ಶುಕ್ರವಾರ, ಆಗಸ್ಟ್ 21, 2020

ತರತಮ ಭಾವದ ನಿರರ್ಥಕತೆಯನ್ನು ಸಾರುವ 'ಪಲಾಂಡು ಚರಿತ್ರೆ'

ಚಿತ್ರಕೃಪೆ: ಶ್ಯಾಮ್ ಪ್ರಸಾದ್ ಕುಂಚಿನಡ್ಕ

ಶಾಶ್ವತ ಮೌಲ್ಯವಿರುವ ಕೃತಿ ಎಷ್ಟೇ ಹಳತಾದರೂ ಪ್ರಸ್ತುತವಾಗಬಲ್ಲುದು ಎಂಬುದಕ್ಕೆ ಕೆರೋಡಿ ಸುಬ್ಬರಾಯರಪಲಾಂಡು ಚರಿತ್ರೆಉತ್ತಮ ಉದಾಹರಣೆ. ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಇತ್ತೀಚೆಗೆ ರಂಗಕ್ಕೆ ತಂದ ಸುಮಾರು ಒಂದು ಶತಮಾನ ಹಳೆಯದಾದ ಯಕ್ಷಗಾನ ಪ್ರಸಂಗ ಪ್ರತಿಯೊಬ್ಬ ಜೀವಿಗೂ ಇರಬೇಕಾದ ಸಸ್ವರೂಪಜ್ಞಾನ, ವರ್ಗ ಸಂಘರ್ಷದ ಅರ್ಥಹೀನತೆ, ಸಹಬಾಳ್ವೆಯ ಅನಿವಾರ್ಯತೆಗಳನ್ನು ಎತ್ತಿಹಿಡಿದಿದೆ (ಕೆಲ ವರ್ಷಗಳ ಹಿಂದೆ ಹೊಸ್ತೋಟ ಭಾಗವತರು ಮಾಡಿದ ಪ್ರಯೋಗದ ಬಗ್ಗೆ ಕೊನೆಯಲ್ಲಿ ಬರೆದಿದ್ದೇನೆ).

ಮೇಲ್ನೋಟಕ್ಕೆ ಸರಳ ಕಥಾಹಂದರ ಹೊಂದಿರುವಪಲಾಂಡು ಚರಿತ್ರೆತನ್ನೊಳಗೆ ಗಟ್ಟಿ ತಿರುಳನ್ನು ಇಟ್ಟುಕೊಂಡಿದೆ. ಮಣ್ಣಿನಡಿಯಲ್ಲಿ ಬೆಳೆಯುವ ಕಂದಮೂಲಗಳು ಹಾಗೂ ನೆಲದ ಮೇಲೆ ಬೆಳೆಯುವ ಹಣ್ಣುತರಕಾರಿಗಳ ನಡುವೆ ನಡೆಯುವ ಶ್ರೇಷ್ಠತೆ-ಕನಿಷ್ಠತೆಗಳ ವಾಗ್ವಾದವನ್ನು ಪ್ರಸಂಗ ಸ್ವಾರಸ್ಯಕರವಾಗಿ ಕಟ್ಟಿಕೊಟ್ಟಿದೆ. ಶಿವನು ಪಾರ್ವತಿಗೆ ಕಥೆಯನ್ನು ಹೇಳುವ ಫ್ಲಾಶ್ ಬ್ಯಾಕ್ ತಂತ್ರವನ್ನು ಪ್ರಸಂಗ ಅನುಸರಿಸಿದೆ.


ಚೂತರಾಜ (ಮಾವಿನಹಣ್ಣು) ನೆಲದ ಮೇಲಿನವರ ಮುಖ್ಯಸ್ಥ; ತಾನೇ ಶ್ರೇಷ್ಠನೆಂ ಒಣಹಮ್ಮು ಅವನಿಗೆ. ಪಲಾಂಡು (ಈರುಳ್ಳಿ) ನೆಲದಡಿಯವರ ನೇತಾರ. ಎರಡೂ ವರ್ಗದವರ ನಡುವೆ ವಾಗ್ವಾದ ನಡೆದು ಯುದ್ಧದ ಹಂತಕ್ಕೆ ಹೋಗಿ, ಕೊನೆಗೆ ಪರಿಹಾರಕ್ಕಾಗಿ ಶ್ರೀಕೃಷ್ಣನನ್ನು ಭೇಟಿಮಾಡುವ ಸನ್ನಿವೇಶ ಒದಗುತ್ತದೆ.

ಕೃಷ್ಣ ತಕ್ಷಣಕ್ಕೆ ಯಾವ ಪರಿಹಾರವನ್ನೂ ಸೂಚಿಸದೆ ಮೂರು ದಿನ ಇತ್ತಂಡದವರೂ ತನ್ನ ವಿಶ್ರಾಂತಿಧಾಮದಲ್ಲಿ ತಂಗುವಂತೆ ಸೂಚಿಸುತ್ತಾನೆ. ಮೂರು ದಿನ ಕಳೆಯುವ ಹೊತ್ತಿಗೆ ಚೂತರಾಜನ ಬಳಗದವರೆಲ್ಲ (ಮಾವು, ಹಲಸು, ಕುಂಬಳ, ಬೆಂಡೆ, ಮುಂತಾದವರು) ಬಾಡಿ ಕೊಳೆತು ನಾರುವ ಪರಿಸ್ಥಿತಿ ಬಂದರೆ, ಪಲಾಂಡುವಿನ ಬಳಗದವರೆಲ್ಲ (ಈರುಳ್ಳಿ, ಸುವರ್ಣಗಡ್ಡೆ, ಮೂಲಂಗಿ, ಗೆಣಸು, ಮುಂತಾದವರು) ಚಿಗುರಿ ನಳನಳಿಸಲು ಆರಂಭಿಸುತ್ತಾರೆ.

-ಎಂಬಲ್ಲಿಗೆ ಪರಿಹಾರ ತಾನಾಗಿಯೇ ಒದಗಿತಲ್ಲ ಎಂದು ಬುದ್ಧಿವಂತಿಕೆಯ ನಗೆಯಾಡುತ್ತಾನೆ ಶ್ರೀಕೃಷ್ಣ. ಜಗತ್ತಿನಲ್ಲಿ ಮೇಲು-ಕೀಳು ಎಂಬುದೇ ಇಲ್ಲ, ಎಲ್ಲವೂ ಇರುವುದು ಅವರವರ ಭಾವದಲ್ಲಿ ಎಂಬುದನ್ನು ಇತ್ತಂಡದವರಿಗೂ ಮನದಟ್ಟು ಮಾಡಿಸಿ ಕಳಿಸುತ್ತಾನೆ. ಇದು ಪ್ರಸಂಗದ ಸಾರಾಂಶ.

ಯಾವುದೇ ಪ್ರಸಂಗ ಅರ್ಥಪೂರ್ಣವಾಗುವುದು ಅದರ ಆಶಯವನ್ನು ಅರ್ಥಮಾಡಿಕೊಂಡಿರುವ ಕಲಾವಿದರಿಂದ ಎಂಬುದನ್ನು ಸಿರಿಬಾಗಿಲು ಪ್ರತಿಷ್ಠಾನದ ಪ್ರದರ್ಶನ ಮತ್ತೆ ಶ್ರುತಪಡಿಸಿದೆ. ಕೃಷ್ಣನಾಗಿ ಶ್ರೀ ವಾಸುದೇವ ರಂಗ ಭಟ್, ಚೂತರಾಜನಾಗಿ ಶ್ರೀ ರಾಧಾಕೃಷ್ಣ ನಾವಡ ಮಧೂರು, ಪಲಾಂಡುವಾಗಿ ಶ್ರೀ ಪೆರ್ಮುದೆ ಜಯಪ್ರಕಾಶ ಶೆಟ್ಟಿ ತಮ್ಮ ಒಟ್ಟಾರೆ ಮಾತುಗಳಿಂದ ಪ್ರಸಂಗದ ತಿರುಳನ್ನು ತುಂಬ ಮಾರ್ಮಿಕವಾಗಿ ಪ್ರೇಕ್ಷಕರೆದುರು ಬಿಚ್ಚಿಟ್ಟಿದ್ದಾರೆ.

ಸುಲಿದ ಮೇಲೆ ಸಾರವೇನು ಎಂದು ವೇದ್ಯವಾಗುವ ವರ್ಗ ನಿನ್ನದು (ಮಾವಿನ ಕುರಿತಾಗಿ); ಬಿಡಿಸಿದಂತೆ ಅಂತರಂಗ ಅರ್ಥವಾಗುವ ವರ್ಗ ನಿನ್ನದು (ಈರುಳ್ಳಿ ಕುರಿತಾಗಿ)” ಎನ್ನುತ್ತಾ ಕೃಷ್ಣ (ವಾಸುದೇವ ರಂಗ ಭಟ್) ಮಾವು ಮತ್ತು ಈರುಳ್ಳಿಗಳ ಸ್ವರೂಪವನ್ನು ಸೊಗಸಾಗಿ ಕಟ್ಟಿಕೊಡುತ್ತಾನೆ.

ಎತ್ತರದಲ್ಲಿರುವುದು ಹಗುರವಾಗಿರುವುದಕ್ಕೂ ಸಾಧ್ಯ; ಭಾರವಾದದ್ದು ಎತ್ತರದ ಸ್ಥಾನವನ್ನು ಹೊಂದುವುದೂ ಸಾಧ್ಯ. ತಾನಿರುವುದು ಎತ್ತರದಲ್ಲಿ ಎಂಬುದರಿಂದಲೇ ಮೌಲ್ಯ ನಿರ್ಣಯ ಮಾಡಬೇಕಿಲ್ಲಎಂದು ಇನ್ನೊಂದೆಡೆ ಕೃಷ್ಣ ಹೇಳುತ್ತಾನೆ.

ಸುಗುಣ ಎಂದರೆ ತನ್ನನ್ನು ತಾನು ಬಿಟ್ಟುಕೊಡದೆ ಇನ್ನೊಬ್ಬನನ್ನು ಒಪ್ಪುವುದು. ಎತ್ತರದಲ್ಲಿ ಇರುವುದು ಬಾಗುವುದಕ್ಕೆ, ಬಯಸಿದವರಿಗೆ ಲಭ್ಯವಾಗುವುದಕ್ಕೆ. ಪ್ರಕೃತಿ ಇರುವುದೇ ಪರೋಪಕಾರಕ್ಕೆ. ಭಗವಂತನ ಸೃಷ್ಟಿಯಲ್ಲಿ ಯಾವುದೂ ಶ್ರೇಷ್ಠವಲ್ಲ, ಯಾವುದೂ ಕನಿಷ್ಠವಲ್ಲಎನ್ನುತ್ತಾ ಚೂತ-ಪಲಾಂಡುಗಳ ಚರ್ಚೆಗೆ ಮಂಗಳ ಹಾಡುವ ಕೃಷ್ಣ ವಾಸ್ತವವಾಗಿ ಇಡೀ ಮಾನವ ಸಮಾಜ ಯಾವತ್ತೂ ನೆನಪಿನಲ್ಲಿಟ್ಟುಕೊಳ್ಳಬೇಕಾದ ಸಂದೇಶವನ್ನು ಸಾರುತ್ತಾನೆ.

ಒಂದು ಕೃತಿ ಮತ್ತು ಪ್ರದರ್ಶನದ ಯಶಸ್ಸಿಗೆ ಇಷ್ಟು ಸಾಕಲ್ಲವೇ? ಇದನ್ನೇ ಆರಂಭದಲ್ಲಿ ಸಾರ್ವಕಾಲಿಕ ಮೌಲ್ಯ ಎಂದಿರುವುದು. ಧಾರ್ಮಿಕ ಕಲೆಯಾಗಿ ಬೆಳೆದು ಬಂದ ಯಕ್ಷಗಾನದಲ್ಲಿ ನೂರು ವರ್ಷಗಳ ಹಿಂದೆಯೇ ಇಂತಹದೊಂದು ಕಾಲ್ಪನಿಕ/ ಸಾಮಾಜಿಕ ಪ್ರಸಂಗದ ಕಲ್ಪನೆಯನ್ನು ಮಾಡಿದ ಕೆರೋಡಿ ಸುಬ್ಬರಾಯರು, ಮತ್ತು ಅದನ್ನು ಪ್ರದರ್ಶನಕ್ಕೆ ಒಳಪಡಿಸಿದ ಸಿರಿಬಾಗಿಲು ಪ್ರತಿಷ್ಠಾನದ ಶ್ರೀ ರಾಮಕೃಷ್ಣ ಮಯ್ಯರು ನಿಸ್ಸಂಶಯವಾಗಿ ಪ್ರಶಂಸೆಗೆ ಅರ್ಹರು. ಹೈದರಾಬಾದಿನ ಕನ್ನಡ ನಾಟ್ಯರಂಗ ಸಂಸ್ಥೆ ಪ್ರದರ್ಶನಕ್ಕೆ ಪ್ರಧಾನ ಪ್ರಾಯೋಜಕತ್ವ ನೀಡಿದೆ.

ಮಂಗಳೂರು ಮೂಲದ ಕೆರೋಡಿ ಸುಬ್ಬರಾಯರು (1863-1928) ‘ಗವಾನಂದಎಂಬ ಕಾವ್ಯನಾಮವನ್ನು ಹೊಂದಿದ್ದರು. ಶೃಂಗಾರಶತಕ, ಸೌಭಾಗ್ಯವತೀ ಪರಿಣಯ, ಸಮೂಲ ಭಾಷಾಂತರ, ಅನುಕೂಲ ಸಿಂಧು, ಶ್ರೀಕೃಷ್ಣ ಜೋಗುಳ ಮುಂತಾದ ಕೃತಿಗಳನ್ನೂ, ಜರಾಸಂಧವಧೆ, ಕುಮಾರಶೇಖರ, ತಾರಾನಾಥ ಎಂಬ ಯಕ್ಷಗಾನ ಪ್ರಸಂಗಗಳನ್ನೂ ರಚಿಸಿದ್ದರು (ಮಾಹಿತಿ: ಡಾ. ಕಬ್ಬಿನಾಲೆ ವಸಂತ ಭಾರದ್ವಾಜರಕರ್ನಾಟಕ ಯಕ್ಷಗಾನ ಕವಿಚರಿತ್ರೆ’). 'ಪಲಾಂಡು ಚರಿತ್ರೆ'ಯನ್ನು ಉಡುಪಿಯ ಶ್ರೀಮನ್ಮಧ್ವಸಿದ್ಧಾಂತ ಗ್ರಂಥಾಲಯ 1930ರಲ್ಲಿ ಪ್ರಕಟಿಸಿತ್ತು.

ಪಲಾಂಡು ಚರಿತ್ರೆಯನ್ನು ದಿ| ಹೊಸ್ತೋಟ ಮಂಜುನಾಥ ಭಾಗವತರುಪಲಾಂಡು ವಿಜಯಎಂಬ ಹೆಸರಿನಲ್ಲಿ ಒಮ್ಮೆ ರಂಗಕ್ಕೆ ತಂದಿದ್ದರು. ಮುಂದೆ ಅದನ್ನೇ ಸ್ವಲ್ಪ ಬದಲಿಸಿಸಸ್ಯ ಸಂಧಾನಎಂಬ ಪ್ರಸಂಗವನ್ನು ರಚಿಸಿದ್ದರು. ಅದನ್ನು ಶಿರಸಿಯ ಸಹ್ಯಾದಿ ಕಾಲೋನಿ ಮಕ್ಕಳ ಯಕ್ಷಗಾನ ತಂಡ (‘ಸಮಯ ಸಮೂಹ’) ಮೂಲಕ ಪ್ರದರ್ಶಿಸಿದ್ದರು (ಮಾಹಿತಿ: ‘ಒಡಲಿನ ಮಡಿಲು ಯಕ್ಷತಾರೆ: ಬಯಲಾಟದ ನೆನಪುಗಳುಪುಟ 70). ತಾವುನಿಸರ್ಗ ಸಂಧಾನದಂತಹ ಕಾಲ್ಪನಿಕ ಪ್ರಸಂಗಗಳನ್ನು ರಚಿಸಲುಪಲಾಂಡು ಚರಿತ್ರೆಯಂತಹ ಪ್ರಯತ್ನಗಳೇ ಪ್ರೇರಣೆ ಎಂದು ಹೊಸ್ತೋಟ ಭಾಗವತರು ಹೇಳಿಕೊಂಡಿದ್ದಾರೆ.

ಇಂತಹ ಹಳೆಯ ಪ್ರಸಂಗಗಳನ್ನು ಪತ್ತೆ ಮಾಡಿ ಪ್ರಯೋಗಕ್ಕೆ ಒಳಪಡಿಸುವ ನವೀನ ದೃಷ್ಟಿಕೋನಕ್ಕೂ ಯಕ್ಷಗಾನದ ಇತಿಹಾಸದಲ್ಲಿ ಮಹತ್ವದ ಸ್ಥಾನ ಇದೆ. ಕೋರೋನ ಕಾಲದಲ್ಲಿ ಡಿಜಿಟಲ್ ಮಾಧ್ಯಮದ ಸಾಧ್ಯತೆಗಳನ್ನೂ ಪ್ರಯತ್ನ ಎತ್ತಿತೋರಿಸಿದೆ. ಆದ್ದರಿಂದ ಗುಣಮಟ್ಟದ ಛಾಯಾಗ್ರಹಣ ಮತ್ತು ಪ್ರಸಾರವೂ ಇಲ್ಲಿ ಅಭಿನಂದನೀಯ.

'ಪಲಾಂಡು ಚರಿತ್ರೆ' ವೀಡಿಯೋವನ್ನು ಇಲ್ಲಿ ವೀಕ್ಷಿಸಬಹುದು:

 https://www.youtube.com/watch?v=8-Vq7LX8rnc 

 ಸಿಬಂತಿ ಪದ್ಮನಾಭ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ