ಗುರುವಾರ, ಆಗಸ್ಟ್ 27, 2020

ಪುರಾಣ ಕೋಶ ವಿಹಾರಿ- ಅರ್ಥಧಾರಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ

ರಾಧಾಕೃಷ್ಣ ಕಲ್ಚಾರ್   

ಪ್ರಕಾಶಕರು: ಕನ್ನಡ ಸಂಘ ಕಾಂತಾವರ 

ವರ್ಷ: 2015

ಪುಟಗಳು: 52

ಕ್ರಯ: ರೂ.45


ಕಾಂತಾವರ ಕನ್ನಡ ಸಂಘವು ಮೂವತ್ತಕ್ಕೆ ಕಾಲಿಟ್ಟ ಸಂದರ್ಭ ನಾಡಿಗೆ ನಮಸ್ಕಾರ ಎಂಬ ಮಾಲಿಕೆಯಡಿಯಲ್ಲಿ ನಾವು ನಮಸ್ಕರಿಸಬೇಕಾದ ಅರ್ಥವಂತರ ಕುರಿತಾಗಿ ತಂದ ಪುಸ್ತಕಮಾಲೆಗಳ ಪೈಕಿ ಒಂದು. ಡಾ. ನಾ.ಮೊಗಸಾಲೆಯವರು ಮತ್ತು ಡಾ.ಬಿ ಜನಾರ್ದನ ಭಟ್ ಮತ್ತಿತರ ಸದಸ್ಯರ ಕ್ರಿಯಾಶೀಲತೆಗೂ ಬದ್ಧತೆಗೂ ಈ ಸಮಯದಲ್ಲಿ ಪ್ರಕಟಿಸಲ್ಪಟ್ಟ ನೂರಕ್ಕೂ ಮೀರಿದ ಪುಸ್ತಕಗಳು ಸಾಕ್ಷಿ. 

ಅರ್ಥಗಾರಿಕೆಯಲ್ಲಿ ಭಾಗವಹಿಸುತ್ತಿದ್ದ ಯುವ ಉಪನ್ಯಾಸಕನೊಬ್ಬ (ಲೇಖಕರೇ ಇರಬಹುದೇ ಎಂದು ನನಗನಿಸಿದೆ. ಇದ್ದರೂ ಇರಬಹುದೇನೋ!) ತಾನು ಅರ್ಥ ಹೇಳುವುದಿಲ್ಲ ಎಂಬ ನಿರ್ಧಾರ ತೆಗೆದುಕೊಂಡಾಗ ಮೂಡಂಬೈಲು ಶಾಸ್ತ್ರಿಗಳು ಆ ತರುಣನಿಗೆ ಬುದ್ಧಿಮಾತು ಹೇಳಿದ ಘಟನೆಯೊಂದಿಗೆ ಪುಸ್ತಕದ ಓದು ಮೊದಲುಗೊಳ್ಳುತ್ತದೆ. ಸಮರ್ಥನೊಬ್ಬ ಅರ್ಥ ಹೇಳದೇ ಉಳಿದರೆ ಅದರಿಂದ ನಷ್ಟವಾಗುವುದು ಒಳ್ಳೆಯ ಅರ್ಥವನ್ನು ಬಯಸುವ ಪ್ರಾಮಾಣಿಕ ಶ್ರೋತೃಗಳಿಗೆ ಎಂಬುದನ್ನು ಅರ್ಥೈಸಿಕೊಂಡ ಯುವಕ ಮುಂದೆ ಅರ್ಥಧಾರಿಯಾಗಿ ಗುರುತಿಸಲ್ಪಡುತ್ತಾನೆ. ಶಾಸ್ತ್ರಿಗಳ ವ್ಯಕ್ತಿತ್ವವನ್ನು ಸೂಚಿಸುವ ಎರಡನೆಯ ಉದಾಹರಣೆಯಾಗಿ ಎಳೆಯ ಅರ್ಥಧಾರಿಯೊಬ್ಬ ಅವರೆದುರು ಮಾತನಾಡಲಾಗದೇ ತಪ್ಪಿದಾಗ ಸಂದರ್ಭವನ್ನು ಸರಿದೂಗಿಸಿಕೊಂಡು ಹೋದ ಘಟನೆಯಿದೆ. ತಾಳಮದ್ದಳೆಯಲ್ಲಿ ಭಾಗವಹಿಸಬೇಕಾದ ಕಲಾವಿದರೊಬ್ಬರು ತಡವಾಗಿ ಬಂದುದನ್ನು ಅರ್ಥಗಾರಿಕೆಯಲ್ಲಿಯೇ ಉಲ್ಲೇಖಿಸಿದ ಅನುಭವ ಮೂರನೆಯ ಉದಾಹರಣೆ. ನಾಲ್ಕನೆಯದಾಗಿ ತಾಳಮದ್ದಳೆ ಕಲಾವಿದರಾಗ ಬಯಸುವವರಿಗೆ ಇರಬೇಕಾದ ಪೂರ್ವತಯಾರಿಯನ್ನು ಹೇಳುವ ಪಾಠವಾಗಿದೆ. ಮೂಡಂಬೈಲು ಶಾಸ್ತ್ರಿಗಳ ವ್ಯಕ್ತಿತ್ವ ಕಲ್ಚಾರರ ಕನ್ನಡಿಯಲ್ಲಿ ಪ್ರತಿಬಿಂಬಿಸಿದ ಪರಿ ಹೀಗೆ. 

’ಅವರ ಜೀವನ ವೃತ್ತವೆಂದರೆ ಅದು ತಾಳಮದ್ದಲೆ ರಂಗಭೂಮಿಯ ಇತಿಹಾಸವೂ ಹೌದು’ (ಪು.6) ಎಂಬುದರೊಂದಿಗೆ ತಾಳಮದ್ದಲೆ ಬೆಳೆದು ಬಂದ ಸಂಕ್ಷಿಪ್ತ ಇತಿಹಾಸದ ವಿವರಣೆಯಿದೆ. ಬಾಲ್ಯದಿಂದಲೇ ತಾಳಮದ್ದಲೆಯ ವಾತಾವರಣದಲ್ಲಿ ಬೆಳೆದ ಶಾಸ್ತ್ರಿಗಳಿಗೆ ಎಂಟನೆಯ ತರಗತಿಗೆ ಸೇರಿದಲ್ಲಿಂದ ತಾಳಮದ್ದಲೆಯ ದಿಗ್ಗಜರನ್ನು ನೋಡುವ, ಅವರೊಂದಿಗೆ ಒಡನಾಡುವ ಅವಕಾಶ ದೊರೆಯಿತು. ಅವರು ಶ್ರೇಷ್ಠ ಅರ್ಥಧಾರಿಗಳ ಸಾಲಿನಲ್ಲಿ ಸೇರಲು ಈ ಹಿನ್ನೆಲೆ ಕಾರಣವಾಯಿತೆನ್ನಬಹುದು. 

ಮೊದಲಿಗೆ ಭಾಗವತಿಕೆಯೊಂದಿಗೆ ಆರಂಭಗೊಂಡ ಅವರ ಕಲಾಯಾನ ಸಂಘಟಕನಾಗಿ, ಕಲಾವಿದನನ್ನಾಗಿ ಅವರನ್ನು ರೂಪುಗೊಳಿಸಿತು. ಘಟಾನುಘಟಿ ಅರ್ಥಧಾರಿಗಳ ಎದುರಿಗೆ ಸ್ತ್ರೀ ಪಾತ್ರಗಳನ್ನು ನಿರ್ವಹಿಸುತ್ತಾ, ಸ್ತ್ರೀಪಾತ್ರಗಳ ಕುರಿತು ಸರಿಯಾದ ಮಾಹಿತಿ, ಅರ್ಥಗಾರಿಕೆಯ ವೈವಿಧ್ಯ, ಸ್ವಭಾವ ವ್ಯತ್ಯಾಸಗಳು, ಮಾತಿನ ಲಯ ಇಂತಹ ಸೂಕ್ಷ್ಮಗಳ ಕುರಿತು ಖಚಿತ ತಿಳುವಳಿಕೆ ಹೊಂದುತ್ತಾ ಬೆಳೆದರು. ಶೇಣಿಯವರ ಪುರುಷ ಪಾತ್ರಗಳಿಗೆ ಸರಿಸಮಾನವಾಗಿ ಕಾಣಿಸಿಕೊಳ್ಳಬೇಕಾದರೆ ಶಾಸ್ತ್ರಿಗಳ ದಾರಿ ಸುಲಭವಿರಲಿಲ್ಲ. ಭಾವನೆಯೇ ಪ್ರಧಾನವಾಗುವಂತೆ ರೂಪಿಸಲಾಗುತ್ತಿದ್ದ ಪಾತ್ರಗಳನ್ನು ಬೌದ್ಧಿಕ ನೆಲೆಗೆ ಏರಿಸಿದವರು ಶಾಸ್ತ್ರಿಗಳು. ಸ್ತ್ರೀ ಪಾತ್ರಗಳಿಂದ ಪುರುಷಪಾತ್ರಗಳಿಗೂ ಅನಾಯಾಸವಾಗಿ ಒಗ್ಗಿಕೊಂಡ ಹಿರಿಮೆ ಅವರದು. 

ಅವರ ಜೀವನವೃತ್ತವನ್ನು ವಿವರಿಸುತ್ತ ಲೇಖಕರು ಶಾಸ್ತ್ರಿಗಳು ಮುಂದೆ ಶಿಕ್ಷಕರಾಗಿ, ಅಂಚೆಕಛೇರಿಯನ್ನೂ ನಡೆಸುತ್ತಾ, ಕೃಷಿಕರಾಗಿಯೂ ಸಂಸಾರಿಯಾಗಿಯೂ ಉತ್ತಮ ಬದುಕು ರೂಪಿಸಿಕೊಂಡ ಪರಿಯನ್ನು ಚಿತ್ರಿಸಿದ್ದಾರೆ. ಕೆಲವು ’ಸ್ವಾರಸ್ಯ ಪ್ರಸಂಗಗಳು’ ರಸವತ್ತಾಗಿವೆ. 

ಶೇಣಿ, ಸಾಮಗರ ಅರ್ಥಗಾರಿಕೆಯ ಕುರಿತು ಶಾಸ್ತ್ರಿಗಳ ಮಾತನ್ನು ಲೇಖಕರು ಉದ್ಧರಿಸುತ್ತಾರೆ: 'ಶೇಣಿಯವರದು ವೈಚಾರಿಕವಾದ ಪ್ರತಿಪಾದನೆ. ಅವರು ದಶರಥನಾದರೆ ಪ್ರಾರಂಭದಲ್ಲೇ ಚರ್ಚೆಗಿಳಿಯುತ್ತಿದ್ದರು. ಕೈಕೆ ವರ ಕೇಳಿದ ಬಳಿಕವೂ ಗದ್ಗದಿತರಾಗುವುದಿಲ್ಲ. ವರ ಕೇಳುವುದರ ಔಚಿತ್ಯವನ್ನೇ ಪ್ರಶ್ನಿಸುವುದು ಅವರ ಕ್ರಮ. ಸಾಮಗರಾದರೆ ಹಾಗಲ್ಲ. ಅವರು ವರವನ್ನು ಕೇಳಿದ ಮೇಲೆ ಪೂರ್ಣ ಬದಲಾಗಿ ದುಃಖಿಸುವ ದಶರಥನಾಗುತ್ತಾರೆ. ಆಮೇಲೆ ಚರ್ಚೆಯಿಲ್ಲ.’ (ಪು.35) 

ಭಾವುಕ ಹಾಗೂ ವೈಚಾರಿಕಗಳೆರಡರ ಕುರಿತು ಅವರ ಅಭಿಪ್ರಾಯವಿದು,  'ಕೆಲವು ಕಡೆ ಬೌದ್ಧಿಕವಾದ ಮಾತುಗಾರಿಕೆ ಅನಿವಾರ್ಯ. ಇಲ್ಲದಿದ್ರೆ ನಾವು ಸಭೆಗೆ ಏನೂ ಕೊಟ್ಟ ಹಾಗಾಗುವುದಿಲ್ಲ. ತಾಳಮದ್ದಳೆ ಕೇಳಿದ ಮೇಲೆ ಆಲೋಚನೆಗೆ ಏನಾದರೂ ಬೇಕು ಅನ್ನುವವರಿದ್ದಾರೆ. ಅವರ ಸಮಾಧಾನಕ್ಕೆ ಬೌದ್ಧಿಕ ಚರ್ಚೆ ಅಗತ್ಯ, ಶೇಣಿಯವರು ಹಾಗೆ ಮಾಡ್ತಾ ಇದ್ರು. ಹಾಗೇಂತ ಭಾವನಾತ್ಮಕವಾಗಿ ಮಾತನಾಡದಿದ್ರೆ ಅದು ಕಲೆಯಾಗುವುದಿಲ್ಲ. ಅದಕ್ಕಾಗಿ ಎಲ್ಲಿ, ಯಾವುದಕ್ಕೆ ಮಹತ್ವ ಕೊಡಬೇಕೋ ಅದನ್ನು ನಾವು ತಿಳಿದು ಮಾತನಾಡಬೇಕಾಗುತ್ತದೆ.’ (ಪು.36)

ಅರ್ಥಗಾರಿಕೆಯ ಯೋಗ್ಯತೆ ಹೆಚ್ಚಿಸಿಕೊಳ್ಳಲು ಶಾಸ್ತ್ರಿಗಳು ನೀಡಿದ ಅಮೂಲ್ಯ ಸಲಹೆಗಳೂ ಇಲ್ಲಿ ದಾಖಲಾಗಿವೆ. ಅಲ್ಲದೇ ಅವರ ಸಾಹಿತ್ಯದ ಕುರಿತೂ ಟಿಪ್ಪಣಿಗಳಿವೆ. 

ಪುಸ್ತಕ ಗಾತ್ರದಲ್ಲಿ ಚಿಕ್ಕದಾದರೂ ವಿಷಯಮಂಡನೆ ಪ್ರಬುದ್ಧವಾಗಿರುವುದರಿಂದ ನಿಧಾನವಾಗಿ ಓದಿ ಅರ್ಥಮಾಡಿಕೊಳ್ಳಬೇಕಾದ ನಿರೂಪಣೆ! 

ಮುಂದಿನ ಓದು ನಿಮ್ಮದು! 

ಆರತಿ ಪಟ್ರಮೆ 


ಬುಧವಾರ, ಆಗಸ್ಟ್ 26, 2020

ಚೆಂಡೆ ಮದ್ದಳೆಗಳ ನಡುವೆ


ಮದ್ದಳೆಗಾರ ಬಿ. ಗೋಪಾಲಕೃಷ್ಣ ಕುರುಪ್ ಅವರ ಆತ್ಮಕಥನ

ಪ್ರಕಾಶಕರು: ಕನ್ನಡ ಸಂಘ, ಕಾಂತಾವರ

ವರ್ಷ: 2004

ಪುಟಗಳು: 158

ಕ್ರಯ: ರೂ. 75

ಡಾ. ನಾ. ಮೊಗಸಾಲೆಯವರ ಆತ್ಮೀಯ ಆಗ್ರಹ ಮೇರೆಗೆ ರೂಪುತಾಳಿದ ಕೃತಿ. ಆತ್ಮವೃತ್ತಾಂತ ಬರೆಯುವಷ್ಟು ದೊಡ್ಡ ಬದುಕೇ ತನ್ನದು? ಎಂಬ ಪ್ರಶ್ನೆ ತನ್ನೊಳಗಿದ್ದರೂ ಯಾರೊಬ್ಬರೂ ದೊಡ್ಡವರಲ್ಲ, ಯಾರೊಬ್ಬರೂ ಸಣ್ಣವರಲ್ಲ, ನೋಡುವ ದೃಷ್ಟಿಕೋನದಿಂದ ದೊಡ್ಡವರು, ಸಣ್ಣವರು ಎಂಬ ಮೊಗಸಾಲೆಯವರ ತರ್ಕಕ್ಕೆ ಕಟ್ಟುಬಿದ್ದು ಮುಂದೆ ರಾಘವ ನಂಬಿಯಾರರ ಉತ್ತೇಜನದಿಂದ ಅಂತರಂಗವನ್ನು ತೆರೆದಿಟ್ಟವರು ಶ್ರೀ ಕುರುಪ್. 

ಕಠಿಣವಾದ ಬಾಲ್ಯದ ದಿನಗಳಲ್ಲೂ ಆರ್ಥಿಕ ಬಡತನವಿತ್ತಾದರೂ ತಂದೆ ತಾಯಿಯರ ಅಕ್ಕರೆ, ಪ್ರೀತಿಯಿಂದ ಮದ್ದಳೆಯ ಮೇಲೆ ಹೆಚ್ಚಿನ ಮಮಕಾರ ಬೆಳೆಸಿಕೊಂಡರು. ತಂದೆಯವರೇ ಮದ್ದಳೆಯ ಮೊದಲ ಗುರುಗಳೂ ಹೌದು. ಒತ್ತೆಕೋಲದ ಸಂದರ್ಭ ಅವರು ಭಾಗವತಿಕೆ ಮಾಡಿದ್ದು, ದೃಷ್ಟಿ ತಗುಲಿ ಮಾತು ತೊದಲಲಾರಂಭಿಸಿ ಬಳಿಕ ನೂಲು ಮಂತ್ರಿಸಿ ಕಟ್ಟಿದ ನಂತರ ಸರಿಹೋದ ಘಟನೆ, ಅವರೊಳಗಿನ ಕಲಾವಿದನನ್ನು ಎದ್ದು ನಿಲ್ಲಿಸಿತ್ತು. 

ದನ, ಎಮ್ಮೆ, ಕೋಣಗಳನ್ನು ಮೇಯಿಸುತ್ತಲೂ, ಕೃಷಿಯನ್ನು ಇತರ ಪ್ರಾಣಿಗಳಿಂದ ರಕ್ಷಿಸುತ್ತಲೂ ಕಳೆಯಬೇಕಿದ್ದ ದಿನಗಳಲ್ಲೂ ಕಲೋಪಾಸನೆ ಮನದಲ್ಲಿ ಇದ್ದೇ ಇತ್ತು. ಸಂಜೆಯ ವೇಳೆ ಮಹಾಭಾರತ ಗ್ರಂಥದ ಓದು, ಅವಕಾಶವಿದ್ದಾಗ ತಾಳಮದ್ದಳೆಗಳಲ್ಲಿ ಭಾಗವತಿಕೆ ಅವರ ಬದುಕಿನ ಭಾಗವಾಗಿತ್ತು. ನಾರಂಪಾಡಿ ಸುಬ್ಬಯ್ಯ ಶೆಟ್ಟಿಯವರ ಶಿಷ್ಯನಾಗಿ ಅವರ ಅನುಭವ ಬಹಳ ದೊಡ್ಡದು. 

ಕೆಲವು ಮೇಳಗಳಲ್ಲಿ ಮದ್ದಳೆಗಾರನಾಗಿ ಅನುಭವ ಪಡೆದ ನಂತರ ಧರ್ಮಸ್ಥಳ ಮೇಳದಲ್ಲಿ ಪಡೆದುಕೊಂಡ ಅವಕಾಶ ಅವರ ಪ್ರತಿಭೆಗೆ ಹೆಚ್ಚಿನ ಅವಕಾಶವನ್ನೊದಗಿಸಿತು. 'ನೀನೆಷ್ಟು ಚೆನ್ನಾಗಿ ಮದ್ದಳೆ ಬಾರಿಸಿದರೂ ಚೆಂಡೆ ಬಾರಿಸಲು ಕಲಿಯದಿದ್ದರೆ ಮದ್ದಳೆಗಾರನಾಗುವುದಿಲ್ಲ' ಎಂದ ನೆಡ್ಲೆ ನರಸಿಂಹ ಭಟ್ಟರೇ ಅವರನ್ನು ಶಿಷ್ಯನನ್ನಾಗಿ ಸ್ವೀಕರಿಸಿದರು. ತಾನು ಕಲಿಯುವಾಗಲೇ ಇನ್ನೊಬ್ಬರಿಗೆ ಕಲಿಸಬಲ್ಲ ಕೌಶಲ ಅವರಲ್ಲಿದ್ದುದನ್ನು ಹಿರಿಯ ಕಲಾವಿದರು ಗುರುತಿಸಿ ಹಾರೈಸಿದ್ದರು. 

ಬದುಕು ಹಲವರಿಗೆ ಹಲವು ರೀತಿಯ ಸವಾಲುಗಳನ್ನೊಡ್ಡುತ್ತದೆ, ಕಾಡುತ್ತದೆ ಎಂಬುದಕ್ಕೆ ಕುರುಪ್ ರ ಆತ್ಮಕಥೆಯೊಂದು ಸಾಕ್ಷಿ. ಮನೆಯ ಕಷ್ಟಗಳು, ಕಲೆಯ ಮೇಲಿನ ಶ್ರದ್ಧೆ, ಹಿರಿಯ ಕಲಾವಿರುಗಳ ಒಡನಾಟ ಎಲ್ಲದರ ನಡುವೆಯೂ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದ, ಹಣಕಾಸಿನ ದೃಷ್ಟಿಯಲ್ಲಿಯೂ ತೊಂದರೆಗೀಡು ಮಾಡಿದ ಒಡನಾಡಿಗಳೂ ಇಲ್ಲದಿಲ್ಲ. ತಮ್ಮದೇ ಆದ ಜಮೀನು ಮಾಡಿದ್ದೂ ಒಂದು ಸಾಹಸಗಾಥೆಯೇ. 

ಅನಾರು, ಧರ್ಮಸ್ಥಳ, ನಿಡ್ಲೆ, ಬರೆಂಗಾಯ, ಅರಸಿನಮಕ್ಕಿ, ಶಿಶಿಲದವರೆಗೂ ಹತ್ತು ಹಲವರಿಗೆ ಚೆಂಡೆಮದ್ದಳೆಗಳ ಗುರುವಾದ ಕುರುಪ್ ಅವರು ಮುಂಬೈಗೂ ಹಿಮ್ಮೇಳ ಗುರುಗಳಾಗಿ ಹೋದುದು ಅರ್ಹತೆಗೆ ಸಂದ ಮನ್ನಣೆಯೇ ಸರಿ. ಶೇಣಿ ಗೋಪಾಲಕೃಷ್ಣ ಭಟ್ಟರ ಹರಿಕತೆಗೆ ಮೃದಂಗ ನುಡಿಸಿದ ಅನುಭವವೂ ಕುರುಪರಿಗಿದೆ. 

1983ರಲ್ಲಿ ಶಿಶಿಲದ ಗಿರಿಜನ ಆಶ್ರಮ ಶಾಲೆಯ ವಠಾರದಲ್ಲಿ ಬುಡಕಟ್ಟು ಜನಾಂಗದವರಿಗೆ ಯಕ್ಷಗಾನದ ಮುಮ್ಮೇಳವನ್ನು ಕಲಿಸಿ ಕುಡಿಯರ ಸಂಸ್ಕೃತಿಯಲ್ಲಿ ಒಂದು ದಾಖಲಾರ್ಹ ಕಾರ್ಯ ಮಾಡಿದರು. ಪ್ರೊ. ರಾಘವೇಂದ್ರ ಆಚಾರ್ ಅವರ ಕೃತಿಯಲ್ಲಿ ಇದು ದಾಖಲಾಗಿದೆ ಎಂಬುದು ಅವರಿಗೆ ಸಂತಸದ ಸಂಗತಿ. ಮುಂದೆ ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ಗುರುಗಳಾಗುವ ಯೋಗವೂ ಕುರುಪರಿಗೆ ಒದಗಿ ಬಂತು-ನೆಡ್ಲೆಯವರ ನಿರ್ದೇಶನದಲ್ಲಿ. ಅದೇ ಸಂದರ್ಭದಲ್ಲಿ ಮಾಡಿದ ಪಾಠಗಳನ್ನೆಲ್ಲಾ ಶಿಸ್ತುಬದ್ಧವಾಗಿ ಜೋಡಿಸುತ್ತಾ ಪ್ರಾಥಮಿಕ ಯಕ್ಷಗಾನ ಪಾಠಗಳು ಎಂಬ ಪುಸ್ತಕವನ್ನು ಬರೆದವರು ಇವರು. 

ಕಷ್ಟಪಟ್ಟು ಮಾಡಿದ ಭೂಮಿಯನ್ನು ಮಾರುವ ಪರಿಸ್ಥಿತಿ ಬಂದಾಗ ಕೃಷಿಕನ ಜೀವನವು ಕಲಾವಿದನ ಜೀವನದ ಹಾಗೆ ಅತಂತ್ರದ್ದು ಮತ್ತು ಭದ್ರತೆಯದ್ದಲ್ಲ ಎಂಬ ವಿಷಾದ ಅವರನ್ನು ಕಾಡಿದೆ. ಈ ಆಸ್ತಿಗಾಗಿ ತಾನೇ ತಾನು ಕಲಾವಿದನ ಜೀವನಕ್ಕೆ ವಿದಾಯ ಹೇಳಿದ್ದು...ನನ್ನ ತಂದೆಯವರ ಕಾಲದಲ್ಲಿ ಒಂದರ್ಧ ಎಕರೆ ಜಮೀನಿದ್ದರೆ ಅದು ದೊಡ್ಡ ಸೌಭಾಗ್ಯ. ಈಗ ಆಸ್ತಿ ಹೊಂದಿರುವುದು ಶಾಪ (ಪು.90) ಎಂಬ ಮಾತು ಇಂದು ಮಕ್ಕಳನ್ನೆಲ್ಲಾ ದೂರದ ಅಮೆರಿಕಾಗೋ, ಬೆಂಗಳೂರಿಗೋ ಕಳಿಸಿ, ಜಮೀನು ನೋಡಿಕೊಳ್ಳಲು ಕಸುವಿಲ್ಲದೇ ಮಾರಲು ಮನಸ್ಸಿಲ್ಲದೇ ನೊಂದುಕೊಳ್ಳುವ ಎಲ್ಲ ಹಿರಿಯರ ಅಂತರಂಗದ ಮಾತು. 

ನಾನು ಹುಟ್ಟಿನಿಂದ ತೀರಾ ಬಡವ, ನನ್ನ ತಂದೆಯವರಿಗೆ ಅಂಗೈಯಗಲದ ಭೂಮಿಯೂ ಇರಲಿಲ್ಲ. ನನ್ನ ಓದು ಶಿಕ್ಷಣ ಎಲ್ಲ ನನ್ನ ಕನಸಿನ ಒಳಗೆ ಬರಲೇ ಇಲ್ಲ. ಶಾಲಾ ಶಿಕ್ಷಣವೆನ್ನುವುದು ಏನೆಂದು ನಾನು ಅರಿತವನಲ್ಲ. ಆದರೆ ನಾನೇ ಶಿಕ್ಷಕನಾಗಿ ಹತ್ತಾರು ಮಂದಿಗೆ ಯಕ್ಷಗಾನದ ಹಿಮ್ಮೇಳ ಮುಮ್ಮೇಳಗಳನ್ನು ಕಲಿಸಿದೆ. ಅವರಿಗಾಗಿಯೇ ಪಠ್ಯ ಪುಸ್ತಕಗಳನ್ನು ರಚಿಸಿದೆ. ಇದು ದೇವರು ನನ್ನನ್ನು ಕುಣಿಸಿದ ಬಗೆ! (ಪು.94) ಏನೂ ಮಾಡಲಿಕ್ಕೆ ಆಗದವನು ಆಟದ ಪೆಟ್ಟಿಗೆ ಹೊರಬಹುದು ಎಂಬ ಗಾದೆ ಚಾಲ್ತಿಯಲ್ಲಿದ್ದ ಕಾಲಕ್ಕೆ ತಾನೊಬ್ಬ ಕಲಾವಿದನಾಗಿ, ಗುರುವಾಗಿ ಬೆಳೆದ ಗೋಪಾಲಕೃಷ್ಣ ಕುರುಪರ ಜೀವನದ ಸಾಧನೆ ಅಪೂರ್ವ. 

ಕಲಾವಿದನಲ್ಲಿ ಯೌವನ ಇರುವಾಗ, ಉತ್ಸಾಹ ಇರುವಾಗ ಸಮಾಜ ಅವರನ್ನು ಕೊಂಡಾಡುತ್ತದೆ. ಆದರೆ ಆತ ದೈಹಿಕವಾಗಿ ದುರ್ಬಲನಾದಾಗ ಅವನು ಜೀವಂತವಾಗಿದ್ದಾನೆ ಎಂಬುದನ್ನು ಅವನಿಂದ ಸಂತೋಷ ಪಡೆದವರೇ ಮರೆಯುವುದು ಕಲಾಜೀವನದ ವಿಪರ್ಯಾಸ. (96) ಎಂಬ ಮಾತು ಎಲ್ಲ ಕಲಾಭಿಮಾನಿಗಳಿಗೆ ಸಣ್ಣ ಎಚ್ಚರಿಕೆ ಹೌದಲ್ಲ? 

ದೇವಿ ಮಹಾತ್ಮೆ ಪ್ರಸಂಗದಲ್ಲಿ ದೇವಿಯನ್ನು ಬಾಯಿತಾಳ ಹೇಳಿ ಕುಣಿಸುವುದನ್ನು ಈಚೆಗೆ ಒಂದು ಆಟದಲ್ಲಿ ನೋಡಿದೆ. ..ಜನರಿಗೆ ಸಂತೋಷ ಸಿಗಲಿ ಎಂದು ದೇವಿಯನ್ನು ಕುಣಿಸುವುದು ಆ ಪಾತ್ರದ ಗೌರವದ ದೃಷ್ಟಿಯಿಂದಲೂ ಯಕ್ಷಗಾನದ ಪರಂಪರೆಯ ದೃಷ್ಟಿಯಿಂದಲೂ ತಪ್ಪು. ಆದರೆ ಇದನ್ನು ಯಾರಿಗೆ ಯಾರು ಹೇಳಬೇಕು? ಹೇಳಿದರೆ ಯಾರು ಕೇಳುತ್ತಾರೆ? (ಪು.97) ಇಂದಿನ ದಿನಗಳಲ್ಲಿ ಅನೇಕ ಮಂದಿ ಪಾತ್ರದ ಔಚಿತ್ಯವನ್ನು ಬದಿಗಿಟ್ಟು, ಎಲ್ಲಾ ಪದ್ಯಗಳಿಗೂ ನಮೂನೆವಾರು ಕುಣಿಯುವ ರೀತಿಯೊಂದನ್ನು ರೂಢಿ ಮಾಡಿಕೊಳ್ಳುತ್ತಿದ್ದಾರಲ್ಲ, ಅವರೆಲ್ಲರೂ ಗಮನಿಸಬೇಕಾದ ಅಂಶಗಳಿವು. 

ಪೌರಾಣಿಕ ಪ್ರಸಂಗಗಳಿಂದ ಕಲಾವಿದನ ಬೌದ್ಧಿಕ ಮಟ್ಟವೂ ಹೆಚ್ಚು ಬೆಳೆಯುತ್ತದೆ. ಕಲಾವಿದನೂ ಬೆಳೆಯುತ್ತಾನೆ. (ಪು.97) ಎಂಬುದೂ ಕೂಡಾ ಕಲಾವಿದರಿಗಿರಬೇಕಾದ ಪುರಾಣಜ್ಞಾನದ ಆಳವಿಸ್ತಾರಗಳನ್ನು ಸೂಚಿಸುತ್ತವೆ. 

ಅನುಬಂಧದಲ್ಲಿ ಅವರ ಹಲವು ಸನ್ಮಾನದ ಭಾವಚಿತ್ರಗಳೂ, ಭಾಗವತಿಕೆಯ ಪಾಠದ ವಿವರಣೆಯೂ ಇದೆ.  

ಮುಂದಿನ ಓದು ನಿಮ್ಮದು! 

ಆರತಿ ಪಟ್ರಮೆ


   

ಮಂಗಳವಾರ, ಆಗಸ್ಟ್ 25, 2020

ಯಕ್ಷನಟ ಸಾರ್ವಭೌಮ

(ಸಂ) ಕೆ.ಪಿ. ರಾಜಗೋಪಾಲ ಕನ್ಯಾನ 

ಪ್ರಕಾಶಕರು: ಉಷಾ ಎಂಟರ್ ಪ್ರೈಸಸ್, ಬೆಂಗಳೂರು. 

ವರ್ಷ: 2005

ಪುಟಗಳು: 200

ಕ್ರಯ: ರೂ.95

ಯಕ್ಷಗಾನ ಕ್ಷೇತ್ರದ ಶಕಪುರುಷರೆಂದೇ ಖ್ಯಾತಿವೆತ್ತ ಕುರಿಯ ವಿಠಲ ಶಾಸ್ತ್ರಿಗಳ ಜೀವನಚರಿತ್ರೆ ಜೊತೆಗೆ ಕುರಿಯ ವಿಠಲ ಶಾಸ್ತ್ರಿ ವಿರಚಿತ ಲೇಖನಗಳು ಹಾಗೂ ಕುರಿಯ ಶಾಸ್ತ್ರಿಗಳ ಕುರಿತಾದ ಕವಿತೆಗಳ ಅಪೂರ್ವ ಸಂಗ್ರಹ. 

ವಿದ್ವಾನ್ ತಾಳ್ತಜೆ ಕೃಷ್ಣಭಟ್ಟ, ಪಂಜಳ ಅವರು ’ಬೇರೆಯೂರಲ್ಲಿ ನೀ ಹುಟ್ಟಬೇಕಿತ್ತು, ನಿನ್ನ ಗೌರವದ ಮಣೆ ಬೇರೆ ಸಲಲಿತ್ತು’ ಎಂಬುದರೊಂದಿಗೆ ವಿಠಲ ಶಾಸ್ತ್ರಿಗಳ ಜೀವನ ಚರಿತ್ರೆಯನ್ನು ಆರಂಭಿಸಿದ್ದು ಅಂಥಾ ಶ್ರೇಷ್ಠ ಕಲಾವಿದನಿಗೆ ಸಿಗಬೇಕಾದ ಗೌರವ ಮನ್ನಣೆ ದೊರೆಯಲಿಲ್ಲವೆಂಬುದನ್ನು ಧ್ವನಿಸುತ್ತದೆ. ರಂಗಸ್ಥಳವನ್ನು ತನ್ನದೇ ಆದ ರೀತಿಯಲ್ಲಿ ಆಳಿದ, ಅನೇಕ ಶಿಷ್ಯರನ್ನು ರೂಪಿಸಿದ, ಯಕ್ಷಗಾನಕ್ಕೆ ತನ್ನದೇ ಆದ ಹಲವು ಕೊಡುಗೆಗಳನ್ನು ಕೊಡುತ್ತ ಬೆಳೆದ ಈ ವಾಮನನ ಕಥೆ ಆಸಕ್ತಿದಾಯಕ. 

ಅಂಗದನಾಗಿ ಹಿರಿಯ ಬಲಿಪಜ್ಜನ ಅನುಮತಿಯ ಮೇರೆಗೆ ರಂಗಸ್ಥಳವನ್ನು ಪ್ರವೇಶಿದವರು ಇಡಿಯ ರಂಗವನ್ನಾಳಿದ್ದೊಂದು ಅದ್ಭುತ ಇತಿಹಾಸ. ಒಂದೆರಡು ಪಾತ್ರಗಳನ್ನು ಮಾಡಿದ ತಕ್ಷಣಕ್ಕೆ ಕಲಾವಿದರೆಂದು ಮೆರೆಯುವ ಹೊಸ ತಲೆಮಾರಿನ ಮಕ್ಕಳು ಈ ತೆರನ ಹಿರಿಯ ಕಲಾವಿದರ ಜೀವನಗಾಥೆಯನ್ನು ಅಗತ್ಯವಾಗಿ ಓದಲೇಬೇಕು. ನಾವಿಂದು ಸುಲಲಿತವಾಗಿ ಹೆಜ್ಜೆಯಿರಿಸುವ ರಂಗದಲ್ಲಿ ಹಿಂದಿನ ತಲೆಮಾರಿನ ಜೀವವೇ ಹೇಗೆ ತೇದು ತಳಪಾಯ ರೂಪಿಸಿದೆ ಎಂಬುದು ನಮಗರ್ಥವಾಗಬೇಕು. 

ಬ್ರಹ್ಮಕಪಾಲದ ರುದ್ರ, ವಿಶ್ವಾಮಿತ್ರ ಮೇನಕೆಯ ವಿಶ್ವಾಮಿತ್ರ, ಪಾದುಕಾ ಪ್ರದಾನದ ಭರತ, ಕರ್ಣ, ಕಂಸ, ವಲಲ, ಹಿರಣ್ಯಕಶಿಪು ಹೀಗೆ ಶಾಸ್ತ್ರಿಗಳಿಗೆ ಹೆಸರು ತಂದುಕೊಟ್ಟ ಅಮೋಘ ಪಾತ್ರಗಳ ನಿರ್ವವಣೆಯ ವೈಖರಿಯನ್ನು ಓದುವಾಗ ರೋಮಾಂಚನವಾಗದಿದ್ದೀತೇ? 

 ಶಾಸ್ತ್ರಿಗಳ ಅರ್ಥಗಾರಿಕೆಯ ಕೆಲವು ಝಲಕುಗಳೂ ಈ ಪುಸ್ತಕದಲ್ಲಿವೆ. ’ಚಂದ್ರನು ಸಕಲ ಲೋಕಾನಂದದಾಯಕನು. ಅವನು ಓಷಧಾನಾಂಪತಿಃ ಅನ್ನಿಸಿ, ನಮ್ಮ ಸಮಸ್ತರ ಕ್ಷೇಮದಾಯಕನೂ ಆಗಿರುವುದರಿಂದ ಇದಿರುಗೊಂಡು ಮರ್ಯಾದೆಯಿಂದ ಆದರವೀಯುತ್ತಾರೆ. ಆದರೆ ಕಮಲಗಳು ಮಾತ್ರ ಮತ್ಸರದಿಂದ ಸಂಕುಚಿತಗೊಳ್ಳುತ್ತವೆ. ಇದನ್ನು ಕಂಡು ತಮಗೆ ಸದಾ ಕಾಲವೂ ಆನಂದೋತ್ಸಾಹವೀಯುವ ದೇವನಿಗೆ ಅಪಮಾನವಾಯಿತೆಂದು ತಿಳಕೊಂಡ ಮದಗಜಗಳು ಸರೋವರವನ್ನು ಹೊಕ್ಕು ಆ ಸಂಕುಚಿತ ಕಮಗಳನ್ನು ಕಿತ್ತೆಸೆಯುತ್ತವೆ. ತದ್ರೀತಿ, ಕುರುಕುಲ ಚಂದ್ರಮನಾದ ನಿನ್ನ ಕೀರ್ತಿ ಮತ್ತು ತೇಜೋಚಂದ್ರಿಕೆಗೆ ಸಂಕುಚಿತ ವೃತ್ತಿ ಪಡತಕ್ಕ ಪಾಂಡವ ಕಮಲಗಳನ್ನು ಮತ್ತಗಜಪ್ರಾಯನಾದ ಕರ್ಣನು ಇಂದಿನ ರಣಕಣ ಸರಸ್ಸನ್ನು ಹೊಕ್ಕು ಕಿತ್ತೆಸೆದು ತಮ್ಮ ಘನ ಗೌರವಕ್ಕೆ ಕುಂದನ್ನೆಣಿಸುವವರು ಆರೂ ಇಲ್ಲವೆಂದೆನಿಸುತ್ತಿದ್ದನು. - ಕರ್ಣನಾಗಿ ಕುರಿಯ ಶಾಸ್ತ್ರಿಗಳು. (ಪು.37, 38) 

ಯಕ್ಷಗಾನದಲ್ಲಿ ಹಲವಾರು ಸುಧಾರಣೆಗಳನ್ನು, ಬದಲಾವಣೆಗಳನ್ನು ಮಾಡಿದ ಕುರಿಯ ಶಾಸ್ತ್ರಿಗಳು 1958ರಲ್ಲಿ ರಷ್ಯಾದ ಕ್ರುಶ್ವೇವು ಬುಲ್ಗಾನಿನ್ ಬೆಂಗಳೂರಿಗೆ ಬಂದಾಗ ಹದಿಮೂರು ನಿಮಿಷಗಳ ಯಕ್ಷಗಾನ ಪ್ರದರ್ಶನವನ್ನು ನೀಡಿ ಸೈ ಎನಿಸಿಕೊಂಡದ್ದೊಂದು ಓದುವಾಗ ಖುಷಿಯಾಗದಿದ್ದೀತೇ? ಅವರನ್ನು ಮೆಚ್ಚಿದವರು ಅದೆಷ್ಟು ಮಂದಿ!  

’ಕಲೆಯೆಂಬುದು ಪರಮಾತ್ಮ, ಅದುವೇ ದಿವ್ಯಾನಂದ, ಪರಮಾನಂದ. ಅದರಲ್ಲಿ ಶ್ರಮಿಸಿದವನು ಅದರಿಂದ ನಿವೃತ್ತಿ ಹೊಂದಿದರೂ, ನದಿಯ ನೀರನ್ನು ಕಟ್ಟಿಸಿದಂತೆ, ಸಮಯ ಬಂದಾಗ ಅದು ಮೇಲಿಂದ ಧುಮುಕಿ ಮುಂದೆ ಹೋಗುವ ತನ್ನ ಪ್ರವೃತ್ತಿಯಿಂದ ವಿಮುಖವಾಗಲಾರದು. ಕಲಾಗಾರರನ್ನು ತಡೆದರೂ ಅಂತೆಯೇ.’ (ಪು. 50) ದಕ್ಷಯಜ್ಞದ ಈಶ್ವರನ ಪಾತ್ರ ನಿರ್ವಹಿಸುತ್ತಲೇ ಹೃದಯಾಘಾತಕ್ಕೊಳಗಾಗಿ ರಂಗಸ್ಥಳದಲ್ಲಿ ಕುಸಿದ ಅವರು ಚೇತರಿಸಿಕೊಂಡರೂ ಮುಂದೆ ಕಲಾವಿದನಾಗಿ ರಂಗದಲ್ಲಿ ಮೆರೆಯಲಾಗದ ಹತಾಶೆಗೆ ಬಹುವಾಗಿ ಸೊರಗಿದವರು. ಬಳಿಕ ನಾಟ್ಯಗುರುಗಳಾಗಿ ಕೆಲಸಮಯ ದುಡಿದರು.  

ಅವರ ಪಾತ್ರವೈಖರಿಗಳನ್ನು ಕಂಡವರೆಲ್ಲರೂ ’ಪ್ರಪಂಚವು ಮಹಾಪುರುಷರನ್ನು ಅವರ ಜೀವಿತಕಾಲದಲ್ಲಿ ಪೂರ್ಣವಾಗಿ ಗುರುತಿಸುವುದಿಲ್ಲ.’ (ಪು.51) ಎಂದು ಉದ್ಗರಿಸುವುದು ಶಾಸ್ತ್ರಿಗಳಿಗೆ ಅರ್ಹವಾಗಿ ದೊರೆಯದೇ ಹೋದ ಮನ್ನಣೆಯನ್ನು ನೆನಪಿಸುತ್ತದೆ. 

ವಿಠಲಶಾಸ್ತ್ರಿಗಳ ವಿಚಾರಧಾರೆ ಎಂಬ ಅವರ ಸಂದರ್ಶನ ಲೇಖನ ನಮಗೆಲ್ಲ ಮಾರ್ಗದರ್ಶಿ. ಸ್ವತಃ ನಾಟಕಗಳ ಪ್ರಭಾವದಿಂದ ಯಕ್ಷಗಾನದಲ್ಲಿ ಅನೇಕ ಮಾರ್ಪಾಟುಗಳನ್ನು ಅವರು  ತಂದರಾದರೂ ’ಯಕ್ಷಗಾನವು ಕೇವಲ ಪೌರಾಣಿಕ ಕಥೆಗಳಿಗಾಗಿ, ನೀತಿ ಜಾಗೃತೆಗಾಗಿ ಇರುವ ಕಲೆ. ಅದನ್ನು ಬದಲಿಸಿ ಸುಧಾರಿಸುವುದು ಅದರ ಕೊಲೆ.’ (ಪು. 63) ಎಂಬ ಪ್ರಜ್ಞೆ ಅವರಲ್ಲಿ ಸದಾ ಜಾಗೃತವಾಗಿತ್ತು.  

ಯಕ್ಷಗಾನದಲ್ಲಿ ನೃತ್ಯಾಭಿನಯಗಳೇ ಬಹಳ ಮುಖ್ಯ ಎಂದು ಅವರು ಬಲವಾಗಿ ನಂಬಿದ್ದರು. ’ಮಾತು ಬಲ್ಲವರೆಲ್ಲ ಇಂದು ಯಕ್ಷಗಾನ ರಂಗ ಪ್ರವೇಶ ಮಾಡುತ್ತಾರೆ, ಕಲಾಗಾರರಾಗಿ ಮೆರೆಯುತ್ತಾರೆ ಎಂಬುದು ಭ್ರಮೆ. ಕಲೆಯ ನಿಜತ್ವವನ್ನು ತಿಳಿದವರು ಬರಿಯೆ ವಾಗ್ಝರಿಗೆ ಮೆಚ್ಚಲಾರರು.’ (ಪು. 65) ನಾಟ್ಯ ಅಭ್ಯಸಿಸದೇ ಕೇವಲ ಮಾತಿನ ಮೋಡಿಯಿಂದ ಕಲಾವಿದರಾದವರ ಬಗ್ಗೆ ಶಾಸ್ತ್ರಿಗಳ ಖಡಾಖಂಡಿತ ನಿಲುವು ಇದು. ನಿಜವಾಗಿಯೂ ಕಲೆಯನ್ನು ನೋಡಲು ಕಲಾಭಿಜ್ಞತೆ ಬೇಕು; ಸಜ್ಜನಿಕೆಯಿರಬೇಕು; ಅಂತಚ್ಛಕ್ಷುವನ್ನು ತೆರೆದು ನೋಡಬೇಕು. ಅದು ಕಾಣಸಿಗುವುದು...ಕಲಾಗಾರನ ಕರ್ಮಸಿದ್ಧಿಯಲ್ಲಿ-ಅದರ ಶುದ್ದಿಯಲ್ಲಿ. ಸಂಸ್ಕಾರವಂತ ಪ್ರೇಕ್ಷಕರೂ ಕಲೆಯ ಉನ್ನತೀಕರಣಕ್ಕೆ ಬಹಳ ಮುಖ್ಯ ಎಂಬುದು ಅವರ ಅಭಿಪ್ರಾಯ. 

ಕುರಿಯ ವಿಠಲಶಾಸ್ತ್ರಿ ವಿರಚಿತ ಲೇಖನಗಳು ಹಿರಿಯ ಬಲಿಪರೊಂದಿಗಿನ ಅವರ ಒಡನಾಟ, ಅರ್ಥದಾರಿ ಕಿಲ್ಲೆಯವರ ವ್ಯಕ್ತಿತ್ವ, ಗೆಜ್ಜೆಗುರು ಶಿವರಾಮ ಕಾರಂತರೊಂದಿಗಿನ ಅವರ ಬಾಂಧವ್ಯ, ಯಕ್ಷಗಾನದಲ್ಲಿ ಹಾಡುಗಾರಿಕೆ, ಸೌದಾಸ ಚರಿತ್ರೆ, ದೇರಾಜೆ, ಯಕ್ಷಸಂಬಂಧ ಕುರಿತಾಗಿವೆ. ಮತ್ತುಳಿದಂತೆ ಶಾಸ್ತ್ರಗಳ ಕುರಿತು ಅನೇಕರ ನುಡಿನಮನಗಳಿವೆ, ಅಲ್ಲದೇ ಅವರ ವಿವಿಧ ಪಾತ್ರಗಳ ಚಿತ್ರಗಳಿವೆ.

ಬ್ರಾಹ್ಮಣರಾದವರಿಗೆ ಯಕ್ಷಗಾನ ನಿಷಿದ್ಧ ಎಂಬ ವಾತಾವರಣವಿದ್ದ ಕಾಲದಲ್ಲಿ ಕಲಾವಿದರಾಗಿ ಕ್ರಾಂತಿಯನ್ನುಂಟು ಮಾಡಿದವರು ಕುರಿಯ ಶಾಸ್ತ್ರಿಗಳು. ಬರಿಯ ಹಳ್ಳಿಗಾಡಿನ ಮೋಜು ಅದೆಂದು ಗೇಲಿ ಮಾಡಿಸಿಕೊಳ್ಳುತ್ತಿದ್ದ ಕೆಳ ತಾಣದಿಂದ ಕರ್ನಾಟಕದ ಅತಿ ಶ್ರೇಷ್ಠ ಜಾನಪದ ಕಲೆ ಎಂಬ ಉಚ್ಚ ಸ್ಥಾನಕ್ಕೇರುವವರೆಗೂ ಉಳಿದವರು. ಅವರ ಜೀವನ ಚರಿತ್ರೆಯನ್ನು ಓದುವ ಅವಕಾಶ ನಮಗೆ ದೊರೆತರೂ ನಮ್ಮ ಭಾಗ್ಯವೇ ಹೌದು. 

ಆರತಿ ಪಟ್ರಮೆ 


ಸೋಮವಾರ, ಆಗಸ್ಟ್ 24, 2020

ಸಾಮಗಾಯಣ


(ಸಣ್ಣ ಸಾಮಗರ ಆತ್ಮಚರಿತ್ರೆ ಮತ್ತು ಅಭಿನಂದನೆ) 

ನಿರೂಪಣೆ: ಟಿ.ಎಸ್. ಅಂಬುಜಾ 

ಪ್ರಕಟನೆ: ಈಶಾವಾಸ ಪ್ರಕಾಶನ, ಲಕ್ಷ್ಮೀಂದ್ರ ನಗರ, ಉಡುಪಿ 

ವರ್ಷ: 2005

ಕ್ರಯ: ರೂ.75

ಪುಟಗಳು: 195+5


ಸಾಮಗ ಮಾರ್ಗದಲ್ಲಿದ್ದೂ ಸ್ವತಂತ್ರ ಯೋಗ್ಯತೆಯನ್ನು ಕಾಣಿಸಿದ ಶ್ರೀ ರಾಮದಾಸ ಸಾಮಗರ ಜೀವನದ ಎಲ್ಲ ಮಜಲುಗಳ ನೆನಪುಗಳನ್ನು ದಾಖಲೀಕರಿಸಿದ ಬರಹಗುಚ್ಛ. ಸ್ವ ಆಯ್ಕೆಯಿಂದ ಹರಿದಾಸರಾದ ಸಾಮಗರು ಬದುಕಿನ ಯಾವುದೋ ತಿರುವಿನಲ್ಲಿ ಯಕ್ಷಗಾನ ವೇಷಧಾರಿಯಾದರು. ಸ್ವತಃ ನಾಟ್ಯಾಭ್ಯಾಸ ಮಾಡದಿದ್ದರೂ ತಾಳಜ್ಞಾನ, ಲಯ, ಸಂಗೀತ ಇವುಗಳ ಅರಿವಿದ್ದುದರಿಂದ iತ್ತು ಮುಖ್ಯವಾಗಿ ತನ್ನ ಮಾತಿನ ಬಲದಿಂದ ರಂಗಸ್ಥಳವನ್ನು ಮೆರೆಸಿದ ರಾಮದಾಸ ಸಾಮಗರು ಯಕ್ಷಗಾನ ರಂಗದ ಒಂದು ವಿಸ್ಮಯವೇ ಹೌದು. ಕನ್ನಡದಲ್ಲಿ ಮಾತನಾಡಿದಷ್ಟೇ ಪ್ರಬುದ್ಧತೆಯಿಂದ ತುಳು ಭಾಷೆಯಲ್ಲಿಯೂ ಅಭಿವ್ಯಕ್ತಿಯನ್ನು ಸಾಧಿಸಿಕೊಂಡು ತುಳು ಯಕ್ಷಗಾನ ರಂಗಕ್ಕೆ ತನ್ನದೇ ಆದ ಕೊಡುಗೆ ನೀಡಿದವರು. ವಿದ್ವಾಂಸರಾದ ಡಾ. ಅಮೃತ ಸೋಮೇಶ್ವರರು ಗುರುತಿಸುವಂತೆ ತುಳು ಯಕ್ಷಗಾನ ಕ್ಷೇತ್ರ ಬೆಳೆಯಲು ಸಾಮಗರು ನೀಡಿದ ಕೊಡುಗೆ ಅಪಾರವಾದುದು. ಮುನ್ನುಡಿಯಲ್ಲಿ ಡಾ. ಪ್ರಭಾಕರ ಜೋಷಿಯವರು ಹೇಳಿದಂತೆ ’ಜೀವನದಲ್ಲಿ ಏಳುಬೀಳುಗಳನ್ನು, ದೊಡ್ಡ ಸವಾಲು ಸಂಕಷ್ಟಗಳನ್ನು ದಿಟ್ಟತನದಿಂದ ಹರಿದಾಸನ ಅಧ್ಯಾತ್ಮ ಪ್ರಜ್ಞೆಯಿಂದ ಇದಿರಿಸಿದ ಧೀರರು ಸಾಮಗರು. 

ತನ್ನ ಬದುಕಿನ ಅನುಭವಗಳ ಸಾರವನ್ನು ಇತರರು ತಿಳಿದು ಮಾಡಬೇಕಾದುದೇನು ಎಂಬ ಔದಾಸೀನ್ಯದಿಂದಲೋ ಎಂಬಂತೆ ಆತ್ಮಚರಿತ್ರೆಯನ್ನು ಬರೆಯುವ ಸಾಮರ್ಥ್ಯ ಸಾಮಗರಲ್ಲಿದ್ದಿತ್ತಾದರೂ ಬರೆಯದೆ ಉಳಿದ ಅವರ ನೆನಪಿನ ಬುತ್ತಿಯನ್ನು ಬಿಚ್ಚಿಕೊಳ್ಳುವಂತೆ ಮಾಡಿದವರು ಅವರ ಮಗಳಾದ ಶ್ರೀಮತಿ ಟಿ. ಎಸ್. ಅಂಬುಜಾ. ’ಒಂದು ಬಾಳ್ವೆಯ ಸಾರ್ಥಕ್ಯವಿರುವುದು ಅವನ ದೇಹಾಂತ್ಯದ ಬಳಿಕವೂ ಆ ಚೇತನವನ್ನು ಇಲ್ಲಿ ನೆನೆಯುತ್ತಿರುವಾಗ’ (ಪು.15) ಎಂಬ ವಾಕ್ಯಾಧಾರವನ್ನು ನೆನಪಿಗೆ ತಂದುಕೊಂಡು ತಾನು ತನ್ನ ಬದುಕಿನ ಚಿತ್ರವನ್ನು ನೆನಪಿರುವಷ್ಟರ ಮಟ್ಟಿಗೆ ತೆರೆದಿಡಲು ಯತ್ನಿಸಿದ್ದೇನೆ ಎಂಬ ಹಿರಿಯರ ಸಜ್ಜನಿಕೆಗೊಂದು ನಮಿಸಿ ಪುಸ್ತಕದ ಓದನ್ನು ಮೊದಲುಗೊಳ್ಳುವುದು ಓದುಗನಿಗೆ ಶೋಭೆ. 

ಬಾಲ್ಯದ ಕಠಿಣ ದಿನಗಳಲ್ಲೂ ವಿದ್ಯಾಭ್ಯಾಸಕ್ಕೆ ಅನುಕೂಲ ಒದಗಿಸಿಕೊಟ್ಟಿದ್ದರು ಅವರ ತೀರ್ಥರೂಪರಾದ ಶ್ರೀ ಕ್ಷ್ಮೀನಾರಾಯಣ ಸಾಮಗರು. ಲಕ್ಷ್ಮೀದೇವಿ ತಾಯಿ. ಮೆಟ್ರಿಕ್ ನಂತರ ಕಾಲೇಜಿಗೆ ಹೋಗಲು ಅನುಕೂಲವಿಲ್ಲವಾಗಿ ಸಂಸ್ಕೃತ ಶಾಲೆಗೆ ಸೇರಿದರು, ಸಂಸ್ಕೃತ ಶಿರೋಮಣಿಯಾಗುವ ನಿಟ್ಟಿನಲ್ಲಿ. ಆದರೆ ಅವರ ತಂದೆಯವರ ಮರಣದಿಂದಾಗಿ ಪರೀಕ್ಷೆಯ ಫೀಸು ಕಟ್ಟಲಾಗದೇ ಸಾಂಪ್ರದಾಯಿಕ ಶಿಕ್ಷಣವನ್ನು ಮುಕ್ತಾಯಗೊಳಿಸಿದ ಅವರು ಬದುಕಿನ ಶಾಲೆಯಲ್ಲಿ ತಾನು ಕಲಿತ ಶಿಕ್ಷಣದ ಮುಂದೆ ಶಾಲೆಯಲ್ಲಿ ಪಡೆದ ಜ್ಞಾನ ಏನೂ ಅಲ್ಲವೆನ್ನುತ್ತಾರೆ. 

 ಹೊಸ ತಲೆಮಾರಿನ ಯಕ್ಷಗಾನ ಕಲಾವಿದರು ಇಂತಹ ಹಿರಿಯರ ಜೀವನ ಚರಿತ್ರೆಗಳನ್ನೋದುವುದು ನಿಜಕ್ಕೂ ದೊಡ್ಡದೊಂದು ಪಾಠ. ಆಟಕ್ಕೂ ತಾಳಮದ್ದಳೆಗೂ ನಡುವೆ ಇರುವ ಭಿನ್ನತೆ ಮತ್ತು ಕಲಾವಿದರ ತಯಾರಿಯ ಕುರಿತು ವಿವರಿಸುತ್ತಾ, ಒಬ್ಬ ಕೇವಲ ಆಟದ ಕಲಾವಿದ ತಾಳಮದ್ದಳೆಗಳಲ್ಲಿ ಸಮರ್ಥವಾಗಿ ಅರ್ಥ ಹೇಳಲಾರ ಎನಿಸುತ್ತದೆ ಎನ್ನುತ್ತಾರೆ. ಜ್ಞಾನ ಮತ್ತು ನಿರರ್ಗಳವಾಗಿ ಮಾತನಾಡುವ ಕೌಶಲ ತಾಳಮದ್ದಳೆಗೆ ಮುಖ್ಯ. ನಮ್ಮ ಪಾತ್ರದ ಆಯ್ಕೆಯೂ ಅಷ್ಟೇ. ನಮಗೆ ಒಗ್ಗದ ಪಾತ್ರಗಳನ್ನು ಮಾಡಲು ಹೋಗಬಾರದು ಎಂಬುದು ಅವರ ನಿಲುವು. ಒಂದು ನಿರ್ದಿಷ್ಟ ವಯಸ್ಸಿನ ಬಳಿಕ ಅವರಲ್ಲಿ ’ಉತ್ತರನ ಪೌರುಷ’ದ ಉತ್ತರನ ಪಾತ್ರ ನಿರ್ವಹಿಸಲು ಕೇಳಿದಾಗ: ’ನೋಡಿ ನನಗೆ ಉತ್ತರನ ಅಪ್ಪ ಅಲ್ಲ, ಅಜ್ಜನ ವಯಸ್ಸಾಗಿದೆ. ಆದ್ದರಿಂದ ಈ ಮುದಿ ಉತ್ತರನ ಮುಖ ತೋರಿಸುವ ಸಾಹಸ ಮಾಡಬೇಡಿ.’ (ಪು. 81)ಎಂದರಂತೆ! ಈ ನಿಲುವು ಸುಲಭವಲ್ಲ. 

ಬದುಕು ನಿಂತ ನೀರಲ್ಲ. ಬದಲಾವಣೆಯೆಂಬುದು ನಿರಂತರ. ’ಯಾವನೇ ಆಗಲೀ, ಒಮ್ಮೆ ಮೃತ್ಯುವಿನ ಬಾಯೊಳಕ್ಕೆ ಹೊಕ್ಕು ಹೊರ ಬಂದನೆಂದರೆ ಅವನ ಆಧ್ಯಾತ್ಮಿಕತೆ ಅಥವಾ ಜೀವನ ವೈರಾಗ್ಯ ಹೆಚ್ಚುತ್ತದೆ ಎಂಬುದು ನನ್ನ ಅನುಭವದಿಂದಲೇ ಮನವರಿಕೆಯಾಗುವಂತಾಯ್ತು.’ (ಪು.85) ಹಾಗೆಯೇ ’ಮೂಗಿನಲ್ಲಿ ಉಸಿರಿರುವ ತನಕ ಈ ಪ್ರಪಂಚದ, ಅಲ್ಲಿರುವ ತನ್ನವರ-ತನ್ನದೆಂದು ತಾನು ಭಾವಿಸಿದ ವಸ್ತುಗಳ ಬಗೆಗಿನ ಮೋಹ ಅಳಿಸಿ ಹೋಗುವುದಿಲ್ಲ, ಹೋಗಲೂ ಬಾರದು. ಹಾಗಿದ್ದರೆ ಮಾತ್ರ ಈ ಪ್ರಪಂಚ ಅಥವಾ ಪ್ರಕೃತಿ ಸರಿಯಾಗಿ ನಡೆದೀತು.’ (ಪು.86) ಎಂಬ ಅರಿವನ್ನೂ ಬಿತ್ತರಿಸುತ್ತಾರೆ. ಪ್ರತಿಭೆಗೆ ಒಲಿದ ಪ್ರಮದೆಯರ ಬಗ್ಗೆ ಹೇಳುತ್ತಾ ಅಂತರಂಗವನ್ನು ಹಗುರಾಗಿಸುವ ಪ್ರಯತ್ನವನ್ನೂ ಮಾಡಿದ್ದಾರೆ ಎಂಬುದು ಗಮನಾರ್ಹ. ಒಂದು ಸಂದರ್ಭದಲ್ಲಂತೂ ಸೂರಿಕುಮೇರು ಗೋವಿಂದ ಭಟ್ಟರು (ಗೋವಿಂದ ಮಾಣಿ!) ತಮ್ಮನ್ನು ನೆರಳಾಗಿ ನಿಂತು ವ್ಯಕ್ತಿತ್ವ ಕುಸಿಯದಂತೆ ಕಾಪಾಡಿಕೊಂಡದ್ದನ್ನೂ ಉಲ್ಲೇಖಿಸಿದ್ದಾರೆ.  

’ಒಂದು ವಿಭಾಗದಲ್ಲಿ ನಾವೆಷ್ಟು ವಿದ್ವಾಂಸರೆನಿಸಿದರೂ ಇನ್ನೊಂದು ವಿಭಾಗದಲ್ಲಿ ಶತದಡ್ಡರೂ ಆಗಿರಬಹುದು’ (ಪು.97) ಎಂಬುದು ತಮ್ಮನ್ನು ತಾವು ಒಪ್ಪಿಕೊಳುವಲ್ಲಿ ಮುಖ್ಯ. ಎಲ್ಲ ಬಲ್ಲವನೆಂಬ ಭ್ರಮೆಗೊಳಗಾಗದೇ ಇರಬೇಕಾದರೆ ನಮ್ಮಲ್ಲಿ ಈ ಪ್ರಜ್ಞೆಯಿರಬೇಕು. ’ಎದುರಾಳಿಯು ಅಲ್ಪನೆಂದು ತಿಳಿದು ಹಿಂಸಿಸುವುದು ತರವಲ್ಲ. ಅವನ ಹಿಂಬದಿಯಲ್ಲಿ ಯಾರ‍್ಯಾರು ಇದ್ದಾರೋ! ಅಶಕ್ತನಾದರೇನಂತೆ? ಪರಮ ಶಕ್ತನ ಸಹಕಾರವಿದ್ದರೆ ಜಗತ್ತನ್ನೇ ನಾಶಗೊಳಿಸಬಲ್ಲ, ಸೋಲಿಸಬಲ್ಲ’ (ಪು.99) ಎಂಬ ಟಿಟ್ಟಿಭ ಪುರಾಣದ ಕತೆಯ ನೀತಿಯನ್ನು ನಾವು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ.  

ಸಮಯಸ್ಪೂರ್ತಿಯ ಮಾತುಗಳೇ ಆಗಲೀ ಆಶುಕವಿತ್ವದ ಸಾಮರ್ಥ್ಯವೇ ಆಗಲೀ ಒಂದೆಡೆ ಕುಳಿತು, ಕಲಿತು ಅಭ್ಯಸಿಸಿ ಬರುವಂತಹುದಲ್ಲವಲ್ಲ? ಅಕ್ಕಿಯಿಂದ ಅನ್ನವಾಗುತ್ತದೆಂದು ಲೋಕಕ್ಕೆ ತೋರಿಸಿಕೊಟ್ಟವನನ್ನು ಯಾರಾದರೂ ಸಮ್ಮಾನಿಸಿದ್ದಾರೆಯೇ? ಒಂದಕ್ಕೆ ಒಂದು ಸೇರಿಸಿದರೆ ಎರಡಾಗುತ್ತದೆಂದು ಸಂಶೋಧಿಸಿ, ಪ್ರಪಂಚದ ವ್ಯವಹಾರಕ್ಕೆ ನಾಂದಿ ಹಾಕಿದವವನ ನೆನಪು-ಗುರುತು ಯಾರಿಗಿದೆ?(ಪು.123) ಎಂಬ ವಿಚಾರಗಳು ಸರಳವಾದರೂ ಗಹನವಾದುವು.  

ಸಾಮಗರ ಜೀವನಕಥೆಯ ಜೊತೆಗೆ ಇದರಲ್ಲಿ ಅಮೃತ ಸೋಮೇಶ್ವರ, ಡಾ. ವ್ಯಾಸರಾವ್ ನಿಂಜೂರ್, ಡಾ.ಕೆ.ಎಮ್. ರಾಘವ ನಂಬಿಯಾರ್, ಕೆ. ಗೋವಿಂದ ಭಟ್, ಕೋಳ್ಯೂರು ರಾಮಚಂದ್ರ ರಾವ್, ಮಿಜಾರು ಅಣ್ಣಪ್ಪ, ಸುಬ್ರಹ್ಮಣ್ಯ ಬೈಪಡಿತ್ತಾಯ ನಂದಳಿಕೆ, ಡಾ.ರಮಾನಂದ ಬನಾರಿ, ಗುರುಪ್ರಸಾದ ಸರಳಾಯ, ಎಚ್. ಶ್ರೀಧರ ಹಂದೆ, ಕೂರಾಡಿ ಸದಾಶಿವ ಕಲ್ಕೂರ, ಪಿ. ನರಸಿಂಹ ಐತಾಳ್, ಉಳಿಯಾರಗೋಳಿ ವಿ.ರಮಣ ರಾವ್, ಎಂ.ಕೆ. ಬಾಬು, ಎನ್. ಯಜ್ಞನಾರಾಯಣ ಉಳ್ಳೂರ್, ಅಂಬುಜಾ ಟಿ.ಎಸ್ ಮೊದಲಾದವರ ಅಭಿನಂದನ ಲೇಖನಗಳೂ ಇವೆ. 

ತೆರೆದುಕೊಂಡ ಅಂತರಂಗದ ಓದು ನಿಮ್ಮದಾಗಲಿ! 

ಆರತಿ ಪಟ್ರಮೆ


ಭಾನುವಾರ, ಆಗಸ್ಟ್ 23, 2020

ಯಕ್ಷಗಾನ ಮತ್ತು ನಾನು

 ಯಕ್ಷಗಾನ ಮತ್ತು ನಾನು

ಹರಿದಾಸ ಡಾ. ಶೇಣಿ ಗೋಪಾಲಕೃಷ್ಣ ಭಟ್ಟರ ಆತ್ಮಚರಿತ್ರೆ

ಪ್ರಕಾಶಕರು: ಕಲ್ಕೂರ ಪ್ರಕಾಶನ 

ವರ್ಷ: 1981, 2006

ಪುಟಗಳು: 256

ಕ್ರಯ: ರೂ. 200

ಸಮಾರಂಭವೊಂದರಲ್ಲಿ ತನ್ನ ಆತ್ಮಕಥೆ ಬರೆಯಬೇಕೆಂಬ ಉದ್ದೇಶವಿದೆ ಎಂದು ಆಡಿದ ಮಾತೇ ಮೂಲಕಾರಣವಾಗಿ, ಬರೆಯಲೇ ಬೇಕಾದ ಅನಿವಾರ್ಯತೆಗೆ ಕಟ್ಟುಬಿದ್ದು ‘ಯಕ್ಷಗಾನ ಮತ್ತು ನಾನು’ ಎಂಬ ಸ್ವಗತವನ್ನು ಮಂಡಿಸಿದವರು ಯಕ್ಷರಂಗದ ಅದ್ವಿತೀಯ ವಾಗ್ಮಿ, ಶೇಣಿ ಅಜ್ಜನೆಂದೇ ನಾವೆಲ್ಲ ಹೇಳಿಕೊಳ್ಳುವ ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರು. ತಾನು ನಿರೂಪಿಸಿದ ಪ್ರತಿಯೊಂದು ಪಾತ್ರವನ್ನೂ ಹೇಗೆ ಎತ್ತರಕ್ಕೇರಿಸಿಬಿಡುತ್ತಿದ್ದರೋ ಅದೇ ರೀತಿ ಈ ಆತ್ಮಕಥೆಯೂ ನಮ್ಮಂಥ ಕಿರಿಯರಿಗೆ ಯಕ್ಷರಂಗಕ್ಕೊಂದು ಮಾರ್ಗದರ್ಶಿ ಇದ್ದಂತಿದೆ. 

‘ನಾನೊಬ್ಬ ಮಾತುಗಾರನೇ ಹೊರತು ಕೃತಿಕಾರನಲ್ಲ. ಮಾತು ಕೃತಿಯಾಗದಿದ್ದರೆ ಅದು ಅರ್ಥಶೂನ್ಯವೂ ಶುಷ್ಕವೂ ಆಗುತ್ತದೆ.’ ಎಂಬ ಎಚ್ಚರಿಕೆಯಲ್ಲಿ ಮೊದಲುಗೊಳ್ಳುವ ಅವರ ಮಾತು ಪ್ರತಿಯೊಬ್ಬ ಬರಹಗಾರನಿಗೂ, ಭಾಷಣಕಾರನಿಗೂ ಸಂದೇಶವೇ ಹೌದು. ಪರಿಸರ, ಹೊಸ ಬಯಕೆಯ ಒಕ್ಕಲು, ಯಕ್ಷಲೋಕದ ಹಾದಿಯಲ್ಲಿ, ಸಂಚಾಲಕ ಮತ್ತು ನಟನಾಗಿ, ವಿವೇಚನೆ, ನಿವೇದನೆ, ಬಣ್ಣ ಒರೆಸಿದ ಮೇಲೆ ಎಂಬ ಐದು ಅಧ್ಯಾಯಗಳಲ್ಲಿ ಅವರ ಬದುಕು ಅನಾವರಣಗೊಂಡಿದೆ.  

ವೃತ್ತಿಯಿಂದ ಕೀರ್ತನಕಾರ-ಹರಿದಾಸ ಆಗಿದ್ದವರು ಯಕ್ಷಗಾನ ಕಲಾವಿದನಾಗಿ ಬೆಳೆದ ಕತೆಯನ್ನು ಹೇಳುವ ಈ ಪುಸ್ತಕದ ಆರಂಭದಲ್ಲಿಯೇ ತನ್ನ ನಿವೃತ್ತಿಯ ಸಂಕಲ್ಪವು ಅಭಿಮಾನಿಯ ಪತ್ರದಿಂದ ಬದಲಾದುದರ ಬಗ್ಗೆ ವಿವರವಿದೆ. “ಎಂದಿನವರೆಗೆ ಕಲಾದೇವಿಯೂ ಅಭಿಮಾನಿ ವರ್ಗವೂ ಒಂದಾಗಿ ನನಗೆ ವಿದಾಯವನ್ನು ಹೇಳುವುದಿಲ್ಲವೋ ಅಂದಿನವರೆಗೆ ಯಥಾಸಾಧ್ಯ, ಯಥಾಶಕ್ತಿ ದುಡಿಯುವ ಅಚಲ ನಿರ್ಧಾರ ಮಾಡಿಕೊಂಡೆ.’ (ಪು. 3) ಎಂದ ಅವರು ಅಕ್ಷರಶಃ ಶರೀರ ದಣಿಯುವವರೆಗೂ, ಕಣ್ಣುಗಳ ಶಕ್ತಿ ಕುಂದುವವರೆಗೂ ಯಕ್ಷಗಾನಾಭಿಮಾನಿಗಳ ಮನದಲ್ಲಿ ಮಹಾರಾಜನಂತೆಯೇ ವಿಜೃಂಭಿಸಿದರು.

ಸಹಜವಾಗಿಯೇ ಅವರಲ್ಲಿದ್ದ ಎಲ್ಲವನ್ನೂ ಪ್ರಶ್ನಿಸುವ ಹೋರಾಟದ ಗುಣ ಅವರು ಖಳಪಾತ್ರಗಳನ್ನು ನಿರೂಪಿಸುವ ಶೈಲಿಗೂ ಅವರ ಬದುಕಿನ ಹೋರಾಟದ ಶೈಲಿಗೂ ಇರಬಹುದಾದ ಸುಪ್ತ ಸಂಬಂಧವನ್ನು ಹೇಳುತ್ತದೆ. ಬಾಲ್ಯದ ದಿನಗಳಲ್ಲಿ ಎದುರಿಸಬೇಕಿದ್ದ ಕಷ್ಟಗಳು ಕೆಲವಲ್ಲವಾದರೂ ಅಜ್ಜಿ- ಅಮ್ಮನ ಅಕ್ಕರೆಯಲ್ಲಿ ಸುಲಭವಾಗಿ ಕಳೆದು ಹೋದ ರೀತಿಯೊಂದು ಅಚ್ಚರಿ.

ತೆಂಕುತಿಟ್ಟಿನ ಯಕ್ಷಗಾನವು ಕಥಕಳಿಯ ಅನುಕರಣೆಯೆಂದು ಯಾರಾದರೂ ಹೇಳಿದರೆ ಅದು ತೆಂಕುತಿಟ್ಟು ಯಕ್ಷಗಾನದ ಕುರಿತಾದ ಅವರ ಪೂರ್ವಾಗ್ರಹವೋ, ಅಜ್ಞಾನವೋ, ಅಸೂಯೆಯೋ ಕಾರಣವಾದೀತೇ ಹೊರತು ವಾಸ್ತವಿಕತೆಯ ಹೇಳಿಕೆಯಾಗದು.(ಪು.9) ಮತ್ತು ತೆಂಕುತಿಟ್ಟಿನ ಬಯಲಾಟವನ್ನು ಕಥಕಳಿಯ ಕನ್ನಡೀಕರಣವೆನ್ನುವವರ ಬಗ್ಗೆ ಸತ್ಯವನ್ನು ತಿಳಿದವರು ಕನಿಕರಿಸಬೇಕೇ ಹೊರತು ಕೋಪಿಸಬೇಕಾಗಿಲ್ಲ. (ಪು.10) ಎಂಬುದರಲ್ಲಿ ತೆಂಕುತಿಟ್ಟಿನ ಬಗ್ಗೆ ಅವರಿಗಿದ್ದ ಗೌರವ ಸ್ಪಷ್ಟವಾಗಿ ಕಾಣುತ್ತದೆ. 

ಕಲೆ ಮತ್ತದರ ಅಭಿವ್ಯಕ್ತಿಯನ್ನು ಕುರಿತಂತೆ ‘ಈ ಹೊತ್ತು ಪರಿಷ್ಕøತ ರೂಪದಲ್ಲಿ ನಮ್ಮ ಮುಂದೆ ಕಾಣುವ ಎಲ್ಲ ಕಲೆಗಳೂ ಮೂಲತಃ ಜಾನಪದೀಯ ಸಂವೇದನೆಯವೇ.’ (ಪು.23) ಎನ್ನುವ ಅವರು ಅಪಾರ ಸಂಗೀತ ಜ್ಞಾನವಿದ್ದು, ಈ ಕಲಾಮಾಧ್ಯಮಕ್ಕೆ ಬೇಕಾದ ಜ್ಞಾನವಿಲ್ಲದಿದ್ದರೆ ಅಂಥವರ ಪಾಂಡಿತ್ಯವು ಶುದ್ಧ ಸಂಗೀತವನ್ನೂ ಯಕ್ಷಗಾನವನ್ನೂ ಜೊತೆಯಾಗಿಯೇ ಕೆಡಿಸೀತು.’ (ಪು.38) ಎನ್ನುತ್ತಾರೆ.

ಶಂಕರನಾರಾಯಣ ಸಾಮಗರ ಅನುಪಸ್ಥಿತಿಯಿಂದಾಗಿ ಆಕಸ್ಮಿಕವಾಗಿ ಹರಿದಾಸರಾದ ಶೇಣಿಯವರು ಮುಂದೆ ಅವರೇ ಕಾರಣರಾಗಿ ಆಟದ ವೇಷಧಾರಿಯೂ ಆದುದೊಂದು ವಿಸ್ಮಯ. ಚಿತ್ರನಟನಾಗುವ ಬಯಕೆ ಈಡೇರದೇ ಉಳಿದುದು ನಮ್ಮ ಪಾಲಿನ ಭಾಗ್ಯ! ಕಲ್ಲಿಕೋಟೆಯ ಆತ್ಮವಿದ್ಯಾಸಂಘದಲ್ಲಿನ ಸವಾಲುಗಳನ್ನು ಗೆದ್ದ ಬಗೆ ವ್ಯಕ್ತಿಯೊಬ್ಬನಿಗೆ ತನ್ನ ಕ್ಷೇತ್ರದಲ್ಲಿ ಇರಬೇಕಾದ ಪಾಂಡಿತ್ಯದ ಆಳ, ವಿಸ್ತಾರಗಳೇನು ಎಂಬುದನ್ನು ತೋರಿಸುತ್ತವೆ. ಮಾತ್ರವಲ್ಲದೇ ಅರ್ಥಧಾರಿಗಳಿಗೂ ಸ್ಪಷ್ಟವಾದ ಮಾರ್ಗದರ್ಶನದ ಮಾತುಗಳು ಇಲ್ಲಿವೆ. 

‘ಇಂದಿಗೂ ಬುದ್ಧಿವಂತರ ಗುಂಪಿನಲ್ಲಿ ಜಿಜ್ಞಾಸೆಯಾಗಿಯೇ ಉಳಿದ ಪಾದುಕಾ ಪ್ರದಾನ, ವಾಲಿವಧಾ ಪ್ರಕರಣ, ಸೀತಾ ಸ್ವೀಕಾರ ಪ್ರಕರಣ, ಸೀತಾಪರಿತ್ಯಾಗವೇ ಮುಂತಾದ ಪ್ರಸಂಗಗಳಲ್ಲಿ ರಾಮನ ಜೀವನ ಮೌಲ್ಯಗಳನ್ನೂ, ಕ್ಲಿಷ್ಟವೆನಿಸುವ ಶ್ರೀಕೃಷ್ಣನ ಜೀವನದ ಮೌಲ್ಯಗಳನ್ನೂ ಸಮರ್ಥ ಅರ್ಥದಾರಿಗಳೆನ್ನಿಸುವವರು ಅರ್ಥಪೂರ್ಣವಾಗಿ ಸಮರ್ಥಿಸಿ ಶ್ರೋತೃಗಳ ಸಂಶಯವನ್ನು ನಿವಾರಣೆ ಮಾಡುವ ಯತ್ನದಲ್ಲಿ ಬುದ್ಧಿಯನ್ನು ಉಪಯೋಗಿಸಬೇಕಾದುದು ಅವರ ಹಿರಿತನಕ್ಕೊಂದು ಶೋಭೆ..’ (ಪು.63) ಅರ್ಥಗಾರಿಕೆ ಹೇಗಿರಬೇಕೆಂಬುದಕ್ಕೆ ಕೆಲವು ದೃಷ್ಟಾಂತಗಳೂ ಇಲ್ಲಿ ದಾಖಲಾಗಿವೆ. 

ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ನಾಟಕ ಸಭಾದ ಸಂಚಾಲಕ ಮತ್ತು ನಟನಾಗಿ ಅವರ ಅನುಭವವು ವಿಶಿಷ್ಟ. 

ಭಾಗವತರಿಂದ ಒಂದೊಂದು ಸೊಲ್ಲನ್ನು ಹತ್ತೆಂಟು ಸಲ ಹಾಡಿಸಿ ಅದರ ಅಭಿವ್ಯಕ್ತಿಗೆ ಸ್ವಕಲ್ಪಿತಗಳಾದ ಅಂಗ ಚೇಷ್ಟೆಗಳನ್ನು ಅಭಿನಯವೆಂದು ಭ್ರಮಿಸಿ ಅಥವಾ ನೋಟಕರಿಗೆ ಭ್ರಮೆ ಹುಟ್ಟಿಸಿ ತೃಪ್ತಿ ಪಡೆಯುವ ಹವ್ಯಾಸವುಳ್ಳ ಕೆಲವರನ್ನು ನಾನು ಬಲ್ಲೆ. ಹೀಗಾಗಬಾರದೆಂಬ ಅನಿಸಿಕೆ ನನ್ನದು (ಪು.107)- ಈ ಮಾತು ಕಲಾವಿದರಾಗಿ ಬೆಳೆಯಬೇಕೆಂದುಕೊಳ್ಳುವ ಎಲ್ಲ ಕಿರಿಯರಿಗೂ ಒಂದು ಎಚ್ಚರಿಕೆ. 

ಇಕ್ಕಟ್ಟಿನ ಸಂದರ್ಭವೊಂದರಲ್ಲಿ ಮಾಯಾ ಶೂರ್ಪನಖಿಯ ಪಾತ್ರ ನಿರ್ವಹಿಸಿದ ಬಗೆಯನ್ನು ಓದಿಯೇ ತೀರಬೇಕು. ತಮಗೆ ಬಂದ ಪ್ರಶಸ್ತಿ, ಪುರಸ್ಕಾರಗಳ ಬಗ್ಗೆ ತೃಪ್ತಿ ಹೊಂದಿದ ಅವರು ‘ತನ್ನ ಅಳತೆಯನ್ನು ತಾನೇ ತಿಳಿದುಕೊಂಡು ಕಾರ್ಯಪ್ರವೃತ್ತನಾದರೆ ಅದರ ಪ್ರತಿಕ್ರಿಯೆಗಳು ತೃಪ್ತಿಯನ್ನು ತಂದೇ ತರುತ್ತವೆ.’ (ಪು.168) ಎನ್ನುತ್ತಾರೆ. 

ಶೇಣಿಯವರು ರಂಗದಿಂದ ನಿವೃತ್ತಿಯನ್ನು ಘೋಷಿಸಿದಾಗ 1987 ರಲ್ಲಿ ಈಶ್ವರಯ್ಯನವರು ಉದಯವಾಣಿ ಪತ್ರಿಕೆಗೆ ಬರೆದ ಲೇಖನ ಮತ್ತು ಹಾ.ಮಾ.ನಾಯಕರು ಬರೆದ ಯಕ್ಷಗಾನ ಮತ್ತು ನಾನು ಕೃತಿಯ ವಿಮರ್ಶೆ ‘ಆತ್ಮ’ ವಿಚಾರ ‘ಕಥೆ’ಯ ಆಕರ್ಷಣೆ ಲೇಖನಗಳನ್ನು ಎರಡನೆಯ ಮುದ್ರಣದಲ್ಲಿ ಸೇರಿಸಿಕೊಳ್ಳಲಾಗಿದೆ.  (ಇದನ್ನು ಮೊದಲು  ಪ್ರಕಟಿಸಿದ್ದು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಕನ್ನಡ ಸಂಘ 1981ರಲ್ಲಿ.)

ಬಣ್ಣ ಒರೆಸಿದ ಮೇಲೆ ಅಧ್ಯಾಯ ಶೇಣಿ ಬಾಲಮುರಳಿ ಕೃಷ್ಣ ಅವರ ನಿರೂಪಣೆ

ಕಲಾವಿದ ನಿವೃತ್ತಿಯ ನಂತರ ಏನಾದ ಎಂಬುದರ ಚಿಕ್ಕ ಚಿತ್ರಣವನ್ನು ಕೊಡುತ್ತದೆ. 28ರ ಮೊಮ್ಮಗ 88ರ ಅಜ್ಜನ ಕತೆಯನ್ನು ಬರೆದಿರುವುದು ಆಪ್ಯಾಯಮಾನ. ಅವರ ಪತ್ನಿಯ ಸಾವಿನ ಸಂದರ್ಭವಂತೂ ಮಹಾನ್ ಸಾಧಕರ ಕೌಟುಂಬಿಕ ಬದುಕು ಹೇಗಿರುತ್ತದೆ ಎನ್ನುವುದಕ್ಕೊಂದು ಉದಾಹರಣೆ. 

ರಾಮ ನಿರ್ಯಾಣದ ರಾಮನಿಂದಲೇ ಈ ಕ್ಷೇತ್ರದಿಂದ ನಿರ್ಗಮಿಸುವುದನ್ನು ಇಚ್ಛಿಸಿದ್ದ ಅವರ ಕೊನೆಯ ಅರ್ಥವೂ ಅದುವೇ. ಬಣ್ಣ ಹಚ್ಚಿದ ಕಲಾವಿದ ಕಣ್ಣಿಲ್ಲದೇ ಚಿಂತಿಸಲಾರ. ಎದುರು ಅರ್ಥ ಧಾರಿಯನ್ನು ನೋಡದೇ ಅರ್ಥ ಹೇಳುವುದು ಸಾಧ್ಯವೇ ಇಲ್ಲ ಎನಿಸಿದಾಗ ಅಭಿಮಾನಿಗಳ ಒತ್ತಡದ ಒತ್ತಾಯವಿದ್ದರೂ ನಿರಾಕರಿಸಿ ಮೌನವಾಗುತ್ತಾರೆ. ‘ಒಂದಷ್ಟು ವಿಶ್ರಾಂತಿ ಬೇಕಾಗಿದೆ, ಮಲಗಲು ಬಿಡಿ’ ಎಂದ ಕೊನೆಯ ವಾಕ್ಯ ಮಾತ್ರ ಓದುಗರನ್ನು ಭಾವುಕರನ್ನಾಗಿಸದೇ ಬಿಡದು. 

ಬಾಲ್ಯದಿಂದಲೂ ಕೇಳಿದ ಅವರ ಅರ್ಥಗಾರಿಕೆ, ಒಂದು ನಗುವಿನಲ್ಲಿ, ಒಂದು ಮೌನದಲ್ಲಿ, ಒಂದು ಹುಂ ಕಾರದಲ್ಲಿಯೂ ಸೂಚಿಸಿದ ನೂರರ್ಥ ನಮ್ಮೊಂದಿಗೆ ಉಳಿದು ಹೋಗಿದೆ. 

ಬಿಡುವು ಮಾಡಿಕೊಂಡು ಓದಿ ‘ಯಕ್ಷಗಾನ ಮತ್ತು ನಾನು’!

- ಆರತಿ ಪಟ್ರಮೆ

 


ಶುಕ್ರವಾರ, ಆಗಸ್ಟ್ 21, 2020

ತರತಮ ಭಾವದ ನಿರರ್ಥಕತೆಯನ್ನು ಸಾರುವ 'ಪಲಾಂಡು ಚರಿತ್ರೆ'

ಚಿತ್ರಕೃಪೆ: ಶ್ಯಾಮ್ ಪ್ರಸಾದ್ ಕುಂಚಿನಡ್ಕ

ಶಾಶ್ವತ ಮೌಲ್ಯವಿರುವ ಕೃತಿ ಎಷ್ಟೇ ಹಳತಾದರೂ ಪ್ರಸ್ತುತವಾಗಬಲ್ಲುದು ಎಂಬುದಕ್ಕೆ ಕೆರೋಡಿ ಸುಬ್ಬರಾಯರಪಲಾಂಡು ಚರಿತ್ರೆಉತ್ತಮ ಉದಾಹರಣೆ. ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಇತ್ತೀಚೆಗೆ ರಂಗಕ್ಕೆ ತಂದ ಸುಮಾರು ಒಂದು ಶತಮಾನ ಹಳೆಯದಾದ ಯಕ್ಷಗಾನ ಪ್ರಸಂಗ ಪ್ರತಿಯೊಬ್ಬ ಜೀವಿಗೂ ಇರಬೇಕಾದ ಸಸ್ವರೂಪಜ್ಞಾನ, ವರ್ಗ ಸಂಘರ್ಷದ ಅರ್ಥಹೀನತೆ, ಸಹಬಾಳ್ವೆಯ ಅನಿವಾರ್ಯತೆಗಳನ್ನು ಎತ್ತಿಹಿಡಿದಿದೆ (ಕೆಲ ವರ್ಷಗಳ ಹಿಂದೆ ಹೊಸ್ತೋಟ ಭಾಗವತರು ಮಾಡಿದ ಪ್ರಯೋಗದ ಬಗ್ಗೆ ಕೊನೆಯಲ್ಲಿ ಬರೆದಿದ್ದೇನೆ).

ಮೇಲ್ನೋಟಕ್ಕೆ ಸರಳ ಕಥಾಹಂದರ ಹೊಂದಿರುವಪಲಾಂಡು ಚರಿತ್ರೆತನ್ನೊಳಗೆ ಗಟ್ಟಿ ತಿರುಳನ್ನು ಇಟ್ಟುಕೊಂಡಿದೆ. ಮಣ್ಣಿನಡಿಯಲ್ಲಿ ಬೆಳೆಯುವ ಕಂದಮೂಲಗಳು ಹಾಗೂ ನೆಲದ ಮೇಲೆ ಬೆಳೆಯುವ ಹಣ್ಣುತರಕಾರಿಗಳ ನಡುವೆ ನಡೆಯುವ ಶ್ರೇಷ್ಠತೆ-ಕನಿಷ್ಠತೆಗಳ ವಾಗ್ವಾದವನ್ನು ಪ್ರಸಂಗ ಸ್ವಾರಸ್ಯಕರವಾಗಿ ಕಟ್ಟಿಕೊಟ್ಟಿದೆ. ಶಿವನು ಪಾರ್ವತಿಗೆ ಕಥೆಯನ್ನು ಹೇಳುವ ಫ್ಲಾಶ್ ಬ್ಯಾಕ್ ತಂತ್ರವನ್ನು ಪ್ರಸಂಗ ಅನುಸರಿಸಿದೆ.


ಚೂತರಾಜ (ಮಾವಿನಹಣ್ಣು) ನೆಲದ ಮೇಲಿನವರ ಮುಖ್ಯಸ್ಥ; ತಾನೇ ಶ್ರೇಷ್ಠನೆಂ ಒಣಹಮ್ಮು ಅವನಿಗೆ. ಪಲಾಂಡು (ಈರುಳ್ಳಿ) ನೆಲದಡಿಯವರ ನೇತಾರ. ಎರಡೂ ವರ್ಗದವರ ನಡುವೆ ವಾಗ್ವಾದ ನಡೆದು ಯುದ್ಧದ ಹಂತಕ್ಕೆ ಹೋಗಿ, ಕೊನೆಗೆ ಪರಿಹಾರಕ್ಕಾಗಿ ಶ್ರೀಕೃಷ್ಣನನ್ನು ಭೇಟಿಮಾಡುವ ಸನ್ನಿವೇಶ ಒದಗುತ್ತದೆ.

ಕೃಷ್ಣ ತಕ್ಷಣಕ್ಕೆ ಯಾವ ಪರಿಹಾರವನ್ನೂ ಸೂಚಿಸದೆ ಮೂರು ದಿನ ಇತ್ತಂಡದವರೂ ತನ್ನ ವಿಶ್ರಾಂತಿಧಾಮದಲ್ಲಿ ತಂಗುವಂತೆ ಸೂಚಿಸುತ್ತಾನೆ. ಮೂರು ದಿನ ಕಳೆಯುವ ಹೊತ್ತಿಗೆ ಚೂತರಾಜನ ಬಳಗದವರೆಲ್ಲ (ಮಾವು, ಹಲಸು, ಕುಂಬಳ, ಬೆಂಡೆ, ಮುಂತಾದವರು) ಬಾಡಿ ಕೊಳೆತು ನಾರುವ ಪರಿಸ್ಥಿತಿ ಬಂದರೆ, ಪಲಾಂಡುವಿನ ಬಳಗದವರೆಲ್ಲ (ಈರುಳ್ಳಿ, ಸುವರ್ಣಗಡ್ಡೆ, ಮೂಲಂಗಿ, ಗೆಣಸು, ಮುಂತಾದವರು) ಚಿಗುರಿ ನಳನಳಿಸಲು ಆರಂಭಿಸುತ್ತಾರೆ.

-ಎಂಬಲ್ಲಿಗೆ ಪರಿಹಾರ ತಾನಾಗಿಯೇ ಒದಗಿತಲ್ಲ ಎಂದು ಬುದ್ಧಿವಂತಿಕೆಯ ನಗೆಯಾಡುತ್ತಾನೆ ಶ್ರೀಕೃಷ್ಣ. ಜಗತ್ತಿನಲ್ಲಿ ಮೇಲು-ಕೀಳು ಎಂಬುದೇ ಇಲ್ಲ, ಎಲ್ಲವೂ ಇರುವುದು ಅವರವರ ಭಾವದಲ್ಲಿ ಎಂಬುದನ್ನು ಇತ್ತಂಡದವರಿಗೂ ಮನದಟ್ಟು ಮಾಡಿಸಿ ಕಳಿಸುತ್ತಾನೆ. ಇದು ಪ್ರಸಂಗದ ಸಾರಾಂಶ.

ಯಾವುದೇ ಪ್ರಸಂಗ ಅರ್ಥಪೂರ್ಣವಾಗುವುದು ಅದರ ಆಶಯವನ್ನು ಅರ್ಥಮಾಡಿಕೊಂಡಿರುವ ಕಲಾವಿದರಿಂದ ಎಂಬುದನ್ನು ಸಿರಿಬಾಗಿಲು ಪ್ರತಿಷ್ಠಾನದ ಪ್ರದರ್ಶನ ಮತ್ತೆ ಶ್ರುತಪಡಿಸಿದೆ. ಕೃಷ್ಣನಾಗಿ ಶ್ರೀ ವಾಸುದೇವ ರಂಗ ಭಟ್, ಚೂತರಾಜನಾಗಿ ಶ್ರೀ ರಾಧಾಕೃಷ್ಣ ನಾವಡ ಮಧೂರು, ಪಲಾಂಡುವಾಗಿ ಶ್ರೀ ಪೆರ್ಮುದೆ ಜಯಪ್ರಕಾಶ ಶೆಟ್ಟಿ ತಮ್ಮ ಒಟ್ಟಾರೆ ಮಾತುಗಳಿಂದ ಪ್ರಸಂಗದ ತಿರುಳನ್ನು ತುಂಬ ಮಾರ್ಮಿಕವಾಗಿ ಪ್ರೇಕ್ಷಕರೆದುರು ಬಿಚ್ಚಿಟ್ಟಿದ್ದಾರೆ.

ಸುಲಿದ ಮೇಲೆ ಸಾರವೇನು ಎಂದು ವೇದ್ಯವಾಗುವ ವರ್ಗ ನಿನ್ನದು (ಮಾವಿನ ಕುರಿತಾಗಿ); ಬಿಡಿಸಿದಂತೆ ಅಂತರಂಗ ಅರ್ಥವಾಗುವ ವರ್ಗ ನಿನ್ನದು (ಈರುಳ್ಳಿ ಕುರಿತಾಗಿ)” ಎನ್ನುತ್ತಾ ಕೃಷ್ಣ (ವಾಸುದೇವ ರಂಗ ಭಟ್) ಮಾವು ಮತ್ತು ಈರುಳ್ಳಿಗಳ ಸ್ವರೂಪವನ್ನು ಸೊಗಸಾಗಿ ಕಟ್ಟಿಕೊಡುತ್ತಾನೆ.

ಎತ್ತರದಲ್ಲಿರುವುದು ಹಗುರವಾಗಿರುವುದಕ್ಕೂ ಸಾಧ್ಯ; ಭಾರವಾದದ್ದು ಎತ್ತರದ ಸ್ಥಾನವನ್ನು ಹೊಂದುವುದೂ ಸಾಧ್ಯ. ತಾನಿರುವುದು ಎತ್ತರದಲ್ಲಿ ಎಂಬುದರಿಂದಲೇ ಮೌಲ್ಯ ನಿರ್ಣಯ ಮಾಡಬೇಕಿಲ್ಲಎಂದು ಇನ್ನೊಂದೆಡೆ ಕೃಷ್ಣ ಹೇಳುತ್ತಾನೆ.

ಸುಗುಣ ಎಂದರೆ ತನ್ನನ್ನು ತಾನು ಬಿಟ್ಟುಕೊಡದೆ ಇನ್ನೊಬ್ಬನನ್ನು ಒಪ್ಪುವುದು. ಎತ್ತರದಲ್ಲಿ ಇರುವುದು ಬಾಗುವುದಕ್ಕೆ, ಬಯಸಿದವರಿಗೆ ಲಭ್ಯವಾಗುವುದಕ್ಕೆ. ಪ್ರಕೃತಿ ಇರುವುದೇ ಪರೋಪಕಾರಕ್ಕೆ. ಭಗವಂತನ ಸೃಷ್ಟಿಯಲ್ಲಿ ಯಾವುದೂ ಶ್ರೇಷ್ಠವಲ್ಲ, ಯಾವುದೂ ಕನಿಷ್ಠವಲ್ಲಎನ್ನುತ್ತಾ ಚೂತ-ಪಲಾಂಡುಗಳ ಚರ್ಚೆಗೆ ಮಂಗಳ ಹಾಡುವ ಕೃಷ್ಣ ವಾಸ್ತವವಾಗಿ ಇಡೀ ಮಾನವ ಸಮಾಜ ಯಾವತ್ತೂ ನೆನಪಿನಲ್ಲಿಟ್ಟುಕೊಳ್ಳಬೇಕಾದ ಸಂದೇಶವನ್ನು ಸಾರುತ್ತಾನೆ.

ಒಂದು ಕೃತಿ ಮತ್ತು ಪ್ರದರ್ಶನದ ಯಶಸ್ಸಿಗೆ ಇಷ್ಟು ಸಾಕಲ್ಲವೇ? ಇದನ್ನೇ ಆರಂಭದಲ್ಲಿ ಸಾರ್ವಕಾಲಿಕ ಮೌಲ್ಯ ಎಂದಿರುವುದು. ಧಾರ್ಮಿಕ ಕಲೆಯಾಗಿ ಬೆಳೆದು ಬಂದ ಯಕ್ಷಗಾನದಲ್ಲಿ ನೂರು ವರ್ಷಗಳ ಹಿಂದೆಯೇ ಇಂತಹದೊಂದು ಕಾಲ್ಪನಿಕ/ ಸಾಮಾಜಿಕ ಪ್ರಸಂಗದ ಕಲ್ಪನೆಯನ್ನು ಮಾಡಿದ ಕೆರೋಡಿ ಸುಬ್ಬರಾಯರು, ಮತ್ತು ಅದನ್ನು ಪ್ರದರ್ಶನಕ್ಕೆ ಒಳಪಡಿಸಿದ ಸಿರಿಬಾಗಿಲು ಪ್ರತಿಷ್ಠಾನದ ಶ್ರೀ ರಾಮಕೃಷ್ಣ ಮಯ್ಯರು ನಿಸ್ಸಂಶಯವಾಗಿ ಪ್ರಶಂಸೆಗೆ ಅರ್ಹರು. ಹೈದರಾಬಾದಿನ ಕನ್ನಡ ನಾಟ್ಯರಂಗ ಸಂಸ್ಥೆ ಪ್ರದರ್ಶನಕ್ಕೆ ಪ್ರಧಾನ ಪ್ರಾಯೋಜಕತ್ವ ನೀಡಿದೆ.

ಮಂಗಳೂರು ಮೂಲದ ಕೆರೋಡಿ ಸುಬ್ಬರಾಯರು (1863-1928) ‘ಗವಾನಂದಎಂಬ ಕಾವ್ಯನಾಮವನ್ನು ಹೊಂದಿದ್ದರು. ಶೃಂಗಾರಶತಕ, ಸೌಭಾಗ್ಯವತೀ ಪರಿಣಯ, ಸಮೂಲ ಭಾಷಾಂತರ, ಅನುಕೂಲ ಸಿಂಧು, ಶ್ರೀಕೃಷ್ಣ ಜೋಗುಳ ಮುಂತಾದ ಕೃತಿಗಳನ್ನೂ, ಜರಾಸಂಧವಧೆ, ಕುಮಾರಶೇಖರ, ತಾರಾನಾಥ ಎಂಬ ಯಕ್ಷಗಾನ ಪ್ರಸಂಗಗಳನ್ನೂ ರಚಿಸಿದ್ದರು (ಮಾಹಿತಿ: ಡಾ. ಕಬ್ಬಿನಾಲೆ ವಸಂತ ಭಾರದ್ವಾಜರಕರ್ನಾಟಕ ಯಕ್ಷಗಾನ ಕವಿಚರಿತ್ರೆ’). 'ಪಲಾಂಡು ಚರಿತ್ರೆ'ಯನ್ನು ಉಡುಪಿಯ ಶ್ರೀಮನ್ಮಧ್ವಸಿದ್ಧಾಂತ ಗ್ರಂಥಾಲಯ 1930ರಲ್ಲಿ ಪ್ರಕಟಿಸಿತ್ತು.

ಪಲಾಂಡು ಚರಿತ್ರೆಯನ್ನು ದಿ| ಹೊಸ್ತೋಟ ಮಂಜುನಾಥ ಭಾಗವತರುಪಲಾಂಡು ವಿಜಯಎಂಬ ಹೆಸರಿನಲ್ಲಿ ಒಮ್ಮೆ ರಂಗಕ್ಕೆ ತಂದಿದ್ದರು. ಮುಂದೆ ಅದನ್ನೇ ಸ್ವಲ್ಪ ಬದಲಿಸಿಸಸ್ಯ ಸಂಧಾನಎಂಬ ಪ್ರಸಂಗವನ್ನು ರಚಿಸಿದ್ದರು. ಅದನ್ನು ಶಿರಸಿಯ ಸಹ್ಯಾದಿ ಕಾಲೋನಿ ಮಕ್ಕಳ ಯಕ್ಷಗಾನ ತಂಡ (‘ಸಮಯ ಸಮೂಹ’) ಮೂಲಕ ಪ್ರದರ್ಶಿಸಿದ್ದರು (ಮಾಹಿತಿ: ‘ಒಡಲಿನ ಮಡಿಲು ಯಕ್ಷತಾರೆ: ಬಯಲಾಟದ ನೆನಪುಗಳುಪುಟ 70). ತಾವುನಿಸರ್ಗ ಸಂಧಾನದಂತಹ ಕಾಲ್ಪನಿಕ ಪ್ರಸಂಗಗಳನ್ನು ರಚಿಸಲುಪಲಾಂಡು ಚರಿತ್ರೆಯಂತಹ ಪ್ರಯತ್ನಗಳೇ ಪ್ರೇರಣೆ ಎಂದು ಹೊಸ್ತೋಟ ಭಾಗವತರು ಹೇಳಿಕೊಂಡಿದ್ದಾರೆ.

ಇಂತಹ ಹಳೆಯ ಪ್ರಸಂಗಗಳನ್ನು ಪತ್ತೆ ಮಾಡಿ ಪ್ರಯೋಗಕ್ಕೆ ಒಳಪಡಿಸುವ ನವೀನ ದೃಷ್ಟಿಕೋನಕ್ಕೂ ಯಕ್ಷಗಾನದ ಇತಿಹಾಸದಲ್ಲಿ ಮಹತ್ವದ ಸ್ಥಾನ ಇದೆ. ಕೋರೋನ ಕಾಲದಲ್ಲಿ ಡಿಜಿಟಲ್ ಮಾಧ್ಯಮದ ಸಾಧ್ಯತೆಗಳನ್ನೂ ಪ್ರಯತ್ನ ಎತ್ತಿತೋರಿಸಿದೆ. ಆದ್ದರಿಂದ ಗುಣಮಟ್ಟದ ಛಾಯಾಗ್ರಹಣ ಮತ್ತು ಪ್ರಸಾರವೂ ಇಲ್ಲಿ ಅಭಿನಂದನೀಯ.

'ಪಲಾಂಡು ಚರಿತ್ರೆ' ವೀಡಿಯೋವನ್ನು ಇಲ್ಲಿ ವೀಕ್ಷಿಸಬಹುದು:

 https://www.youtube.com/watch?v=8-Vq7LX8rnc 

 ಸಿಬಂತಿ ಪದ್ಮನಾಭ