'ಭೂತಾನ್ನಲ್ಲಿ ಯಕ್ಷದೀವಿಗೆʼ
ಪ್ರವಾಸ ಕಥನ-8
ಡಾ. ಸಿಬಂತಿ ಪದ್ಮನಾಭ ಮತ್ತು ಡಾ. ಆರತಿ ಪಟ್ರಮೆ
(ಪ್ರಜಾಪ್ರಗತಿ, 15 ಮಾರ್ಚ್ 2026)
(ಮುಂದುವರಿದ ಭಾಗ...)
ನಮಗೆ ಅನಿವಾರ್ಯವಿದ್ದಾಗ ಪರಿಹಾರದ ದಾರಿ ಹುಡುಕಿಕೊಂಡು ನಾವೇ ಹೋಗಬೇಕು. ನಮ್ಮ ಪರಿಹಾರದ ದಾರಿ ಗ್ರಾಮಾಂತರ ಪೊಲೀಸ್ ಠಾಣೆಯ ಕಡೆಗಿತ್ತು. ಅಲ್ಲಿಗೆ ಹೋಗಿ ವಿಚಾರಿಸಿದರೆ, ಪಾಸ್ಪೋರ್ಟ್ ವೆರಿಫಿಕೇಶನಿಗೆ ಬಂದಿರುವುದನ್ನು ಖಚಿತಪಡಿಸಿದರು. ತತ್ಕಾಲ್ ಯೋಜನೆಯಲ್ಲಿ ಅರ್ಜಿ ಹಾಕಿರೋದು, ಸ್ವಲ್ಪ ತುರ್ತಿದೆ, ಆದರೂ ಮೊದಲೇ ಪೊಲೀಸ್ ವೆರಿಫಿಕೇಶನಿಗೆ ಬಂದಿದೆ, ಸ್ವಲ್ಪ ಬೇಗನೆ ಮಾಡಿಕೊಡಬಹುದೇ ಎಂದು ಕೇಳಿಕೊಂಡೆವು. ಆ ರೀತಿ ಹೇಳಿದರೆ ಅಧಿಕಾರಿಗಳಿಗೆ ಇಷ್ಟವಾಗುವುದಿಲ್ಲ ಎಂದು ಗೊತ್ತಿಲ್ಲದ್ದೇನಲ್ಲ. ಅದು ನಿಮ್ಮ ಸಮಸ್ಯೆ, ನಮ್ಮದಲ್ಲ- ಎಂಬುದು ಸಾಮಾನ್ಯವಾಗಿ ಬರುವ ಮಾತು. ಆದರೆ ನಮಗೆ ಬೇರೆ ದಾರಿ ಇರಲಿಲ್ಲ. ಹೆಚ್ಚೆಂದರೆ ಒತ್ತಾಯಪೂರ್ವಕ ವಿನಂತಿ ಮಾಡಬಹುದಷ್ಟೆ. ತತ್ಕಾಲ್ ಪಾಸ್ಪೋರ್ಟಿಗೇನೋ ಸಮಯದ ಮಿತಿ ಇದೆ, ಪೊಲೀಸ್ ಪರಿಶೀಲನೆಗೆ ಬಂದ ಮೇಲೆ ಯಾವ ಮಿತಿ ಇದೆಯೋ ಯಾರಿಗ್ಗೊತ್ತು?
ಅಂತೂ ಅವರು ಹೆಚ್ಚು ಸತಾಯಿಸದೆ ನಿಮ್ಮ ಆಧಾರ್ ಕಾರ್ಡು, ಮಕ್ಕಳ ಆಧಾರ್ ಕಾರ್ಡು ತನ್ನಿ ಎಂದರು. ಅದನ್ನು ತೆಗೆದುಕೊಂಡು ಹೋದರೆ ಫೋಟೋ ತರಲಿಲ್ಲವೇ ಎಂದರು. ಅದನ್ನೂ ತೆಗೆದುಕೊಂಡು ಹೋದಾಗ, ನಿಮ್ಮ ನೆರೆಯ ನಾಲ್ಕು ಮಂದಿಯ ಆಧಾರ್ ಕಾರ್ಡಿನ ಪ್ರತಿ ತನ್ನಿ ಎಂದರು. ಇವೆಲ್ಲವನ್ನೂ ಒಂದೇ ಸಲ ಹೇಳಿದ್ದರೆ ಓಡಾಡುವುದು ತಪ್ಪುತ್ತಿತ್ತಲ್ಲ ಅನಿಸಿದರೂ ಮನಸ್ಸಿನಲ್ಲೇ ಉಳಿಸಿಕೊಂಡೆವು. ನಮ್ಮ ಕೆಲಸವಾಗಬೇಕಾದರೆ ತಾಳ್ಮೆ ಬೇಕು.
ಆಮೇಲೆ ಪ್ರಮಾಣಪತ್ರಕ್ಕೆ ಸಹಿ ಹಾಕಿಸಿಕೊಂಡು, ಈ ವರದಿ ಎಸ್ಪಿಯವರಿಗೆ ಹೋಗುತ್ತೆ, ಅವರು ಅಲ್ಲಿಂದ ಪಾಸ್ಪೋರ್ಟ್ ಕಚೇರಿಗೆ ಫಾರ್ವರ್ಡ್ ಮಾಡ್ಬೇಕು, ಅಲ್ಲಿಗೆ ವೆರಿಫಿಕೇಶನ್ ಪ್ರಕ್ರಿಯೆ ಮುಗಿಯುತ್ತದೆ ಎಂದರು. ಆಗಲಿ, ಸ್ವಲ್ಪ ಬೇಗನೆ ಮಾಡಿಕೊಡಿ ಎಂದು ಮತ್ತೊಮ್ಮೆ ಕೇಳಿಕೊಂಡೆವು. ನೋಡಿ... ಇವತ್ತು ಸ್ವಲ್ಪ ಬ್ಯುಸಿ ಇದ್ದೀವಿ... ಬೇರೆ ತುರ್ತು ಕೆಲಸಗಳಿವೆ. ನಿಮ್ಮಂತೆ ವೆರಿಫಿಕೇಶನಿಗೆ ಬಂದ ಇಷ್ಟು ಫೈಲ್ಗಳಿವೆ ನೋಡಿ... ಇವಕ್ಕೆಲ್ಲ ಸಾಹೇಬ್ರ ಸಹಿ ಆಗ್ಬೇಕು... ಆಮೇಲೆ ಎಸ್ಪಿ ಕಚೇರಿಗೆ ಒಟ್ಟಿಗೆ ಕಳಿಸ್ತೀವಿ ಎಂದು ಅಷ್ಟೆತ್ತರದ ಕಟ್ಟನ್ನು ಎತ್ತಿ ತೋರಿಸಿದರು.ದುಡುಕಿದರೆ ಕೆಲಸ ಹಾಳಾಗುತ್ತದೆ ಎಂದು ಮರುಮಾತಿಲ್ಲದೆ ಮರಳಿದ್ದಾಯ್ತು. ರಾತ್ರಿ ಆನ್ಲೈನ್ ಸ್ಟೇಟಸ್ ಪರಿಶೀಲಿಸಿದರೆ ನಮ್ಮ ಫೈಲ್ ಇನ್ನೂ ಗ್ರಾಮಾಂತರ ಪೊಲೀಸ್ ಠಾಣೆಯಲ್ಲೇ ಇದೆ ಎಂದು ತೋರಿಸುತ್ತಿತ್ತು. ಮರುದಿನ ಬೆಳಗ್ಗೆ ಮತ್ತೆ ಸ್ಟೇಶನಿಗೆ ಫೋನ್ ಮಾಡಿ ಕೇಳಿದರೆ ನಾವು ಅವರು, ತಡಿರ್ರೀ... ನಮ್ಗೆ ತುಂಬ ಕೆಲಸಗಳಿವೆ... ನಿಮ್ದು ಒಂದೇನಾ... ಕಳಿಸ್ತೀವಿ ಆಮೇಲೆ ಎಂದು ಸಣ್ಣದಾಗಿ ಸಿಟ್ಟುಮಾಡಿಕೊಂಡರು. ಇದೆಲ್ಲ ನಿರೀಕ್ಷಿಸಿದ್ದೇ ಆಗಿದ್ದರಿಂದ ಬೇಸರವೇನೂ ಆಗಲಿಲ್ಲ; ಮತ್ತೊಮ್ಮೆ ಸ್ಟೇಷನಿಗೆ ಹೋಗಿ ಅವರನ್ನು ಸಮಾಧಾನಪಡಿಸಿ ಬರಬೇಕಾಯಿತು. ಆಮೇಲೆ ಅವರಿಂದ ಕಡತ ಮುಂದಕ್ಕೆ ಹೋಯಿತು.
ಸಂಜೆ ಎಸ್ಪಿಯವರ ಕಚೇರಿಗೂ ಹೋಗಿ ಪಾಸ್ಪೋರ್ಟ್ ವಿಭಾಗಕ್ಕೆ ಭೇಟಿಕೊಟ್ಟೆವು. ವೆರಿಫಿಕೇಶನ್ ವಿಚಾರ ಎಂದಕೂಡಲೇ ಒಂದಿಷ್ಟು ಕಾಯಿರಿ ಎಂದರು. ಮುಕ್ಕಾಲು ಗಂಟೆ ಕಾದ ಬಳಿಕ ನಾವು ಕಾಯುತ್ತಿರುವುದನ್ನು ನೆನಪಿಸಿದೆವು. ಆಗ ಅವರು ಒಳಗೆ ಕರೆದು ಏನು ಹೇಳಿ ಎಂದರು. ಸನ್ನಿವೇಶ ವಿವರಿಸಿ, ಗ್ರಾಮಾಂತರ ಠಾಣೆಯಿಂದ ಪರಿಶೀಲನೆ ಆಗಿದೆ, ದಯಮಾಡಿ ಗಮನಿಸಿ ಎಂದು ವಿನಂತಿಸಿದೆವು. ಅವರು ಉಲ್ಲೇಖ ಸಂಖ್ಯೆ ಪರಿಶೀಲಿಸಿ, ರೂರಲ್ ಸ್ಟೇಷನಿಂದ ಈಗಷ್ಟೇ ಬಂದಿದೆ, ನಾಳೆ ಕಳಿಸ್ತೀವಿ ಅಂದರು. ಏನೋ ಒಂಚೂರು ಸಮಾಧಾನ ಅನ್ನಿಸಿ ಮರಳಿದ್ದಾಯ್ತು. ಮರುದಿನ ಸಂಜೆ ಇನ್ನೇನು ಮತ್ತೊಮ್ಮೆ ಎಸ್ಪಿ ಕಚೇರಿಗೆ ಹೋಗಬೇಕು ಅಂದುಕೊಳ್ಳುತ್ತಿದ್ದಾಗ, ನಿಮ್ಮ ಕಡತ ಎಸ್ಪಿ ಕಚೇರಿಯಿಂದ ಕಳಿಸಲ್ಪಟ್ಟಿದೆ ಎಂದು ಆನ್ಲೈನ್ ಸ್ಟೇಟಸ್ ತೋರಿಸಿತು. ಬಚಾವ್! ಮುಂದಿನ ಕೆಲಸ ಮಿಂಚಿನ ವೇಗದಲ್ಲಿ ತಾನಾಗಿಯೇ ಆಗುತ್ತದೆ ಎಂದು ಗೊತ್ತಿತ್ತು.
ಮರುದಿನ ಪಾಸ್ಪೋರ್ಟ್ ಮುದ್ರಣವಾಗಿ, ನಮಗೆ ರವಾನೆಯಾದ ಮಾಹಿತಿ ಕೂಡ ಬಂತು. ಎಂಬಲ್ಲಿಗೆ ಪಾಸ್ಪೋರ್ಟ್ ವಿಚಾರವಾಗಿ ಇದ್ದ ಆತಂಕ ಕರಗಿಹೋಯಿತು. ಇಷ್ಟೆಲ್ಲ ಆಗುವ ಹೊತ್ತಿಗೆ ನಮ್ಮ ಭೂತಾನ್ ಪ್ರಯಾಣಕ್ಕೆ ಹದಿನೇಳು ದಿನ ಮಾತ್ರ ಉಳಿದಿತ್ತು. ಇನ್ನೀಗ ವಿಮಾನ ಟಿಕೆಟ್ ಕಾಯ್ದಿರಿಸಬೇಕು, ಎಸ್ಡಿಎಫ್ ವಿನಾಯಿತಿಗೆ, ರೂಟ್ ಪರ್ಮಿಟ್ಗೆ ಅರ್ಜಿ ಹಾಕಬೇಕು, ಅಲ್ಲಿ ಉಳಿದುಕೊಳ್ಳುವುದಕ್ಕೆ ಹೋಟೆಲ್ ಕಾಯ್ದಿರಿಸಬೇಕು, ಲಗೇಜು ಒಯ್ಯುವುದಕ್ಕೆ ಸೂಕ್ತ ಸೂಟ್ಕೇಸುಗಳು, ಅಲ್ಲಿನ ಚಳಿಯನ್ನು ಎದುರಿಸುವುದಕ್ಕೆ ಅಗತ್ಯ ಸಾಮಗ್ರಿಗಳನ್ನು ಖರೀದಿಸಬೇಕು... ಒಂದೇ ಎರಡೇ! ಎಲ್ಲವನ್ನೂ ನಮ್ಮ ದಿನನಿತ್ಯದ ಉದ್ಯೋಗ ಮತ್ತಿತರ ಕೆಲಸಗಳ ಮಧ್ಯೆ ಸಮಯ ಹೊಂದಿಸಿಕೊAಡು ಒಂದೊAದೇ ಮಾಡುತ್ತಾ ಬಂದೆವು.
ಮತ್ತೊಂದು ಆನ್ಲೈನ್ ಸಭೆ:
ಈ ನಡುವೆ ಭೂತಾನ್ ಸಂಸ್ಕೃತಿ ಇಲಾಖೆಯ ಪ್ರತಿನಿಧಿ, ನಮ್ಮ ಪ್ರಾಜೆಕ್ಟ್ ಗೆ ಸಂಯೋಜಕರಾಗಿ ನೇಮಕಗೊಂಡಿದ್ದ ಸೋನಮ್ ಒಂದಷ್ಟು ವಿಷಯಗಳನ್ನು ಮಾತಾಡಿಕೊಳ್ಳುವುದಿದೆ. ಒಂದು ಆನ್ಲೈನ್ ಮೀಟಿಂಗ್ ಮಾಡೋಣ ಎಂದರು. ಥಿಂಪುವಿನ ಸಾಂಪ್ರದಾಯಿಕ ಪ್ರದರ್ಶನ ಕಲೆಗಳ ವಿಭಾಗದ (TPAMD) ಮುಖ್ಯಸ್ಥರಾದ ಉಗ್ಯೆನ್ ತೆನ್ಜಿನ್ ಅವರನ್ನು ಸಭೆಗೆ ಆಹ್ವಾನಿಸಿರುವುದಾಗಿ ತಿಳಿಸಿ, ನಮ್ಮ ಸಂಪರ್ಕದಲ್ಲಿದ್ದ ಭಾಷೆ ಮತ್ತು ಸಂಸ್ಕೃತಿ ಕಾಲೇಜಿನ (CLCS) ಪ್ರಾಧ್ಯಾಪಕರಾದ ಪೆಮಾ ವಾಂಗ್ಚುಕ್ ಅವರನ್ನು ಆನ್ಲೈನ್ ಸಭೆಗೆ ಕರೆಯಲು ಸೂಚಿಸಿದರು. ಅವರ ಒಪ್ಪಿಗೆಯೂ ಸಿಕ್ಕಿತು. ಆ ದಿನ ಸಂಜೆ ಒಂದು ಗಂಟೆಗೂ ದೀರ್ಘ ಮೀಟಿಂಗ್ ನಡೆಯಿತು. ನಾವೆಲ್ಲ ಪರಸ್ಪರ ಮುಖ ನೋಡಿಕೊಂಡದ್ದು ಆಗಲೇ!
ಸೋನಂ ಒಂದಷ್ಟು ಮುಖ್ಯ ವಿಚಾರಗಳನ್ನು ನಮ್ಮೊಂದಿಗೆ ಹಂಚಿಕೊಂಡರು: ಭೂತಾನೀಯರಿಗೆ ಮಾಸ್ಕ್ ಡ್ಯಾನ್ಸ್ನ ಮುಖವಾಡ ತುಂಬ ಪವಿತ್ರವಾದದ್ದು. ಸಾಮಾನ್ಯವಾಗಿ ಹಬ್ಬಗಳ ಸಮಯದಲ್ಲಿ ಮಾತ್ರ ಹೊರತೆಗೆಯಲಾಗುತ್ತದೆ. ಆಗಲೂ ಅದಕ್ಕೆ ಸಂಬಂಧಪಟ್ಟವರ ಅನುಮತಿ ಬೇಕು. ಬೌದ್ಧಮಂದಿರ (ಮೊನಾಸ್ಟರಿ)ಗಳಿಗೆ ಭೇಟಿ ನೀಡುವುದಕ್ಕೂ ಅಲ್ಲಿನ ಮುಖಂಡರ ಅನುಮತಿ ಬೇಕು. ನೀವು ನಿರ್ದಿಷ್ಟವಾಗಿ ಯಾವೆಲ್ಲ ಬೌದ್ಧಮಂದಿರಗಳಿಗೆ ಹೋಗುತ್ತೀರೆಂದು ಮೊದಲೇ ತಿಳಿಸಿದರೆ ಅದಕ್ಕೆ ಸೂಕ್ತ ವ್ಯವಸ್ಥೆ ಮಾಡುತ್ತೇವೆ, ಆದರೆ ಅದಕ್ಕೆ ಸಾಕಷ್ಟು ಸಮಯ ಬೇಕು. ಬೌದ್ಧ ಸನ್ಯಾಸಿಗಳನ್ನು ಭೇಟಿ ಮಾಡುವುದಕ್ಕೂ ಪೂರ್ವಾನುಮತಿ ಬೇಕು, ಆದರೆ ಅವರು ಭೇಟಿಗೆ ಸಿಗುವುದು ಕಷ್ಟ. ಖುದ್ದು ಭೂತಾನೀಯರೇ ತಾವು ಇಚ್ಛಿಸಿದಂತೆ ನೇರ ಬೌದ್ಧಮಂದಿರಗಳನ್ನು ಹೊಕ್ಕು ಅಲ್ಲಿನ ಬೌದ್ಧಭಿಕ್ಕುಗಳನ್ನು ಮಾತಾಡಿಸುವುದಕ್ಕೆ ಅವಕಾಶ ಇಲ್ಲ. ಹಾಗೆಯೇ, ಪಾರೊ ಮತ್ತು ಥಿಂಪು ಹೊರತಾಗಿ ಇನ್ನೆಲ್ಲೇ ಹೋಗುವುದಿದ್ದರೂ ಗೃಹ ಸಚಿವಾಲಯದಿಂದ ರೂಟ್ ಪರ್ಮಿಟ್ ಬೇಕು – ಇದು ಸೋನಂ ಅವರ ಮಾತಿನ ಸಾರಾಂಶ. ನೋಡಿ ನಾವು ಪರದೇಸಿಗರು, ಎಲ್ಲ ನೀವೇ ಮಾಡಿಸಿಕೊಡಬೇಕು ಎಂದು ಅವರನ್ನು ವಿನಂತಿ ಮಾಡಿಕೊಂಡೆವು.ಎಲ್ಲದಕ್ಕಿಂತಲೂ ಮಿಗಿಲಾಗಿ ನಮಗೆ ತಗಲಬಹುದಾದ ಖರ್ಚಿನ ವಿಚಾರವೇ ಸೋನಂ ಅವರ ಚಿಂತೆಯ ವಿಷಯವಾಗಿತ್ತು. ನಿಮಗೆ ಮಂಜೂರಾಗಿರುವ ಪ್ರಾಜೆಕ್ಟ್ ಅನುದಾನ ಬರೀ ವಿಮಾನ ಪ್ರಯಾಣಕ್ಕೆ ಹೊರಟುಹೋಗುತ್ತದೆ. ಎರಡು ವಾರಗಳ ಓಡಾಟ, ಊಟೋಪಚಾರ, ವಾಸ್ತವ್ಯ ಇತ್ಯಾದಿಗಳಿಗೆ ಏನು ಮಾಡುತ್ತೀರಿ ಎಂದು ತಲೆ ಕೆರೆದುಕೊಂಡರು. ಮೀಟಿಂಗಲ್ಲಿದ್ದ ಭೂತಾನಿನ ಮೂವರು ಪ್ರತಿನಿಧಿಗಳು ತಮ್ಮದೇ ಭಾಷೆಯಲ್ಲಿ ಆಗಾಗ ಮಾತಾಡಿಕೊಳ್ಳುತ್ತಿದ್ದರು. ತಪ್ಪು ತಿಳಿದುಕೊಳ್ಳಬೇಡಿ, ಈ ಭಾಷೆಯಲ್ಲಿ ಮಾತಾಡುವುದು ನಮಗೆ ಅನುಕೂಲ, ಅದಕ್ಕೆ ಮಾತಾಡಿಕೊಳ್ಳುತ್ತಿದ್ದೇವೆ ಅಷ್ಟೆ ಎಂದು ಆಗಾಗ ಹೇಳುತ್ತ ಅವರ ಮಾತಿನ ಸಾರಾಂಶವನ್ನು ಸೋನಂ ನಮಗೆ ಇಂಗ್ಲಿಷಲ್ಲಿ ಹೇಳುತ್ತಿದ್ದರು. ನಮಗದು ಒಂದು ಬಗೆಯ ವಿನೋದವಾಗಿತ್ತು. ಇವರು ಭೂತಾನಿನಲ್ಲಿ ಸಾಕಷ್ಟು ಓಡಾಡಬೇಕಾಗುತ್ತದೆ, ಪ್ರವಾಸಿ ಟ್ಯಾಕ್ಸಿಗಳಲ್ಲಿ ಓಡಾಡಿದರೆ ಸಿಕ್ಕಾಪಟ್ಟೆ ಖರ್ಚಾಗುತ್ತದೆ. ಗೈಡ್ ಇಲ್ಲದೆ ಎಲ್ಲಿಯೂ ಹೋಗುವಂತಿಲ್ಲ. ಆತನಿಗೂ ದಿನಕ್ಕಿಷ್ಟು ಎಂದು ಪಾವತಿಸಬೇಕಾಗುತ್ತದೆ. ಹೇಗೆ ಇದನ್ನೆಲ್ಲ ನಿಭಾಯಿಸುತ್ತಾರೆ ಎಂದು ಅವರು ಮಾತಾಡಿಕೊಳ್ಳುತ್ತಿದ್ದುದಾಗಿ ಆಮೇಲೆ ಅರ್ಥಮಾಡಿಕೊಂಡೆವು. ಕೊನೆಗೆ ಅವರೇ ಪರಿಹಾರವನ್ನೂ ಹೇಳಿದರು.
ಅದೇನೆಂದರೆ, ಸಿಎಲ್ಸಿಎಸ್ ಪ್ರಾಧ್ಯಾಪಕರಾದ ಪೆಮಾ ಅವರೇ ಯೋಜನೆಯ ಅಷ್ಟೂ ದಿನ ನಮ್ಮೊಂದಿಗಿರುವುದು! ಹೀಗೆ ಮಾಡೋಣ: ನಾನು ನಂದೇ ಕಾರಿನೊಂದಿಗೆ ಬರುತ್ತೇನೆ. ನಿಮ್ಮ ಜೊತೆಗಿರುತ್ತೇನೆ. ನನ್ನ ಕಾರಿನಲ್ಲೇ ಓಡಾಡೋಣ. ನಾನೇ ಡ್ರೈವರ್, ನಾನೇ ಗೈಡ್. ನನ್ನ ಕಾರಿಗೆ ಪೆಟ್ರೋಲ್ ಹಾಕಿಸುವ ಕೆಲಸ ಮಾತ್ರ ನಿಮ್ಮದು ಎಂದರು ಪೆಮಾ. ಅಬ್ಬ! ಎಂತಹ ಉದಾರಿ ಈ ಮನುಷ್ಯ ಎಂದು ಸಂತೋಷವಾಯಿತು. ಭೂತಾನಿಗೆ ಹೋಗುವ ಮೊದಲೇ ಅಲ್ಲಿನವರ ಸಜ್ಜನಿಕೆ, ಸಹಾನುಭೂತಿ, ಉಪಕಾರ ಮನೋಭಾವ ಒಂದೊಂದಾಗಿ ಅರ್ಥವಾಗುತ್ತಿತ್ತು.
(ಮುಂದುವರಿಯುವುದು)













