ಸೋಮವಾರ, ಏಪ್ರಿಲ್ 4, 2022

ಉಲಿಯ ಉಯ್ಯಾಲೆ: ತಾಳಮದ್ದಳೆಯೆಂಬ ಮೋಹಕ ಲೋಕ

  • ಪುಸ್ತಕ: ಉಲಿಯ ಉಯ್ಯಾಲೆ
  • ಲೇಖಕರು: ರಾಧಾಕೃಷ್ಣ ಕಲ್ಚಾರ್
  • ಪ್ರಕಾಶಕರು: ಅಕ್ಷರ ಪ್ರಕಾಶನ, ಹೆಗ್ಗೋಡು
  • ಬೆಲೆ: ರೂ. 170
  • ಪ್ರಥಮ ಮುದ್ರಣ: 2022

ಉಲಿಯ ಉಯ್ಯಾಲೆ’ ಎಂಬ ಶೀರ್ಷಿಕೆಯಿಂದಲೇ ಆಕರ್ಷಿಸಲ್ಪಟ್ಟವನು ನಾನು. ಮಾರುಕಟ್ಟೆಯ ದೃಷ್ಟಿಯಿಂದ ನೋಡುವುದಾದರೆ ಪುಸ್ತಕದ ಯಶಸ್ಸಿನಲ್ಲಿ ಶೀರ್ಷಿಕೆಯ ಪಾಲೂ ಇದೆಯಂತೆ. ಆದರೆ ಈ ಪುಸ್ತಕ ಇಷ್ಟವಾಗುವುದಕ್ಕೆ ಹಲವು ಕಾರಣಗಳುಂಟು.

ಕಲ್ಚಾರರು ತಮ್ಮ ಉಲಿಯ ಉಯ್ಯಾಲೆಗೆ ‘ತಾಳಮದ್ದಳೆಯೆಂಬ ಮೋಹಕ ಲೋಕ’ ಎಂಬ ಉಪಶೀರ್ಷಿಕೆ ನೀಡಿದ್ದಾರೆ. ಈ ಪುಸ್ತಕವನ್ನು ಏನೆಂದು ಕರೆಯಬೇಕೆಂದು ಯೋಚಿಸಿದೆ. ಇದು ಆತ್ಮಕಥೆಯೇ?  ಕಾದಂಬರಿಯೇ? ಕಥಾಸಂಕಲನವೇ? ಅಂಕಣಗಳ ಸಂಕಲನವೇ? ತಾಳಮದ್ದಳೆಯ ಇತಿಹಾಸ ಕಥನವೇ? ಈ ಕಲಾಪ್ರಕಾರದ ಭೂತ-ವರ್ತಮಾನಗಳನ್ನು ವಿಶ್ಲೇಷಿಸುವ ವಿಮರ್ಶಾ ಕೃತಿಯೇ?

ಪ್ರತಿಯೊಂದು ಪ್ರಶ್ನೆಗೂ ಒಂದು ಕಡೆಯಿಂದ ಹೌದು ಅಂತಲೂ, ಇನ್ನೊಂದು ಕಡೆಯಿಂದ ಅಲ್ಲ ಅಂತಲೂ ಹೇಳಬೇಕೆಂದು ಅನಿಸುತ್ತದೆ. ಇದು ಇವುಗಳಲ್ಲಿ ಯಾವುದೂ ಅಲ್ಲ, ಮತ್ತು ಎಲ್ಲವೂ ಹೌದು. ಇದು ಇವೆಲ್ಲವುಗಳ ಹೊಸದೊಂದು ಮಿಶ್ರಣ ಅಂತಾದರೂ ಕರೆಯಬಹುದು.

ಆತ್ಮಕಥೆಯೇ? ಇದಕ್ಕೆ ಅಂತಹದೊಂದು ಲಕ್ಷಣ ಇದೆ. ಯಕ್ಷಗಾನದ ಬೀಜ ಬಿತ್ತಲ್ಪಟ್ಟ ಬಾಲ್ಯದ ರೋಚಕ ಪರಿಸರದ ವಿವರಣೆಗಳಿಂದ ತೊಡಗಿ ತಾನು ತಾಳಮದ್ದಳೆಯ ಲೋಕದಲ್ಲಿ ಸಾಗಿಬಂದ ಹಾದಿಯ ಸಿಂಹಾವಲೋಕನವನ್ನು ಲೇಖಕರು ಮಾಡಿದ್ದಾರೆ. ಆದರೆ ಅವರ ಒಟ್ಟಾರೆ ಬದುಕಿನ ಚಿತ್ರಣವಿಲ್ಲ. ಪತ್ರಕರ್ತರಾಗಿ, ಕಥೆಗಾರರಾಗಿ, ಲೇಖಕರಾಗಿ, ಅಧ್ಯಾಪಕರಾಗಿ ಅವರ ಅನುಭವಗಳು ಇಲ್ಲಿ ಬರುವುದಿಲ್ಲ. ಯಕ್ಷಗಾನ ಬದುಕಿನ ವಿವರಗಳೂ ಕಟ್ಟುನಿಟ್ಟಾಗಿ ಕಾಲಾನುಕ್ರಮಣಿಕೆಯ ವ್ಯವಸ್ಥೆಯಲ್ಲಿ ಇಲ್ಲ. ಇದು ತಮ್ಮ ಆತ್ಮಕಥೆಯೇನೂ ಅಲ್ಲವೆಂಬುದನ್ನು ಲೇಖಕರೇ ಸ್ಪಷ್ಟಪಡಿಸಿದ್ದಾರೆ. ಆದರೆ ಇಲ್ಲಿಯ ಶೈಲಿ ಶುದ್ಧ ಆತ್ಮನಿವೇದನೆಯದ್ದು.

ಹಾಗೆಂದು ಇದನ್ನೊಂದು ಸುಲಲಿತ ಕಾದಂಬರಿಯನ್ನಾಗಿಯೂ, ಮೂವತ್ತು ಬಿಡಿ ಲೇಖನ ಅಥವಾ ಸಣ್ಣಸಣ್ಣ ಕಥೆಗಳನ್ನಾಗಿಯೂ ಓದಿಕೊಳ್ಳಬಹುದು. ಪೂರ್ತಿಯಾಗಿ ಓದಿದ ಮೇಲೆ ತಾಳಮದ್ದಳೆಯೆಂಬ ರಂಗಭೂಮಿಯ ಕಳೆದ ಕೆಲವು ದಶಕಗಳ ಒಟ್ಟಾರೆ ಸಾಂಸ್ಕೃತಿಕ ಇತಿಹಾಸದಂತೆಯೂ, ತಾಳಮದ್ದಳೆಯ ಭೂತ-ವರ್ತಮಾನಗಳ ಗಂಭೀರ ತುಲನೆಯಂತೆಯೂ ತೋರಬಹುದು. ನನಗೆ ಹೆಚ್ಚುಕಡಿಮೆ ಇದೇ ಭಾವನೆ ಬಂತು.

ಯಕ್ಷಗಾನ ಕ್ಷೇತ್ರದ ವಿವಿಧ ಆಯಾಮಗಳ ಕುರಿತು ಬಂದ ಪುಸ್ತಕಗಳು ಬಹಳ. ಆದರೆ ಅವುಗಳಲ್ಲಿ ಚಾರಿತ್ರಿಕ ದೃಷ್ಟಿಕೋನದವು ಕಡಿಮೆ. ಬೇರೆಬೇರೆ ಸಂದರ್ಭಗಳಲ್ಲಿ ಈ ಬಗೆಯ ಪ್ರಯತ್ನಗಳು ಆಂಶಿಕವಾಗಿಯಷ್ಟೇ ನಡೆದಿವೆ. ಅದರಲ್ಲೂ ಯಕ್ಷಗಾನದ ಸಮಗ್ರ ಸಾಮಾಜಿಕ ಇತಿಹಾಸದ ರಚನೆ ಇನ್ನಷ್ಟೇ ಆಗಬೇಕಿದೆ. ವಿಶ್ವವಿದ್ಯಾನಿಲಯ/ ಅಕಾಡೆಮಿಗಳಂತಹ ಸಂಸ್ಥೆಗಳ ಹಂತದಲ್ಲಿ, ದೊಡ್ಡಮಟ್ಟದಲ್ಲಿ ಆಗಬೇಕಾದ ಕೆಲಸವದು. ಈ ಕೆಲಸ ದೂರದ ಹಿಮಾಲಯದಂತೆ ಕಂಡರೂ ಎಂದಾದರೊಂದು ದಿನ ಅದರಲ್ಲಿ ತೊಡಗಿಸಿಕೊಳ್ಳಬೇಕು ಎಂಬ ದೊಡ್ಡ ಆಸೆ ನನಗಿದೆ. ಈ ಯೋಚನೆ ಮನಸ್ಸಿನಲ್ಲಿ ಸದಾ ಗುಂಯ್ ಗುಡುವ ಕಾರಣದಿಂದಲೋ ಏನೋ, ‘ಉಲಿಯ ಉಯ್ಯಾಲೆ’ ಒಂದು ಮಹತ್ವದ ಕೃತಿಯಾಗಿ ನನಗೆ ಕಂಡಿತು.

ಮೇಲ್ನೋಟಕ್ಕೆ ಒಬ್ಬ ಯಕ್ಷಗಾನ ಕಲಾವಿದ (ಮುಖ್ಯವಾಗಿ ತಾಳಮದ್ದಳೆ ಕಲಾವಿದ) ಆ ರಂಗಭೂಮಿಯತ್ತ ಆಕರ್ಷಿತನಾಗಿ, ಅದರೊಂದಿಗೆ ಬೆಳೆದ, ಕಂಡ ಏರಿಳಿತಗಳ, ಪಡೆದ ಅನುಭವಗಳ ಇತಿವೃತ್ತವಾಗಿ ಈ ಕೃತಿ ಕಂಡರೂ, ಅದರನ್ನು ಜನರಲೈಸ್ ಮಾಡಿಕೊಳ್ಳಲು ಸಾಧ್ಯವಿದೆ. ಹೀಗಾಗಿ ಇದಕ್ಕೆ ಆತ್ಮಚರಿತ್ರೆಗಿಂತ ಹೆಚ್ಚಿನ ವ್ಯಾಪ್ತಿ ಇದೆ; ಯಕ್ಷಗಾನದ ಸಾಮಾಜಿಕ ಇತಿಹಾಸದ ಭಾಗವಾಗುವ ಶಕ್ತಿ ಇದೆ.

ತಮ್ಮ ಬಾಲ್ಯದ ನೆನಪುಗಳನ್ನು ಹೇಳಿಕೊಂಡ ಮೊದಲ ಐದಾರು ಅಧ್ಯಾಯಗಳಂತೂ ನನಗೆ ವೈಯಕ್ತಿಕವಾಗಿ ಆಪ್ತವೆನಿಸಿದವು. ಕಾರಣ ಅಂತಹದೇ ಬಾಲ್ಯದ ಪರಿಸರ ನನ್ನದೂ ಆಗಿದ್ದದ್ದು. ಬಹುಶಃ ನನ್ನಂತಹವರ ಮತ್ತು ಇದಕ್ಕಿಂತ ಹಿಂದಿನ ತಲೆಮಾರಿನ, ಗ್ರಾಮೀಣ ಪ್ರದೇಶಗಳಿಂದ ಬಂದ ಬಹುತೇಕರ ಬಾಲ್ಯವೂ ಹೀಗೆಯೇ ಇದ್ದಿರಬೇಕು. ವಿಸ್ಮಯದ ಕಲ್ಪನಾಲೋಕವನ್ನು ಕಟ್ಟಿಕೊಟ್ಟ ಅಜ್ಜನ ಕಥೆಗಳು, ಚಂದಮಾಮ, ಆಟ ನೋಡುವ ಹುಚ್ಚು, ಶಾಲಾ ವಾರ್ಷಿಕೋತ್ಸವದ ಯಕ್ಷಗಾನ ಸಂಭ್ರಮ.. ಇದೆಲ್ಲ ನಮ್ಮ ಕಥೆಯೇ ಅಲ್ಲವೇ ಎಂದು ಓದಿದವರಲ್ಲಿ ಹಲವರಿಗೆ ಅನ್ನಿಸಿರಬಹುದು.

ಆತ್ಮಕಥೆ, ಸಾಮಾಜಿಕ ಇತಿಹಾಸದ ಆಚೆಗೂ ಉಲಿಯ ಉಯ್ಯಾಲೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುವುದಕ್ಕೆ ಅದರೊಳಗೆ ಅಂತಃಸ್ರೋತವಾಗಿರುವ ವೈಚಾರಿಕತೆಯೂ ಕಾರಣ. ಈ ವೈಚಾರಿಕತೆಯನ್ನು ಪ್ರತಿಫಲಿಸುವ ಮಾತುಗಳು ಅಲ್ಲಿಂದ ಇಲ್ಲಿಂದ ಉದ್ಧರಿಸಿದವಲ್ಲ. ಬರವಣಿಗೆಯ ಓಘಕ್ಕೆ ಸಹಜವಾಗಿ ಹುಟ್ಟಿಕೊಂಡ ಮನಸ್ಸಿನ ಯೋಚನೆಗಳು. ಬೇಲಿಯ ಮೇಲೆ ತಣ್ಣಗೆ ಪಲ್ಲವಿಸಿದ ಬಳ್ಳಿಗಳ ನಡುವೆ ಅರಳಿಕೊಂಡ ವರ್ಣಮಯ ಪುಷ್ಪಗಳಂತೆ ಅವು ಥಟ್ಟನೆ ಸೆಳೆಯುತ್ತವೆ. ಮನಸ್ಸಿನಲ್ಲಿ ಗಟ್ಟಿಯಾಗಿ ಕೂರುತ್ತವೆ.

ಅಂತಹ ಒಂದೆರಡನ್ನು ಓದುವಾಗ ಗುರುತು ಮಾಡಿಕೊಂಡೆ:

  • ಮೂಲತಃ ಮನುಷ್ಯನಲ್ಲಿ ಇಲ್ಲದಿರುವ ಏನನ್ನೂ ಪರಿಸರ ಬಿತ್ತಲಾರದು (ಪು. 18)
  • ನಾವಿರುವ ಈಗಿನ ತಲೆಮಾರು ಸಾಂಸ್ಕೃತಿಕ ಆಸಕ್ತಿ ಕಳೆದುಕೊಡಿದೆ ಎಂದು ಅಳುತ್ತಿದ್ದೇವೆ. ಅವರಲ್ಲಿ ಆಸಕ್ತಿ ಮೂಡುವುದಕ್ಕೆ ಅಡಿಪಾಯ ಹಾಕುವುದನ್ನೂ ಮರೆತಿದ್ದೇವೆ (ಪು. 23).
  • ಯಾವುದು ನಮ್ಮ ಪ್ರವೃತ್ತಿಗೆ ಒಲಿಯುತ್ತದೋ ಅದನ್ನು ಪರಿಶ್ರಮದಿಂದ ವೃದ್ಧಿಸಿಕೊಳ್ಳಬೇಕಲ್ಲದೆ ನಾನು ಪ್ರತಿಯೊಂದರಲ್ಲೂ ಪರಿಣತಿ ಸಾಧಿಸುತ್ತೇನೆಂಬ ಹಠಕ್ಕೆ ಬಿದ್ದರೆ ಯಾವುದರಲ್ಲೂ ಏಳಿಗೆಯಾಗುವುದಿಲ್ಲ (ಪು. 58-59)
  • ನಮ್ಮ ಹವ್ಯಾಸದ ಕುರಿತು ತೀರಾ ಮೋಹ ಇಟ್ಟುಕೊಳ್ಳುವುದು ಆರೋಗ್ಯಕರವಲ್ಲ (ಪು. 99)
  • ಆದರ್ಶವನ್ನು ಸಾಧಿಸಹೊರಟವನ ಮಾತು ಅರಣ್ಯರೋದನವಾಗುತ್ತದೆ. ಜನರನ್ನು ಮೆಚ್ಚಿಸಹೊರಟವನಿಗೆ ಆತ್ಮಸಾಕ್ಷಿ ಚುಚ್ಚುತ್ತದೆ (ಪು. 142)
  • ಹಳಸಿದ್ದನ್ನು ತಿಂದು ಹೊಟ್ಟೆನೋವು ಬಂದರೆ ತಿಂದವನ ವಿವೇಕ ಪ್ರಶ್ನಾರ್ಹವೇ ಹೊರತು ಹಳಸಿದ ಆಹಾರದ ಅಪರಾಧವಲ್ಲ (ಪು. 147)

ಈ ಬಗೆಯ ಹೊಳಹುಗಳು ತುಂಬ ಇವೆ. ಎಲ್ಲವನ್ನೂ ಇಲ್ಲೇ ಬರೆದರೆ ಮುಂದೆ ಓದುವವರಿಗೆ ಏನೂ ಉಳಿಸದಂತೆ ಆದೀತು. ಪುಸ್ತಕದ ಕೊನೆಯ ಒಂದಷ್ಟು ಲೇಖನಗಳಲ್ಲಿ ತನ್ನ ಅನುಭವವನ್ನು ಹೇಳಿಕೊಳ್ಳುತ್ತಲೇ ಒಟ್ಟಾರೆ ಕ್ಷೇತ್ರದ ವರ್ತಮಾನದ ಪರಿಸ್ಥಿತಿಯ ಅವಲೋಕನವನ್ನೂ ಮಾಡಿದ್ದಾರೆ. ಇತ್ತೀಚೆಗೆ ಬಂದ ಅವರ ‘ಅರ್ಥಾಲೋಕ’ ಈ ವೈಚಾರಿಕತೆಯ ವಿಸ್ತರಣೆಯಂತೆ ಇದೆ.

ಆತ್ಮನಿವೇದನೆ ಅಹಮಿಕೆಯ ಪ್ರದರ್ಶನ ಆಗಬಾರದು ಎಂಬ ಎಚ್ಚರ ತಮಗೆ ಇರುವುದಾಗಿ ಲೇಖಕರು ಪುಸ್ತಕದ ಆರಂಭದಲ್ಲೂ ಕೊನೆಯಲ್ಲೂ ಹೇಳಿಕೊಂಡಿದ್ದಾರೆ. ಅದಕ್ಕೆ ಅವರು ಸಾಕಷ್ಟು ಪ್ರಯತ್ನಪಟ್ಟಿರುವುದು ಗೊತ್ತಾಗುತ್ತದೆ. ನನಗೆ ಇಷ್ಟವಾದ ವಿಷಯವೆಂದರೆ, ಕೆಲವು ಘಟನೆಗಳನ್ನು ನೆನಪಿಸಿಕೊಳ್ಳುತ್ತ ಅವರು ‘ಅಲ್ಲಿ ನಾನು ಪಾಠ ಕಲಿತೆ’, ‘ಇಲ್ಲಿ ನನ್ನ ಅಹಮಿಕೆಗೆ ಪೆಟ್ಟು ಬಿತ್ತು’, ‘ಅಂದು ನಾನು ಹಾಗೆ ಮಾಡಬಾರದಿತ್ತು’ ಇತ್ಯಾದಿಯಾಗಿ ಹೇಳಿರುವುದು. ಪುಸ್ತಕದ ಕೊನೆಯ ಅಧ್ಯಾಯದ ಶೀರ್ಷಿಕೆಯೇ ‘ಮನ್ನಿಸೆನ್ನಪರಾಧವ’ ಎಂದು. ಅನೇಕ ಆತ್ಮಕಥಾರೂಪದ ಕೃತಿಗಳಲ್ಲಿ ಬರೆಹಗಾರ ತನ್ನ ಕುರಿತ ಉದಾತ್ತ ಚಿತ್ರಣವೊಂದನ್ನು ಮಾತ್ರ ಕೊಡಲು ಪ್ರಯತ್ನಿಸುತ್ತಾನೆ. ನೆಗೆಟಿವ್ ಅಂಶಗಳನ್ನು ಯಥಾಸಾಧ್ಯ ಮರೆಮಾಚುತ್ತಾನೆ. ಇದು ಹಾಗಿಲ್ಲದಿರುವುದು ನನ್ನಲ್ಲಿ ಅಚ್ಚರಿಯನ್ನೂ ಮೂಡಿಸಿತು.

ಇಂತಹ ಕೃತಿಗಳು ಕಲ್ಚಾರರಿಂದ ಹಾಗೂ ಇತರ ಕಲಾವಿದರಿಂದ ಇನ್ನಷ್ಟು ಬರಲಿ ಎಂಬುದು ನನ್ನ ಆಶಯ. ತಮ್ಮ ಅನುಭವಗಳನ್ನು ಒಂದು ಚೌಕಟ್ಟಿನಲ್ಲಿಟ್ಟು ಒಂದಷ್ಟು ಕಲಾವಿದರರು ಪ್ರಸ್ತುತಪಡಿಸಲು ಸಾಧ್ಯವಾದರೆ ಅದು ಯಕ್ಷಗಾನ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ಆದೀತು.

ಅಕ್ಷರ ಪ್ರಕಾಶನ ಎಂದಿನಂತೆಯೇ ಈ ಪುಸ್ತಕವನ್ನೂ ಅಚ್ಚುಕಟ್ಟಾಗಿ ಮುದ್ರಿಸಿದೆ. ರಕ್ಷಾಪುಟ ಸೊಗಸಾಗಿದೆ. ಆಸಕ್ತರು ಪುಸ್ತಕಕ್ಕಾಗಿ ಕೃತಿಕಾರ ರಾಧಾಕೃಷ್ಣ ಕಲ್ಚಾರ್ ಅವರನ್ನು (ಮೊ.: 9449086653) ಸಂಪರ್ಕಿಸಿ.

- ಸಿಬಂತಿ ಪದ್ಮನಾಭ ಕೆ. ವಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ