ಶುಕ್ರವಾರ, ಆಗಸ್ಟ್ 21, 2020

ತರತಮ ಭಾವದ ನಿರರ್ಥಕತೆಯನ್ನು ಸಾರುವ 'ಪಲಾಂಡು ಚರಿತ್ರೆ'

ಚಿತ್ರಕೃಪೆ: ಶ್ಯಾಮ್ ಪ್ರಸಾದ್ ಕುಂಚಿನಡ್ಕ

ಶಾಶ್ವತ ಮೌಲ್ಯವಿರುವ ಕೃತಿ ಎಷ್ಟೇ ಹಳತಾದರೂ ಪ್ರಸ್ತುತವಾಗಬಲ್ಲುದು ಎಂಬುದಕ್ಕೆ ಕೆರೋಡಿ ಸುಬ್ಬರಾಯರಪಲಾಂಡು ಚರಿತ್ರೆಉತ್ತಮ ಉದಾಹರಣೆ. ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಇತ್ತೀಚೆಗೆ ರಂಗಕ್ಕೆ ತಂದ ಸುಮಾರು ಒಂದು ಶತಮಾನ ಹಳೆಯದಾದ ಯಕ್ಷಗಾನ ಪ್ರಸಂಗ ಪ್ರತಿಯೊಬ್ಬ ಜೀವಿಗೂ ಇರಬೇಕಾದ ಸಸ್ವರೂಪಜ್ಞಾನ, ವರ್ಗ ಸಂಘರ್ಷದ ಅರ್ಥಹೀನತೆ, ಸಹಬಾಳ್ವೆಯ ಅನಿವಾರ್ಯತೆಗಳನ್ನು ಎತ್ತಿಹಿಡಿದಿದೆ (ಕೆಲ ವರ್ಷಗಳ ಹಿಂದೆ ಹೊಸ್ತೋಟ ಭಾಗವತರು ಮಾಡಿದ ಪ್ರಯೋಗದ ಬಗ್ಗೆ ಕೊನೆಯಲ್ಲಿ ಬರೆದಿದ್ದೇನೆ).

ಮೇಲ್ನೋಟಕ್ಕೆ ಸರಳ ಕಥಾಹಂದರ ಹೊಂದಿರುವಪಲಾಂಡು ಚರಿತ್ರೆತನ್ನೊಳಗೆ ಗಟ್ಟಿ ತಿರುಳನ್ನು ಇಟ್ಟುಕೊಂಡಿದೆ. ಮಣ್ಣಿನಡಿಯಲ್ಲಿ ಬೆಳೆಯುವ ಕಂದಮೂಲಗಳು ಹಾಗೂ ನೆಲದ ಮೇಲೆ ಬೆಳೆಯುವ ಹಣ್ಣುತರಕಾರಿಗಳ ನಡುವೆ ನಡೆಯುವ ಶ್ರೇಷ್ಠತೆ-ಕನಿಷ್ಠತೆಗಳ ವಾಗ್ವಾದವನ್ನು ಪ್ರಸಂಗ ಸ್ವಾರಸ್ಯಕರವಾಗಿ ಕಟ್ಟಿಕೊಟ್ಟಿದೆ. ಶಿವನು ಪಾರ್ವತಿಗೆ ಕಥೆಯನ್ನು ಹೇಳುವ ಫ್ಲಾಶ್ ಬ್ಯಾಕ್ ತಂತ್ರವನ್ನು ಪ್ರಸಂಗ ಅನುಸರಿಸಿದೆ.


ಚೂತರಾಜ (ಮಾವಿನಹಣ್ಣು) ನೆಲದ ಮೇಲಿನವರ ಮುಖ್ಯಸ್ಥ; ತಾನೇ ಶ್ರೇಷ್ಠನೆಂ ಒಣಹಮ್ಮು ಅವನಿಗೆ. ಪಲಾಂಡು (ಈರುಳ್ಳಿ) ನೆಲದಡಿಯವರ ನೇತಾರ. ಎರಡೂ ವರ್ಗದವರ ನಡುವೆ ವಾಗ್ವಾದ ನಡೆದು ಯುದ್ಧದ ಹಂತಕ್ಕೆ ಹೋಗಿ, ಕೊನೆಗೆ ಪರಿಹಾರಕ್ಕಾಗಿ ಶ್ರೀಕೃಷ್ಣನನ್ನು ಭೇಟಿಮಾಡುವ ಸನ್ನಿವೇಶ ಒದಗುತ್ತದೆ.

ಕೃಷ್ಣ ತಕ್ಷಣಕ್ಕೆ ಯಾವ ಪರಿಹಾರವನ್ನೂ ಸೂಚಿಸದೆ ಮೂರು ದಿನ ಇತ್ತಂಡದವರೂ ತನ್ನ ವಿಶ್ರಾಂತಿಧಾಮದಲ್ಲಿ ತಂಗುವಂತೆ ಸೂಚಿಸುತ್ತಾನೆ. ಮೂರು ದಿನ ಕಳೆಯುವ ಹೊತ್ತಿಗೆ ಚೂತರಾಜನ ಬಳಗದವರೆಲ್ಲ (ಮಾವು, ಹಲಸು, ಕುಂಬಳ, ಬೆಂಡೆ, ಮುಂತಾದವರು) ಬಾಡಿ ಕೊಳೆತು ನಾರುವ ಪರಿಸ್ಥಿತಿ ಬಂದರೆ, ಪಲಾಂಡುವಿನ ಬಳಗದವರೆಲ್ಲ (ಈರುಳ್ಳಿ, ಸುವರ್ಣಗಡ್ಡೆ, ಮೂಲಂಗಿ, ಗೆಣಸು, ಮುಂತಾದವರು) ಚಿಗುರಿ ನಳನಳಿಸಲು ಆರಂಭಿಸುತ್ತಾರೆ.

-ಎಂಬಲ್ಲಿಗೆ ಪರಿಹಾರ ತಾನಾಗಿಯೇ ಒದಗಿತಲ್ಲ ಎಂದು ಬುದ್ಧಿವಂತಿಕೆಯ ನಗೆಯಾಡುತ್ತಾನೆ ಶ್ರೀಕೃಷ್ಣ. ಜಗತ್ತಿನಲ್ಲಿ ಮೇಲು-ಕೀಳು ಎಂಬುದೇ ಇಲ್ಲ, ಎಲ್ಲವೂ ಇರುವುದು ಅವರವರ ಭಾವದಲ್ಲಿ ಎಂಬುದನ್ನು ಇತ್ತಂಡದವರಿಗೂ ಮನದಟ್ಟು ಮಾಡಿಸಿ ಕಳಿಸುತ್ತಾನೆ. ಇದು ಪ್ರಸಂಗದ ಸಾರಾಂಶ.

ಯಾವುದೇ ಪ್ರಸಂಗ ಅರ್ಥಪೂರ್ಣವಾಗುವುದು ಅದರ ಆಶಯವನ್ನು ಅರ್ಥಮಾಡಿಕೊಂಡಿರುವ ಕಲಾವಿದರಿಂದ ಎಂಬುದನ್ನು ಸಿರಿಬಾಗಿಲು ಪ್ರತಿಷ್ಠಾನದ ಪ್ರದರ್ಶನ ಮತ್ತೆ ಶ್ರುತಪಡಿಸಿದೆ. ಕೃಷ್ಣನಾಗಿ ಶ್ರೀ ವಾಸುದೇವ ರಂಗ ಭಟ್, ಚೂತರಾಜನಾಗಿ ಶ್ರೀ ರಾಧಾಕೃಷ್ಣ ನಾವಡ ಮಧೂರು, ಪಲಾಂಡುವಾಗಿ ಶ್ರೀ ಪೆರ್ಮುದೆ ಜಯಪ್ರಕಾಶ ಶೆಟ್ಟಿ ತಮ್ಮ ಒಟ್ಟಾರೆ ಮಾತುಗಳಿಂದ ಪ್ರಸಂಗದ ತಿರುಳನ್ನು ತುಂಬ ಮಾರ್ಮಿಕವಾಗಿ ಪ್ರೇಕ್ಷಕರೆದುರು ಬಿಚ್ಚಿಟ್ಟಿದ್ದಾರೆ.

ಸುಲಿದ ಮೇಲೆ ಸಾರವೇನು ಎಂದು ವೇದ್ಯವಾಗುವ ವರ್ಗ ನಿನ್ನದು (ಮಾವಿನ ಕುರಿತಾಗಿ); ಬಿಡಿಸಿದಂತೆ ಅಂತರಂಗ ಅರ್ಥವಾಗುವ ವರ್ಗ ನಿನ್ನದು (ಈರುಳ್ಳಿ ಕುರಿತಾಗಿ)” ಎನ್ನುತ್ತಾ ಕೃಷ್ಣ (ವಾಸುದೇವ ರಂಗ ಭಟ್) ಮಾವು ಮತ್ತು ಈರುಳ್ಳಿಗಳ ಸ್ವರೂಪವನ್ನು ಸೊಗಸಾಗಿ ಕಟ್ಟಿಕೊಡುತ್ತಾನೆ.

ಎತ್ತರದಲ್ಲಿರುವುದು ಹಗುರವಾಗಿರುವುದಕ್ಕೂ ಸಾಧ್ಯ; ಭಾರವಾದದ್ದು ಎತ್ತರದ ಸ್ಥಾನವನ್ನು ಹೊಂದುವುದೂ ಸಾಧ್ಯ. ತಾನಿರುವುದು ಎತ್ತರದಲ್ಲಿ ಎಂಬುದರಿಂದಲೇ ಮೌಲ್ಯ ನಿರ್ಣಯ ಮಾಡಬೇಕಿಲ್ಲಎಂದು ಇನ್ನೊಂದೆಡೆ ಕೃಷ್ಣ ಹೇಳುತ್ತಾನೆ.

ಸುಗುಣ ಎಂದರೆ ತನ್ನನ್ನು ತಾನು ಬಿಟ್ಟುಕೊಡದೆ ಇನ್ನೊಬ್ಬನನ್ನು ಒಪ್ಪುವುದು. ಎತ್ತರದಲ್ಲಿ ಇರುವುದು ಬಾಗುವುದಕ್ಕೆ, ಬಯಸಿದವರಿಗೆ ಲಭ್ಯವಾಗುವುದಕ್ಕೆ. ಪ್ರಕೃತಿ ಇರುವುದೇ ಪರೋಪಕಾರಕ್ಕೆ. ಭಗವಂತನ ಸೃಷ್ಟಿಯಲ್ಲಿ ಯಾವುದೂ ಶ್ರೇಷ್ಠವಲ್ಲ, ಯಾವುದೂ ಕನಿಷ್ಠವಲ್ಲಎನ್ನುತ್ತಾ ಚೂತ-ಪಲಾಂಡುಗಳ ಚರ್ಚೆಗೆ ಮಂಗಳ ಹಾಡುವ ಕೃಷ್ಣ ವಾಸ್ತವವಾಗಿ ಇಡೀ ಮಾನವ ಸಮಾಜ ಯಾವತ್ತೂ ನೆನಪಿನಲ್ಲಿಟ್ಟುಕೊಳ್ಳಬೇಕಾದ ಸಂದೇಶವನ್ನು ಸಾರುತ್ತಾನೆ.

ಒಂದು ಕೃತಿ ಮತ್ತು ಪ್ರದರ್ಶನದ ಯಶಸ್ಸಿಗೆ ಇಷ್ಟು ಸಾಕಲ್ಲವೇ? ಇದನ್ನೇ ಆರಂಭದಲ್ಲಿ ಸಾರ್ವಕಾಲಿಕ ಮೌಲ್ಯ ಎಂದಿರುವುದು. ಧಾರ್ಮಿಕ ಕಲೆಯಾಗಿ ಬೆಳೆದು ಬಂದ ಯಕ್ಷಗಾನದಲ್ಲಿ ನೂರು ವರ್ಷಗಳ ಹಿಂದೆಯೇ ಇಂತಹದೊಂದು ಕಾಲ್ಪನಿಕ/ ಸಾಮಾಜಿಕ ಪ್ರಸಂಗದ ಕಲ್ಪನೆಯನ್ನು ಮಾಡಿದ ಕೆರೋಡಿ ಸುಬ್ಬರಾಯರು, ಮತ್ತು ಅದನ್ನು ಪ್ರದರ್ಶನಕ್ಕೆ ಒಳಪಡಿಸಿದ ಸಿರಿಬಾಗಿಲು ಪ್ರತಿಷ್ಠಾನದ ಶ್ರೀ ರಾಮಕೃಷ್ಣ ಮಯ್ಯರು ನಿಸ್ಸಂಶಯವಾಗಿ ಪ್ರಶಂಸೆಗೆ ಅರ್ಹರು. ಹೈದರಾಬಾದಿನ ಕನ್ನಡ ನಾಟ್ಯರಂಗ ಸಂಸ್ಥೆ ಪ್ರದರ್ಶನಕ್ಕೆ ಪ್ರಧಾನ ಪ್ರಾಯೋಜಕತ್ವ ನೀಡಿದೆ.

ಮಂಗಳೂರು ಮೂಲದ ಕೆರೋಡಿ ಸುಬ್ಬರಾಯರು (1863-1928) ‘ಗವಾನಂದಎಂಬ ಕಾವ್ಯನಾಮವನ್ನು ಹೊಂದಿದ್ದರು. ಶೃಂಗಾರಶತಕ, ಸೌಭಾಗ್ಯವತೀ ಪರಿಣಯ, ಸಮೂಲ ಭಾಷಾಂತರ, ಅನುಕೂಲ ಸಿಂಧು, ಶ್ರೀಕೃಷ್ಣ ಜೋಗುಳ ಮುಂತಾದ ಕೃತಿಗಳನ್ನೂ, ಜರಾಸಂಧವಧೆ, ಕುಮಾರಶೇಖರ, ತಾರಾನಾಥ ಎಂಬ ಯಕ್ಷಗಾನ ಪ್ರಸಂಗಗಳನ್ನೂ ರಚಿಸಿದ್ದರು (ಮಾಹಿತಿ: ಡಾ. ಕಬ್ಬಿನಾಲೆ ವಸಂತ ಭಾರದ್ವಾಜರಕರ್ನಾಟಕ ಯಕ್ಷಗಾನ ಕವಿಚರಿತ್ರೆ’). 'ಪಲಾಂಡು ಚರಿತ್ರೆ'ಯನ್ನು ಉಡುಪಿಯ ಶ್ರೀಮನ್ಮಧ್ವಸಿದ್ಧಾಂತ ಗ್ರಂಥಾಲಯ 1930ರಲ್ಲಿ ಪ್ರಕಟಿಸಿತ್ತು.

ಪಲಾಂಡು ಚರಿತ್ರೆಯನ್ನು ದಿ| ಹೊಸ್ತೋಟ ಮಂಜುನಾಥ ಭಾಗವತರುಪಲಾಂಡು ವಿಜಯಎಂಬ ಹೆಸರಿನಲ್ಲಿ ಒಮ್ಮೆ ರಂಗಕ್ಕೆ ತಂದಿದ್ದರು. ಮುಂದೆ ಅದನ್ನೇ ಸ್ವಲ್ಪ ಬದಲಿಸಿಸಸ್ಯ ಸಂಧಾನಎಂಬ ಪ್ರಸಂಗವನ್ನು ರಚಿಸಿದ್ದರು. ಅದನ್ನು ಶಿರಸಿಯ ಸಹ್ಯಾದಿ ಕಾಲೋನಿ ಮಕ್ಕಳ ಯಕ್ಷಗಾನ ತಂಡ (‘ಸಮಯ ಸಮೂಹ’) ಮೂಲಕ ಪ್ರದರ್ಶಿಸಿದ್ದರು (ಮಾಹಿತಿ: ‘ಒಡಲಿನ ಮಡಿಲು ಯಕ್ಷತಾರೆ: ಬಯಲಾಟದ ನೆನಪುಗಳುಪುಟ 70). ತಾವುನಿಸರ್ಗ ಸಂಧಾನದಂತಹ ಕಾಲ್ಪನಿಕ ಪ್ರಸಂಗಗಳನ್ನು ರಚಿಸಲುಪಲಾಂಡು ಚರಿತ್ರೆಯಂತಹ ಪ್ರಯತ್ನಗಳೇ ಪ್ರೇರಣೆ ಎಂದು ಹೊಸ್ತೋಟ ಭಾಗವತರು ಹೇಳಿಕೊಂಡಿದ್ದಾರೆ.

ಇಂತಹ ಹಳೆಯ ಪ್ರಸಂಗಗಳನ್ನು ಪತ್ತೆ ಮಾಡಿ ಪ್ರಯೋಗಕ್ಕೆ ಒಳಪಡಿಸುವ ನವೀನ ದೃಷ್ಟಿಕೋನಕ್ಕೂ ಯಕ್ಷಗಾನದ ಇತಿಹಾಸದಲ್ಲಿ ಮಹತ್ವದ ಸ್ಥಾನ ಇದೆ. ಕೋರೋನ ಕಾಲದಲ್ಲಿ ಡಿಜಿಟಲ್ ಮಾಧ್ಯಮದ ಸಾಧ್ಯತೆಗಳನ್ನೂ ಪ್ರಯತ್ನ ಎತ್ತಿತೋರಿಸಿದೆ. ಆದ್ದರಿಂದ ಗುಣಮಟ್ಟದ ಛಾಯಾಗ್ರಹಣ ಮತ್ತು ಪ್ರಸಾರವೂ ಇಲ್ಲಿ ಅಭಿನಂದನೀಯ.

'ಪಲಾಂಡು ಚರಿತ್ರೆ' ವೀಡಿಯೋವನ್ನು ಇಲ್ಲಿ ವೀಕ್ಷಿಸಬಹುದು:

 https://www.youtube.com/watch?v=8-Vq7LX8rnc 

 ಸಿಬಂತಿ ಪದ್ಮನಾಭ


ಯಕ್ಷೋಪಾಸನೆ-ಸೂರಿಕುಮೇರು ಕೆ. ಗೋವಿಂದ ಭಟ್ಟರ ಆತ್ಮವೃತ್ತಾಂತ

ಯಕ್ಷೋಪಾಸನೆ-ಸೂರಿಕುಮೇರು ಕೆ. ಗೋವಿಂದ ಭಟ್ಟರ ಆತ್ಮವೃತ್ತಾಂತ

ನಿರೂಪಣೆ: ಡಾ.ಬಿ.ಪ್ರಭಾಕರ ಶಿಶಿಲ

ಪ್ರಕಟಣೆ: ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಸಂಪಾಜೆ. 

ವರ್ಷ: 2008

ಪುಟಗಳು: 252

ಕ್ರಯ: ರೂ 200

ಕಲಾವಿದನೊಬ್ಬನ ಬದುಕು ರಂಗಸ್ಥಳದಲ್ಲಿ ಅತ್ಯಂತ ವೈಭವದಿಂದ ಕೂಡಿರುತ್ತದೆ. ಅಲ್ಲಿ ಆತ ಚಕ್ರವರ್ತಿಯಾಗಿರುತ್ತಾನೆ, ಮೂರು ಲೋಕಗಳನ್ನು ನಡುಗಿಸಬಲ್ಲ ಪರಾಕ್ರಮಿಯಾಗಿರುತ್ತಾನೆ. ಪ್ರೇಕ್ಷಕವೃಂದ ತನ್ನಿಂತಾನಾಗಿ ಅಂತಹ ಕಲಾವಿದರ ಬಗ್ಗೆ ತಮ್ಮದೇ ಆದ ಚಿತ್ರವೊಂದನ್ನು ಮನೋಪಟಲದಲ್ಲಿ ಹೊಂದಿರುತ್ತಾರೆ. ಅದು ಯಕ್ಷಗಾನದಂತಹ ಕಲೆಯ ಮೂಲಕ ಕಲಾವಿದನಿಗೆ ದೊರೆಯುವ ಮಾನ-ಸಮ್ಮಾನ. ಆದರೆ ಕಲಾವಿದನೊಬ್ಬ ಆ ಎತ್ತರಕ್ಕೆ ಬೆಳೆಯುವ ಹಂತದಲ್ಲಿ ಅನುಭವಿಸಿದ ನೋವೇನು, ಪ್ರತೀ ಹೆಜ್ಜೆಗೂ ಸವಾಲನ್ನೇ ತಂದಿಟ್ಟ ಬದುಕಿನ ತಲ್ಲಣಗಳನ್ನು ಮೀರಿ ರಂಗನಾಯಕನಾಗುವ ಪಯಣದ ಚಿತ್ರಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದರಾದ ಶ್ರೀ ಕೆ. ಗೋವಿಂದ ಭಟ್ಟರ ಆತ್ಮಕಥನವನ್ನು ಓದಬೇಕು. ಹೊಸತಲೆಮಾರಿನ ಕಲಾವಿದರಲ್ಲದೇ ಎಲ್ಲರೂ ಓದಲೇಬೇಕಾದ ಕೃತಿಯಿದು. ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ 2008ರಲ್ಲಿ ಪ್ರಕಟಿಸಿದ ಪುಸ್ತಕವಿದು. 

'ಕಲಾವಿದನ ಜೀವನ ಚರಿತ್ರೆಯಿಂದ ಸಾಂಸ್ಕೃತಿಕ ಇತಿಹಾಸದ ತುಣುಕುಗಳು ದೊರೆಯುತ್ತವೆ, ಮತ್ತು ಅವು ಕಲಾಪ್ರಕಾರವೊಂದರ ಪಾರ್ಶ್ವದರ್ಶನಕ್ಕೆ ಸಹಕಾರಿ’ ಎಂಬುದಾದರೆ ತನ್ನ ಬದುಕನ್ನು ಓದುಗರೆದುರು ತೆರೆದಿಡಲು ತನಗೆ ಒಪ್ಪಿಗೆ ಎಂಬ ವಿನಮ್ರತೆಯಿಂದಲೇ ಪ್ರಾರಂಭವಾಗುವ ಅವರ ಕಥನ ನಿಜಕ್ಕೂ ಯಕ್ಷಗಾನ ರಂಗದ ಇತಿಹಾಸ ಬರೆಯುವವರಿಗೆ ಅನೇಕ ಮಜಲುಗಳನ್ನು ತೋರಿಸುತ್ತದೆ. ಕಿನಿಲ ಶಂಕರನಾರಾಯಣ ಭಟ್ಟ, ಕುಕ್ಕೆ ಮನೆ ಲಕ್ಷ್ಮಿ ಅಮ್ಮ ದಂಪತಿಗಳ ಮಗನಾಗಿ ಜನಿಸಿದ ಗೋವಿಂದ ಭಟ್ಟರ ಬಾಲ್ಯ ಕಡುಬಡತನದ್ದು. ಎಲ್ಲ ನೋವುಗಳ ನಡುವೆಯೂ 'ಅಗಲಿಕೆ ಎಂಬುದು ಅಮ್ಮನ ಗರ್ಭದಿಂದ ನಾವು ಹೊರಪ್ರಪಂಚಕ್ಕೆ ಬರುವಾಗಲೇ ಆರಂಭವಾಗುತ್ತದೆ. ಆದರೆ ಮುಳುಗುವವನನ್ನು ಎತ್ತುವ ಕೈಗಳೂ ಇರುತ್ತವೆ.’ ಎಂಬ ನಂಬಿಕೆಯಿಂದ ಮುಂದಿನ ಹೆಜ್ಜೆಗಳನ್ನಿಟ್ಟವರು. 

ಹಸಿವು ಬಡತನಗಳ ನಡುವೆ ಕಂಗೆಟ್ಟಾಗ 'ಬಡವರಿಗೆ ದೇವರು ಕೂಡಾ ಸಹಾಯ ಮಾಡುವುದಿಲ್ಲ’ ಎಂದು ಕಾಡಿದ ವಿಷಾದ ಓದುಗನನ್ನೂ ಕಾಡದೇ ಬಿಡುವುದಿಲ್ಲ. ವಿದ್ವಾಂಸನಾಗಿ ಹೈಸ್ಕೂಲಿನ ದೊಡ್ಡ ಅಧ್ಯಾಪಕನಾಗುವುದು ಮಹತ್ವಾಕಾಂಕ್ಷೆಯಾಗಿತ್ತಾದರೂ ಎಳೆಯ ವಯಸ್ಸಿನಲ್ಲಿಯೇ ಹೆಗಲಿಗೆ ಬಿದ್ದ ಜವಾಬ್ದಾರಿಯಿಂದ ಓದು ಮುಂದುವರಿಸಲಾಗದೇ ಅದು ಈಡೇರಲಿಲ್ಲ. ಆದರೆ 'ಅಧ್ಯಾಪಕರಾದ ಎಷ್ಟು ಮಂದಿ ಗೋವಿಂದ ಭಟ್ಟರುಗಳು ಜನಮಾನಸದಲ್ಲಿ ನೆಲೆಗೊಂಡಿದ್ದಾರೆ?’ ಎಂದು ಯೋಚಿಸಿದರೆ ಅವರು ಧೀಮಂತ ನಾಯಕನಾಗಿ ರಂಗಸ್ಥಳದಲ್ಲಿ ಮೆರೆಯುವುದೇ ದೇವರ ಸಂಕಲ್ಪವಾಗಿತ್ತೆನಿಸುತ್ತದೆ. ಅವರ ತಂದೆ ತೀರಿಕೊಂಡ ದಿನ ಕೃಷ್ಣ ಜೋಯಿಸರು ಹೇಳಿದ ಮಾತು ಅವರಿಗೊಂದು ಪ್ರೇರಣೆಯಾಯಿತೇ ಅಥವಾ ಅದೇ ಆಶೀರ್ವಾದವಾಯಿತೇ ಗೊತ್ತಿಲ್ಲ. ಅಂತೂ ಅವರ ಭವಿತವ್ಯ ಚೆನ್ನಾಗಿರಲಿ ಎಂಬ ಆ ಹಿರಿಯರ ಹರಕೆ ನಿಜವಾದ್ದು ಹೌದು. 

ಜೀವನೋಪಾಯಕ್ಕಾಗಿ ಯಕ್ಷಗಾನ ರಂಗಕ್ಕೆ ಬಂದವರು ಇಂದಿಗೂ ತಮ್ಮನ್ನು ಕಲೋಪಾಸಕ ಎಂದೇ ವಿನಮ್ರವಾಗಿ ಕರೆದುಕೊಳ್ಳುತ್ತಾರೆ ವಿನಾ ಕಲಾವಿದನೆಂದಲ್ಲ. 'ಮಡಿವಂತ ಬ್ರಾಹ್ಮಣರಿಗೆ ಯಕ್ಷಗಾನ ಕಲೆಯ ಬಗ್ಗೆ, ಯಕ್ಷಗಾನ ಕಲಾವಿದರ ಬಗ್ಗೆ ಸದಭಿಪ್ರಾಯವಿರಲಿಲ್ಲ. ಅದು ಕೆಳಜಾತಿಯ ಶೂದ್ರರಿಂದ ಹುಟ್ಟಿ ಬೆಳೆದ ಕಲೆ ಎಂಬ ತಾತ್ಸಾರವಿತ್ತು. ಮೇಳದವರು ಎಂದು ಕಲಾವಿದರನ್ನು ಸಮಾಜ ಹೀಗೆಳೆಯುತ್ತಿತ್ತು. ಯಕ್ಷಗಾನ ಪ್ರದರ್ಶನಗಳನ್ನು ನೋಡಲು ಹೋಗುವ ಜನರು ಕೂಡಾ ಕಲಾವಿದರಿಗೆ ಸಹಪಂಕ್ತಿ ನೀಡದ ಪ್ರಕರಣಗಳಿದ್ದವು. ... ಮೊಮ್ಮಗ ಯಕ್ಷಗಾನ ಮೇಳಕ್ಕೆ ಸೇರಿದರೆ ಕೆಟ್ಟು ಕೆರ ಹಿಡಿಯುತ್ತಾನೆಂದು ಭಾವಿಸಿದ ಅವರು ಕೊನೆಗೆ ನನ್ನನ್ನು ದೈಗೋಳಿಯಲ್ಲಿ ಹೋಟೆಲೊಂದಕ್ಕೆ ಕೆಲಸಕ್ಕೆ ಸೇರಿಸಿದರು. ನಾನು ಯಾರ್ಯಾರದೋ ತಟ್ಟೆ ಗ್ಲಾಸು ತೊಳೆಯುವ ಕೆಲಸಕ್ಕೆ ಸೇರಿಕೊಂಡೆ. ಯಕ್ಷಗಾನ ಕಲಾವಿದನಾಗುವುದಕ್ಕಿಂತ ಅದು ಒಳ್ಳೆಯದೆಂದು ಅಜ್ಜಿ ಭಾವಿಸಿದ್ದರು.’ ಇಂತಹ ಪರಿಸ್ಥಿತಿಯಲ್ಲಿ ಕಲಾರಂಗಕ್ಕೆ ಪದಾರ್ಪಣೆ ಮಾಡಿದವರು ಅವರು. ಆ ಹೆಜ್ಜೆ ವಾಮನನ ಹೆಜ್ಜೆಯಾಯಿತು. 

೧೯೫೦ ರಿಂದೀಚೆ ಮಡಿವಂತ ಬ್ರಾಹ್ಮಣರು ಯಕ್ಷಗಾನವನ್ನು ಶ್ರೇಷ್ಠ ಕಲೆಯೆಂದು ಒಪ್ಪಿಕೊಳ್ಳುವಂತಹ ಸನ್ನಿವೇಶ ಸೃಷ್ಟಿಯಾಗತೊಡಗಿತು. 'ತೆಂಕುತಿಟ್ಟಿನ ಯಕ್ಷಗಾನದ ಕ್ರಮ ಹೇಗೆ?’ ಎಂದು ತನ್ನೊಳಗೇ ತರ್ಕಿಸಿ ಅದಕ್ಕೊಂದು ಶಿಸ್ತಿನ ರೂಪ ಕೊಟ್ಟವರು ಅವರು. 'ತೆಂಕು, ಬಡಗುತಿಟ್ಟುಗಳ ಜತೆ ಭರತನಾಟ್ಯವನ್ನೂ ಮತ್ತು ಕಥಕ್ಕಳಿಯನ್ನು ಯಕ್ಷಗಾನಕ್ಕೆ ಒಗ್ಗುವಂತೆ ಸಂಯೋಜಿಸಿ ಅದನ್ನೊಂದು ಅದ್ಭುತ ಕಲಾಪ್ರಕಾರವನ್ನಾಗಿ ಮಾಡಬಹುದು.’ ಎಂಬ ಯೋಜನೆಯನ್ನು ಅವರ ನಿರ್ದೇಶನದಲ್ಲಿ ಕಾರ್ಯರೂಪಕ್ಕೆ ತರುವ ಕೆಲಸವನ್ನು ಅವರ ಶಿಷ್ಯವೃಂದ ಕೈಗೆತ್ತಿಕೊಳ್ಳಬೇಕು.  

'ಯಕ್ಷಗಾನ ಒಂದು ಕಲಾಸಂಪ್ರದಾಯವೆಂದು ಒಪ್ಪಿಕೊಂಡರೆ ಪೂರ್ವ ರಂಗದ ಜ್ಞಾನವಿಲ್ಲದ ಕಲಾವಿದರಿಗೆ ಕಲೆಯ ಸಮಗ್ರನೋಟ ದಕ್ಕಲಾರದು.’ ಎಂಬ ಅವರ ಮಾತು ಪೂರ್ವರಂಗದ ಅಭ್ಯಾಸದ ಪ್ರಾಮುಖ್ಯತೆಯನ್ನು ಹೇಳುತ್ತದೆ. ಯಕ್ಷಗಾನ ಕಲಾವಿದರಾಗಿಯೂ ಸಂಸ್ಕಾರ ಬೆಳೆಸಿಕೊಳ್ಳಲಾಗದ ಮಂದಿ ನೈದಿಲೆಯ ಅಡಿಯ ಕಪ್ಪೆಗಳು ಎಂಬುದು ಅವರ ಅಭಿಪ್ರಾಯ.  

ತನ್ನ ಮೊದಲ ವೇಷದ ಕುರಿತು ಹೇಳುತ್ತಾ 'ಪ್ರಪಂಚವನ್ನೇ ಗೆದ್ದು ಬಿಡುತ್ತೇನೆ ಎಂಬ ಆತ್ಮವಿಶ್ವಾಸದಿಂದ ನಗೆಮೊಗದಿಂದ ರಂಗ ಪ್ರವೇಶ ಮಾಡಿದೆ. ಹೊಸಹಿತ್ತಿಲು ಮಾಲಿಂಗಣ್ಣನ ಜತೆ ಬಾಲಗೋಪಾಲನಾಗಿ ಎಂದು ನೆನಪಿಸಿಕೊಳ್ಳುತ್ತಾರೆ. ಅಂದು ಏನಾಯಿತು ಎನ್ನುವುದಕ್ಕಿಂತ ತಾನೊಬ್ಬ ಮೇರು ಕಲಾವಿದನಾಗಿ ಮೆರೆಯಬೇಕಾದರೆ ಆ ಹೆಜ್ಜೆ ಮುಖ್ಯವಾದದ್ದೇ ಆಗಿತ್ತು. 

ಕುರಿಯ ವಿಠಲ ಶಾಸ್ತ್ರಿಗಳಿಂದ ಹೆಜ್ಜೆಗಾರಿಕೆ, ಅಜ್ಜ ಬಲಿಪರಿಂದ ಭಾಗವತಿಕೆ, ಮಲ್ಪೆ ಶಂಕರನಾರಾಯಣ ಸಾಮಗರ ಸಾಹಚರ್ಯದಿಂದ ಅರ್ಥಗಾರಿಕೆ ಅಭ್ಯಾಸ ಮುಂದೆ ತುದಿಯಡ್ಕ ವಿಷ್ಣ್ವಯ್ಯನವರಿಂದ ಹಾಗೂ ರಾಮದಾಸ ಸಾಮಗರಿಂದ ಮಾತುಗಾರಿಕೆಯ ವಿಸ್ತಾರ ಎಲ್ಲವನ್ನೂ ಕಲಿತರು. 1969 ರಿಂದ ಧರ್ಮಸ್ಥಳ ಮೇಳದಲ್ಲಿ ತಿರುಗಾಟ. ಕನ್ನಡ ವಿದ್ವಾನ್ ಪರೀಕ್ಷೆ ಕಟ್ಟಲು ಯೋಚಿಸಿದ್ದರಾದರೂ ಅದು ಈಡೇರಲಿಲ್ಲ. 1972ರಲ್ಲಿ ಲಲಿತ ಕಲಾ ಕೇಂದ್ರವನ್ನು ಡಾ. ವೀರೇಂದ್ರ ಹೆಗ್ಗಡೆಯವರು ಪ್ರಾರಂಭಿಸಿದ್ದು ತೆಂಕುತಿಟ್ಟು ಯಕ್ಷಗಾನಕ್ಕೆ ರೂಪ ಒದಗಿಸುವಲ್ಲಿ ಆವಿಷ್ಕಾರಿಕ ಹೆಜ್ಜೆಯಾಯಿತು. ಕುರಿಯವಿಠಲ ಶಾಸ್ತ್ರಿಗಳು ಗುರುಗಳಾಗಿ, ಮಾಂಬಾಡಿ ನಾರಾಯಣ ಭಾಗವತರು ಹಿಮ್ಮೇಳ ಗುರುಗಳಾಗಿದ್ದರು. ಮುಂದೆ ನೆಡ್ಲೆ, ಕರ್ಗಲ್ಲು, ಚಿಪ್ಪಾರು ಮತ್ತು ಗೋವಿಂದ ಭಟ್ಟರ ಪರಿಶ್ರಮದ ಫಲವಾಗಿ ಪಠ್ಯಕ್ರಮಕ್ಕೆ ರೂಪರೇಖೆ, ಕುಕ್ಕಿಲ ಕೃಷ್ಣ ಭಟ್ಟರಿಂದ ಒಪ್ಪಿಗೆ ಪಡೆದರು. ಪ್ರತೀ ತಾಳಕ್ಕೂ ಕನಿಷ್ಟ ಹತ್ತು ರೀತಿಯಲ್ಲಿ, ಏಕತಾಳಕ್ಕೆ ಇಪ್ಪತ್ತನಾಲ್ಕು ರೀತಿ ಕುಣಿಯುವ ಕ್ರಮವನ್ನು ಅಭ್ಯಸಿಸಿದರು. 1985ರಲ್ಲಿ ಉಡುಪಿ ರಾಜಾಂಗಣದಲ್ಲಿ ತೆಂಕು ಬಡಗು ತಿಟ್ಟುಗಳ ಯಕ್ಷಗಾನ ಕಮ್ಮಟ ಶಿವರಾಮ ಕಾರಂತರ ಅಧ್ಯಕ್ಷತೆಯಲ್ಲಿ ನಡೆದಾಗ ಅಪಾರ ಮೆಚ್ಚುಗೆಯನ್ನು ಪಡೆದರು. ಪೇಜಾವರ ವಿಶ್ವೇಶ ತೀರ್ಥ ಶ್ರೀಪಾದರು ತೆಂಕುತಿಟ್ಟಿನ ಪುನರುತ್ಥಾನಕ್ಕೆ ಕಾರಣನೆಂದು ಪ್ರಶಸ್ತಿ ಪತ್ರ ನೀಡಿದರು. 

ಕಲಾ ಕೇಂದ್ರದ ಕುರಿತಾಗಿ ತಮ್ಮ ಬಗ್ಗೆ ಬಂದ ಸಲ್ಲದ ಮಾತುಗಳಿಗೆ ಬೇಸರಗೊಂಡರೂ 'ಸಮಯಸಾಧಕ ನಿಂದಕರನ್ನು ಕಾಲವೇ ಸರಿಪಡಿಸಬೇಕಷ್ಟೇ’ ಎಂಬ ಅರಿವಿನಲ್ಲಿ ನಿರ್ಲಿಪ್ತರಾಗುತ್ತಾರೆ. ಇದು ಬಹುಶಃ ಅನೇಕ ಸಂದರ್ಭಗಳಲ್ಲಿ ನಮಗೆ ಮಾರ್ಗದರ್ಶನವೂ ಹೌದು. ಹತ್ತು ಹಲವು ವನಮಹೋತ್ಸವದ ಬಗ್ಗೆ ಹೇಳುತ್ತಾ 'ಹಲಸು ಮಾವು ನೆಟ್ಟರೆ ಮನುಷ್ಯರಿಗೂ ಪ್ರಾಣಿ ಪಕ್ಷಿಗಳಿಗೂ ಎಷ್ಟು ಪ್ರಯೋಜನ! ಇಂತಹ ವಿಚಾರಗಳು ನಮ್ಮನ್ನು ಆಳುವವರಿಗೆ ಗೊತ್ತಾಗಬೇಕಾದರೆ ಅವರಿಗೆ ಬಡತನ ಆಳ ವಿಸ್ತಾರಗಳ ಅನುಭವವಾಗಿರಬೇಕಲ್ಲಾ?’ ಜೀವನವೆಂಬ ವಿಶ್ವವಿದ್ಯಾಲಯದಲ್ಲಿ ಅವರು ಕಲಿತಪಾಠಗಳು ಇಂತಹ ಹೊಳಹನ್ನು ನೀಡುತ್ತವೆ. 

ಅವರು ಏರಿದಷ್ಟಲ್ಲವಾದರೂ ಅವರನ್ನು ಮಾದರಿಯಾಗಿಟ್ಟುಕೊಂಡು ಬೆಳೆಯಬಯಸುವವರು ಅವರ ಪುಸ್ತಕದ ಓದಿನಿಂದ ಕಲಿಯಬಹುದಾದುದೇ ಬಹಳವಿದೆ. 

ವಿವರವಾದ ಓದು ನಿಮ್ಮದಾಗಲಿ! 

- ಆರತಿ ಪಟ್ರಮೆ

ಗುರುವಾರ, ನವೆಂಬರ್ 14, 2019

ಒಂದು ಚಂದದ ತಾಳಮದ್ದಳೆಯ ಗುಂಗಿನಲ್ಲಿ...


ಭರತಾಗಮನದಲ್ಲಿ ಅಂಥದ್ದೇನಿದೆ? ಕಾಡಿಗೆ ಹೋದ ರಾಮನನ್ನು ಕರೆತರುವುದಕ್ಕೆ ಭರತ ಹೋದ. ರಾಮ ಒಪ್ಪದ್ದರಿಂದ ಪಾದುಕೆಯೊಂದಿಗೆ ಹಿಂತಿರುಗಿದ- ಇಷ್ಟೇ ಅಲ್ವೋ?” ಅಂತ ತಾಳಮದ್ದಳೆಗೆ ಎರಡು ದಿನ ಇರುವಾಗ ಸ್ನೇಹಿತರೊಬ್ಬರು ಕೇಳಿದರು. “ಕಥೆ ಸರಳವಾಗಿದೆ, ಆದರೆ ವಿಷಯ ಅಷ್ಟೊಂದು ಸರಳ ಇಲ್ಲ. ಅದರೊಳಗೆ ತುಂಬ ಚಂದ ಉಂಟು” ಅಂತ ನಾನು ನನಗೆ ತಿಳಿದ ಹಾಗೆ ವಿವರಣೆ ಕೊಟ್ಟೆ. ಆದರೆ ನಿಜವಾಗಿಯೂ ಅದರೊಳಗೆ ತುಂಬ ಚಂದ ಉಂಟು ಅಂತ ತೋರಿಸಿಕೊಟ್ಟದ್ದು ಅಂದು ಅದನ್ನು ಚಿತ್ರಿಸಿದ ಕಲಾವಿದರು.

ಹೀಗೆ ಬರೆಯುವುದಕ್ಕೆ ಮುನ್ನ ತಾಳಮದ್ದಳೆಯ ವೀಡಿಯೋವನ್ನು ಎರಡು ಸಲ ಪೂರ್ತಿಯಾಗಿ ನೋಡಿದ್ದೇನೆ. ನೋಡಿದ ಮೇಲೆ ಬರೆಯದಿರುವುದಕ್ಕೆ ಆಗುತ್ತಿಲ್ಲ.

ತಾಳಮದ್ದಳೆಯನ್ನು ವಿಮರ್ಶೆ ಮಾಡುವಷ್ಟು ಅನುಭವವೂ ತಿಳುವಳಿಕೆಯೂ ಇಲ್ಲ ನನಗೆ. ಆದರೆ ಒಬ್ಬ ಪ್ರೇಕ್ಷಕನಾಗಿ ಯಾವುದು ಇಷ್ಟವಾಯಿತು ಅಂತ ಹೇಳಬಲ್ಲೆ. ಇದನ್ನು ಇನ್ನೂ ಒಂದಷ್ಟು ಮಂದಿ ಆಸ್ವಾದಿಸಬಹುದಲ್ಲ ಎಂಬ ಉದ್ದೇಶ ಕೂಡ.

ಆ ಪ್ರಸಂಗವೇ ಹಾಗೆ- ಒಂದು ಕಡೆಗೆ ಭಾವುಕತೆಯ ಓಟ, ಇನ್ನೊಂದು ಕಡೆಗೆ ಸ್ಥಿತಪ್ರಜ್ಞತೆಯ ಒಡ್ಡು. ಈ ಎರಡೂ ವೈಶಿಷ್ಟ್ಯಗಳನ್ನು ಅಷ್ಟೇ ಸಶಕ್ತವಾಗಿ ಕಟ್ಟಿಕೊಟ್ಟವರು ಹಿರಿಯ ಕಲಾವಿದರಾದ ಗಣರಾಜ ಕುಂಬ್ಳೆ ಹಾಗೂ ರಾಧಾಕೃಷ್ಣ ಕಲ್ಚಾರರು. ತಾಳಮದ್ದಳೆಗಳು ಇಷ್ಟವಾಗುವುದೇ ಅದಕ್ಕೆ. ಇಲ್ಲಿ ಕಲಾವಿದರಿಗೆ ಇರುವ ಸವಾಲುಗಳು ಬೇರೆ ತರಹದವು. ವೇಷಭೂಷಣ ಇಲ್ಲ, ಬಣ್ಣಗಾರಿಕೆ ಇಲ್ಲ, ನೃತ್ಯವಿಲ್ಲ, ಅಭಿನಯವಿಲ್ಲ; ಎಲ್ಲವೂ ನಿಂತಿರುವುದು ಮಾತಿನ ಮಂಟಪದ ಮೇಲೆ. ಇಡೀ ಪಾತ್ರಚಿತ್ರಣಕ್ಕೆ ಮಾತು ಮತ್ತು ಅದರೊಳಗೆ ಸೇರಿಕೊಂಡ ಭಾವವೇ ಆಧಾರ. ಹಾಗಾಗಿ ತಾನಾಡುವ ಒಂದೊಂದು ಮಾತಿನ ಮೇಲೂ ಕಲಾವಿದನಿಗೆ ಅಪಾರ ಎಚ್ಚರ ಬೇಕು. ಹಾಗೆಂದು ಅವು ಕೃತಕವೂ ಅನ್ನಿಸಬಾರದು, ನದಿ ನೀರಿನಂತೆ ಸಹಜವಾಗಿ ಹರಿಯಬೇಕು. ಹೇಳಿಕೇಳಿ ಪ್ರಸಂಗದ ಪದ್ಯಗಳ ಹೊರತಾಗಿ ಯಕ್ಷಗಾನದಲ್ಲಿ ಉಳಿದೆಲ್ಲವೂ ಆಶು. ಆ ಕ್ಷಣಕ್ಕೆ ಕಲಾವಿದನ ಮನಸ್ಸಲ್ಲಿ ಏನು ಹುಟ್ಟಿತೋ ಅದೇ ಅವನ ಪಾತ್ರ. ಇರಲಿ.

ಕಲ್ಚಾರರು ‘ಉತ್ಥಾನ’ ಪತ್ರಿಕೆಯಲ್ಲಿ ಬರೆಯುತ್ತಿರುವ ‘ಪರಕಾಯ ಪ್ರವೇಶ’ ಅಂಕಣದಿಂದಲೂ ಸಾಕಷ್ಟು ಮಂದಿಯ ಅಭಿಮಾನವನ್ನು ಪಡೆದವರು. ಮೊನ್ನೆಯೂ ಭರತನಾಗಿ ಪರಕಾಯ ಪ್ರವೇಶ ಮಾಡಿದ್ದರು. ಕೂಡಲೇ ಅಯೋಧ್ಯೆಗೆ ಬಂದು ತನ್ನನ್ನು ಕಾಣತಕ್ಕದ್ದು ಎಂಬ ಗುರು ವಸಿಷ್ಠರ ಸಂಕ್ಷಿಪ್ತ ಸಂದೇಶ, ಅದರ ಹಿಂದೆ ಕವಿದಿದ್ದ ನಿಗೂಢತೆ, ಅದನ್ನು ಇನ್ನಷ್ಟು ಗಾಢಗೊಳಿಸಿದ ಹಿಂದಿನ ಇರುಳ ದುಃಸ್ವಪ್ನ, ಕೇಕಯದಿಂದ ಆತುರಾತುರವಾಗಿ ಮರಳುತ್ತಲೇ ಕಣ್ಣಿಗೆ ರಾಚಿದ ನಗರದ ಪ್ರೇತಕಳೆ – ಈ ಎಲ್ಲದರ ಬೆನ್ನಿಗೆ ವಸಿಷ್ಠರ ಮೂಲಕ ತಿಳಿದ ತಂದೆಯ ಮರಣವಾರ್ತೆ, ತಂದೆಗಿಂತಲೂ ಹೆಚ್ಚಾಗಿದ್ದ ಅಣ್ಣ ರಾಮಚಂದ್ರನ ವನವಾಸದ ವಿಚಾರ... ಅಂತಹ ಒಂದು ಸಂಕೀರ್ಣ ಪರಿಸ್ಥಿತಿಯನ್ನೂ ಮನಸ್ಥಿತಿಯನ್ನೂ ಚಿತ್ರಿಸುವುದು ಸುಲಭದ ಕೆಲಸವೇನೂ ಅಲ್ಲ. ಆದರೆ ಕಲ್ಚಾರರು ಅದನ್ನು ತುಂಬ ಸಲೀಸಾಗಿ, ಸಹಜವಾಗಿ ಮಾಡಿದರು. ಚಡಪಡಿಕೆ, ಭಯ, ಆತಂಕ, ವಿಹ್ವಲತೆ, ದುಃಖ ಇವೆಲ್ಲದರ ನಡುವೆ “ಪ್ರಳಯಕಾಲದ ರುದ್ರನಂತೆ ಆರ್ಭಟಿಸಿ ಕಂಗಳ ಮೇಲೆ ಕಿಡಿಗೆದರಿ ಹೊಳೆವ ಖಡ್ಗವಗೊಂಡು ಮಾತೆಯ ಕಡಿವೆನೆಂದು” ಹೊರಡುವ ಭರತನನ್ನು ಕೇವಲ ಮಾತು ಮತ್ತದರ ಭಾವತೀವ್ರತೆಯಿಂದಲೇ ತೋರಿಸಿಕೊಡಬೇಕು.

ರಾಮನನ್ನು ಮತ್ತೆ ಅಯೋಧ್ಯೆಗೆ ಕರೆತರುವೆನೆಂದು ಮಂದಿ ಮಾರ್ಬಲದೊಂದಿಗೆ ಚಿತ್ರಕೂಟಕ್ಕೆ ಧಾವಿಸಿ ಅಣ್ಣನ ಪಾದಕ್ಕೆ ಬೀಳುವ ಭರತ ತಂದೆಯ ಮರಣದ ಸುದ್ದಿಯನ್ನು ಆತನಿಗೆ ತಿಳಿಸುವ ಸನ್ನಿವೇಶ ಎಂತಹವರ ಎದೆಯನ್ನೂ ಆರ್ದ್ರವಾಗಿಸದೆ ಇರದು. ಕಲ್ಚಾರರ ಭರತ ಹೇಳುವ ಪರಿ ಇದು, ಕೇಳಿ:

“ಒಂದು ಹೊತ್ತು ಉಂಡುಹೋಗಪ್ಪಾ ಅಂತ ತಂದೆಯವರು ನಿನ್ನಲ್ಲಿ ಯಾಚಿಸಿದರಂತೆ. ಮನುಷ್ಯರ ಮನಸ್ಸು ಯಾವಾಗ ಹೇಗೆ ಚಂಚಲಗೊಳ್ಳುತ್ತದೋ ಗೊತ್ತಿಲ್ಲ, ಹಾಗಾಗಿ ನನಗೆ ಉಣ್ಣುವುದಕ್ಕೆ ವ್ಯವಧಾನವಿಲ್ಲ, ಹೊರಟೆ ಅಂತ ನೀನು ಹೊರಟಿಯಂತೆ. ನೀನು ತಿರುಗಿ ನೋಡ್ಲಿಲ್ಲ ಅಯೋಧ್ಯೆಯನ್ನು. ನೀನು ತಿರುಗಿ ನೋಡ್ಲಿಲ್ಲ ನಮ್ಮ ತಂದೆಯನ್ನು. ನೀನು ತಿರುಗಿ ನೋಡ್ಲಿಲ್ಲ ಅಯೋಧ್ಯೆಯ ಪ್ರಜೆಗಳನ್ನು, ನಮ್ಮ ತಾಯಂದಿರನ್ನು. ಅಣ್ಣಾ, ನಮ್ಮ ತಂದೆಯವರು ರಾಮಾ ರಾಮಾ ರಾಮಾ ಅಂತ ವಿಲಪಿಸ್ತಾ ನಿನ್ನನ್ನು ಹಿಂಬಾಲಿಸುವ ಪ್ರಯತ್ನವನ್ನು ಮಾಡಿದರಂತೆ. ಆದರೆ ಬೀದಿಯ ಧೂಳಿನಲ್ಲಿ ಬಿದ್ದು ಮೈಯೆಲ್ಲ ಮಣ್ಣಾಗಿ ಕಣ್ಣೀರು ಹರಿಸ್ತಾ ತರಚು ಗಾಯಗಳಿಂದ ನೆತ್ತರನ್ನು ಹರಿಯಿಸ್ತಾ ‘ನನ್ನನ್ನು ಕೌಸಲ್ಯೆಯ ಅಂತಃಪುರಕ್ಕೆ ಕೊಂಡೊಯ್ಯಿರಿ’ ಅಂತ ಆಡಿದರಂತೆ. ಆಮೇಲೆ ಅವರು ಮಾತನಾಡ್ಲಿಲ್ಲ. ಉಣ್ಣಲೂ ಇಲ್ಲ. ಎಂಟು ದಿನಗಳ ಕಾಲ ಹಾಗೆಯೇ ರಾಮಾ ರಾಮಾ ರಾಮಾ ಎಂಬ ವಿಲಾಪವನ್ನುಳಿದು ಬೇರೆ ಏನೂ ಇಲ್ಲದೆ… ಬೇರೆ ಏನೂ ಇಲ್ಲದೆ… ಅನ್ನ ಉಣ್ಣದೆ ಎಂಟು ದಿನ ಇದ್ದು… ನಮ್ಮಪ್ಪ… ನಮ್ಮಪ್ಪ…”

ಎಂದು ಮಾತನ್ನು ಅರ್ಧಕ್ಕೆ ನಿಲ್ಲಿಸುತ್ತಾನೆ ಭರತ. ಆಮೇಲೆ ಒಂದು ಸುದೀರ್ಘ ಮೌನ. ರಾಮನಿಗೂ ಮಾತು ಬಾರದು. ಆ ನೀರವಕ್ಕೆ ಭಾಗವತರ ಶ್ರುತಿ ಮಾತ್ರ ಜತೆಯಾಗಿ ಹುಟ್ಟುವ ಭಾವಕ್ಕೆ ಪ್ರೇಕ್ಷಕನ ಕಣ್ಣಂಚು ಒದ್ದೆಯಾಗದಿದ್ದರೆ ಅವನು ಸಹೃದಯನೇ ಅಲ್ಲ.
“ನನ್ನ ಒಡಹುಟ್ಟಿದ ಹಿರಿಯಣ್ಣ ಗೆಡ್ಡೆಗೆಣಸುಗಳನ್ನು ತಿನ್ನುತ್ತಾ ಮರದ ನೆರಳಿನಲ್ಲಿ ಕಲ್ಲು ನೆಲದ ಮೇಲೆ ಮೈಚಾಚಿದ್ದಾನೆ ಎನ್ನುವುದನ್ನೆಣಿಸಿಯೂ ಒಂದು ತುತ್ತು ಅನ್ನ ಉಣ್ಣುವುದಕ್ಕೆ ನನಗೆ ಸಾಧ್ಯವಾದರೆ ನಾನು ನಿನ್ನ ತಮ್ಮನೇ? ಆ ಸುಖದ ತಲ್ಪದ ಮೇಲೆ ಮಲಗಿದರೆ ಒಂದು ಕ್ಷಣವಾದರೂ ನನಗೆ ಹಿತವೆನಿಸೀತೇ? ಬಣ್ಣವೇ ತನಗೆ ಊರು? ಪುಣ್ಯ ಪುರುಷ ನಿನ್ನ ಪಾದದಿಂದ ಎನ್ನ ಎದೆಯನ್ನು ಮೆಟ್ಟಿ ಅಯೋಧ್ಯೆಗೆ ಬಂದರೂ ನನಗೆ ಸಂತೋಷ…” 
ಎಂದು ಭರತ ಮತ್ತೆ ಕಣ್ಣೀರಾಗುವ ಹೊತ್ತಿಗೆ ಆತನ ಇಡಿಯ ಚಿತ್ರ ಪ್ರೇಕ್ಷಕನ ಮನಸ್ಸಲ್ಲಿ ಭದ್ರವಾಗತೊಡಗುತ್ತದೆ.
ಈ ಭಾವಪ್ರವಾಹದ ದಂಡೆಯಲ್ಲಿ ನಿಂತು ನದಿಯಾಚೆಯನ್ನು ಗಮನಿಸಲು ಪ್ರೇಕ್ಷಕನಿಗೆ ನೆರವಾಗುವುದು ಕುಂಬ್ಳೆಯವರ ರಾಮ. “ನದಿಯನ್ನು ದಾಟುವುದು ದೊಡ್ಡದಲ್ಲ, ಆದರೆ ಈ ಪ್ರೀತಿಯ ನದಿಯನ್ನು ದಾಟುವುದು ಬಹಳ ಕಷ್ಟ” ಎಂದೇ ಪ್ರಸಂಗದ ಆರಂಭದಲ್ಲಿ ಮಾತು ಆರಂಭಿಸುತ್ತಾನೆ ರಾಮ. ಅವನು ಹೇಳುವುದು ಅಯೋಧ್ಯೆಯ ಜನರ, ಸೀತೆ-ಲಕ್ಷ್ಮಣ-ಗುಹ ಮುಂತಾದವರ ಪ್ರೀತಿಯ ಸೆಳೆತದ ಬಗ್ಗೆ.

“ಭರತ ದೊಡ್ಡ ಸೈನ್ಯದೊಂದಿಗೆ ಸಮೀಪಿಸುತ್ತಿದ್ದಾನೆ. ನಾವು ಕಾಡಿನಲ್ಲಿಯೂ ಇರಕೂಡದು ಎಂಬ ಉದ್ದೇಶದಿಂದಲೇ ಇರಬೇಕು. ನೀನೊಂದು ಅಪ್ಪಣೆ ಕೊಟ್ಟರೆ ಹತ್ತಿದ ನೇರಳೆ ಮರದ ಹಣ್ಣು ಉದುರಿಸುವ ಹಾಗೆ ಅವರನ್ನೆಲ್ಲ ಕೆಡಹಿಬಿಡುತ್ತೇನೆ” ಎಂದು ಸಿಟ್ಟಿನಿಂದ ಅಬ್ಬರಿಸುವ ಲಕ್ಷ್ಮಣನಿಗೆ ರಾಮ ಹೇಳುವ ಮಾತಿದು: “ನೇರಳೆ ಹಣ್ಣು ಪೂರ್ತಿ ಉದುರಿಬಿಟ್ಟರೆ ನಾಳೆಗೆ ನಮಗೆ ಹಣ್ಣಿಲ್ಲಾಂತ ಆದೀತು ತಮ್ಮಾ. ನೀನು ಯಾರು, ನಾನು ಯಾರು, ಭರತ ಯಾರು? ನಾವೆಲ್ಲ ಒಂದೇ ಮರದಲ್ಲಿ ಹುಟ್ಟಿದ ನೇರಳೆ ಹಣ್ಣಿನ ಹಾಗೆ.” ಅದು ರಾಮ. ನಿನಗೆ ಹೇಳದೇ ಕಾಡಿಗೆ ಹೊರಟದ್ದು ತನ್ನ ತಪ್ಪು ಎನ್ನುತ್ತಾನೆ ಅವನು ಭರತನನ್ನುದ್ದೇಶಿಸಿ. ತಂದೆಯ ಮರಣದ ವಾರ್ತೆ ಕೇಳಿ ಸೀತಾ ಲಕ್ಷ್ಮಣರು ಒಂದು ಕ್ಷಣ ಮೂರ್ಛಿತರಾದರೂ ತಾನು ಪ್ರಜ್ಞೆ ತಪ್ಪಲಿಲ್ಲ ಎನ್ನುತ್ತಾ, “ಈ ಸಂದರ್ಭದಲ್ಲಿ ಎಚ್ಚರ ತಪ್ಪುವುದಕ್ಕಿಂತ ಎಚ್ಚರವಿರುವುದೇ ಒಳ್ಳೆಯದು” ಎನ್ನುತ್ತಾನೆ. ಇದಲ್ಲವೇ ರಾಮ?

“ಇವರೆಲ್ಲ ಅಯೋಧ್ಯೆಯಲ್ಲಿರಬೇಕಾದವರು. ಇವರೆಲ್ಲ ಅರಣ್ಯದಲ್ಲೇ ಉಳಿದರೆ, ಅರಣ್ಯವೇ ಅಯೋಧ್ಯೆಯಾಗುತ್ತದೆ; ಅತ್ತ ಅಯೋಧ್ಯೆ ಅರಣ್ಯವಾಗುತ್ತದೆ. ಯಾವುದು ಎಲ್ಲೆಲ್ಲಿ ಇರಬೇಕೋ ಅಲ್ಲಲ್ಲೇ ಇರಬೇಕು” – ಅದು ತಾನೂ ಅಯೋಧ್ಯೆಗೆ ತೆರಳುವುದಿಲ್ಲ ಎಂದು ಪಟ್ಟು ಹಿಡಿದು ಕೂತ ಭರತನಿಗೆ ರಾಮ ಹೇಳುವ ಮಾತು.

“ಬದುಕಿನಲ್ಲಿ ಬರುವ ಕಷ್ಟ ಸೂರ್ಯನಿಗೆ ಮೋಡ ಅಡ್ಡ ಬಂದ ಹಾಗೆ. ಅಲ್ಪಕಾಲ ಮಾತ್ರ. ಜೋರಾದ ಗಾಳಿ ಬಂದರೆ ಬೇಗನೆ ಹಾರಿ ಹೋಗ್ತದೆ. ನಿಧಾನವಾಗಿ ಬಂತು ಅಂತಾದ್ರೆ ಸ್ವಲ್ಪ ಹೊತ್ತು ನೆರಳಾಗಿರ್ತದೆ ಅಷ್ಟೆ. ಅದನ್ನು ಕತ್ತಲೆ ಅಂತ ಯಾಕೆ ತಿಳೀಬೇಕು? ನೆರಳು ಅಂತ ತಿಳೀಬಹುದಲ್ಲ?” ಅಂತ ಭರತನಿಗೆ ಸಮಾಧಾನ ಹೇಳುತ್ತಾನೆ ರಾಮ. ಉದಾತ್ತಪುರುಷನ ಒಟ್ಟಾರೆ ವ್ಯಕ್ತಿತ್ವ ಎಷ್ಟೊಂದು ಸರಳ ಶಬ್ದಗಳಲ್ಲಿ!

ರಾಮಕುಂಜದಲ್ಲಿ ಪಿಯುಸಿ ವಿದ್ಯಾರ್ಥಿಯಾಗಿದ್ದಾಗ ರಾಮಾಯಣದರ್ಶನಂ ಅಂತಹ ಕಾವ್ಯಗಳ ಪಾಠವನ್ನು ಕುಂಬ್ಳೆಯವರಿಂದ ಹೇಳಿಸಿಕೊಂಡ ನನಗಂತೂ ಮತ್ತೊಮ್ಮೆ ಅವರ ತರಗತಿಯಲ್ಲಿ ಕುಳಿತ ಅನುಭವ. ಅವರ ತರಗತಿಯೂ ಹೀಗೆ ತಾಳಮದ್ದಳೆಯ ಹಾಗೆ.

ಕಲಾವಿದ ಪಾತ್ರದೊಳಗೆ ಹೊಕ್ಕಾಗ ಸಹಜವಾಗಿ ಬರುವ ಕೆಲವು ಮಾತುಗಳು ಎಷ್ಟು ಅದ್ಭುತವಾಗಿರಬಲ್ಲವು ಎಂಬುದಕ್ಕೆ ಇಬ್ಬರೂ ಆಡಿದ ಕೆಲವು ವಾಕ್ಯಗಳು ಸಾಕ್ಷಿ.

“ನಮಗೆ ವರವಾಗಿ ಒದಗಬೇಕಾದ್ದು ಇನ್ನೊಬ್ಬರಿಗೆ ಶಾಪವಾಗಬಾರದಲ್ಲ ಗುರುಗಳೇ… ಊರಿಗೆ ಉಪಟಳ ಕೊಟ್ಟು ಯಾರು ಸುಖವಾಗಿದ್ದಾರು?” ಎಂದು ವಸಿಷ್ಠರನ್ನು ಪ್ರಶ್ನಿಸುತ್ತಾನೆ ಭರತ. ಕೈಕೇಯಿ ತನ್ನ ಸ್ವಾರ್ಥಕ್ಕಾಗಿ ಕೇಳಿದ ವರಕ್ಕೆ ಮಹತ್ವ ನೀಡಬೇಕಾಗಿಲ್ಲ ಎಂದು ರಾಮನಿಗೆ ಹೇಳುತ್ತಾ “ಅಂತಃಪುರದ ಪಿಸುಧ್ವನಿಗಳಿಗೆ ನಾವು ಸಾರ್ವಜನಿಕ ಮೌಲ್ಯ ಕೊಡಬೇಕು ಅಂತ ಇಲ್ಲ” ಎಂದ ಆತನ ಮಾತಂದೂ ಚೌಕಟ್ಟು ಹಾಕಿಸಿ ಇಡುವಂತಿತ್ತು.
ಮಾತಿನಲ್ಲಿ ಎಳ್ಳಿನಷ್ಟೂ ರಾಜಕೀಯವನ್ನು ಬೆರೆಸದೆಯೇ ರಾಮ-ಭರತ ಇಬ್ಬರೂ ತಮ್ಮ ಮಾತುಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ತಂದದ್ದಂತೂ ಮನೋಹರವಾಗಿತ್ತು. “ಜನಾಭಿಪ್ರಾಯಕ್ಕೆ ವಿರೋಧವಾಗಿ ಸಿಂಹಾಸನವೇರಿದ ಅರಸ ಎಷ್ಟು ಕಾಲ ಉಳಿದಾನು?” “ಆಳುವುದಕ್ಕೆ ಸಿಂಹಾಸನ ಏರಬೇಕೆಂದೇನೂ ಇಲ್ಲ” “ಎಲ್ಲರೂ ಒಟ್ಟು ಸೇರಿ ಆಡಳಿತ ಮಾಡಿದ್ರೆ ದೇಶ ಉದ್ಧಾರ ಆಗುವುದಿಲ್ಲ” ಎಂಬ ಭರತನ ಮಾತುಗಳು; “ನಿಜವಾಗಿ ಹೇಳುವುದಿದ್ರೆ, ಆಳುವವರು ಆಳಿಸಿಕೊಳ್ಳುವವರು ಅಂತ ಭೇದ ಇರಬಾರದು. ಆಗಲೇ ಒಳ್ಳೆಯ ಆಳ್ವಿಕೆ ಬರುವುದು” ಎಂಬ ರಾಮನ ಮಾತು – ಎಲ್ಲವೂ ಆಯಾ ಪಾತ್ರಪೋಷಣೆಗೆ ಕಾರಣವಾದವಲ್ಲದೆ, ವರ್ತಮಾನದ ಸಮಾಜಕ್ಕೆ ಕೊಟ್ಟ ಸಂದೇಶಗಳಂತೆಯೂ ಇದ್ದವು.

“ಭರತನಲ್ಲಿ ಒಂದು ತ್ಯಾಗ ಇದೆ. ಆದ್ದರಿಂದಲೇ ಭರತ ಭರತನಾದ ಮತ್ತು ಭರಿತನಾದ” ಎಂದು ಪ್ರಸಂಗದ ಕೊನೆಯಲ್ಲಿ ರಾಮನಾಡುವ ಮಾತು, ತಾನು ಅಯೋಧ್ಯೆಗೆ ಹೋಗದೆ ನಂದಿಗ್ರಾಮದಲ್ಲೇ ಉಳಿದುಕೊಂಡು “ಈಶ್ವರಾಲಯದ ಮುಂದೆ ಸ್ಥಾಪನೆಯಾದ ನಂದಿಯ ಹಾಗೆ” ರಾಮನ ನಿರೀಕ್ಷೆಯಲ್ಲಿರುತ್ತೇನೆ ಎಂದು ಭರತನಾಡುವ ಮಾತು- ಇವೆರಡಂತೂ ಒಟ್ಟಾರೆ ಕಥನಕ್ಕೊಂದು ಅರ್ಥಪೂರ್ಣ ಉಪಸಂಹಾರ ಬರೆದಂತಿದ್ದವು.

ಕಲಾವಿದರ ಪಾತ್ರಪೋಷಣೆಗೆ ಅವರಷ್ಟೇ ಕಾರಣವಾದದ್ದು ಜತೆಗಿದ್ದ ಅದ್ಭುತ ಹಿಮ್ಮೇಳ ಎನ್ನದಿದ್ದರೆ ಇಲ್ಲಿಯವರೆಗೆ ಹೇಳಿದ್ದು ವ್ಯರ್ಥ. ಭರತಾಗಮನದಂತಹ ಪ್ರಸಂಗಕ್ಕೆ ಪುತ್ತೂರು ರಮೇಶ ಭಟ್ಟರಂತಹ ಭಾಗವತರೇ ಬೇಕು ಅಂತ ಯಾರಿಗಾದರೂ ಅನ್ನಿಸದೆ ಇರದು. ಆರಂಭದ ಕೆಲವು ಪದ್ಯಗಳನ್ನು ಹೊಸ್ತೋಟ ಮಂಜುನಾಥ ಭಾಗವತರ ಪ್ರಸಂಗದಿಂದಲೂ, ಅಮೇಲಿನ ಪದ್ಯಗಳನ್ನು ಪಾರ್ತಿಸುಬ್ಬನ ಪ್ರಸಂಗದಿಂದಲೂ ಆಯ್ದು ಪೋಣಿಸಿ ಅವರು ಮಂಡಿಸಿದ ರೀತಿ ಅನನ್ಯ.

ಆಯಾ ಸಂದರ್ಭಕ್ಕೆ ಹೊಂದುವ ರಾಗಗಳನ್ನು ಹೆಕ್ಕಿ ಹಾಡುವ ರಮೇಶಣ್ಣ ಕಲಾವಿದರಲ್ಲೂ, ಪ್ರೇಕ್ಷಕರಲ್ಲೂ ಸುಲಭವಾಗಿ ಭಾವದ ಒರತೆ ಮೂಡಿಸಬಲ್ಲರು. ಏಳು ದಿನ ಗತಿಸಿದುದು ಪಯಣದಿ, ಭರತ ನೀನತಿಧೈರ್ಯದಿಂದಲಿನ್ನಣಿಯಾಗು, ಸಾವ ಸಮಯದಿ ತಂದೆಯ ಸೇವೆಗೊದಗದೆ, ಎನಗಾಗಿ ಶ್ರೀರಾಮ ವನಕೆ ತೆರಳಿದ ಮೇಲೆ, ಸುಮ್ಮಗಿರು ಭರತ ಬರುವ ಧರ್ಮವನ್ನು ಅರಿಯೆ ನೀನು, ಬಂದೆಯಾ ಇನವಂಶವಾರಿಧಿ ಚಂದ್ರ, ತಮ್ಮ ಕೇಳಿನಕುಲದ ರಾಯರಲಿ, ಪಿತನ ವಾಕ್ಯವ ಮೀರಿ ಪಿಂತೆ ನಡೆದವರುಂಟೆ, ನಿರ್ಮಲದಲಿ ಜ್ಯೇಷ್ಠಸುತನಿರಲಾತನ ತಮ್ಮಗೆ ರಾಜ್ಯವುಂಟೆ, ಅಣ್ಣ ಕೇಳೀರೇಳು ವರುಷದ ಮರುದಿನ… ಮೊನ್ನೆ ಅವರು ಹಾಡಿದ ಅಷ್ಟೂ ಪದಗಳು ಒಂದಕ್ಕಿಂತ ಒಂದು ಚಂದ. “ತಾಳಯ್ಯ ಭರತ ಕೇಳಯ್ಯ”, “ಎಂದು ತಮ್ಮೊಳಾಡುತಿರಲು ಬಂದು ಭರತ ರಥವ ಇಳಿದು”, “ಹದಿನಾಲ್ಕು ವತ್ಸರದ ತುದಿಯ ಮರುದಿನ ಬಂದು” – ಹಳೆಯ ಕ್ರಮದಲ್ಲಿ ಅವರು ಹಾಡುವ ಈ ಪದ್ಯಗಳಂತೂ ಈಗಿನ ಜಮಾನಾದಲ್ಲಿ ಕೇಳಲು ಸಿಗುವುದೇ ಅಪರೂಪ.

ಇದಕ್ಕಿಂತ ಹೆಚ್ಚು ಹೇಳಲು ನನಗೇನೂ ತೋಚದು. ಚೆಂಡೆ-ಮದ್ದಳೆಗಳ ವಿಷಯದಲ್ಲಂತೂ ನಾನು ಪರಮ ಅಜ್ಞಾನಿ. ಚೆಂಡೆ ಉರುಳಿಕೆಗಳನ್ನು ಸ್ಪಷ್ಟವಾಗಿ ಕೇಳಿಸುವ ಜಗ್ಗಣ್ಣ, ಅಂಬ್ರೇಪಿಲ್ಲದೆ ಮದ್ದಳೆ ನುಡಿಸುವ ಅವಿನಾಶಣ್ಣ -ಇಬ್ಬರ ಸಾಂಗತ್ಯ ಹಿಮ್ಮೇಳವನ್ನು ಕಳೆಗಟ್ಟಿಸಿತು ಅಂತಷ್ಟೇ ಹೇಳಬಲ್ಲೆ. ಅರ್ಥಧಾರಿಗಳ ಮಾತುಗಳನ್ನು ಒಂದೂ ಬಿಡದೆ ಕೇಳುತ್ತಾ, ಅವುಗಳ ಸ್ವಾರಸ್ಯವನ್ನು ತಾವೂ ಅನುಭವಿಸುತ್ತಾ, ಜತೆಜತೆಯಾಗಿ ಪ್ರಸಂಗವನ್ನು ಮುಂದಕ್ಕೆ ಒಯ್ಯುವ ಹಿಮ್ಮೇಳ ಕೂಡ ಈಗ ಎಲ್ಲ ಕಡೆ ಸಿಗುವುದು ಕಷ್ಟ.

ಅಂದಹಾಗೆ, ಪ್ರಮುಖ ವಿಷಯವೊಂದನ್ನು ಹೇಳುವುದು ಬಾಕಿಯಾಯಿತು: ತಾಳಮದ್ದಳೆಯ ನೆಪದಲ್ಲಿ ಇಂತಹ ಕಲಾವಿದರೊಂದಿಗೆ ಕಳೆಯುವ ಸಮಯ, ಒಡನಾಟ, ದಿನಪೂರ್ತಿ ನಗು ಮತ್ತೊಂದಿಷ್ಟು ತಿಳುವಳಿಕೆ, ಅದರೊಂದಿಗೆ ಒದಗುವ ಪ್ರಫುಲ್ಲತೆ- ಇವು ತಾಳಮದ್ದಳೆಯಷ್ಟೇ ಇಂಟರೆಸ್ಟಿಂಗ್. ಆ ಬಗ್ಗೆ ಮುಂದೆಂದಾದರೂ ಮಾತಾಡೋಣ. ಎಂಬಲ್ಲಿಗೆ ಬರೆಯಹೊರಟ ನೂರು ಪದ ಸಾವಿರ ದಾಟಿತು.
*****************************************

ತಾಳಮದ್ದಳೆಯ ವಿವರ:
ಪ್ರಸಂಗ: ಭರತಾಗಮನ
ದಿನಾಂಕ: 10 ನವೆಂಬರ್ 2019
ಸ್ಥಳ: ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನ, ಎಸ್.ಎಸ್.ಪುರಂ, ತುಮಕೂರು

ಹಿಮ್ಮೇಳ:
ಭಾಗವತರು: ಶ್ರೀ ರಮೇಶ ಭಟ್ ಪುತ್ತೂರು
ಚೆಂಡೆ: ಶ್ರೀ ಪಿ. ಜಿ. ಜಗನ್ನಿವಾಸರಾವ್ ಪುತ್ತೂರು
ಮದ್ದಳೆ: ಶ್ರೀ ಅವಿನಾಶ್ ಬೈಪಾಡಿತ್ತಾಯ ಬೆಂಗಳೂರು

ಅರ್ಥಧಾರಿಗಳು:
ರಾಮ: ಶ್ರೀ ಗಣರಾಜ ಕುಂಬ್ಳೆ
ಭರತ: ಶ್ರೀ ರಾಧಾಕೃಷ್ಣ ಕಲ್ಚಾರ್
ವಸಿಷ್ಠ: ಸಿಬಂತಿ ಪದ್ಮನಾಭ
ಲಕ್ಷ್ಮಣ: ಆರತಿ ಪಟ್ರಮೆ

ಆಯೋಜನೆ: 
ಯಕ್ಷದೀವಿಗೆ (ರಿ.) ತುಮಕೂರು
ಯಕ್ಷಗಾನ ಸಾಂಸ್ಕೃತಿಕ ವೇದಿಕೆ, ತುಮಕೂರು


ಶುಕ್ರವಾರ, ಮೇ 31, 2019

ಕುರಿಯ ವಿಠಲ ಶಾಸ್ತ್ರಿಗಳ ಆತ್ಮಕಥನ 'ಬಣ್ಣದ ಬದುಕು'

ಯಕ್ಷಗಾನ ಕೃತಿ ಪರಿಚಯ ಮಾಲಿಕೆ-4

ಕುರಿಯ ವಿಠಲ ಶಾಸ್ತ್ರಿಗಳ ಆತ್ಮಕಥನ 'ಬಣ್ಣದ ಬದುಕು'

ನಿರೂಪಣೆಪ. ಗೋಪಾಲಕೃಷ್ಣ
ಪ್ರಕಾಶನ: ಕರ್ನಾಟಕ ಸಂಘ, ಪುತ್ತೂರು
ವರ್ಷ: 2002           
ಪುಟಗಳುXVI + 82          
ಬೆಲೆರೂ. 60
ರಕ್ಷಾಪುಟ ವಿನ್ಯಾಸ: ಮೋಹನ ಸೋನ


ಆತ್ಮಕಥನವನ್ನು ಮೂರನೆಯ ವ್ಯಕ್ತಿ ನಿರೂಪಿಸುವಲ್ಲಿ ಎರಡು ಅನುಕೂಲಗಳು, ಮತ್ತೆರಡು ಅನನುಕೂಲಗಳು. ಅನುಕೂಲಗಳೆಂದರೆ ಬರೆಯುವ ಸ್ಥಿತಿಯಲ್ಲಿಲ್ಲದ ವ್ಯಕ್ತಿಯ ಚರಿತ್ರೆಯೂ ನಿರೂಪಕನ ಮೂಲಕವಾದರೂ ಓದುಗ ಜಗತ್ತಿಗೆ ಲಭ್ಯವಾಗುವುದು; ಮತ್ತು ನಿರೂಪಕನ ನಿರೂಪಣಾ ಸಾಮರ್ಥ್ಯದ ಲಾಭ ಓದುಗನಿಗೆ ದೊರೆಯುವುದು. ಅನನುಕೂಲಗಳೆಂದರೆ, ಕಥಾನಾಯಕನ ವ್ಯಕ್ತಿತ್ವ ಮತ್ತು ಬದುಕನ್ನು ನಿರೂಪಕ ಯಥಾವತ್ತಾಗಿ ಚಿತ್ರಿಸಲು ಸೋಲುವುದು ಹಾಗೂ ನಿರೂಪಕನ ವೈಯುಕ್ತಿಕ ಅಭಿಪ್ರಾಯವೂ ಆತ್ಮಕಥಾನಕದೊಳಗೆ ಸೇರಿಹೋಗುವುದು.

ಆದರೆ ಹಿರಿಯ ಪತ್ರಕರ್ತ ಪ. ಗೋಪಾಲಕೃಷ್ಣ ಅವರ ನಿರೂಪಣೆಯಲ್ಲಿ ಮೂಡಿಬಂದ ತೆಂಕುತಿಟ್ಟು ಯಕ್ಷಗಾನದ ಸೀಮಾಪುರುಷ ಕುರಿಯ ವಿಠಲ ಶಾಸ್ತ್ರಿಗಳ (1912-1972) ಆತ್ಮಕಥನ ‘ಬಣ್ಣದ ಬದುಕು’ ಓದಿದಾಗ ಮೊದಲೆರಡು ಅನುಕೂಲಗಳಷ್ಟೇ ಮನಸ್ಸಿಗೆ ನಾಟಿದವು. ಅನನುಕೂಲಗಳು ಗಮನಕ್ಕೆ ಬರಲೇ ಇಲ್ಲ. ಆತ್ಮಕಥೆ ಅನೇಕ ಬಾರಿ ಅತಿರಂಜಿತವೂ, ವೈಭವೀಕರಣವೂ, ಸ್ವಪ್ರಶಂಸೆಯೂ ಆಗುವುದಿದೆ. ‘ಬಣ್ಣದ ಬದುಕಿ’ನಲ್ಲಿ ಅಂತಹ ಅಪಾಯವೂ ಸಂಭವಿಸಿಲ್ಲ.

ನೇರ, ಸರಳ ನಿರೂಪಣೆಯ ಈ ಆತ್ಮಕಥೆ “ತೆಂಕಣ ಯಕ್ಷಗಾನ ಬಯಲಾಟದ ನವೋದಯದ ಮುಂಗೋಳಿ” ಕುರಿಯ ವಿಠಲ ಶಾಸ್ತ್ರಿಗಳ ಘನ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತಲೇ ಸುಮಾರು ಮುಕ್ಕಾಲು ಶತಮಾನದ ಯಕ್ಷಗಾನದ ಬದಲಾವಣೆಯ ಇತಿಹಾಸವನ್ನೂ ನಾಜೂಕಾಗಿ ಓದುಗನೆದುರು ಕಡೆದಿಡುತ್ತದೆ. ಕರ್ನಾಟಕ ಪತ್ರಿಕೋದ್ಯಮದ ದೊಡ್ಡ ಹೆಸರು ಪ.ಗೋ. ಅವರ ವಿಶಿಷ್ಟ ಬರವಣಿಗೆ ಶೈಲಿಗೆ ಕನ್ನಡಿ ಹಿಡಿದಿರುವ ಈ ಕೃತಿ ತನ್ನ ನಿರುಮ್ಮಳ ನಿರೂಪಣಾ ಗುಣದಿಂದಲೇ ನಮ್ಮ ಆದರಕ್ಕೆ ಪಾತ್ರವಾಗುತ್ತದೆ.

ಪುಟ್ಟ ಪುಟ್ಟ ವಾಕ್ಯಗಳು, ಮೂರ್ನಾಲ್ಕು ವಾಕ್ಯ ಮೀರದ ಪುಟ್ಟ ವಾಕ್ಯವೃಂದಗಳು. ಪುಟಗಳು ತಾವಾಗಿಯೇ ಪಟಪಟನೆ ತಿರುಗುತ್ತಿರುತ್ತವೆ. ‘ಸುಧಾ’ ವಾರಪತ್ರಿಕೆಯಲ್ಲಿ ಮಾರ್ಚ್ 19, 1967ರಿಂದ ಜೂನ್ 25, 1967ರವರೆಗೆ ಧಾರಾವಾಹಿಯಾಗಿ ಮೊದಲ ಬಾರಿಗೆ ಪ್ರಕಟವಾದ ‘ಬಣ್ಣದ ಬದುಕು’ ಮುಂದೆ Webdunia ಜಾಲತಾಣದಲ್ಲಿ ಮರುಪ್ರಕಟಣೆಯಾದದ್ದೂ ಇದೆ (ಶಾಸ್ತ್ರಿಗಳ ಜನ್ಮಶತಮಾನೋತ್ಸವ ವರ್ಷ 1912ರಲ್ಲಿ).

ಬಾಲ್ಯದ ಯಕ್ಷಗಾನಗಳು ತಮ್ಮ ಮೇಲೆ ಪ್ರಭಾವ ಬೀರಿದ ರೀತಿ, ತಾವು ತಾಳಮದ್ದಳೆ ಅರ್ಥಧಾರಿಯಾಗಿ ರಂಗ ಪ್ರವೇಶ ಮಾಡಿದ್ದು, ತಂದೆಯ ಗರಡಿಯಲ್ಲಿ ಪಳಗಿದ್ದು, ಕುಲೀನ ಮನೆತನಗಳು ವೃತ್ತಿಪರ ಮೇಳಗಳಿಗೆ ಸೇರುವುದೇ ಅವಮಾನವೆಂದು ಸಮಾಜ ಭಾವಿಸಿದ್ದ ಕಾಲದಲ್ಲಿ ಅಂತಹ ಕಟ್ಟುಪಾಡುಗಳನ್ನು ಧಿಕ್ಕರಿಸಿ ಮೇಳಗಳಲ್ಲಿ ಗೆಜ್ಜೆ ಕಟ್ಟಿದ್ದು, ಮೂವತ್ತರ ಹರೆಯದಲ್ಲಿ ಸಮರ್ಥ ಗುರುಗಳನ್ನು ಹುಡುಕಿ ನೃತ್ಯ ಕಲಿತು ತಮ್ಮೊಳಗೆ ಬಹುದಿನಗಳಿಂದ ಕಾಡುತ್ತಿದ್ದ ಕೊರತೆಗೆ ಪರಿಹಾರವನ್ನು ಕಂಡುಕೊಂಡದ್ದು, ಮುಂದೆ ಜನಾನುರಾಗಿ ಕಲಾವಿದನೂ, ಸಂಘಟಕನೂ, ಅಗ್ರಮಾನ್ಯ ಮೇಳಗಳ ವ್ಯವಸ್ಥಾಪಕನೂ ಆಗಿ ಅಪಾರ ಯಶಸ್ಸು ಕಂಡದ್ದು... ಎಲ್ಲವನ್ನೂ ಒಂದಿನಿತೂ ಅಹಮಿಕೆಯ ಎಳೆಯಿಲ್ಲದೆ ನಿರಾಡಂಬರವಾಗಿ ಹೇಳುತ್ತಾ ಹೋಗುತ್ತಾರೆ ಕುರಿಯ ಶಾಸ್ತ್ರಿಗಳು.
  • ಸಮಾಜದ ಮೇಲ್ವರ್ಗದವರ ಅಸಡ್ಡೆ ಅನಾದರಗಳಿಗೆ ಒಳಗಾಗಿದ್ದ ಯಕ್ಷಗಾನಕ್ಕೆ ಕಾಯಕಲ್ಪ ಒದಗಿಸಿ ಎಲ್ಲರೂ ಕುಟುಂಬ ಸಮೇತ ಬಂದು ಅದನ್ನು ನೋಡುವಂತೆ ಮಾಡಿದ್ದು;
  • ಯಕ್ಷಗಾನದಲ್ಲಿ ತುಂಬಿದ್ದ ಅಶ್ಲೀಲತೆಯೇ ಮೊದಲಾದ ಕೆಡುಕುಗಳನ್ನು ಚಿವುಟಿ ಅದನ್ನು ಬಹುಜನರು ಒಪ್ಪುವ ವಿನ್ಯಾಸಕ್ಕೆ ತಂದು ನಿಲ್ಲಿಸಿದ್ದು;
  • ತೆಂಕುತಿಟ್ಟು ಯಕ್ಷಗಾನದಲ್ಲಿ ‘ಯಕ್ಷಗಾನ ನಾಟಕ’ ಎಂಬ ಹೊಸ ಪರಿಕಲ್ಪನೆಯನ್ನು ಪ್ರಯೋಗಕ್ಕೆ ತಂದದ್ದು;
  • ರಾಜಯೋಗ್ಯ ದಿರಿಸು-ಕಿರೀಟ ವೇಷದಲ್ಲೇ ವನವಾಸ ಮಾಡುತ್ತಿರುವಂತೆ ಚಿತ್ರಿತವಾಗಿದ್ದ ರಾಮಲಕ್ಷ್ಮಣರನ್ನು ಜಟಾವಲ್ಕಲಧಾರಿಗಳನ್ನಾಗಿಸಿ ಜನಸಾಮಾನ್ಯರ ಹತ್ತಿರಕ್ಕೆ ಕೊಂಡೊಯ್ದದ್ದು;
  • ಈಶ್ವರ, ದಕ್ಷ, ಕಂಸ, ಕರ್ಣ ಮೊದಲಾದ ಪಾತ್ರಗಳ ಚಿತ್ರಣವನ್ನು ತಾವೇ ಮೊದಲಬಾರಿಗೆ ಹಾಕಿಕೊಟ್ಟು ಮುಂದಿನ ತಲೆಮಾರಿನ ಕಲಾವಿದರಿಗೆ ಸಮರ್ಥ ಮಾದರಿಯೊಂದನ್ನು ಒದಗಿಸಿದ್ದು;
  • ದಕ್ಷಿಣಕನ್ನಡ-ಕಾಸರಗೋಡಿಗೆ ಸೀಮಿತವಾಗಿದ್ದ ತೆಂಕುತಿಟ್ಟು ಯಕ್ಷಗಾನವನ್ನು ರಾಜ್ಯದೆಲ್ಲೆಡೆ ಹಬ್ಬಿಸಿದ್ದಲ್ಲದೆ ದೆಹಲಿಯವರೆಗೂ ಕೊಂಡೊಯ್ದದ್ದು…

ಶಾಸ್ತ್ರಿಗಳ ಹೆಜ್ಜೆಗುರುತುಗಳು ‘ಬಣ್ಣದ ಬದುಕಿ’ನುದ್ದಕ್ಕೂ ಎದ್ದುಕಾಣುತ್ತವೆ. 
“ಯಕ್ಷಗಾನದಲ್ಲೇ ಜೀವನವನ್ನು ಸವೆಯಿಸಿ, ಬರಿಯ ಹಳ್ಳಿಗಾಡಿನ ಮೋಜು ಅದೆಂದು ಗೇಲಿ ಮಾಡಿಸಿಕೊಳ್ಳುತ್ತಿದ್ದ ಕೆಳ ತಾಣದಿಂದ ಕರ್ನಾಟಕದ ಅತಿ ಶ್ರೇಷ್ಠ ಜಾನಪದ ಕಲೆ ಎಂಬ ಉಚ್ಚ ಸ್ಥಾನಕ್ಕೆ ಅದು ಏರುವವರೆಗೂ, ಕಣ್ಣಾರೆ ಕಂಡು ಆನಂದಿಸುವವರೆಗೂ ಉಳಿದಿರುವೆನಾದುದರಿಂದ... ಎಕ್ಕಲಗಾನದ ಎಕ್ಕಲೆಗಳ ಜೊತೆಗೂ, ಯಕ್ಷನೃತ್ಯದ ದಕ್ಷರೊಂದಿಗೂ ಕುಣಿದು ಮಣಿದಿರುವೆನಾದುದರಿಂದ… ಯಕ್ಷಗಾನದಲ್ಲಿ ತ್ರಿಕರಣಪೂರ್ವಕ ಭಾಗವಹಿಸಿ, ಚೆಂಡೆಯ ಪೆಟ್ಟಿನೊಂದಿಗೆ ಗೆಜ್ಜೆಗಾಲನ್ನು ಕುಣಿಸುವಾಗಲೇ ರಂಗಸ್ಥಳದಲ್ಲಿ ಹೃದಯಕ್ಕೂ ಪೆಟ್ಟು ತಗುಲಿಸಿಕೊಂಡು ಆಸ್ಪತ್ರೆ ಸೇರಿ, ಕಡ್ಡಾಯ ನಿವೃತ್ತಿಯ ಕಟ್ಟಾಜ್ಞೆಯನ್ನು ಪಡೆಯುವವರೆಗೂ ಇದ್ದವನಾದುದರಿಂದ…” (ಪು. xiv) ಕೃತಿಯ ಆರಂಭದಲ್ಲೇ ಶಾಸ್ತ್ರಿಗಳು ಹೇಳಿರುವ ಈ ಮಾತುಗಳು ಅವರ ಒಟ್ಟಾರೆ ಬದುಕಿನ ಪುಟ್ಟ ಚಿತ್ರಣವನ್ನು ನೀಡುತ್ತವೆ.
ಧರ್ಮಸ್ಥಳ ಮೇಳವೊಂದನ್ನೇ ಸತತ 21 ವರ್ಷಗಳ ಕಾಲ ಪ್ರಧಾನ ಕಲಾವಿದನಾಗಿಯೂ ವ್ಯವಸ್ಥಾಪಕನಾಗಿಯೂ ಮುನ್ನಡೆಸಿದವರು ಶಾಸ್ತ್ರಿಗಳು. ಮೇಳದ ಉಸ್ತುವಾರಿ ಹಾಗೂ ಕಾಲಕ್ಕೆ ತಕ್ಕಂತೆ ರಂಗದಲ್ಲಿ ಯುಕ್ತ ಪರಿಷ್ಕರಣೆಗಳನ್ನು ಮಾಡುವುದಕ್ಕೆ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ಇತ್ತು. ಗೌರಿ ಯೋಗಾಗ್ನಿಯಲ್ಲಿ ಬೆಂದುಹೋದ ವಾರ್ತೆಯನ್ನು ಕೇಳಿ ಕೆರಳಿ ಕೆಂಡವಾಗುತ್ತಿದ್ದ ಶಿವ, ಬ್ರಹ್ಮಕಪಾಲದ ಈಶ್ವರ- ಅವರಿಗೆ ಇನ್ನಿಲ್ಲದ ಗೌರವವನ್ನು ತಂದುಕೊಟ್ಟ ಪಾತ್ರಗಳು. ಜಯಚಾಮರಾಜೇಂದ್ರ ಒಡೆಯರ್, ರಷ್ಯಾದ ನಾಯಕರುಗಳಾದ ಬುಲ್ಗಾನಿನ್, ಕ್ರುಶ್ಶೇವ್, ಕೆಂಗಲ್ ಹನುಮಂತಯ್ಯ ಮೊದಲಾದ ಗಣ್ಯಾತಿಗಣ್ಯರೆದುರು ಯಕ್ಷಗಾನ ಪ್ರದರ್ಶಿಸುವ ಅವಕಾಶ ದೊರೆತದ್ದು ಶಾಸ್ತ್ರಿಗಳಿಗೇ.

ಅಷ್ಟಾದರೂ ವಿನಯವಂತಿಕೆ, ಸಜ್ಜನಿಕೆಯ ಸಾಕಾರಮೂರ್ತಿ ಅವರು. ಇಡೀ ಪುಸ್ತಕದ ನಡುವೆ ಎಲ್ಲಿಯೂ ಒಂದು ಆತ್ಮಪ್ರಶಂಸೆಯ, ಆಡಂಬರದ ಪ್ರದರ್ಶನವಿಲ್ಲ. ಮಾತು, ಅಭಿನಯಗಳಿಂದ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿದ್ದರೂ, ನೃತ್ಯದ ಕೌಶಲ ತಮ್ಮಲ್ಲಿಲ್ಲವಲ್ಲ ಎಂದು ಬಹುವಾಗಿ ಕೊರಗಿ ಕೊನೆಗೆ ಅದರಲ್ಲೂ ಪ್ರಾವೀಣ್ಯತೆಯನ್ನು ಪಡೆದ ಪರಿಶ್ರಮಿ ಅವರು. ಮೂವತ್ತು ದಾಟಿದ ಮೇಲೆ ಕಲಿಯುವ ಕಾಲ ಕಳೆದುಹೋಯಿತು ಎಂದುಕೊಳ್ಳುವವರೇ ಬಹಳ ಇರುವಾಗ ಮದುವೆಯಾಗಿ ಎರಡು ಮಕ್ಕಳಾದ ಮೇಲೆ ಶ್ರೀ ಕಾವು ಕಣ್ಣನ್, ಡಾ. ಕೊಚ್ಚಿ ಪರಮಶಿವನ್ ರಂಥ ವಿದ್ವಾಂಸರನ್ನು ಹುಡುಕಿಹೋಗಿ ಶಾಸ್ತ್ರೀಯ ಯಕ್ಷಗಾನ ನಾಟ್ಯ, ಭರತನಾಟ್ಯ, ಕಥಕ್ಕಳಿ ಅಭ್ಯಸಿಸಿ ತಮ್ಮಲ್ಲಿದ್ದ ಕೊರತೆಯನ್ನು ನೀಗಿಸಿಕೊಂಡ ಶಾಸ್ತ್ರಿಗಳು ತಮ್ಮ ಕೊನೆಗಾಲದವರೆಗೂ ವಿದ್ಯಾರ್ಥಿಯಾಗಿಯೇ ಇದ್ದರು.

ವೇಷದಲ್ಲಿರುವಾಗಲೇ ಹೃದಯಾಘಾತಕ್ಕೆ ಒಳಗಾಗಿ (1965) ಶಾಸ್ತ್ರಿಗಳು ರಂಗದಿಂದ ಕಡ್ಡಾಯ ನಿವೃತ್ತಿ ಪಡೆದ ಕೊರಗಿನೊಂದಿಗೆ ‘ಬಣ್ಣದ ಬದುಕು’ ಮುಕ್ತಾಯವಾಗುತ್ತದೆ. ಆದರೂ ಕೊನೆಯ ವಾಕ್ಯದಲ್ಲಿ ಕಲಾವಿದನಿಗೆ ಸಹಜವಾಗಿ ಇರಬಹುದಾದ ಒಂದು ಆಶಾವಾದ ಇದೆ: 
“ಕುಣಿಯುವುದರ ಹೊರತು, ಬೇರಾವುದಾದರೂ ಒಂದು ರೀತಿಯಲ್ಲಿ ಸೇವೆಯನ್ನು ಯಕ್ಷಗಾನಕ್ಕೆ ಸಲ್ಲಿಸುವ ಕಾಲ ಬರಬಹುದು ನೋಡೋಣ” (ಪು. 82).

-      ಸಿಬಂತಿ ಪದ್ಮನಾಭ ಕೆ. ವಿ.