'ಭೂತಾನ್ನಲ್ಲಿ ಯಕ್ಷದೀವಿಗೆʼ
ಪ್ರವಾಸ ಕಥನ-11
ಡಾ. ಸಿಬಂತಿ ಪದ್ಮನಾಭ ಮತ್ತು ಡಾ. ಆರತಿ ಪಟ್ರಮೆ
(ಪ್ರಜಾಪ್ರಗತಿ, 05 ಏಪ್ರಿಲ್ 2026)
(ಮುಂದುವರಿದ ಭಾಗ...)
ಈಗ ನಾವು ಆತಂಕಗೊಂಡರೆ ಕೆಲಸ ಕೆಡುತ್ತದೆ; ಪರಿಹಾರದ ದಾರಿ ನೋಡೋಣ ಎಂದು ಚುರುಕಾದೆವು. ನಮ್ಮ ವಿಮಾನ ಇರುವುದು ಮಧ್ಯಾಹ್ನ 1:20 ಕ್ಕೆ. ಈಗಿನ್ನೂ ಹತ್ತೂವರೆ. ಒಳಗೆ ಹೋಗಲು ಇನ್ನು ಒಂದು ಗಂಟೆ ತೆಗೆದುಕೊಂಡರೂ ನಡೆಯುತ್ತದೆ ಎಂದು ಯೋಚಿಸಿದೆವು. ನಮ್ಮ ಸಮಸ್ಯೆಯನ್ನು ಪರಿಹರಿಸಬಲ್ಲವರು ಭೂತಾನ್ನ ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಮಾತ್ರ. “ನಿಮ್ಮೊಂದಿಗೆ ಅವರನ್ನು ಮಾತಾಡಿಸುತ್ತೇವೆ” ಎಂದು ಡ್ರುಕ್ಏರ್ ಸಿಬ್ಬಂದಿಗೆ ತಿಳಿಸಿದೆವು.
ನಮಗೂ ಭೂತಾನ್ಗೂ ಸರಿಯಾಗಿ ಅರ್ಧ ಗಂಟೆ ವ್ಯತ್ಯಾಸ. ಭೂತಾನ್ನವರು ನಮಗಿಂತ ಮೂವತ್ತು ನಿಮಿಷ ಮುಂದೆ. ಅಂದರೆ ಈಗ ಅಲ್ಲಿ ಹನ್ನೊಂದು ಗಂಟೆ ಆಗಿರುತ್ತದೆ. ಅಧಿಕಾರಿಗಳನ್ನು ಸಂಪರ್ಕಿಸಲು ಸಮಯ ಸರಿಯಾಗಿಯೇ ಇದೆ ಎಂದು ಯೋಚಿಸಿ ಸೋನಂ ಅವರಿಗೆ "ಹಾಯ್" ಎಂದು ವಾಟ್ಸಾಪ್ ಸಂದೇಶ ಕಳಿಸಿದೆವು. ಅದರ ಬೆನ್ನಿಗೆ, “ನಾವು ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಇದ್ದೇವೆ. ಡ್ರುಕ್ಏರ್ನ ಸಿಬ್ಬಂದಿಗಳು ಎಸ್ಡಿಎಫ್ ಶುಲ್ಕ ವಿನಾಯಿತಿಯ ಅನುಮತಿ ಕೇಳುತ್ತಿದ್ದಾರೆ. ನೀವು ಕಳಿಸಿದ ಪತ್ರವನ್ನು ಅವರಿಗೆ ತೋರಿಸಿದ್ದೇವೆ. ಇದು ಗೃಹ ಸಚಿವಾಲಯಕ್ಕೆ ಮಾಡಿಕೊಂಡ ಮನವಿಯಷ್ಟೇ, ನಮಗೆ ಅವರ ಅನುಮತಿ ಪತ್ರ ಬೇಕು ಎಂದು ಇವರು ಕೇಳುತ್ತಿದ್ದಾರೆ” ಎಂದು ವಿವರ ಕಳಿಸಿದೆವು.
ನಾವು ಮೆಸೇಜ್ ಏನೋ ಮಾಡಬಹುದು, ಅವರು ನೋಡಬೇಕಲ್ಲ! ಭೂತಾನ್ನವರೊಂದಿಗೆ ಸಂವಹನ ಮಾಡಿದ ಇಲ್ಲಿನವರೆಗಿನ ಅನುಭವ ಪ್ರಕಾರ ಅವರು ಸಾಮಾಜಿಕ ಮಾಧ್ಯಮಗಳನ್ನು ನಮ್ಮಷ್ಟು ಬಳಸುವುದಿಲ್ಲ. ಕೆಲವೊಮ್ಮೆ ನಾವು ಬೆಳಗ್ಗೆ ಮಾಡಿದ ಮೆಸೇಜನ್ನು ಅವರು ಸಂಜೆ ನೋಡಿದ್ದೂ ಉಂಟು. ಕಾಲ್ ಮಾಡುವುದಿದ್ದರೂ ವಾಟ್ಸಾಪ್ ಕಾಲ್ ಮಾಡಬೇಕಷ್ಟೆ. ಅವರು ನೆಟ್ವರ್ಕ್ ಪ್ರದೇಶದಲ್ಲಿ ಇದ್ದರೆ ಮಾತ್ರ ಕಾಲ್ ಕನೆಕ್ಟ್ ಆದೀತು. ನೋಡೋಣ, ಮೆಸೇಜ್ ಗಮನಿಸುತ್ತಾರೋ ಅಂತ ಅಂದುಕೊಂಡು ಸಂದೇಶ ಕಳಿಸಿಯಾಯಿತು.
ನಮ್ಮ ಆತಂಕ ಸರಿಯಾಗುವಂತೆ ಹತ್ತು ನಿಮಿಷ ನಮ್ಮ ಮೆಸೇಜ್ ಅವರಿಗೆ ಡೆಲಿವರಿ ಆದ ಡಬಲ್ ಟಿಕ್ ಬರಲೇ ಇಲ್ಲ. ಹೀಗೆ ಆದರೆ ಫಜೀತಿಯಾಗುತ್ತದೆ ಎಂದು ಮಾತಾಡಿಕೊಂಡೆವು. ಈ ನಡುವೆ ಡ್ರುಕ್ಏರ್ ಸಿಬ್ಬಂದಿ ನಮ್ಮೊಂದಿಗೆ ಬಹಳ ಸೌಜನ್ಯದಿಂದ ನಡೆದುಕೊಂಡರು. “ನೀವು ಆತಂಕಪಡಬೇಡಿ. ನಿಮ್ಮಲ್ಲಿರುವ ಪತ್ರದ ಫೋಟೋ ತೆಗೆದು ಪಾರೊ ಇಮಿಗ್ರೇಶನ್ಗೆ ಕಳಿಸಿದ್ದೇವೆ. ಅವರು ಆ ಕಡೆಯಿಂದ ಅನುಮತಿ ಕೊಟ್ಟರೆ ನಿಮ್ಮನ್ನು ಒಳಗೆ ಬಿಡುವುದಕ್ಕೆ ನಮ್ಮದೇನೂ ತಕರಾರಿಲ್ಲ. ಅವರು ಏನು ಹೇಳುತ್ತಾರೋ ನೋಡೋಣ. ಅಲ್ಲಿಯವರೆಗೆ ನೀವು ಓ ಅಲ್ಲಿ ಕೂತಿರಿ” ಎಂದು ಜಾಗ ತೋರಿಸಿದರು. ಅವರ ವರ್ತನೆಯಿಂದ ನಮಗೆ ಒಂದಷ್ಟು ಧೈರ್ಯ ಬಂತು.ಸೋನಂ ಉಪಕಾರ:
ನಾವು ಲಗೇಜ್ ತಳ್ಳಿಕೊಂಡು ಒಂದಷ್ಟು ದೂರ ಹೋಗಿ ಕುಳಿತೆವು. ಹತ್ತು ನಿಮಿಷದ ನಂತರ ನಮ್ಮ ಮೆಸೇಜ್ ಸೋನಂ ಅವರಿಗೆ ಡೆಲಿವರ್ ಆಯಿತು. ಆದರೆ ಅವರು ಅದನ್ನು ನೋಡಬೇಕಲ್ಲ? ಇನ್ನೂ ಹತ್ತು ನಿಮಿಷ ಆದ ಮೇಲೆ ಆ ಕಡೆಯಿಂದ “ಸೋನಂ ಟೈಪಿಂಗ್...” ಅಂತ ಕಾಣಿಸಿತು. “ಅಬ್ಬ ನಮ್ಮ ಮೆಸೇಜ್ ಗಮನಿಸಿದ್ದಾರೆ, ಉತ್ತರಿಸುತ್ತಿದ್ದಾರೆ” ಎಂದು ತುಸು ನೆಮ್ಮದಿ ಅನಿಸಿತು. ಅವರ ಮೆಸೇಜ್ ಬಂತು. “ಈ ಪತ್ರ ಸಾಕು. ನಿಮಗೆ ಎಸ್ಡಿಎಫ್ ವಿನಾಯಿತಿ ಕೂಡ ಸಿಕ್ಕಿದೆ. ನೀವು ಪಾರೊ ವಿಮಾನ ನಿಲ್ದಾಣ ತಲುಪಿದಾಗ ನನಗೊಂದು ಕಾಲ್ ಮಾಡಿ” ಅಂತ ಮೆಸೇಜ್ ಇತ್ತು. “ಅವರಿಗೆ ಅನುಮತಿ ಪತ್ರ ಬೇಕಂತೆ” ಎಂದು ಉತ್ತರಿಸಿದೆವು. “ಇಲ್ಲ ಇಲ್ಲ, ಈ ಪತ್ರ ಧಾರಾಳ ಸಾಕು. ನಾವು ಪಾರೊ ಏಫೋರ್ಟಿನ ಇಮಿಗ್ರೇಶನ್ ವಿಭಾಗಕ್ಕೂ ಮಾಹಿತಿ ನೀಡಿದ್ದೇವೆ” ಎಂದು ಅವರು ಉತ್ತರಿಸಿದರು. ಅಲ್ಲದೆ, “ಎಸ್ಡಿಎಫ್ ಪಾವತಿಸುವ ವಿಚಾರ ಬರುವುದು ನೀವು ಪಾರೊ ವಿಮಾನ ನಿಲ್ದಾಣಕ್ಕೆ ತಲುಪಿದಾಗ. ಇದಕ್ಕೂ ಕೋಲ್ಕತಾ ಏರ್ಪೋರ್ಟಿನವರಿಗೂ ಸಂಬಂಧ ಇಲ್ಲ” ಎಂದರು.
“ನಾವು ನಿಮಗೆ ಕರೆ ಮಾಡಬಹುದೇ? ನೀವೇ ಅವರೊಂದಿಗೆ ಮಾತಾಡಿ” ಎಂದೆವು. ಅವರು ಸರಿ ಎಂದರು. ವಾಟ್ಸಾಪ್ ಕಾಲ್ ಮಾಡಿ ಡ್ರುಕ್ಏರ್ನ ಸಿಬ್ಬಂದಿಯೊಬ್ಬರಿಗೆ ಕೊಟ್ಟೆವು. ಅವರು ತಮ್ಮ ಸ್ಥಳೀಯ ಭಾಷೆಯಲ್ಲಿ ಮಾತಾಡಿಕೊಂಡರು. ನಮ್ಮೊಂದಿಗೆ ಹೇಳಿದ್ದನ್ನೇ ಅವರಿಗೂ ಹೇಳಿದರು ಅನಿಸುತ್ತದೆ. “ಎಸ್ಡಿಎಫ್ ವಿಚಾರ ಪಾರೊಗೆ ಸಂಬಂಧಿಸಿದ್ದು. ನೀವು ಕೋಲ್ಕತದಲ್ಲೇ ಯಾಕೆ ತಡೆಯುತ್ತಿದ್ದೀರಿ” ಎಂದು ಸೋನಂ ಅವರು ಕೇಳಿರಬೇಕು. “ಪಾರೊಗೆ ಸಂಬಂಧಿಸಿದ್ದಾದರೂ ಎಸ್ಡಿಎಫ್ ಪಾವತಿಯ ವಿಚಾರದಲ್ಲಿ ಸ್ಪಷ್ಟತೆ ಇರಬೇಕು. ಇಲ್ಲದಿದ್ದರೆ ಇಲ್ಲಿನ ಇಮಿಗ್ರೇಶನ್ ವಿಭಾಗದವರು ತಕರಾರು ಮಾಡುತ್ತಾರೆ” ಎಂಬುದು ಇವರ ವಾದ ಆಗಿತ್ತು.
ಅವರು ಸ್ವಲ್ಪ ಹೊತ್ತು ಮಾತಾಡಿಕೊಂಡ ಮೇಲೆ ಫೋನ್ ನಮಗೆ ವಾಪಸ್ ಕೊಟ್ಟರು. ನಾವು ಪಾರೊ ಇಮಿಗ್ರೇಶನ್ನ ಅನುಮತಿಗಾಗಿ ಕಾಯುತ್ತಿದ್ದೇವೆ. ಅಲ್ಲಿಯವರೆಗೆ ನೀವು ದಯಮಾಡಿ ಕುಳಿತುಕೊಳ್ಳಿ ಎಂದು ಪುನಃ ಹೇಳಿದರು. ಈ ನಡುವೆ ಸೋನಂ ಅವರು, “ನಾನು ಪಾರೊ ವಿಮಾನ ನಿಲ್ದಾಣದವರೊಂದಿಗೆ ಮಾತಾಡಿದ್ದೇನೆ. ನೀವು ಬರುವುದಕ್ಕೆ ಏನೂ ಸಮಸ್ಯೆ ಇಲ್ಲ” ಎಂದು ಇನ್ನೊಂದು ಮೆಸೇಜ್ ಮಾಡಿದರು. ಆದರೆ ಇಲ್ಲಿನವರು ಪಾರೊ ಅನುಮತಿಗೆ ಇನ್ನೂ ಕಾಯುತ್ತಿದ್ದರು. “ಎಲ್ಲ ಭಾರತೀಯರು ಪಾಸ್ಪೋರ್ಟ್ ಅಥವಾ ವೋಟರ್ ಐಡಿ ಹಿಡಿದುಕೊಂಡು ಭೂತಾನ್ಗೆ ಬರಬಹುದು. ಎಸ್ಡಿಎಫ್ ಪಾವತಿಸುವುದು ಇಲ್ಲಿಗೆ ತಲುಪಿದ ಮೇಲೆ” ಎಂದು ಸೋನಂ ನಮಗೆ ಇನ್ನಷ್ಟು ವಿವರ ಕಳಿಸಿದರು. “ನೀವು ಹೇಳುತ್ತಿರುವುದು ಸರಿಯಾಗಿದೆ. ಆದರೆ ಇಲ್ಲಿನವರು ಇನ್ನೂ ಕಾಯುತ್ತಿದ್ದಾರೆ” ಎಂದೆವು. “ಅಂಥಾ ಸಂದರ್ಭ ಬಂದರೆ ನಾವು ಪಾರೊದಲ್ಲಿ ಎಸ್ಡಿಎಫ್ ಪಾವತಿಸುತ್ತೇವೆ ಎಂದು ಅವರಿಗೆ ಹೇಳಿಬಿಡಿ. ನಿಮ್ಮನ್ನು ವಿಮಾನ ಹತ್ತಲು ಬಿಡುತ್ತಾರೆ. ಇಲ್ಲಿನ ವಿಚಾರ ನಾನು ನೋಡಿಕೊಳ್ಳುತ್ತೇನೆ” ಎಂದರು. ಅವರ ಮಾತುಗಳು ನಾವು ಆತಂಕಗೊಳ್ಳದಂತೆ ಮಾಡುತ್ತಿದ್ದವು. ಇಷ್ಟೆಲ್ಲ ಆಗುವ ಹೊತ್ತಿಗೆ ಡ್ರುಕ್ಏರ್ ಸಿಬ್ಬಂದಿ ಸಮಸ್ಯೆ ಸರಿಹೋಗಿದೆ ಎಂಬಂತೆ “ಬನ್ನಿ ಬನ್ನಿ” ಎಂದು ಕರೆದರು. ಲಗೇಜ್ ಒಯ್ಯಲು ಒಬ್ಬ ಸಿಬ್ಬಂದಿಯನ್ನೂ ಕಳಿಸಿದರು.ಪರಿಹಾರವಾಯಿತು ಸಮಸ್ಯೆ:
ಇಷ್ಟೆಲ್ಲ ಆಗುವಾಗ ಹನ್ನೊಂದೂಮುಕ್ಕಾಲು ಆಗಿತ್ತು. ನಾವು ಲಗುಬಗೆಯಿಂದ ಹೋದೆವು. ಐದೇ ನಿಮಿಷದಲ್ಲಿ ಚೆಕ್ಇನ್ ಪ್ರಕ್ರಿಯೆ ಮುಗಿದು ನಮ್ಮನ್ನು ಸೆಕ್ಯುರಿಟಿ ಪರಿಶೀಲನೆ ವಿಭಾಗದತ್ತ ಹೋಗಲು ಅನುಮತಿ ನೀಡಿದರು. ಅಬ್ಬ ಅಂತೂ ಐವತ್ತು ಸಾವಿರ ರುಪಾಯಿ ಪಾವತಿಸುವುದರಿಂದ ಪಾರಾದೆವಲ್ಲ ಎಂದು ನಿಟ್ಟುಸಿರು ಬಿಟ್ಟೆವು. ಏನೇ ಆಗಲಿ, ಇವರು ಎಷ್ಟೊಂದು ಸಂಯಮ ಮತ್ತು ಗೌರವದಿಂದ ವರ್ತಿಸಿದರಲ್ಲ, ಇವರನ್ನು ಮೆಚ್ಚಬೇಕು ಎಂದು ಮಾತಾಡಿಕೊಂಡೆವು. “ನಮ್ಮ ಸಮಸ್ಯೆ ಪರಿಹಾರ ಆಯ್ತು. ನಾವು ಒಳಗೆ ಹೋಗುತ್ತಿದ್ದೇವೆ” ಎಂದು ಸೋನಂ ಅವರಿಗೆ ಮೆಸೇಜ್ ಮಾಡಿದೆವು. “ಓಹ್! ಗ್ರೇಟ್!” ಎಂದು ಅವರು ಉತ್ತರಿಸಿದರು. ಮನಸ್ಸು ಹಗುರ ಹಗುರ ಅನ್ನಿಸುತ್ತಿತ್ತು.
ಮುಂದಿನ ಪ್ರಕ್ರಿಯೆಗಳೆಲ್ಲ ಸಲೀಸಾಗಿ ಮುಗಿದವು. ಡ್ರುಕ್ಏರ್ ಪ್ರವೇಶ ದ್ವಾರಕ್ಕೆ ನಾವು ಹೋಗಿ ಕುಳಿತಾಗ ವಿಮಾನ ಹೊರಡುವುದಕ್ಕೆ ಇನ್ನೂ ಒಂದು ಗಂಟೆ ಉಳಿದಿತ್ತು. ಈ ನಡುವೆ ನಮಗೆ ಉಂಟಾದ ಸಮಸ್ಯೆಯನ್ನು ಪೆಮಾ ಅವರಿಗೂ ತಿಳಿಸಿದ್ದೆವು. ಅವರು ಮತ್ತು ಸೋನಂ ಕೂಡ ಮಾತಾಡಿಕೊಂಡಿದ್ದರು. ನಮ್ಮ ಸಮಸ್ಯೆ ಪರಿಹಾರವಾದ ವಿಚಾರವನ್ನೂ ಅವರಿಗೆ ತಿಳಿಸಿದ್ದಾಯ್ತು.
“ನಾನು ಪಾರೊ ಮತ್ತು ಥಿಂಪುವಲ್ಲಿ ನಿಮಗಾಗಿ ಹೋಟೆಲ್ ನೋಡಿ ಇಟ್ಟಿದ್ದೇನೆ. ಇಲ್ಲಿ ಚಳಿ ಹೆಚ್ಚಾಗಿರುವುದರಿಂದ ನಿಮಗೆ ತಕ್ಕಮಟ್ಟಿಗೆ ಚೆನ್ನಾಗಿರುವ ಹೋಟೆಲೇ ಬೇಕು. ಪಾರೊದಲ್ಲಿ ಮೂರು ಸಾವಿರಕ್ಕೆಲ್ಲ ಒಳ್ಳೆಯ ಹೋಟೆಲ್ ಇದೆ. ಥಿಂಪುವಿನಲ್ಲಿ ಇನ್ನೂ ಒಂದೈನೂರು ಹೆಚ್ಚಾಗುತ್ತದೆ. ಜನವರಿ 1ರಿಂದ ನಮ್ಮಲ್ಲಿ ಜಿಎಸ್ಟಿ ಆರಂಭ ಆಗಿದೆ. ಆದ್ದರಿಂದ ಇನ್ನೂ ಸ್ವಲ್ಪ ಹೆಚ್ಚಾಗಬಹುದು. ಆದರೆ ಇದರಲ್ಲಿ ಬೆಳಗ್ಗಿನ ಉಪಾಹಾರ ಮತ್ತು ರಾತ್ರಿಯ ಊಟ ಸೇರಿಕೊಂಡಿದೆ” ಎಂದು ಪೆಮಾ ವಿವರ ನೀಡಿದರು.
ನಮ್ಮಲ್ಲಿಗೆ ಹೋಲಿಸಿದರೆ ಅಲ್ಲಿನ ಹೋಟೆಲ್ ದರಗಳು ಪರವಾಗಿಲ್ಲ ಎನಿಸಿತು. ನಮ್ಮ ವಿಚಾರ ಸರಿ, ನೀವು ಎಲ್ಲಿ ತಂಗುತ್ತೀರಾ ಕೇಳಿದೆವು. ಅವರು ಪಾರೊ, ಥಿಂಪುವಲ್ಲೆಲ್ಲ ತಮ್ಮ ಸಂಬಂಧಿಕರು ಇರುವುದಾಗಿಯೂ, ಅವರ ಮನೆಗಳಲ್ಲಿ ತಂಗುವುದಾಗಿಯೂ ತಿಳಿಸಿದರು. “ನಾನು ನಾಲ್ಕೂವರೆಗೆಲ್ಲ ಪಾರೊ ವಿಮಾನ ನಿಲ್ದಾಣದಲ್ಲಿ ಇರುತ್ತೇನೆ. ನೀವು ಏಪೋರ್ಟಲ್ಲೇ ಸ್ಥಳೀಯ ಸಿಮ್ ತೆಗೆದುಕೊಳ್ಳಬಹುದು. ಸಂವಹನ ಸುಲಭವಾಗುತ್ತದೆ. ಅದು ಕೂಡ ದುಬಾರಿ ಏನಲ್ಲ” ಎಂದರು. “ಅಲ್ಲಿನ ಸಿಮ್ ಸಕ್ರಿಯವಾಗುವುದಕ್ಕೆ ಸಮಯ ತೆಗೆದುಕೊಳ್ಳುತ್ತದಲ್ಲ... ಆದರೂ ನಾವು ನಿಮ್ಮನ್ನು ಹೇಗಾದರೂ ಪತ್ತೆಹಚ್ಚುತ್ತೇವೆ” ಎಂದೆವು. ಅವರು, “ಏರ್ಪೋರ್ಟಲ್ಲಿ ಉಚಿತ ವೈಫೈ ಇರುತ್ತದೆ. ಅದಕ್ಕೆ ಕನೆಕ್ಟ್ ಮಾಡಿಕೊಳ್ಳಿ” ಎಂದು ನೆನಪಿಸಿದರು. ನಾವು ಪಾರೊ ವಿಮಾನ ಹತ್ತಲು ಸಿದ್ಧರಾದೆವು.
(ಮುಂದುವರಿಯುವುದು)

