'ಭೂತಾನ್ನಲ್ಲಿ ಯಕ್ಷದೀವಿಗೆʼ
ಪ್ರವಾಸ ಕಥನ-16
ಡಾ. ಸಿಬಂತಿ ಪದ್ಮನಾಭ ಮತ್ತು ಡಾ. ಆರತಿ ಪಟ್ರಮೆ
(ಪ್ರಜಾಪ್ರಗತಿ, 10 ಮೇ 2026)
(ಮುಂದುವರಿದ ಭಾಗ...)
ನಾವು ಬೆಟ್ಟ ಏರಲು ಆರಂಭಿಸಿದಾಗ ಹನ್ನೊಂದು ಗಂಟೆ ಆಗಿತ್ತು. ಒಂದಷ್ಟು ಮಂದಿ ಆಗಲೇ ಬೆಟ್ಟದಿಂದ ವಾಪಸ್ ಬರುತ್ತಿದ್ದರು. ಅವರು ಬುದ್ಧಿವಂತರು, ತುಂಬ ಬೇಗನೇ ಹೋಗಿರಬೇಕು. ಆಗಲೇ ಬಿಸಿಲು ಏರತೊಡಗಿತ್ತು. ಅಲ್ಲಿನ ಚಳಿಗೆ ಆ ಬಿಸಿಲೂ ಬೆಳದಿಂಗಳಂತೆ ಭಾಸವಾಗುತ್ತಿತ್ತು. ಆದರೂ ಬೆಟ್ಟ ಏರುತ್ತಿದ್ದಂತೆ ಒಳಗಿನಿಂದಲೇ ಬೆವೆತು, ಚಳಿಯಿಂದ ಬಚಾವಾಗಲು ತೊಟ್ಟುಕೊಂಡಿದ್ದ ಹೆಚ್ಚುವರಿ ದಿರಿಸುಗಳನ್ನೆಲ್ಲ ಒಂದೊಂದೇ ಬಿಚ್ಚಬೇಕಾಯಿತು. ಆದರೂ ಆಗೊಮ್ಮೆ ಈಗೊಮ್ಮೆ ಕುಳಿರ್ಗಾಳಿ ಛಕ್ಕನೆ ಪ್ರತ್ಯಕ್ಷವಾಗಿ ಕೈಕಾಲೆಲ್ಲ ಮರಗಟ್ಟುವಂತೆ ಆಗುತ್ತಿತ್ತು. ಅಂತೂ ಕ್ಯಾಪು, ಗ್ಲೌಸು ಹಾಕುವುದು, ತೆಗೆಯುವುದು ಮಾಡುತ್ತಲೇ ಇರಬೇಕಿತ್ತು.
ಒಂದಷ್ಟು ದೂರ ಏರುವುದು, ಅಲ್ಲೇ ನಿಂತು ಸುತ್ತಲೂ ಕಣ್ಣಾಡಿಸಿ ಪ್ರಕೃತಿ ಸೌಂದರ್ಯ ಸವಿಯುವುದು, ಆಯಾಸ ಪರಿಹರಿಸಿಕೊಳ್ಳವುದು, ಗುಟುಕು ನೀರು ಕುಡಿಯುವುದು, ಒಂದೆರಡು ಫೋಟೋ, ವೀಡಿಯೋ ತೆಗೆದುಕೊಳ್ಳುವುದು, ಇನ್ನೂ ಒಂದಿಷ್ಟು ದೂರ ಏರುವುದು... ಹೀಗೆ ಸಾಗಿತ್ತು ನಮ್ಮ ಪಯಣ. ಸಾಕಷ್ಟು ದೂರ ಹೋದ ಮೇಲೆ ‘ಈಗ ನಾವು ಒಂದು ಮುಕ್ಕಾಲು ಪಾಲು ಏರಿ ಮುಗಿದಿರಬೇಕಲ್ಲ?’ ಎಂದು ಪೆಮಾ ಅವರನ್ನು ಕಾತರದಿಂದ ಕೇಳಿದೆವು. ಅವರು ನಮ್ಮ ಮೇಲೆ ಯಾವುದೇ ದಯೆ ದಾಕ್ಷಿಣ್ಯ ಇಲ್ಲದೆ, ‘ನಾವೀಗ ಶೇ. 30ರಷ್ಟು ಪರ್ವತ ಏರಿ ಆಯ್ತು. ಇನ್ನೂ ಶೇ. 70 ಬಾಕಿ ಇದೆ’ ಎಂದು ಜೋರಾಗಿ ನಕ್ಕರು. ನಾವು ಅಷ್ಟೇ ಜೋರಾಗಿ ನಗುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಅಲ್ಲೇ ಇದ್ದ ಮರದ ಬೆಂಚುಗಳಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಂಡೆವು. ಅಷ್ಟರಲ್ಲೇ ಐದಾರು ಮಂದಿ ಸಹಚಾರಣಿಗರು ಬಂದು ಪಕ್ಕದಲ್ಲಿದ್ದ ಬೆಂಚುಗಳಲ್ಲಿ ಕುಳಿತರು. ನೀವೆಲ್ಲಿಂದ ಬಂದಿದ್ದೀರಿ ಎಂದು ಕೇಳಿದೆವು. ಅವರಲ್ಲಿ ಒಂದಿಬ್ಬರು ಮಲೇಷ್ಯಾದವರು, ಇನ್ನಿಬ್ಬರು ಇಂಡೋನೇಷ್ಯಾದವರು, ಕೆಲವರು ಉತ್ತರಭಾರತೀಯರು ಇದ್ದರು. ಅಂತೂ ಪರ್ವತ ಏರಿ ಇಳಿಯುವ ಹೊತ್ತಿಗೆ ವಿವಿಧ ಜಾಗತಿಕ ಪ್ರತಿನಿಧಿಗಳನ್ನು ಭೇಟಿಯಾಗುವಂತಾಯಿತು.ನಮ್ಮ ಬ್ಯಾಗಿನಲ್ಲಿ ನೀರಿನ ಹೊರತಾಗಿ ಇನ್ನೇನೂ ಇರಲಿಲ್ಲ. ಪೆಮಾ ತಮ್ಮ ಬ್ಯಾಗಿನಿಂದ ಒಂದೊಂದೇ ಚಾಕೊಲೇಟುಗಳನ್ನು ಹೊರತೆಗೆಯತೊಡಗಿದರು. ನಾವು ಬದುಕಿದೆಯಾ ಬಡಜೀವವೇ ಎಂದು ಅವನ್ನು ಗಬಗಬನೆ ತಿಂದೆವು. ಮುನ್ನಾದಿನ ಹೋಟೆಲ್ನಲ್ಲಿ ನಮ್ಮನ್ನು ಮಾತಾಡಿಸಿದ ಮಹಿಳೆ, ‘ನೀವು ಪರ್ವತ ಏರುವ ಮೊದಲು ಒಂದಷ್ಟು ಚಾಕೊಲೇಟ್ಗಳನ್ನು ಹಿಡಿದುಕೊಳ್ಳಿ. ಆಗಾಗ ಬೇಕಾಗುತ್ತೆ’ ಎಂದು ಸಲಹೆ ನೀಡಿದ್ದಳು. ನಮಗದು ಆಮೇಲೆ ಮರೆತುಹೋಗಿತ್ತು. ಈಗ ನೋಡಿದರೆ ಆ ಬಗೆಯ ಸಣ್ಣಪುಟ್ಟ ಸಿದ್ಧತೆಗಳೇ ಎಷ್ಟು ಮುಖ್ಯವಾದದ್ದು ಎಂದು ಅನಿಸತೊಡಗಿತು.
ಸಾಧಾರಣ ಅರ್ಧ ದೂರ ಕ್ರಮಿಸಿದ ಮೇಲೆ ಬಹಳ ದೂರದಿಂದ ಟೈಗರ್ಸ್ ನೆಸ್ಟ್ ದೇಗುಲಗಳ ಸಮುಚ್ಚಯ ಕಾಣುತ್ತಿತ್ತು. ಅಬ್ಬ! ರುದ್ರ ರಮಣೀಯವೇ ಹೌದು. ಆದರೆ ಒಂದು ಬಂಡೆಯ ಮೇಲೆ ಆಧಾರ ಹೊಂದಿದಂತೆ ಕಾಣುತ್ತಿದ್ದ ಆ ದೇಗುಲವನ್ನು ಅಲ್ಲಿ ಕಟ್ಟಿದವರಾರು? ಹೇಗೆ? ಎಂಬುದೇ ವಿಜ್ಞಾನಿಗಳಿಗೂ ತಿಳಿಯದ ಚೋದ್ಯವಂತೆ. ದೂರದಿಂದ ಅದನ್ನು ನೋಡುವುದಷ್ಟೇ ಸಾಧ್ಯವಿರಬಹುದು, ಅದರ ಬುಡದವರೆಗೂ ಹೋಗಲು ಸಾಧ್ಯವೇ ಇಲ್ಲ ಬಿಡು, ಎಷ್ಟೊಂದು ಕಡಿದಾಗಿದೆ ಆ ಪ್ರದೇಶ... ಎಂದು ಮಾತಾಡಿಕೊಂಡೆವು. ‘ನಾವು ಅಲ್ಲಿಯವರೆಗೂ ಹೋಗುತ್ತೇವೆ’ ಎಂದರು ಪೆಮಾ. ‘ಛಾನ್ಸೇ ಇಲ್ಲ. ಅಲ್ಲಿಗೆ ಗಾಳಿಯಲ್ಲಿ ತೇಲಾಡಿಕೊಂಡಾ ಹೋಗೋದು? ಅಲ್ಲಿ ತಲುಪುವ ಯಾವ ದಾರಿಯೂ ಕಾಣಿಸುತ್ತಿಲ್ಲವಲ್ಲ...’ ಎಂದು ನಮ್ಮಷ್ಟಕ್ಕೇ ಮೊಂಡುವಾದ ಮಾಡಿಕೊಂಡೆವು. ಅಲ್ಲಿಗೆ ಹೋಗಿ ತಲುಪುವುದೇ ನಮ್ಮ ಉದ್ದೇಶ, ನಾವು ಹೋದಂತೆ ದಾರಿ ತೆರೆದುಕೊಳ್ಳುತ್ತದೆ, ನೀವೇನೂ ಆತಂಕಪಟ್ಟುಕೊಳ್ಳಬೇಡಿ, ನನ್ನನ್ನು ಹಿಂಬಾಲಿಸಿ ಎಂದು ಖುದ್ದು ಪೆಮಾ ಅವರು ಭರವಸೆ ಕೊಟ್ಟ ಮೇಲೆ ನಾವು ಚಿಂತೆಯನ್ನು ತೊರೆದೆವು.
ಶತಮಾನದ ಮರಗಳು:
ನಾವು ಸಾಗುವ ದಾರಿಯಲ್ಲಿ ಅಲ್ಲಲ್ಲಿ ಕೆಲವು ಹಳೆಯ ಮರಗಳನ್ನು ಪ್ರತ್ಯೇಕ ಗುರುತಿಸಿ ಇವು ಇಷ್ಟು ವರ್ಷ ಹಳೆಯವು ಎಂದು ಮಾಹಿತಿ ಫಲಕಗಳನ್ನು ನೇತುಹಾಕಿದ್ದರು. 103 ವರ್ಷ ಪ್ರಾಯದ ರೋಡೋಡೆಂಡ್ರನ್ ಮರ, 134 ವರ್ಷ ಹಳೆಯ ಬ್ಲೂ ಪೈನ್ ಮರಗಳು ನಮ್ಮನ್ನು ಚಕಿತಗೊಳಿಸಿದವು. ಆಯಾ ಮರಗಳ ವೈಜ್ಞಾನಿಕ ಹೆಸರು, ಅವುಗಳ ಸಾಮಾನ್ಯ ವ್ಯಾಸ ಎಷ್ಟು ಇತ್ಯಾದಿ ವಿವರಗಳನ್ನೆಲ್ಲ ಆ ಫಲಕಗಳು ಒಳಗೊಂಡಿದ್ದವು. ಪ್ರತಿ ಫಲಕದ ಕೆಳಗೂ ‘ಕಸ ಎಸೆಯಬೇಡಿ’ ಎಂಬ ಮನವಿ ಸಾಮಾನ್ಯವಾಗಿತ್ತು.
ನಮ್ಮ ಪ್ರವಾಸಿ ತಾಣಗಳಿಗೆ ಹೋಲಿಸಿದರೆ ಅಲ್ಲಿ ಕಸ ಎಸೆಯುವ ಪ್ರಮಾಣ ಕಡಿಮೆಯೇ ಇತ್ತು. ಆದರೂ ಕೆಲವೆಡೆ ನೀರು ಅಥವಾ ಜ್ಯೂಸ್ ಬಾಟಲ್, ಬಿಸ್ಕತ್, ಕುರುಕಲು ತಿನಿಸಿನ ಪೊಟ್ಟಣಗಳನ್ನು ಪ್ರವಾಸಿಗರು ಎಸೆದಿದ್ದರು. ಪೆಮಾ ತಮ್ಮ ಬ್ಯಾಗಿನಿಂದ ಒಂದು ಖಾಲಿ ಕವರ್ ತೆಗೆದು ಅಲ್ಲಿದ್ದ ಕಸವನ್ನೆಲ್ಲ ತುಂಬಿ ಒಂದು ಮರದ ಕೊಂಬೆಗೆ ನೇತುಹಾಕಿದರು. ಅರೆ, ಇದೇಕೆ ಎಂದು ಕೇಳಿದೆವು. ‘ಕೆಳಗೆ ಹೋಗುವಾಗ ಯಾರಾದರೂ ನೋಡಿದವರು ಕೊಂಡೊಯ್ಯುತ್ತಾರೆ. ಇಲ್ಲದಿದ್ರೆ ನಾವೇ ತೆಗೆದುಕೊಂಡು ಹೋದರಾಯಿತು’ ಎಂದರು ಪೆಮಾ. ನಮಗದನ್ನು ನಂಬಲು ಆಗಲಿಲ್ಲ. ಹೋಗಿ ಹೋಗಿ ಕಸ ಹೊತ್ತುಕೊಂಡು ಹೋಗುತ್ತಾರಾ ಜನ ಎಂದು ನಕ್ಕೆವು. ಅಚ್ಚರಿ ಎಂದರೆ ನಾವು ಮರಳಿ ಬರುವಾಗ ಆ ಕಸದ ಚೀಲ ಅಲ್ಲಿರಲಿಲ್ಲ. ಪೆಮಾ ಹೇಳಿದಂತೆ ಯಾರೋ ತೆಗೆದುಕೊಂಡು ಹೋಗಿರಬಹುದು.ಮುಂದೆ ಹೋಗುತ್ತಾ ಹೋಗುತ್ತಾ ಅನಾವರಣಗೊಂಡದ್ದು ಪ್ರಕೃತಿಯ ಸಿರಿಯೋ, ಅಲ್ಲ, ಅಂಥ ಕಡಿದಾದ ಬೆಟ್ಟದ ನಡುವೆ ದೇಗುಲವನ್ನು ನಿರ್ಮಿಸಿದವರ ಕೈಚಳಕವೋ, ಬುದ್ಧಿವಂತಿಕೆಯೋ ಅರಿಯದಾದೆವು. ದೂರದಲ್ಲಿದ್ದ ‘ಟೈಗರ್ಸ್ ನೆಸ್ಟ್’ಗೆ ನಾವು ಇನ್ನಷ್ಟು ಹತ್ತಿರವಾಗಿದ್ದೆವು. ತುತ್ತತುದಿಯ ದೇಗುಲ ಸಮುಚ್ಚಯ ಇಲ್ಲೇ ಹತ್ತಿರವಿದೆ ಅನಿಸಿದರೂ ಒಂದಷ್ಟು ಹತ್ತುವುದು, ಇನ್ನೊಂದಷ್ಟು ದೂರ ಇಳಿಯುವುದು- ಈ ಬಗೆಯ ಹಾದಿ ಮುಂದುವರಿದೇ ಇತ್ತು. ಇಳಿಯುವ ಹಾದಿ ಸಿಕ್ಕಿದಾಗ ಒಂದಷ್ಟು ಸಮಾಧಾನ, ಮತ್ತೆ ಏರು ದಾರಿ ಸಿಕ್ಕಾಗ ಅಯ್ಯೋ ಇನ್ನೆಷ್ಟು ಮೆಟ್ಟಿಲು ಎಂಬ ಲೆಕ್ಕಾಚಾರ... ಕೈಕಾಲುಗಳೆಲ್ಲ ಸಂಪೂರ್ಣ ಸೋತಿದ್ದವು. ನಮಗಿಂತ ದುಪ್ಪಟ್ಟು ವಯಸ್ಸಾದ ಮಹಿಳೆಯರು, ಪುರುಷರು ಜಪಸರ ಹಿಡಿದುಕೊಂಡು, ಏನೋ ಮಂತ್ರ ಜಪಿಸಿಕೊಂಡು ಬೆಟ್ಟ ಏರುವುದು, ವಾಪಸ್ ಬರುವುದು ಸಾಮಾನ್ಯವಾಗಿತ್ತು. ಅವರನ್ನು ನೋಡಿದ ಮೇಲೂ ನಾವೇನಾದರೂ ಬೆಟ್ಟದ ತುದಿ ತಲುಪದೆ ಮರಳಿದ್ದರೆ ಮರ್ಯಾದೆಯ ಪ್ರಶ್ನೆ ಆಗುತ್ತಿತ್ತು!
ಅಲ್ಲಿಯೇ ಸಮೀಪದಲ್ಲಿ ಎತ್ತರದಿಂದ ನೀರು ಧುಮ್ಮಿಕ್ಕುತ್ತಿತ್ತು. ನೀರು ಕೆಳಗೆ ಬಿದ್ದಲ್ಲಿ ಅಲ್ಲಲ್ಲಿ ಮಂಜುಗಡ್ಡೆ ರೂಪುಗೊಳ್ಳುತ್ತಿತ್ತು.. ಅಂತಹ ಛಳಿ! ಪೆಮಾ ಅವರು ಕೆಳಗಿಳಿದು ಹೋಗಿ ಸಂವೃತನಿಗಾಗಿ ಒಂದಷ್ಟು ಮಂಜನ್ನು ಉಂಡೆ ಮಾಡಿ ಕೊಟ್ಟರು.. ಕೈಕೊರೆಯುವ ಚಳಿಯಲ್ಲಿ ಅದನ್ನು ಮುಟ್ಟುವ ಧೈರ್ಯವನ್ನೂ ನಾವು ಮಾಡದೆ ‘ಮುಂಜಾನೆ ಸವಿ ಮಂಜಲ್ಲಿ...’ ಎಂದು ಹಾಡು ಗುನುಗಿಕೊಂಡು ಮುನ್ನಡೆದೆವು. ತಮಾಷೆಯೆಂದರೆ ಆಗ ಮುಂಜಾನೆ ಅಲ್ಲ, ಮಧ್ಯಾಹ್ನ ಎರಡು ಗಂಟೆ ಆಗಿತ್ತು! ಆದರೆ ನಡು ಮಧ್ಯಾಹ್ನ ದಾಟಿದ ಯಾವ ವಾತಾವರಣವೂ ಅಲ್ಲಿರಲಿಲ್ಲ, ಈಗಷ್ಟೇ ಬೆಳಕು ಹರಿದಂತೆ ಇತ್ತು. ‘ಇನ್ನು ನಾವು ಸ್ವಲ್ಪ ಬೇಗನೇ ನಡೆಯದೇ ಇದ್ದರೆ ಕತ್ತಲಾಗುವುದರೊಳಗೆ ಮರಳಲಾಗದು’ ಎಂದರು ಪೆಮಾ. ನಮ್ಮ ಕಾಲುಗಳ ಕತೆ ನಮಗೆ ಮಾತ್ರ ಗೊತ್ತಿತ್ತು.
ಸರ್ವಂ ಬುದ್ಧಮಯಂ:
ಟೈಗರ್ಸ್ ನೆಸ್ಟ್ ಸಮುಚ್ಚಯದೊಳಗೆ ಹತ್ತಾರು ಗರ್ಭಗುಡಿಗಳು. ಎಲ್ಲೆಲ್ಲೂ ಬುದ್ಧನೇ! ಬುದ್ಧನ, ಪದ್ಮಸಂಭವನ, ಇತರ ಬೌದ್ಧ ಗುರುಗಳ ದೊಡ್ಡ ದೊಡ್ಡ ವಿಗ್ರಹಗಳು. ಹೊಂಬಣ್ಣದ ಬುದ್ಧನ ಅರೆನಿಲೀಮಿತ ನೇತ್ರ, ಮುಗುಳ್ನಗು, ಮುಖದಿಂದ ಹೊರಹೊಮ್ಮುವ ಕಾಂತಿ, ಸೂಜಿಬಿದ್ದರೂ ಕೇಳಿಸುವ ಮೌನ, ಮೈಕೊರೆಯುವ ಚಳಿ, ಪಿಸುಮಾತಿನಲ್ಲಷ್ಟೇ ಮಾತಾಡುವ ಮಂದಿ, ಆಗಾಗ ಬಂದು ಕಾಡುವ ತಂಪು ಗಾಳಿ- ಇವೆಲ್ಲ ಸೇರಿ ಅಲ್ಲೊಂದು ಹೊಸ ಲೋಕದ ಸೃಷ್ಟಿಯಾಗಿತ್ತು. ಸಾಲಾಗಿ ಬನ್ನಿ, ಗಲಾಟೆ ಮಾಡಬೇಡಿ ಎಂದು ಕೂಗಿಕೊಳ್ಳುವ ಮಂದಿಯಾಗಲೀ, ಕಾಣಿಕೆಯನ್ನು ಹುಂಡಿಯಲ್ಲೇ ಹಾಕಿ ಎಂಬ ಫಲಕಗಳಾಗಲೀ ಅಲ್ಲಿ ಇರಲಿಲ್ಲ. ಅವುಗಳ ಅಗತ್ಯವೂ ಇರಲಿಲ್ಲವೆನ್ನಿ. ಒಳಗೆ ಮೊಬೈಲ್ ಒಯ್ಯಬೇಡಿ ಎಂದು ಹೇಳಿ ಅದನ್ನು ಎತ್ತಿಡುವ ಒಬ್ಬ ಪೊಲೀಸ್ ಸಿಬ್ಬಂದಿ ಮಾತ್ರ ನಮಗೆ ಸಿಕ್ಕಿದ್ದರು. ದೇಗುಲಗಳ ಒಳಗೆ ಅಲ್ಲೊಬ್ಬ ಇಲ್ಲೊಬ್ಬ ಕೆಂಪನೆಯ ದಿರಿಸು ಧರಿಸಿದ ಅರ್ಚಕರು ಇರುತ್ತಿದ್ದರು.
ದೇವರ ವಿಗ್ರಹಗಳ ಎದುರು ದೊಡ್ಡ ದೊಡ್ಡ ಬಟ್ಟಲಲ್ಲಿ ನೀರು ತುಂಬಿಸಿ ಸಾಲಾಗಿ ಜೋಡಿಸಿದ್ದರು. ಅರೆ, ದೇವರಿಗೆ ನೀರಿನ ನೈವೇದ್ಯವೇ ಎಂದು ಸೋಜಿಗದಿಂದ ಪೆಮಾ ಅವರನ್ನು ಕೇಳಿದೆವು. ‘ಹೌದು, ಇಲ್ಲಿ ಬುದ್ಧನಿಗೆ, ಪದ್ಮಸಂಭವನಿಗೆ ನೀರನ್ನು ಅರ್ಪಿಸುತ್ತಾರೆ. ನಾವೇನೇ ದೇವರಿಗೆ ಅರ್ಪಿಸಿದರೂ ಅದರ ಹಿಂದೊಂದು ಸಣ್ಣ ಆಸೆ ಇದ್ದೇ ಇರುತ್ತದೆ. ಪೂರ್ಣ ಮನಸ್ಸಿನಿಂದ ಅರ್ಪಿಸುವುದಿಲ್ಲ. ಅಯ್ಯೋ ಕೊಡಬೇಕಲ್ಲ ಎಂಬ ಸಣ್ಣ ಯೋಚನೆಯೂ ಮನಸ್ಸಿನಲ್ಲಿದ್ದರೆ ಕೊಡುವುದರ ಹಿಂದೆ ಸರ್ವಸಮರ್ಪಣೆಯ ಭಾವ ಇರುವುದಿಲ್ಲ. ಅದರಿಂದ ವಾಸ್ತವವಾಗಿ ಯಾವ ಪ್ರಯೋಜನವೂ ಇರುವುದಿಲ್ಲ. ನೀರಾದರೆ ಕೊಡುವುದಕ್ಕೆ ವಿಶೇಷ ಖರ್ಚೇನೂ ಇರುವುದಿಲ್ಲ, ಅದರ ಹಿಂದೆ ಕೊಟ್ಟುಬಿಟ್ಟೆವಲ್ಲ ಎಂಬಂಥ ಮನಸ್ಥಿತಿ ಇರುವುದಿಲ್ಲ, ಹಾಗಾಗಿ ನೀರನ್ನೇ ಅರ್ಪಿಸುವ ಪದ್ಧತಿ ಇಲ್ಲಿ ಎಲ್ಲ ಕಡೆ ಇದೆ’ ಎಂದು ಅವರು ವಿವರಿಸಿದರೆ ನಾವು ಕುತೂಹಲದಿಂದ ಕೇಳಿಸಿಕೊಳ್ಳುತ್ತಿದ್ದೆವು. ನಮಗಂತೂ ಇದೊಂದು ಹೊಸ ಪರಿಕಲ್ಪನೆ ಆಗಿತ್ತು.
(ಮುಂದುವರಿಯುವುದು)



