸಿಕೊಂಡ ಪರಿಯನ್ನು ಚಿತ್ರಿಸಿದ್ದಾರೆ. ಕೆಲವು ’ಸ್ವಾರಸ್ಯ ಪ್ರಸಂಗಗಳು’ ರಸವತ್ತಾಗಿವೆ. 

ಶೇಣಿ, ಸಾಮಗರ ಅರ್ಥಗಾರಿಕೆಯ ಕುರಿತು ಶಾಸ್ತ್ರಿಗಳ ಮಾತನ್ನು ಲೇಖಕರು ಉದ್ಧರಿಸುತ್ತಾರೆ: 'ಶೇಣಿಯವರದು ವೈಚಾರಿಕವಾದ ಪ್ರತಿಪಾದನೆ. ಅವರು ದಶರಥನಾದರೆ ಪ್ರಾರಂಭದಲ್ಲೇ ಚರ್ಚೆಗಿಳಿಯುತ್ತಿದ್ದರು. ಕೈಕೆ ವರ ಕೇಳಿದ ಬಳಿಕವೂ ಗದ್ಗದಿತರಾಗುವುದಿಲ್ಲ. ವರ ಕೇಳುವುದರ ಔಚಿತ್ಯವನ್ನೇ ಪ್ರಶ್ನಿಸುವುದು ಅವರ ಕ್ರಮ. ಸಾಮಗರಾದರೆ ಹಾಗಲ್ಲ. ಅವರು ವರವನ್ನು ಕೇಳಿದ ಮೇಲೆ ಪೂರ್ಣ ಬದಲಾಗಿ ದುಃಖಿಸುವ ದಶರಥನಾಗುತ್ತಾರೆ. ಆಮೇಲೆ ಚರ್ಚೆಯಿಲ್ಲ.’ (ಪು.35) 

ಭಾವುಕ ಹಾಗೂ ವೈಚಾರಿಕಗಳೆರಡರ ಕುರಿತು ಅವರ ಅಭಿಪ್ರಾಯವಿದು,  'ಕೆಲವು ಕಡೆ ಬೌದ್ಧಿಕವಾದ ಮಾತುಗಾರಿಕೆ ಅನಿವಾರ್ಯ. ಇಲ್ಲದಿದ್ರೆ ನಾವು ಸಭೆಗೆ ಏನೂ ಕೊಟ್ಟ ಹಾಗಾಗುವುದಿಲ್ಲ. ತಾಳಮದ್ದಳೆ ಕೇಳಿದ ಮೇಲೆ ಆಲೋಚನೆಗೆ ಏನಾದರೂ ಬೇಕು ಅನ್ನುವವರಿದ್ದಾರೆ. ಅವರ ಸಮಾಧಾನಕ್ಕೆ ಬೌದ್ಧಿಕ ಚರ್ಚೆ ಅಗತ್ಯ, ಶೇಣಿಯವರು ಹಾಗೆ ಮಾಡ್ತಾ ಇದ್ರು. ಹಾಗೇಂತ ಭಾವನಾತ್ಮಕವಾಗಿ ಮಾತನಾಡದಿದ್ರೆ ಅದು ಕಲೆಯಾಗುವುದಿಲ್ಲ. ಅದಕ್ಕಾಗಿ ಎಲ್ಲಿ, ಯಾವುದಕ್ಕೆ ಮಹತ್ವ ಕೊಡಬೇಕೋ ಅದನ್ನು ನಾವು ತಿಳಿದು ಮಾತನಾಡಬೇಕಾಗುತ್ತದೆ.’ (ಪು.36)

ಅರ್ಥಗಾರಿಕೆಯ ಯೋಗ್ಯತೆ ಹೆಚ್ಚಿಸಿಕೊಳ್ಳಲು ಶಾಸ್ತ್ರಿಗಳು ನೀಡಿದ ಅಮೂಲ್ಯ ಸಲಹೆಗಳೂ ಇಲ್ಲಿ ದಾಖಲಾಗಿವೆ. ಅಲ್ಲದೇ ಅವರ ಸಾಹಿತ್ಯದ ಕುರಿತೂ ಟಿಪ್ಪಣಿಗಳಿವೆ. 

ಪುಸ್ತಕ ಗಾತ್ರದಲ್ಲಿ ಚಿಕ್ಕದಾದರೂ ವಿಷಯಮಂಡನೆ ಪ್ರಬುದ್ಧವಾಗಿರುವುದರಿಂದ ನಿಧಾನವಾಗಿ ಓದಿ ಅರ್ಥಮಾಡಿಕೊಳ್ಳಬೇಕಾದ ನಿರೂಪಣೆ! 

ಮುಂದಿನ ಓದು ನಿಮ್ಮದು! 

ಆರತಿ ಪಟ್ರಮೆ 


ಬುಧವಾರ, ಆಗಸ್ಟ್ 26, 2020

ಚೆಂಡೆ ಮದ್ದಳೆಗಳ ನಡುವೆ


ಮದ್ದಳೆಗಾರ ಬಿ. ಗೋಪಾಲಕೃಷ್ಣ ಕುರುಪ್ ಅವರ ಆತ್ಮಕಥನ

ಪ್ರಕಾಶಕರು: ಕನ್ನಡ ಸಂಘ, ಕಾಂತಾವರ

ವರ್ಷ: 2004

ಪುಟಗಳು: 158

ಕ್ರಯ: ರೂ. 75

ಡಾ. ನಾ. ಮೊಗಸಾಲೆಯವರ ಆತ್ಮೀಯ ಆಗ್ರಹ ಮೇರೆಗೆ ರೂಪುತಾಳಿದ ಕೃತಿ. ಆತ್ಮವೃತ್ತಾಂತ ಬರೆಯುವಷ್ಟು ದೊಡ್ಡ ಬದುಕೇ ತನ್ನದು? ಎಂಬ ಪ್ರಶ್ನೆ ತನ್ನೊಳಗಿದ್ದರೂ ಯಾರೊಬ್ಬರೂ ದೊಡ್ಡವರಲ್ಲ, ಯಾರೊಬ್ಬರೂ ಸಣ್ಣವರಲ್ಲ, ನೋಡುವ ದೃಷ್ಟಿಕೋನದಿಂದ ದೊಡ್ಡವರು, ಸಣ್ಣವರು ಎಂಬ ಮೊಗಸಾಲೆಯವರ ತರ್ಕಕ್ಕೆ ಕಟ್ಟುಬಿದ್ದು ಮುಂದೆ ರಾಘವ ನಂಬಿಯಾರರ ಉತ್ತೇಜನದಿಂದ ಅಂತರಂಗವನ್ನು ತೆರೆದಿಟ್ಟವರು ಶ್ರೀ ಕುರುಪ್. 

ಕಠಿಣವಾದ ಬಾಲ್ಯದ ದಿನಗಳಲ್ಲೂ ಆರ್ಥಿಕ ಬಡತನವಿತ್ತಾದರೂ ತಂದೆ ತಾಯಿಯರ ಅಕ್ಕರೆ, ಪ್ರೀತಿಯಿಂದ ಮದ್ದಳೆಯ ಮೇಲೆ ಹೆಚ್ಚಿನ ಮಮಕಾರ ಬೆಳೆಸಿಕೊಂಡರು. ತಂದೆಯವರೇ ಮದ್ದಳೆಯ ಮೊದಲ ಗುರುಗಳೂ ಹೌದು. ಒತ್ತೆಕೋಲದ ಸಂದರ್ಭ ಅವರು ಭಾಗವತಿಕೆ ಮಾಡಿದ್ದು, ದೃಷ್ಟಿ ತಗುಲಿ ಮಾತು ತೊದಲಲಾರಂಭಿಸಿ ಬಳಿಕ ನೂಲು ಮಂತ್ರಿಸಿ ಕಟ್ಟಿದ ನಂತರ ಸರಿಹೋದ ಘಟನೆ, ಅವರೊಳಗಿನ ಕಲಾವಿದನನ್ನು ಎದ್ದು ನಿಲ್ಲಿಸಿತ್ತು. 

ದನ, ಎಮ್ಮೆ, ಕೋಣಗಳನ್ನು ಮೇಯಿಸುತ್ತಲೂ, ಕೃಷಿಯನ್ನು ಇತರ ಪ್ರಾಣಿಗಳಿಂದ ರಕ್ಷಿಸುತ್ತಲೂ ಕಳೆಯಬೇಕಿದ್ದ ದಿನಗಳಲ್ಲೂ ಕಲೋಪಾಸನೆ ಮನದಲ್ಲಿ ಇದ್ದೇ ಇತ್ತು. ಸಂಜೆಯ ವೇಳೆ ಮಹಾಭಾರತ ಗ್ರಂಥದ ಓದು, ಅವಕಾಶವಿದ್ದಾಗ ತಾಳಮದ್ದಳೆಗಳಲ್ಲಿ ಭಾಗವತಿಕೆ ಅವರ ಬದುಕಿನ ಭಾಗವಾಗಿತ್ತು. ನಾರಂಪಾಡಿ ಸುಬ್ಬಯ್ಯ ಶೆಟ್ಟಿಯವರ ಶಿಷ್ಯನಾಗಿ ಅವರ ಅನುಭವ ಬಹಳ ದೊಡ್ಡದು. 

ಕೆಲವು ಮೇಳಗಳಲ್ಲಿ ಮದ್ದಳೆಗಾರನಾಗಿ ಅನುಭವ ಪಡೆದ ನಂತರ ಧರ್ಮಸ್ಥಳ ಮೇಳದಲ್ಲಿ ಪಡೆದುಕೊಂಡ ಅವಕಾಶ ಅವರ ಪ್ರತಿಭೆಗೆ ಹೆಚ್ಚಿನ ಅವಕಾಶವನ್ನೊದಗಿಸಿತು. 'ನೀನೆಷ್ಟು ಚೆನ್ನಾಗಿ ಮದ್ದಳೆ ಬಾರಿಸಿದರೂ ಚೆಂಡೆ ಬಾರಿಸಲು ಕಲಿಯದಿದ್ದರೆ ಮದ್ದಳೆಗಾರನಾಗುವುದಿಲ್ಲ' ಎಂದ ನೆಡ್ಲೆ ನರಸಿಂಹ ಭಟ್ಟರೇ ಅವರನ್ನು ಶಿಷ್ಯನನ್ನಾಗಿ ಸ್ವೀಕರಿಸಿದರು. ತಾನು ಕಲಿಯುವಾಗಲೇ ಇನ್ನೊಬ್ಬರಿಗೆ ಕಲಿಸಬಲ್ಲ ಕೌಶಲ ಅವರಲ್ಲಿದ್ದುದನ್ನು ಹಿರಿಯ ಕಲಾವಿದರು ಗುರುತಿಸಿ ಹಾರೈಸಿದ್ದರು. 

ಬದುಕು ಹಲವರಿಗೆ ಹಲವು ರೀತಿಯ ಸವಾಲುಗಳನ್ನೊಡ್ಡುತ್ತದೆ, ಕಾಡುತ್ತದೆ ಎಂಬುದಕ್ಕೆ ಕುರುಪ್ ರ ಆತ್ಮಕಥೆಯೊಂದು ಸಾಕ್ಷಿ. ಮನೆಯ ಕಷ್ಟಗಳು, ಕಲೆಯ ಮೇಲಿನ ಶ್ರದ್ಧೆ, ಹಿರಿಯ ಕಲಾವಿರುಗಳ ಒಡನಾಟ ಎಲ್ಲದರ ನಡುವೆಯೂ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದ, ಹಣಕಾಸಿನ ದೃಷ್ಟಿಯಲ್ಲಿಯೂ ತೊಂದರೆಗೀಡು ಮಾಡಿದ ಒಡನಾಡಿಗಳೂ ಇಲ್ಲದಿಲ್ಲ. ತಮ್ಮದೇ ಆದ ಜಮೀನು ಮಾಡಿದ್ದೂ ಒಂದು ಸಾಹಸಗಾಥೆಯೇ. 

ಅನಾರು, ಧರ್ಮಸ್ಥಳ, ನಿಡ್ಲೆ, ಬರೆಂಗಾಯ, ಅರಸಿನಮಕ್ಕಿ, ಶಿಶಿಲದವರೆಗೂ ಹತ್ತು ಹಲವರಿಗೆ ಚೆಂಡೆಮದ್ದಳೆಗಳ ಗುರುವಾದ ಕುರುಪ್ ಅವರು ಮುಂಬೈಗೂ ಹಿಮ್ಮೇಳ ಗುರುಗಳಾಗಿ ಹೋದುದು ಅರ್ಹತೆಗೆ ಸಂದ ಮನ್ನಣೆಯೇ ಸರಿ. ಶೇಣಿ ಗೋಪಾಲಕೃಷ್ಣ ಭಟ್ಟರ ಹರಿಕತೆಗೆ ಮೃದಂಗ ನುಡಿಸಿದ ಅನುಭವವೂ ಕುರುಪರಿಗಿದೆ. 

1983ರಲ್ಲಿ ಶಿಶಿಲದ ಗಿರಿಜನ ಆಶ್ರಮ ಶಾಲೆಯ ವಠಾರದಲ್ಲಿ ಬುಡಕಟ್ಟು ಜನಾಂಗದವರಿಗೆ ಯಕ್ಷಗಾನದ ಮುಮ್ಮೇಳವನ್ನು ಕಲಿಸಿ ಕುಡಿಯರ ಸಂಸ್ಕೃತಿಯಲ್ಲಿ ಒಂದು ದಾಖಲಾರ್ಹ ಕಾರ್ಯ ಮಾಡಿದರು. ಪ್ರೊ. ರಾಘವೇಂದ್ರ ಆಚಾರ್ ಅವರ ಕೃತಿಯಲ್ಲಿ ಇದು ದಾಖಲಾಗಿದೆ ಎಂಬುದು ಅವರಿಗೆ ಸಂತಸದ ಸಂಗತಿ. ಮುಂದೆ ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ಗುರುಗಳಾಗುವ ಯೋಗವೂ ಕುರುಪರಿಗೆ ಒದಗಿ ಬಂತು-ನೆಡ್ಲೆಯವರ ನಿರ್ದೇಶನದಲ್ಲಿ. ಅದೇ ಸಂದರ್ಭದಲ್ಲಿ ಮಾಡಿದ ಪಾಠಗಳನ್ನೆಲ್ಲಾ ಶಿಸ್ತುಬದ್ಧವಾಗಿ ಜೋಡಿಸುತ್ತಾ ಪ್ರಾಥಮಿಕ ಯಕ್ಷಗಾನ ಪಾಠಗಳು ಎಂಬ ಪುಸ್ತಕವನ್ನು ಬರೆದವರು ಇವರು. 

ಕಷ್ಟಪಟ್ಟು ಮಾಡಿದ ಭೂಮಿಯನ್ನು ಮಾರುವ ಪರಿಸ್ಥಿತಿ ಬಂದಾಗ ಕೃಷಿಕನ ಜೀವನವು ಕಲಾವಿದನ ಜೀವನದ ಹಾಗೆ ಅತಂತ್ರದ್ದು ಮತ್ತು ಭದ್ರತೆಯದ್ದಲ್ಲ ಎಂಬ ವಿಷಾದ ಅವರನ್ನು ಕಾಡಿದೆ. ಈ ಆಸ್ತಿಗಾಗಿ ತಾನೇ ತಾನು ಕಲಾವಿದನ ಜೀವನಕ್ಕೆ ವಿದಾಯ ಹೇಳಿದ್ದು...ನನ್ನ ತಂದೆಯವರ ಕಾಲದಲ್ಲಿ ಒಂದರ್ಧ ಎಕರೆ ಜಮೀನಿದ್ದರೆ ಅದು ದೊಡ್ಡ ಸೌಭಾಗ್ಯ. ಈಗ ಆಸ್ತಿ ಹೊಂದಿರುವುದು ಶಾಪ (ಪು.90) ಎಂಬ ಮಾತು ಇಂದು ಮಕ್ಕಳನ್ನೆಲ್ಲಾ ದೂರದ ಅಮೆರಿಕಾಗೋ, ಬೆಂಗಳೂರಿಗೋ ಕಳಿಸಿ, ಜಮೀನು ನೋಡಿಕೊಳ್ಳಲು ಕಸುವಿಲ್ಲದೇ ಮಾರಲು ಮನಸ್ಸಿಲ್ಲದೇ ನೊಂದುಕೊಳ್ಳುವ ಎಲ್ಲ ಹಿರಿಯರ ಅಂತರಂಗದ ಮಾತು. 

ನಾನು ಹುಟ್ಟಿನಿಂದ ತೀರಾ ಬಡವ, ನನ್ನ ತಂದೆಯವರಿಗೆ ಅಂಗೈಯಗಲದ ಭೂಮಿಯೂ ಇರಲಿಲ್ಲ. ನನ್ನ ಓದು ಶಿಕ್ಷಣ ಎಲ್ಲ ನನ್ನ ಕನಸಿನ ಒಳಗೆ ಬರಲೇ ಇಲ್ಲ. ಶಾಲಾ ಶಿಕ್ಷಣವೆನ್ನುವುದು ಏನೆಂದು ನಾನು ಅರಿತವನಲ್ಲ. ಆದರೆ ನಾನೇ ಶಿಕ್ಷಕನಾಗಿ ಹತ್ತಾರು ಮಂದಿಗೆ ಯಕ್ಷಗಾನದ ಹಿಮ್ಮೇಳ ಮುಮ್ಮೇಳಗಳನ್ನು ಕಲಿಸಿದೆ. ಅವರಿಗಾಗಿಯೇ ಪಠ್ಯ ಪುಸ್ತಕಗಳನ್ನು ರಚಿಸಿದೆ. ಇದು ದೇವರು ನನ್ನನ್ನು ಕುಣಿಸಿದ ಬಗೆ! (ಪು.94) ಏನೂ ಮಾಡಲಿಕ್ಕೆ ಆಗದವನು ಆಟದ ಪೆಟ್ಟಿಗೆ ಹೊರಬಹುದು ಎಂಬ ಗಾದೆ ಚಾಲ್ತಿಯಲ್ಲಿದ್ದ ಕಾಲಕ್ಕೆ ತಾನೊಬ್ಬ ಕಲಾವಿದನಾಗಿ, ಗುರುವಾಗಿ ಬೆಳೆದ ಗೋಪಾಲಕೃಷ್ಣ ಕುರುಪರ ಜೀವನದ ಸಾಧನೆ ಅಪೂರ್ವ. 

ಕಲಾವಿದನಲ್ಲಿ ಯೌವನ ಇರುವಾಗ, ಉತ್ಸಾಹ ಇರುವಾಗ ಸಮಾಜ ಅವರನ್ನು ಕೊಂಡಾಡುತ್ತದೆ. ಆದರೆ ಆತ ದೈಹಿಕವಾಗಿ ದುರ್ಬಲನಾದಾಗ ಅವನು ಜೀವಂತವಾಗಿದ್ದಾನೆ ಎಂಬುದನ್ನು ಅವನಿಂದ ಸಂತೋಷ ಪಡೆದವರೇ ಮರೆಯುವುದು ಕಲಾಜೀವನದ ವಿಪರ್ಯಾಸ. (96) ಎಂಬ ಮಾತು ಎಲ್ಲ ಕಲಾಭಿಮಾನಿಗಳಿಗೆ ಸಣ್ಣ ಎಚ್ಚರಿಕೆ ಹೌದಲ್ಲ? 

ದೇವಿ ಮಹಾತ್ಮೆ ಪ್ರಸಂಗದಲ್ಲಿ ದೇವಿಯನ್ನು ಬಾಯಿತಾಳ ಹೇಳಿ ಕುಣಿಸುವುದನ್ನು ಈಚೆಗೆ ಒಂದು ಆಟದಲ್ಲಿ ನೋಡಿದೆ. ..ಜನರಿಗೆ ಸಂತೋಷ ಸಿಗಲಿ ಎಂದು ದೇವಿಯನ್ನು ಕುಣಿಸುವುದು ಆ ಪಾತ್ರದ ಗೌರವದ ದೃಷ್ಟಿಯಿಂದಲೂ ಯಕ್ಷಗಾನದ ಪರಂಪರೆಯ ದೃಷ್ಟಿಯಿಂದಲೂ ತಪ್ಪು. ಆದರೆ ಇದನ್ನು ಯಾರಿಗೆ ಯಾರು ಹೇಳಬೇಕು? ಹೇಳಿದರೆ ಯಾರು ಕೇಳುತ್ತಾರೆ? (ಪು.97) ಇಂದಿನ ದಿನಗಳಲ್ಲಿ ಅನೇಕ ಮಂದಿ ಪಾತ್ರದ ಔಚಿತ್ಯವನ್ನು ಬದಿಗಿಟ್ಟು, ಎಲ್ಲಾ ಪದ್ಯಗಳಿಗೂ ನಮೂನೆವಾರು ಕುಣಿಯುವ ರೀತಿಯೊಂದನ್ನು ರೂಢಿ ಮಾಡಿಕೊಳ್ಳುತ್ತಿದ್ದಾರಲ್ಲ, ಅವರೆಲ್ಲರೂ ಗಮನಿಸಬೇಕಾದ ಅಂಶಗಳಿವು. 

ಪೌರಾಣಿಕ ಪ್ರಸಂಗಗಳಿಂದ ಕಲಾವಿದನ ಬೌದ್ಧಿಕ ಮಟ್ಟವೂ ಹೆಚ್ಚು ಬೆಳೆಯುತ್ತದೆ. ಕಲಾವಿದನೂ ಬೆಳೆಯುತ್ತಾನೆ. (ಪು.97) ಎಂಬುದೂ ಕೂಡಾ ಕಲಾವಿದರಿಗಿರಬೇಕಾದ ಪುರಾಣಜ್ಞಾನದ ಆಳವಿಸ್ತಾರಗಳನ್ನು ಸೂಚಿಸುತ್ತವೆ. 

ಅನುಬಂಧದಲ್ಲಿ ಅವರ ಹಲವು ಸನ್ಮಾನದ ಭಾವಚಿತ್ರಗಳೂ, ಭಾಗವತಿಕೆಯ ಪಾಠದ ವಿವರಣೆಯೂ ಇದೆ.  

ಮುಂದಿನ ಓದು ನಿಮ್ಮದು! 

ಆರತಿ ಪಟ್ರಮೆ